Sunday, November 29, 2015

3K - ಹೊಂಗೆ ಮರದಡಿಯಲ್ಲಿ ಹೇಳಿದ ಕಥೆಗಳು

ಕಚೇರಿಯ ಕೆಲಸದ ಒತ್ತಡ ಒಮ್ಮೊಮ್ಮೆ ಕುತ್ತಿಗೆ ಮಟ್ಟಕ್ಕೆ ಬರುತ್ತಿತ್ತು.. ಆ ಒತ್ತಡ ನಿವಾರಿಸಿಕೊಳ್ಳೋಕೆ ನನಗೆ ಸಹಾಯ ಮಾಡುತ್ತಿದ್ದದು ಚಲನ ಚಿತ್ರಗಳು.. ಮನೆಗೆ ಬಂದೊಡನೆ ಯಾವುದಾದರೂ ಅಣ್ಣಾವ್ರ ಚಿತ್ರಗಳನ್ನು ನೋಡಿದರೆ ಸಾಕು ಮತ್ತೆ ಮಾಮೂಲಿನ ಸ್ಥಿತಿಗೆ ಬಂದು ಬಿಡುತ್ತಿದ್ದೆ. 

ನನ್ನ ಅತ್ಯಂತ ಪ್ರೀತಿಯ ಚಿತ್ರಗಳಲ್ಲಿ ಒಂದು ಶಂಕರ್ ಗುರು.. ಅಣ್ಣಾವ್ರ ಜಾದೂ ಈ ಚಿತ್ರವನ್ನು ಐವತ್ತಕ್ಕೂ ಹೆಚ್ಚು ಬಾರಿ ನೋಡಿಸಿದೆ. ಚಿತ್ರ ನೋಡುತ್ತಿದೆ... ಜೀಪು ಬಂತು.. ಅಣ್ಣಾವ್ರ ಸ್ನೇಹಿತರು ಬಂದರು, ಶುಭಾಶಯಗಳನ್ನು ಕೋರಿದರು.. ಅವರೆಲ್ಲ ಹೋದ ಮೇಲೆ ಶುರುವಾಯಿತು.. ಸುಂದರ ಹಾಡು.. ಹೊಂಗೆಯ ನೆರಳು



"ಬೆಳಗಿನ ಬಿಸಿಲು ಚೆನ್ನಾ.. ಹೊಂಗೆಯ ನೆರಳು ಚೆನ್ನಾ.. ಗೆಳತಿಯೆ ನಿನ್ನ ಸ್ನೇಹ ಚಿನ್ನಕ್ಕಿಂತ ಚೆನ್ನಾ" ಅಣ್ಣಾವ್ರ ಈ ಹಾಡು ಗುನುಗುನಿಸುತ್ತಾ ನೋಡುತ್ತಿದ್ದಾಗ.. ಟನ್ ಅಂಥಾ ಮೊಬೈಲ್ ಸದ್ದು ಮಾಡಿತು.. ನೋಡಿದೆ.. 3K ಕಥನ ಸಂಕಲನಕ್ಕೆ ಹೆಸರು "ಹೊಂಗೆ ಮರದಡಿ ನಮ್ಮ ನಿಮ್ಮ ಕತೆಗಳು"... ಮನಸ್ಸಿಗೆ ಆನಂದ ತಾಳಲಾಗದೆ ಆ ಒಂದು ಕ್ಷಣ ಮನಸ್ಸು ಮಗುವಿನಂತೆ ನಲಿದಾಡಿತು. 

ಇಂಥಹ ಒಂದು ಸುಂದರ ಹೆಸರಿನ ಪುಸ್ತಕ ನನ್ನ ಕಪಾಟನ್ನು ಬೆಳಗಲಿದೆ ಎನ್ನುವ ಸಂತೋಷ ಇನ್ನಷ್ಟು ಖುಷಿಯನ್ನು ಹೆಚ್ಚು ಮಾಡಿತ್ತು. 

ಭಾನುವಾರ ೨೯ ನವೆಂಬರ್ ೨೦೧೫ ದಿನಕ್ಕೆ ಕಾಯುತ್ತಿತ್ತು ಮನಸ್ಸು. 

ಬೆಳಗಿನ ಲಘು ಉಪಹಾರ, ಮದುವೆ ಮನೆಯಲ್ಲಿನ ಸಡಗರ.. ಬಂದವರನ್ನು ವಿಚಾರಿಸಿಕೊಳ್ಳುವ ಪರಿ, ಅರೆ ಇದು ನಮ್ಮ ಮನೆಯ ಸಮಾರಂಭವೇ ಆಗಿ ಹೋಗಿತ್ತು. 

ಆರೋಗ್ಯದ ಕಾರಣ ಗುರುಗಳು ಗೋಪಾಲ ವಾಜಪೇಯಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.  ಸುಂದರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ಸುಂದರ ಪಥದಲ್ಲಿ ಸಾಗಿತು. 

ಶ್ರೀ ಜೋಗಿ ಅವರ ಕಥಾ ಸಂಕಲನದ ಬಗ್ಗೆ ಚುಟುಕು ಮಾತುಗಳು, ಕಥೆಗಳಲ್ಲಿನ ಇಷ್ಟವಾದ ಭಾವಗಳು, ಕಾದಂಬರಿ ಎನ್ನುವುದಕ್ಕಿಂತ ಈ ರೀತಿಯ ಪುಟ್ಟ ಪುಟ್ಟ ಕಥೆಗಳ ಸಂಕಲನ ಓದುಗರನ್ನು ಹಿಡಿದಿಡುತ್ತದೆ ಮತ್ತು ತಲುಪುತ್ತದೆ ಎನ್ನುವ ಮಾತುಗಳು ಇಷ್ಟವಾದವು. ಹಿರಿಯ ಕವಿಗಳ, ಸಾಹಿತಿಗಳ ಕಥಾ ರೂಪಕವನ್ನು ಈ ನಿಟ್ಟಿನಲ್ಲಿ ಉದಾಹರಿಸಿದ ಅವರ ಮಾತಿನ ಝರಿ  ಸೊಗಸಾಗಿತ್ತು. 

ಶ್ರೀ ಮಂಜುನಾಥ ಕೊಳ್ಳೇಗಾಲ ಅವರು, ಈ ಕಥೆಗಳನ್ನು ಓದಿದ ಬಗೆ, ಅದನ್ನು ಆರಿಸಿದ ಬಗೆ ಹೇಳಿದರು. ಇದಕ್ಕಿಂತ ಮೊದಲು ಕಥೆಗಳು ಶುರುವಾದ ಬಗೆ, ತಂದೆ ತಾಯಿಯಿಂದ ಮಕ್ಕಳಿಗೆ ಕಥೆ ಹೇಳುವ ಪರಂಪರೆ, ಇದು ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಅವರ ಮಾತುಗಳು "ಮೊದಲು ಅಪ್ಪನ ಮೂಲಕ ಮಾತಾಡುತ್ತಿದ್ದ ಕಥೆಗಳು, ಅಪ್ಪ ಕೊಟ್ಟ ಒಂದು ಹಠಾತ್ ತಿರುವಿನಿಂದ ಕಥೆಗಳು ನನ್ನ ಬಳಿ ಮಾತನಾಡಲು ಶುರುಮಾಡಿದವು". ಅದ್ಭುತ ಮಾತುಗಳು.  ಈ ಪರಂಪರೆಯನ್ನು ಖಂಡಿತ ನಮ್ಮ ಮಕ್ಕಳ ಪೀಳಿಗೆಗೆ ಹೇಳಿಕೊಡಬೇಕು ಎನ್ನುವ ಅವರ ಮಾತುಗಳು ನಿಜಕ್ಕೂ ಗಮನಿಸಬೇಕಾಗಿದೆ. ಪುರಾಣ ಕಥೆಗಳಲ್ಲಿ ಬರುವ ರಾಕ್ಷಸ, ದೇವತೆಗಳು, ದೆವ್ವ, ಪಿಶಾಚಿಗಳು, ಗಂಧರ್ವ, ಕಿನ್ನರ, ಕಿಂಪುರುಷ ಇವರುಗಳ ಬಗ್ಗೆ ಹೇಳಿದಾಗ ಮಕ್ಕಳಿಗೆ ಆಸಕ್ತಿ ಹುಟ್ಟುತ್ತದೆ ಎಂದಾಗ ಹೌದು ಎನ್ನುತ್ತಾ ಹೃದಯ ಅವರಿಗೆ ಸಲಾಂ ಹೇಳಿತು. 

ನನ್ನ ಪಕ್ಕದಲ್ಲಿಯೇ ಕೂತಿದ್ದ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಅವರ ಹೇಳಿದರು "ಶ್ರೀ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ ಹೋದ ಹಾಗೆಲ್ಲ, ಮಕ್ಕಳ ನರವ್ಯೂಹ ಜಾಗೃತಿಗೊಳ್ಳುತ್ತದೆ, ವಿಕಸನಗೊಳ್ಳುತ್ತದೆ, ಯೋಚನಾ ಲಹರಿ ವಿಕಸಿತವಾಗುತ್ತದೆ. ಇದನ್ನೆಲ್ಲಾ ಜಗತ್ತಿನ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ ಮತ್ತು ಮಾಡುತಿದ್ದಾರೆ ಎಂದಾಗ ಅಜ್ಜಿ ಹೇಳಿದ ಕಥೆಗಳು ಅಥವಾ ಹಳ್ಳಿ ಮನೆಯಲ್ಲಿ ಚಳಿಗಾಲದ ರಾತ್ರಿಯಲ್ಲಿ ಮನೆಮುಂದಿನ ಚಳಿ ಕಾಯಿಸುವ ಬೆಂಕಿ ಕೆಂಡದ ಮುಂದೆ ಅಜ್ಜ ಹೇಳುತ್ತಿದ್ದ ಕಥೆಗಳಲ್ಲಿನ ಗಮ್ಮತ್ತು ಅರಿವಾಗುತ್ತಾ ಹೋಯಿತು. 

ಹೊರಗೆ ಬಂದೆ ನಗುವಿನ ಸರದಾರ ನವೀನ ಕೇಳಿದೆ.. ಈ ಹೆಸರನ್ನು ಯಾರು ಸೂಚಿಸಿದ್ದು ಎಂದು. ಅವರ ಉತ್ತರ ಸೂಪರ್ ಆಗಿತ್ತು. ಇದು ನಮ್ಮ ತಂಡದಿಂದ ಅನುಮೋದನೆ  ಹೆಸರು.  ಯಾಕೆ ಅಂದರೆ  ಜಗುಲಿ ಮೇಲೆ, ಇಲ್ಲವೇ ಅರಳಿ ಮರದ ಕೆಳಗೆ, ಇಲ್ಲವೇ, ಬೇಸಿಗೆಯಲ್ಲಿ ಹೊಂಗೆ ಮರದ ನೆರಳಲ್ಲಿ ಚಿಕ್ಕ ಪುಟ್ಟ ಹರಟೆಗಳು ಕಥೆಗಳಾಗಿ ಬದಲಾಗುತ್ತವೆ, ಅಂಥಹ ಹೆಸರು ಬೇಕು ಎಂದು ಈ ಕಥಾ ಸಂಕಲನಕ್ಕೆ ಇಟ್ಟೆವು ಎಂದರು. ಹೌದು ಅರ್ಥವತ್ತಾದ ಹೆಸರು. 

ಈ ಸಂಕಲನಕ್ಕೆ ಕಥೆಗಳನ್ನು ಬರೆದುಕೊಟ್ಟ ಎಲ್ಲಾ ಕಥೆಗಾರರಿಗೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಹಾಗೆ ಎಲ್ಲಾ ಕಥೆಗಾರ ಜೊತೆಯಲ್ಲಿನ ಒಂದು ಚಿತ್ರ ನೆನಪಿನಲ್ಲಿ ಸಂಚಿಕೆಯಲ್ಲಿ ದಾಖಲಾಯಿತು. 


ಕನ್ನಡ ಕನ್ನಡ ಎಂದು ಕೂಗಾಡದೆ ಸದ್ದಿಲ್ಲದೇ ತಮ್ಮ ಪಾಡಿಗೆ ಕನ್ನಡಾಂಬೆಯ ಸೇವೆ ಮಾಡುತ್ತಿರುವ ಅಜಾತ ಶತ್ರು ನಮ್ಮೆಲ್ಲರ ಪ್ರೀತಿಯ ಹರಿಣಿ ಮೇಡಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು, ಪ್ರಶಸ್ತಿಗೆ ಗೌರವ ತಂದು ಕೊಟ್ಟಿದ್ದು ಈ 3K ತಂಡ. 
ಹರಿಣಿ ಮೇಡಂ ಅವರ ಬಳಿ ಇರದ ಮಾಹಿತಿ ಇಲ್ಲ ಎಂದು ಹೇಳಿದರೆ ತಪ್ಪಿಲ್ಲ. ಪ್ರವಾಸದ ಕಥನಗಳು, ಸಂಸ್ಕೃತಿಯ ಬಗೆಗಿನ ತಿಳುವಳಿಕೆ, ಪೌರಾಣಿಕ ಕಥನಗಳು, ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ, ಭಾಷೆಯ ಬಗೆಗಿನ ಪ್ರೀತಿ ಎಲ್ಲವೂ ಸೇರಿರುವ ಒಂದು ಅದ್ಭುತ ಹೃದಯ ಹರಿನಿಂ ಮೇಡಂ ಅವರದು. ಇಂಥವರಿಗೆ ಸಂದ ಗೌರವದಿಂದ ತಾಯಿ ಭುವನೇಶ್ವರಿ ಹೆಮ್ಮೆಯಿಂದ ಈ ಪ್ರಶಸ್ತಿಯನ್ನು ಬೆನ್ನು ತಟ್ಟಿ ಹರಸುವುದೊಂತು ಖಂಡಿತವಾದ ಮಾತು. 

ಸಮೂಹದ ಕವಿಗಳಿಂದ ಕವಿತಾ ಸ್ಪರ್ಧೆಯನ್ನು ಏರ್ಪಡಿಸಿ ಕರುನಾಡಿನ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಆಯ್ಕೆ ಮಾಡಿಸಿ ಕವಿಗಳಿಗೆ ಬಹುಮಾನ ಕೊಟ್ಟಿದ್ದು ಇನ್ನೊಂದು ವಿಶೇಷ. 

ಒಂದು ಸರಳ ಆದರೆ ಆತ್ಮೀಯ ಸಮಾರಂಭ ಎಂದರೆ ಹೀಗೆಯೇ ಇರಬೇಕು ಎನ್ನುವ ಪಂಕ್ತಿಗೆ ತಕ್ಕ ಉದಾಹರಣೆ ಈದಿನದ ಕಾರ್ಯಕ್ರಮ. ಬಂದವರ ಮೊಗದಲ್ಲಿ ಸಂತಸ, ಹೃದಯದಲ್ಲಿ ಹೇಳಲಾರದ ಕನ್ನಡ ಭಾಷೆಯ ಬಗ್ಗೆ ಗೌರವ, ಒಂದು ಸಾರ್ಥಕ ಕ್ಷಣಗಳನ್ನು ಕಳೆದ ಹೆಮ್ಮೆ ಎಲ್ಲರಲ್ಲೂ ಮನೆ ಮಾಡಿತ್ತು. 

ಈ ಕಾರ್ಯಕ್ರಮದಲ್ಲಿ ತೆಗೆದ ಎಲ್ಲಾ ಚಿತ್ರಗಳು ಸುಂದರ ಅತಿ ಸುಂದರ.. ಆದರೆ ದೇವಸ್ಥಾನದ ಪ್ರಸಾದದ ಹಾಗೆ ಸ್ವಲ್ಪ ಮಾತ್ರ ಬಡಿಸಿದ್ದೇನೆ, ಮಿಕ್ಕವು ಫೇಸ್ಬುಕ್ ಕೊಂಡಿಯಲ್ಲಿ ಸಿಗುತ್ತದೆ. 

3K ತಂಡಕ್ಕೆ ಶಿರಬಾಗಿ ನಮಿಸುತ್ತಾ, ಅಭಿನಂದನೆ ಹಾಗೂ ಧನ್ಯವಾದಗಳನ್ನು ಒಮ್ಮೆಲೇ ಹೇಳುತ್ತಿದ್ದೇನೆ. 

"ಎಂದರೋ ಮಹಾನುಭಾವುಲು ಅಂದರೀಕಿ ವಂದನಮು"

Thursday, June 18, 2015

ಬೆಳಿಗ್ಗೆ ೫ ಗಂಟೆಗೆ ಗಾಯಬ್ ಆಗಿರ್ತೇನೆ!!!!


"ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೆ ನಿಂತೇ ಮಾಧವ ನಿನ್ನ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ ವಿಠಲ ರಂಗಾSSSSSSS"

ಭಕ್ತ ಕುಂಬಾರ ಮೈ ಮರೆತು ತನ್ನ ಮನೆಯಲ್ಲಿದ್ದ ರಂಗನನ್ನು ನೆನೆದು ಬಿಕ್ಕಳಿಸುತ್ತಾ ಹಾಡುತ್ತಿರುತ್ತಾನೆ.. ಮಾರ್ಗ ಮಧ್ಯೆ ಸಂತ ಜ್ಞಾನದೇವ, ನಾಮದೇವ ಮಿಕ್ಕ ಸಂತರೆಲ್ಲರೂ ಕಾಣ ಸಿಗುತ್ತಾರೆ....

ಕುಂಬಾರ ಭಕ್ತಿಪರವಶದಿಂದ ಮೈ ಮರೆತು.. ಸಂತರೆಲ್ಲರಿಗೂ ಚರಣ ಕಮಲಗಳಿಗೆ ಎರಗುತ್ತಾ.. "ಎಲ್ಲಿ ಎಲ್ಲಿ ನನ್ನ ರಂಗ.. ವಿಠಲ.. ನೋಡಬೇಕಲ್ಲ.. ನನ್ನ ಜೊತೆಯಲ್ಲಿದ್ದ ರಂಗ.. ನನಗೆ ಸೇವೆ ಮಾಡಿದ ರಂಗ.. ತಾಯಿಯಂತೆ, ಮಗುವಂತೆ, ಅಣ್ಣನಂತೆ, ತಮ್ಮನಂತೆ ಸೇವೆ ಮಾಡಿದ ರಂಗಣ್ಣನನ್ನು ನೋಡಬೇಕು.. ಕಣ್ಣಲ್ಲಿ ತುಂಬಿಕೊಳ್ಳಬೇಕು.. ಹೀಗೆ ಬಡ ಬಡಿಸುತ್ತಲೇ ಇದ್ದರು.. ಅದಕ್ಕಿಂತಲೂ ... "

ಸಮಾಧಾನ ಮಾಡಿದಸಂತರು . " ಗೋರಾ ಯಾಕೆ ಈ ವೇದನೆ, ಯಾಕೆ ಗೋಳಾಟ .. ಯಾಕೆ ಅರ್ಧದಲ್ಲಿಯೇ ನಿಲ್ಲಿಸಿ ಬಿಟ್ಟೆ.. ಹೇಳು ಮುಂದುವರೆಸು.. "

"ಸಂತರೇ.. ರಂಗನನ್ನು ನೋಡಬೇಕು ಮಾತಾಡಿಸಬೇಕು ಎನ್ನುವ ಹಂಬಲ, ಆಸೆ, ಗುರಿ ಬಹಳ ದಿನಗಳದ್ದು.. ಹೇಗಾದರೂ ಸರಿ ನೋಡಬೇಕು ಎಂದು ಅಂದುಕೊಂಡಿದ್ದೆ.. ಆದರೆ ನನ್ನ ಅಜ್ಞಾನ.. ನನ್ನ ಜೊತೆಯಲ್ಲಿಯೇ ರಂಗ ಇದ್ದರೂ ನನಗೆ ತಿಳಿಯಲಿಲ್ಲ.. ನಾಮದೇವರು ಹೇಳಿದ ಮೇಲೆಯೇ ನನಗೆ ಅರಿವಾಗಿದ್ದು.. ಆದರೆ ಈಗ" ಮತ್ತೆ ನಿಲ್ಲಿಸಿದರು ಕುಂಬಾರ

"ಈಗ ಏನಾಯಿತು.. ಹೇಳು ಗೋರಾ"

"ನಿಮ್ಮೆಲ್ಲರ ಜೊತೆಯಲ್ಲಿ ಪಂಡರಾಪುರಕ್ಕೆ ಹೊರಟಿದ್ದೇವೆ.. ಅಯ್ಯೋ ಅಯ್ಯೋ ಏನು ಮಾಡಲಿ.. ಅಲ್ಲಿಗೆ ಹೋಗುವ ನಕಾಶೆಯನ್ನೇ ತಂದಿಲ್ಲ.. ಈ ನನ್ನ ಗೋಳಾಟದಲ್ಲಿ ನಕಾಶೆ ತರುವುದನ್ನೇ ಮರೆತುಬಿಟ್ಟಿದ್ದೇನೆ.. ಹಾಗೆಯೇ ಪಂಡರಾಪುರದ ಸುತ್ತಾ ಮುತ್ತಾ ಮಿಕ್ಕ ಸ್ಥಳಗಳನ್ನು ನೋಡಬೇಕು ಎನ್ನುವ ನನ್ನ ಆಸೆ ಹಾಗೆ ಉಳಿದುಬಿಡುತ್ತದೆ.. ಏನು ಮಾಡಲಿ ನಾನು ಹೇಗೆ ಹೇಳಲಿ.. " ಗೋರನ ರೋಧನೆ ಇನ್ನು ಮುಗಿದಿರಲಿಲ್ಲ.. ರಂಗನನ್ನು ನೋಡುವತವಕ , ನಕಾಶೆ ಮರೆತ ದುಃಖ ಎಲ್ಲವೂ ಮಿಳಿತವಾಗಿ ಕಾಡುತ್ತಿತ್ತು..

ಜ್ಞಾನದೇವರು ಹೇಳುತ್ತಾರೆ "ನೋಡು ಗೋರಾ... ನಮ್ಮ ಗುಂಪಿನಲ್ಲಿ ಒಬ್ಬರಿದ್ದಾರೆ.. ಅವರು ಇದ್ದ ಕಡೆ ನಕಾಶೆ ಯಾವುದು ಬೇಡ.. .. ನೋಡು ಅವರು ಫೇಸ್ಬುಕ್ ನಲ್ಲಿ ಆಗಲೇ ತಮ್ಮ ಗೋಡೆಯ ಮೇಲೆ ಬರೆದುಕೊಂಡು ಬಿಟ್ಟಿದ್ದಾರೆ ಈ ಕೆಳಗಿನ ರೀತಿಯಲ್ಲಿ"

"ಇವತ್ತಿನ ಶುಭರಾತ್ರಿ ಹಾಗು ನಾಳಿನ ಶುಭ ಮುಂಜಾನೆ ಶುಭ ದಿನಕ್ಕೆ ಒಂದೇ ಚಿತ್ರ ಇದೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ ಯಾಕಂದ್ರೆ ನಾಳೆ ಬೆಳಿಗ್ಗೆ ೫ ಗಂಟೆಗೆ ಮೈಸೂರಿಂದ ಗಾಯಬ್ ಆಗಿರ್ತೇನೆ"

"ಅವರು ನಮ್ಮನ್ನು ಸೇರಲು ಓಡೋಡಿ ಬರುತ್ತಿದ್ದಾರೆ.. ಅಗೋ ಅಗೋ ನೋಡು ಬಂದೆ ಬಿಟ್ಟರು.. ಇವರೇ ಮೈಸೂರಿನ ಬಾಲಣ್ಣ, ನಿಮ್ಮೊಳಗೊಬ್ಬ ಬಾಲೂ, ಬಾಲಸುಬ್ರಮಣ್ಯ, ಬಾಲೂ ಸರ್.. ಹೀಗೆ ಅನೇಕ ನಾಮಧೇಯದಿಂದ ಹೆಸರಾಗಿರುವ ಇವರೆ ನಮಗೆ ಮಾರ್ಗದರ್ಶಕ.. "

ಓಡೋಡಿ ಬಂದ ಬಾಲೂ ಸರ್.. "ಗುರುಗಳಿಗೆ ನಮಸ್ಕಾರಗಳು .." ಎಂದು ಎಲ್ಲಾ ಸಂತರಿಗೆ ನಮಸ್ಕರಿಸಿದರು.. 

ಗೋರ ಕುಂಬಾರ.. ಬಾಲೂ ಸರ್ ಅವರಿಗೆ "ಬಾಲೂ ಅವರೇ ದಯಮಾಡಿ ಪಂಡರಾಪುರಕ್ಕೆ ದಾರಿ ತೋರಿಸಿ.. ರಂಗನನ್ನು ನೋಡಬೇಕು.. ದರ್ಶನಮಾಡಬೇಕು" ಎಂದು ವಿನಂತಿಸಿಕೊಂಡರು.. 

ಜ್ಞಾನದೇವರು "ಬಾಲೂ ಅವರೇ ನಡೆಯಿರಿ ನಿಮ್ಮ ಮಾರ್ಗದರ್ಶನದಲ್ಲಿ ನಮಗೆಲ್ಲ ವಿಠಲನ ದರ್ಶನವಾಗಲಿ.. "
 
ಆಗ ಬಾಲೂ ಸರ್ "ಸಂತರೇ,ಗುರುಗಳೇ .. ಪಂಡರಾಪುರಕ್ಕೆ ಹೋಗೋಣ ಅದಕ್ಕಿಂತ ಮೊದಲು ,,, ಬಿಳಿಗಿರಿ ರಂಗನಬೆಟ್ಟದಲ್ಲಿ ರಂಗಣ್ಣನಿಗೆ ಅಭಿಷೇಕ ಇಟ್ಟುಕೊಂಡಿದ್ದೇವೆ.. ದಯಮಾಡಿ  ಎಲ್ಲರೂ ಅಲ್ಲಿಗೆ ಬನ್ನಿ.. ಅಲ್ಲಿಂದ ನಮ್ಮ ಶಿಷ್ಯ ನವೀನನ ಕುದುರೆಗಾಡಿ ಇದೆ ಒಟ್ಟಿಗೆ ಪಂಡರಾಪುರಕ್ಕೆ ಹೋಗೋಣ.. ... ಇಂದು ನನ್ನ ಜನುಮದಿನ.. ಹಾಗಾಗಿ ನಿಮ್ಮೆಲ್ಲರ ಆಶೀರ್ವಾದ ಬೇಕು"

ಹೀಗೆ ಪಂಡರಾಪುರಕ್ಕೆ ಹೊರಟ ಕುಂಬಾರನ ಪಡೆಯನ್ನು ಬಿಳಿಗಿರಿ ರಂಗನ  ಬೆಟ್ಟಕ್ಕೆ ಕರೆದೊಯ್ಯುವ ಸಾಮರ್ಥ್ಯ ಇರುವ ನಮ್ಮೆಲ್ಲರ ಮೆಚ್ಚಿನ ಬಾಲೂ ಸರ್ ಅವರಿಗೆ ಜನುಮದಿನದ ಶುಭಾಶಯಗಳು.. !!!!

ಇತಿಹಾಸಕ್ಕೆ ಜೂಮ್ ಹಾಕುವ ಶಕ್ತಿ ಇರುವ ಬಾಲೂ ಸರ್!!!
ಬಾಲೂ ಸರ್ ನಿಮ್ಮ ಇತಿಹಾಸ ನೋಡುವ,  ಅರಿಯುವ, ಕಲಿಸುವ, ಎಲ್ಲರಿಗೂ ತಿಳಿಸುವ ಹಂಬಲ, ಉತ್ಸಾಹ ನಮಗೆಲ್ಲರಿಗೂ ಅಚ್ಚುಮೆಚ್ಚು.. ಎಲ್ಲರೊಡನೆ ನಾನು ಒಬ್ಬ ಎನ್ನುವ ನಿಮ್ಮ ಮನಸ್ಸು ಹಾಲಿನಂತೆ.. ಇಂಥಹ  ಸುಮಧುರ ಮನಸ್ಸಿನ ನಿಮಗೆ ಹುಟ್ಟು ಹಬ್ಬಕ್ಕೆ ಶುಭ ಕೋರುವುದು ನಮ್ಮ ಭಾಗ್ಯ... !

ಹುಟ್ಟು ಹಬ್ಬದ ಶುಭಾಶಯಗಳು ಸರ್ಜಿ!!!

Thursday, May 7, 2015

DFR - ಉತ್ಸಾಹ ಉಲ್ಲಾಸದ ಕೇಂದ್ರ ಬಿಂಧು!!

ಯಾಕೋ ಬೆಳಿಗ್ಗೆ ಬೆಳಿಗ್ಗೆ ರೇಡಿಯೋ ಕೇಳೋಣ ಎನ್ನಿಸಿತು.

ನಾನು ಇದು... ನೀವು ಕೇಳ್ತಾ ಇರೋದು ಇದು.. ಎನ್ನುವ ಸತ್ವ ರಹಿತ ಮಾತುಗಳಿಗಿಂತ ಬೇರೆ ಏನಾದರೂ ಸರಳವಾಗಿ ಬರುವ ಕಾರ್ಯಕ್ರಮಗಳನ್ನು ಕೇಳ ಬೇಕು ಎನಿಸಿತು.

ಡಂಬಾಚಾರ, ಚಮಕ್, ಧಮಕ್ ಏನೂ ಇಲ್ಲದ ಎಫ್ ಎಂ ಕಾಮನಬಿಲ್ಲು, ದೂರದರ್ಶನದ ಚಂದನ ಕಾರ್ಯಕ್ರಮಗಳು ನನಗೆ ಬಲು ಇಷ್ಟ. ಇಡಿ ದಿನ ತಾವು ನಂಬಿದ ಕೆಲವು ಸಿದ್ಧಾಂತಗಳನ್ನು ಮುಂದೆ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಆ ವಾಹಿನಿಗಳಲ್ಲಿ.

ಸರಿ.. ಕಾಮನಬಿಲ್ಲು ಎಫ್ ಎಂ ಕೆ ಕಿವಿ ಹಿಂಡಿದೆ.. ಮೊದಲೇ ಅಣ್ಣಾವ್ರ ಮೇಲೆ ಅಪರಿಮಿತ ಪ್ರೀತಿ, ಪ್ರೇಮ, ಅಭಿಮಾನ ತುಂಬಿರುವ ನನಗೆ... ಅಣ್ಣಾವ್ರ ಧ್ವನಿಯಲ್ಲಿ ಹಾಡುಗಳು ಭಿತ್ತರಗೊಳ್ಳುತ್ತಿದ್ದವು.

"ಹಾಡು ಕೋಗಿಲೆ ನಲಿದಾಡು ಕೋಗಿಲೆ..  ಬೆಳದಿಂಗಳ ಮಳೆಯಲ್ಲಿ ನಡೆವ ಹಾಗೆ ನನ್ನಲ್ಲಿ.. ಏನೋ ಮಧುರ ಭಾವನೆ.. ಏನೋ ಕಂಡ ಕಲ್ಪನೆ... "

"ಗುರುವಾರ ಬಂತಮ್ಮ ರಾಯರ ನೆನೆಯಮ್ಮ... ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ.. "

"ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು.. ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ"

"ಕರ ಮುಗಿವೆ ಗುರುರಾಯ ನೀ ಹರಸಬೇಕು.. ವರವೊಂದ ಬೇಡುವೆನು ನೀಡಲೇ ಬೇಕು"

ಹೀಗೆ ಸಾಲು ಸಾಲಾಗಿ ಹಾಡುಗಳು ಬರುತ್ತಲೇ ಹೋದವು.. ಆ ಹೊತ್ತಿನಲ್ಲಿ ಮೂಡಿದ ಲೇಖನ ಇದು.

ಈ ಹಾಡುಗಳಲ್ಲಿ ಬರುವ ರಾಘವೇಂದ್ರ, ಹನುಮ, ಕೃತಜ್ಞತಾ ಭಾವ, ಪರಿಸ್ಥಿತಿಗೆ ತಮ್ಮನ್ನು ಅರ್ಪಿಸಿಕೊಳ್ಳುವುದು, ನಸು ನಗುತ್ತಾ ಬದುಕ ಬಂಡಿಯಲ್ಲಿ ಸಾಗುವುದು.. ಒಂದು ತಾಳ್ಮೆಯ ಮನೋಭಾವ, ನಾನು ಎಂಬ ಅಹಂ ಇಲ್ಲದೆ ನಾವು ಎನ್ನುವ ಉಧಾತ್ತ ಭಾವ ಎಲ್ಲವೂ ಈ ಹಾಡುಗಳಲ್ಲಿ ತುಂಬಿ ತುಳುಕುತ್ತಿತ್ತು. ಈ ಹಾಡುಗಳನ್ನು ಹಾಡಿದ ಅಣ್ಣಾವ್ರು ಕೂಡ ಹಾಗೆ ಜೀವನದಲ್ಲಿ ಸಾಧನೆಯ ಶಿಖರ ಏರಿದ್ದರೂ ನೀವೇ ನೀವೇ ನನಗೆ ಅನ್ನದಾತರು.. ನೀವೇ ನನಗೆ ಅಭಿಮಾನಿ ದೇವರುಗಳು ಎನ್ನುವ ಭಾವ ಹೊಂದಿದ್ದವರು.

ಹೀಗೆ ನಮ್ಮ ನಡುವೆ ಇರುವ ಸರಳ ವಿರಳ ಜೀವಿ DFR..

ಕಾದ ಕಬ್ಬಿಣದ ಸರಳುಗಳೇ ಪಕ್ಕದಲ್ಲಿ ಹಾಯುತ್ತಾ ಹೋದರೂ.. ಅದೇ ನಗು.. ಅದೇ ತಾಳ್ಮೆಯ ಮಾತುಗಳು, ನಿಧಾನವಾಗಿ ಹರಿದು ಹರಿದು  ಬರುವ ನುಡಿಮುತ್ತುಗಳು..

ಕೈಯಲ್ಲಿ ಕಟ್ಟಿದ ಗಡಿಯಾರ ಗರ ಗರ ತಿರುಗುತ್ತದೆ ನಮ್ಮ ಕೈಯಲ್ಲಿದ್ದರೆ.. ಆದರೆ ಇವರ ಕೈಯಲ್ಲಿ ಇರುವ ಗಡಿಯಾರಕ್ಕೆ ಇವರ ಮೇಲೆ ಅದೇನೋ ವಿಪರೀತ ಮಮತೆ.. ನನಗೆ ಅನುಮಾನ ಬಂದಿತ್ತು ಒಮ್ಮೆ.. ಅದಕ್ಕೆ ಕೇಳಿದ್ದೆ "ನಿಮ್ಮ ಗಡಿಯಾರದಲ್ಲಿ ಹನ್ನೆರೆಡು ಸಂಖ್ಯೆಗಳು ಮಾತ್ರವೇ ಇರೋದು ಅಥವಾ ಹೆಚ್ಚಿವೆಯೇ ಎಂದು....
ಒಮ್ಮೆ ನಿಮ್ಮಲ್ಲಿರುವ ಕೈ ಗಡಿಯಾರ ನನಗೆ ಕೊಡಿ.. ಸಮಯಪಾಲನೆ, ಸಮಯೋಚಿತ ಪಾಲನೆ ಕಲಿಯಬೇಕು ಎಂದು ಹೇಳಿದ್ದೆ.. ಇವೆಲ್ಲಾ ಉತ್ಪ್ರೇಕ್ಷೆ ಎನಿಸಬಹುದು ಆದರೆ ದಿನದ ಇಪ್ಪತ್ತನಾಲ್ಕು ಘಂಟೆಗಳನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಖಂಡಿತ ಇವರಿಂದ ಕಲಿಯಬೇಕು ನಾನು.

ಬರೆಯುತ್ತಾರೆ, ಓದುತ್ತಾರೆ, ಕಚೇರಿಯ ಒತ್ತಡ ಕೆಲಸದಲ್ಲೂ ಇವರ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಿರಿಯರ ಜೊತೆಯಲ್ಲಿ ಕಿರಿಯಯವರಾಗಿ, ಅವರಿಂದ ಕಲಿಯುವ ಗುಣ ಒಂದು ಕಡೆಯಾದರೆ , ಹಿರಿಯರ ಜೊತೆಯಲ್ಲಿ ಕಿರಿಯವರಾಗಿ, ಹಿರಿಯರ ಮಾರ್ಗದರ್ಶನ ಪಡೆವ ಮನೋಭಾವ ಒಂದು ಕಡೆ.. ಇಂಥಹ ಅದ್ಭುತ ಗುಣಗಳ ಸಾಗರ ನಮ್ಮ DFR..

ಇದೆಲ್ಲಾ ಹೇಗೆ ಸಾಧ್ಯ ಎಂದರೆ.. ಅಣ್ಣಾವ್ರ ಪ್ರೇಮದ ಕಾಣಿಕೆ ಹಾಡಿನಂತೆ "ಅದೇನೆ ಬಂದರೂ…. ಅವನ ಕಾಣಿಕೆ" ಎಂದು ಹೇಳುತ್ತಾ ಈ ಕೆಳಗಿನ ಚಿತ್ರದಂತೆ ನಿಂತು ಬಿಡುತ್ತಾರೆ..


ಈ ಲೇಖನ ಓದಿದ ಮೇಲೆ ನನಗೆ ಬಯ್ತಾರೆ, ಕೋಪಮಾಡಿಕೊಳ್ಳುತ್ತಾರೆ... ಸ್ವಲ್ಪ ದಿನ ಸದ್ದಿಲ್ಲದೇ ಇರುತ್ತಾರೆ.. ಹೌದು ನಿಜ.. ಆದರೆ ಕಾಳಿದಾಸ ಕಂಡು ಆರಾಧಿಸಿದ ಕಾಳಿಮಾತೆಯ ಭಕ್ತನಂತೆ ನಾ ಅವರಿಗೆ ಈ ಹುಟ್ಟು ಹಬ್ಬದ ಸಡಗರ ತುಂಬಿದ ಕ್ಷಣಗಳನ್ನು ಅವರಿಗಾಗಿ ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ.

ಹುಟ್ಟು ಹಬ್ಬದ ಶುಭಾಶಯಗಳು DFR.. ನೀವೊಂದು ಸ್ಪೂರ್ತಿಯ ಕೇಂದ್ರ ಬಿಂಧು.. ಸ್ಪೂರ್ತಿಯ ಸೆಲೆ.. ಸ್ಪೂರ್ತಿಯ ನೆಲೆ..
ಅದಕ್ಕಾಗಿ ಈ ಒಂದು ಪುಟ್ಟ ಲೇಖನ ನಿಮ್ಮ ಜನುಮದಿನಕ್ಕಾಗಿ.. !!!

Saturday, April 11, 2015

ಶ್ರೀ ಸಂಧ್ಯಾದರ್ಪಣ....!

ಶ್ರೀ ನಿಮಿಷಾಂಬ ದೇವಾಲಯದಲ್ಲಿ  ಹರಿಕಥಾ ವಿಧ್ವಾನರು ಒಂದು ಸುಧೀರ್ಘ ಹರಿಕಥೆ ಹೇಳಿದ ನಂತರ.. ಒಂದು ಸಣ್ಣ ವಿರಾಮಕ್ಕೆ ಹಾತೊರೆಯುತ್ತಿದ್ದರು..

ಅಲ್ಲಿ ನೆರೆದಿದ್ದ ಹರಿಕಥೆ ಅಭಿಮಾನಿಗಳು, ಭಕ್ತರು.. ಎಲ್ಲರೂ ಸೇರಿ "ಗುರುಗಳೇ ಪುರಾಣ ಪುಣ್ಯ ಕಥೆಯನ್ನು ನಿಮ್ಮಷ್ಟು ಸೊಗಸಾಗಿ ಹೇಳುವವರನ್ನು ಕೇಳಿಲ್ಲ.. ನೋಡಿಲ್ಲ. ನಿಮಗೆ ಅಚ್ಚರಿ ಪಡಿಸುವಂತಹ ಅಥವಾ ಅಚ್ಚರಿ ಪಡಿಸಿದ ಯಾವುದಾದರೂ ಘಟನೆ, ಸಂಗತಿ ಹೇಳಿ" ಎಂದಾಗ..

ಬಳಿಯಲ್ಲಿಯೇ ಇದ್ದ ಕಾವೇರಿ ನದಿಗೆ ಬೊಗಸೆಯಲ್ಲಿ ಆ ಕಾವೇರಿ ಮಾತೆಯನ್ನು ಹಿಡಿದುಕೊಳ್ಳಲು ಹೋದರು... ಸಿಕ್ಕಷ್ಟೇ ನೀರಿನಿಂದ ತಮ್ಮ ದಾಹವನ್ನು ತಣಿಸಿಕೊಂಡು.. ಯಾಕೋ ಗಾಬರಿಗೊಂಡರು. ಮತ್ತೆ ಬೊಗಸೆಯಲ್ಲಿ ನೀರು ತುಂಬಿಕೊಂಡು ಕುಡಿದರು, ಮತ್ತೆ ಹರಿಯುವ ನೀರನ್ನು ನೋಡಿದರು. ಮನಸ್ಸು ಸಂತಸ ಭರಿತವಾಯಿತು, ಆಯಾಸವೆಲ್ಲ ಒದ್ದೆ ಬಟ್ಟೆಯ ನೀರು ರವಿಯನ್ನು ಕಂಡೊಡನೆ ಆರಿ ಹೋಗುವಂತೆ.. ಮೈ ಮನವೆಲ್ಲ ಹಗುರಾಯಿತು.. ಕಾವೇರಿ ಮಾತೆ ನಿನ್ನ ಮಹಿಮೆಯೆ ಮಹಿಮೆ ಎಂದು ತಾಯಿ ಕಾವೇರಿಗೆ ನಮಿಸಿ... ಒಂದೆರಡು ಹನಿಯನ್ನು ತಮ್ಮ ತಲೆಯ ಮೇಲೆ ಸಿಂಪಡಿಸಿಕೊಂಡು ಕೃತಾರ್ಥರಾದ ಭಾವದೊಡನೆ ಮತ್ತೆ ಹರಿಕಥೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು..

ಭಕ್ತರೆ, ಸುಧೀರ್ಘ ಹರಿಕಥೆ ಹೇಳಿದನಂತರ ಈಗ ಒಂದು ಚಿಕ್ಕ ಉಪಕಥೆಯನ್ನು ಹೇಳುತ್ತೇನೆ.. ಕೇಳುವಂತವರಾಗಿ

*************************

ಕೀರ್ತಾನರಂಭ ಕಾಲದಲ್ಲಿ ಶಾಲಿವಾಹನ ಶಕೆಯಲ್ಲಿ ಮಹಿಶೂರು ಪ್ರಾಂತ್ಯದ ಶ್ರೀ ಮಾತೆ ನಿಮಿಷಾಂಬ ಕ್ಷೇತ್ರದಲ್ಲಿ ನಾ ಹೇಳುವ ಈ ಘಟನೆ ನನಗೆ ಒಮ್ಮೆಲೇ ಆಹ್ ಎನ್ನುವಂತಾಯಿತು ...  

ಈಗ ತಾನೇ ಕಾವೇರಿ ನದಿಗೆ ನೀರು ಕುಡಿಯಲು ಹೋಗಿದ್ದೆ.. ಮುಖವನ್ನು ನೋಡಿಕೊಳ್ಳಲೆಂದು ನೀರಲ್ಲಿ ನೋಡಿದೆ.. ಅರೆ ನನ್ನ ಮುಖ ಕಾಣುತ್ತಿದೆ.. ಮತ್ತೆ ನೀರನ್ನು ನೋಡಿದೆ.. ಸರಾಗವಾಗಿ, ರಭಸವಾಗಿ ಹರಿಯುತ್ತಿತ್ತು . ಹರಿಯುವ ನೀರಲ್ಲಿ ಅಲೆಗಳ ಎಬ್ಬಿಸುತ್ತ ಹರಿಯುತ್ತಿದ್ದ ನೀರಲ್ಲಿ ಪ್ರತಿಬಿಂಬವೇ ಏನು ತಾಯಿ ನಿನ್ನ ಲೀಲೆ. ಎಂದು ಕಾವೇರಿ ಮಾತೆಗೆ ನಮಿಸಿದೆ.. ಆಗ ತಾಯಿ ನಿಮಿಷಾಂಬೆ ಹೇಳಿದಳು 

"ಭಕ್ತ.. ನಿಂತ ನೀರಲ್ಲಿ ಬಿಂಬ ಪ್ರತಿಬಿಂಬ ಸಹಜ.. ನೀರು ಮನಸ್ಸನ್ನು ಪ್ರತಿಫಲಿಸುತ್ತದೆ.. ಆದರೆ ನೀರು ಹರಿಯುತ್ತಲಿದ್ದಾಗ ನಮಗೆ ಪ್ರತಿಬಿಂಬ ಇರಲಾರದು, ಬರಲಾರದು ಎನ್ನಿಸುವುದು ಸಹಜ.. ಆದ್ರೆ ಮನಸ್ಸು ಒಂದೇ ಆದಾಗ, ನೋಡುವ ನೋಟ, ಆಡುವ ಮಾತುಗಳು, ಯೋಚಿಸುವ ದಾಟಿ ಒಂದೇ ಆದಾಗ ರಭಸದಿಂದ ಹರಿಯುವ ನೀರಲ್ಲೂ ಈ ಚಮತ್ಕಾರ ಸಾಧ್ಯ"  

ಯಾಕೋ ವಿಧ್ವಾನರ ಮುಖದಲ್ಲಿ ಸಮಾಧಾನಕ್ಕಿಂತ ಹಣೆಯಲ್ಲಿ ಇನ್ನಷ್ಟು ಗೆರೆಗಳು ಮೂಡಿದವು, ಹುಬ್ಬುಗಳು ಇನ್ನೊಂದು ಇಂಚು ಮೇಲಕ್ಕೆ ಹೋಗಿ ಮತ್ತೆ ನಾ ಕೆಳಗಿಳಿಯುವುದಿಲ್ಲ ಎಂದು ಶಪಥ ಮಾಡಿದವು.. ಹೃದಯದ ಬಡಿತ ತೀವ್ರ ಆಯಿತು.. 

"ಮಾತೆ ನಿನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ.. ಆದರೆ ನೀ ಹೇಳಿದ ಮಾತುಗಳು ಯಾಕೋ ನನಗೆ ಒಲಿಯುತ್ತಿಲ್ಲ.. ದಯಮಾಡಿ ಇದನ್ನೇ ಒಂದು ಉದಾಹರಣೆ ಸಹಿತ ವಿವರಿಸುತ್ತೀಯ ಪ್ಲೀಸ್"

ದೇವಿ ನಸುನಗುತ್ತಾ ಭಕ್ತನ ಮನದಲ್ಲಿ ಇದ್ದ ಆತಂಕ, ಸಂದೇಹಗಳನ್ನು  ಅರಿತ ಮಾತೆ ಹೇಳಿದಳು "ಭಕ್ತ.. ಮಂಜು ಎನ್ನುವ ಪದ ನೀ ಕೇಳಿರುವೆ.. ಅದು ನಮ್ಮನ್ನು ಆವರಿಸಿದಾಗ, ಸುತ್ತ ಮುತ್ತಲ ಪರಿಸರವನ್ನು ತುಂಬಿಕೊಂಡಾಗ ಎದುರಿಗೆ ಇರುವ ವಸ್ತುಗಳು ಕಾಣುವುದಿಲ್ಲ ಆದರೆ.. ಅದು ತಿಳಿಯಾಗಿ ತೆಳುವಾಗಿ ನಿಂತಾಗ ಆ ಮಂಜಿನಲ್ಲಿ ಕಾಣುವ ದೃಶ್ಯಗಳೇ ಅಪರೂಪದ್ದು  ಅಲ್ಲವೇ.. ಹಾಗೆಯೇ ಇಲ್ಲೊಂದು ಸುಂದರ ನಂಟಿದೆ.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಒಂದು ಹೆಣ್ಣು ಮಗು ಇನ್ನೊಂದು ಮನೆಯನ್ನು ಬೆಳಗುವಂತೆ.. ಎಲ್ಲೋ ಹುಟ್ಟಿ ಎಲ್ಲೋ ಹರಿವ ಕಾವೇರಿ ಮಾತೆ ಸಾಗರ ಸೇರುವಂತೆ.. ಈ ಒಂದು ಪುಟಾಣಿ ಮಗು ಮಂಜು ತುಂಬಿರುವ ಮಂಜುಗುಣಿಯಲ್ಲಿ ಹುಟ್ಟಿ, ಬೆಳೆದು.. ಬೆಂಗಳೂರು ಎಂಬ ಮಾಯಾನಗರಿಯಲ್ಲಿ ನೆಲೆಸಿದಳು..ಈಗಿನಿಂದ ಸುಮಾರು ಮೂರು ವಸಂತಗಳ ಹಿಂದೆ.. ಅಚಾನಕ್ ಒಂದು ಪ್ರವಾಸದಲ್ಲಿ ಈ ಲೇಖನವನ್ನು ಬರೆಯುತ್ತಿರುವ ಕಾಂತನಿಗೆ ಸಿಕ್ಕಿದಳು.. ಇನ್ನು ಈ ಕತೆಯನ್ನು ಈ ಲೇಖಕ ಮುಂದುವರೆಸುತ್ತಾನೆ.. ಭಕ್ತ ಕಾಂತ ಶುರು ಮಾಡಿಕೊ.... !!!

ಕಾಂತ ನಮಸ್ಕರಿಸಿ "ಮಾತೆ ನಾ ಹೆಚ್ಚು ಹೇಳುವುದಿಲ್ಲ...  ಇದು ಉಪಕಥೆ.. ಆಗಲೇ ಸಮಯ ಹೆಚ್ಚಾಗಿದೆ.. ನಾ ಹೇಳುವುದಿಷ್ಟೇ.. ಕನ್ನಡಿ, ಮನಸ್ಸಿನ ಕನ್ನಡಿ.. ದರ್ಪಣ ಹೀಗೆ ನೂರಾರು ಮಾತಲ್ಲಿ ಹೇಳುವ ಒಂದು ವಸ್ತು ಬಿಂಬದ ಪ್ರತಿಬಿಂಬ ತೋರುತ್ತದೆ.. ಇವಳು ಹಾಗೆಯೇ ಅವಳು ಯೋಚಿಸುವ ಪರಿ, ಅವಳು ಮಾತಾಡುವ ಪರಿ, ಹೌದು ನಾ ಕೂಡ ಹೀಗೆ ಮಾಡುತ್ತಿದ್ದೆ ಎಂಬ ಭಾವ ಕೊಡುತ್ತದೆ ಹಾಗೆಯೇ ಇವೆಲ್ಲವೂ ಒಂದಕ್ಕೊಂದು ಹೊಂದಾಣಿಕೆಯಾಗುತ್ತದೆ.. ಅದಕ್ಕೆ ನಾ ಅವಳನ್ನು ನನ್ನ ಕನ್ನಡಿ ಎನ್ನುವುದು ಅಥವ ನಾನು ಅವಳ ಕನ್ನಡಿ.. ಆ ಇದು ಸರಿಯಾದ ಮಾತು.. ನಾ ಅವಳ ಕನ್ನಡಿ.. ಅವಳಲ್ಲಿ ಮೂಡುವ ಮಾತು ನನ್ನಲ್ಲಿ ಮೂಡುತ್ತದೆ.. ಇವಳು ಯಾರು ಬಲ್ಲಿರೇನು ಅಂತ ಸಂದೇಹವೇ ಬೇಡ.. ಇವಳು ಸಂಧ್ಯಾ ಪುಟ್ಟಿ ನನ್ನ ಪ್ರೀತಿಯ SP.. ನನ್ನ ಮುದ್ದು ಸಹೋದರಿ.. "

"ಅದು ಸರಿ ಕಾಂತ.. ಮಾತೆ ಹೇಳಿದ ಮಾತುಗಳು, ನೀ ಹೇಳಿದ ಮಾತುಗಳು ಎರಡು ಅರ್ಥವಾಯಿತು.. ಆದರೆ ಕಾವೇರಿ ನದಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಪ್ರತಿಬಿಂಬ ಹೇಗೆ ಸಾಧ್ಯ.... ಅದು ನನ್ನ ಯಕ್ಷಪ್ರಶ್ನೆ.."

ದೇವಿ ನಗುತ್ತಾ "ಭಕ್ತ .. ಇಂದು ಸಂಧ್ಯಾಳ ಹುಟ್ಟು ಹಬ್ಬ.. ಕಾಂತ ಮತ್ತು ಸಂಧ್ಯಾ ಬಿಂಬ ಪ್ರತಿಬಿಂಬದಂತೆ.. ಸಂಧ್ಯಾ ಎನ್ನುವ ಈ ಮುದ್ದು ಪುಟಾಣಿ ಹರಿಯುವ ನೀರಿನಂತೆ .. ನಮ್ಮ ಕಾವೇರಿಯಂತೆ .. ಅದರ ಒಡಲಲ್ಲಿ ಇರುವ ಅನೇಕ ಜೀವಾತ್ಮ ಅಂಶಗಳು ಇರುವಂತೆಯೇ  ಈ ಮುದ್ದು ಪೋರಿಯಲ್ಲಿ ಇರುವ ಕಲೆ ಅಬ್ಬಾ ಎನಿಸುತ್ತದೆ.. ಇವಳ ಕೈಗೆ ಒಂದು ತೆಂಗಿನ ನಾರನ್ನೇ ಕೊಡು ಒಂದು ಕಲಾಕೃತಿ ಸಿದ್ಧವಾಗುತ್ತದೆ.. ಅಂಥಹ ಚಮತ್ಕಾರ ಮಾಡುತ್ತಾಳೆ.. ಇನ್ನು ಇವಳ "ಸಂಧ್ಯೆಯಂಗಳದಿ" ಅಂಕಣದಲ್ಲಿ ಬರೆಯುವ ಲೇಖನಗಳು ಹೀಗೂ ಬರೆಯಬಹುದೆ ಎಂದು ಅಚ್ಚರಿ ಹುಟ್ಟಿಸುತ್ತದೆ.. ಅಂಥಹ ಚಮತ್ಕಾರಿಕ ಕಾಂತನ ಸಹೋದರಿಗೆ ಶುಭಾಶಯಗಳನ್ನು ಹೇಳಲು ಕಾವೇರಿ ಮಾತೆ ದರ್ಪಣವಾಗಿದ್ದಾಳೆ"

ಕಾಂತ.. ನೀನೆ ಧನ್ಯ.. ಇಂದು ಮುದ್ದು ಪುಟಾಣಿಯನ್ನು ತಂಗಿಯಾಗಿ ದರ್ಪಣವಾಗಿ ಪಡೆದ ನೀನೆ ಧನ್ಯ.. 
*********************

ಭಕ್ತರೆಲ್ಲಾ ಹರ್ಷದಿಂದ.. ಒಂದು ವಿಭಿನ್ನ ಕಥೆಯನ್ನು ಕೇಳಿದ ಅನುಭವ ಪಡೆದ ಅವರೆಲ್ಲರೂ  ಎದ್ದು ನಿಂತು "ಸಂಧ್ಯಾ.. ನಿನ್ನ ಹೆಸರಲ್ಲಿಯೇ ಸುಂದರ ಮುಂಜಾವಿದೆ, ಸುಂದರ ಸಂಜೆಯಿದೆ... ಆ ಸಂಧ್ಯಾಕಾಲದಲ್ಲಿ ಸೂರ್ಯ ಚಂದ್ರ ತಾರೆಗಳು ಅಂಬರದಲ್ಲಿ ಕಾಣುವ ಹಾಗೆ.. ನಿನ್ನ ಜೀವನದಲ್ಲಿ ಸಂತಸ ಎನ್ನುವ ಚಂದ್ರ ಬೆಳದಿಂಗಳು ಚೆಲ್ಲಲಿ , ನೆಮ್ಮದಿ ಎನ್ನುವ ಸೂರ್ಯ ಪ್ರಜ್ವಲಿಸಲಿ, ಆಸೆ ಆಕಾಂಕ್ಷೆಗಳು ಎನ್ನುವ ತಾರೆಗಳು ಸದಾ ಮಿನುಗುತ್ತಲಿರಲಿ.. ಕಲೆ ಎನುವ ನಿನ್ನ ಬಾಂದಳ ಬೆಳಗುತ್ತಲಿರಲಿ.."                                                                             
                                                               *********************
ಮತ್ತೆ ಹರಿಕಥಾ ವಿಧ್ವಾನರು ನಿಮಿಶಾಂಬೆಗೆ ನಮಿಸಿ ಕಾವೇರಿ ಮಾತೆಯನ್ನು ಒಮ್ಮೆ ನೋಡಿ ನಮಿಸಿ ಮತ್ತೊಂದು ಸುಂದರ ಪುರಾಣ ಪುಣ್ಯ ಕಥೆಯನ್ನು ಹೇಳಲು ಸಿದ್ಧವಾದರು.. 
                                                              **********************

ಅಲ್ಲಿಯೇ ನಿಂತಿದ್ದ ನಿಮಿಶಾಂಬೆ ಸಂಧ್ಯಾ ಪುಟ್ಟಿಯನ್ನು ಹರಸಿ ಗರ್ಭಗುಡಿಯಲ್ಲಿ ಹೋಗಿ ನಿಂತಳು ಎನ್ನುವಲ್ಲಿಗೆ ಈ ಹರಿಕಥಾ ಉಪಪ್ರಸಂಗ ಮಂಗಳವಾಯಿತು.. !!!


ಜನುಮದಿಂದ ಶುಭಾಶಯಗಳು SP!!!


Monday, January 26, 2015

ನಾವಿಂದು ಹಾಡುವ ಹಾಡಿಗೆ ಕೊನೆ ಇಲ್ಲಾ !!!!

ಅನುಮಾನ ಬಂತು..

ತಲೆ ಎತ್ತಿ ನೋಡಿದೆ..

ಭೀಮ ಗೋಲ್ಡ್ ಪ್ಯಾಲೇಸ್ ಅಂಗಡಿಯ ಜಾಹಿರಾತಿನಂತೆ ಎಲ್ಲವೂ ಸುವರ್ಣಮಯವಾಗಿ ಹೊಳೆಯುತ್ತಿದೆ..

ಕಣ್ಣುಜ್ಜಿಕೊಂಡೆ.. ಚಿವುಟಿಕೊಂಡೆ.. ಇಲ್ಲ ನಿಜ ನಿಜ..

ಇದು ನನ್ನ ಅನುಭವ.. ಅರೆ ಇದೇನಿದು ಬರಿ ಟ್ರೈಲರ್ ಅಂದ್ರಾ ಬನ್ನಿ ನನ್ನ ಜೊತೆ.. ಹಾಗೆಯೇ ಒಂದು ವಾರದ ಹಿಂದಕ್ಕೆ ಅಲ್ಲ ಅಲ್ಲ ನಾಲ್ಕೈದು ದಶಕಗಳ ಹಿಂದಕ್ಕೆ ಕರೆದೊಯ್ಯವೆ!!!!

ಸಂಗೀತದ ಗಂಧ ಗಾಳಿ ಗೊತ್ತಿರದ ನನಗೆ ಕೊಳಲು, ಗಿಟಾರ್, ತಬಲಾ, ವೀಣೆ ಈ ವಾಧ್ಯಗಳ ಸಂಗೀತ ಎಂದರೆ ವಿಪರೀತ ಪ್ರೀತಿ.. ಸಂತೋಷಕ್ಕೆ ಹಾಡು ಸಂತೋಷಕ್ಕೆ ಈ ಹಾಡಿಗೆ ಗಿಟಾರ್ ಬಳಸಿರುವ ರೀತಿ, ಅನೇಕ ಹಾಡುಗಳಿಗೆ ತಬಲಾ ಧ್ವನಿ, ಉಪಾಸನೆಯ ವೀಣೆಯ ಝೇಂಕಾರ, ರಣಧೀರ ಚಿತ್ರದ ಕೊಳಲಿನ ಜಾದೂ (ಹಿಂದಿಯ ಹೀರೋ ಚಿತ್ರಕ್ಕಿಂತ ಕನ್ನಡದಲ್ಲಿ ಅತ್ಯತ್ತಮವಾಗಿದೆ) ಇವೆನ್ನೆಲ್ಲ ಕಣ್ಣಾರೆ ನೋಡಬೇಕು, ಕಿವಿಯಾರೆ ಕೇಳಬೇಕು ಎನ್ನುವ ಹಂಬಲ ನನ್ನನ್ನು ಬೆಂಬಲಿಸುತ್ತಲೇ ಇತ್ತು..

ಸಾಕು ಸಾಕು ಪೀಠಿಕೆ.. ವಿಷಯಕ್ಕೆ ಬರುತ್ತೇನೆ

ಸತ್ಯ ಲೋಕದಲ್ಲಿ ಸರಸ್ವತಿಯ ಸುಳಿವೇ ಇಲ್ಲ.. ಕಾದು ಕಾದು ಸುಸ್ತಾದ ಚತುರ್ಮುಖ ಬ್ರಹ್ಮ ತನ್ನ ಮಡದಿಯನ್ನು ಹುಡುಕಿಕೊಂಡು ಭುವಿಗೆ ಬಂದೆ ಬಿಟ್ಟಾ.. ಭುವಿಗೆ ಕಾಲಿಟ್ಟ ಮೇಲೆ.. ಎಲ್ಲಾ ಮಾನವರ ಹಾಗೆಯೇ ಆಗಿ ಬಿಡುತ್ತಾರೆ ಎಂಬ ಪ್ರತೀತಿಗೆ ವಿರುದ್ಧವಾಗಿ ವಿಧಾತಾ ದೇವತ್ವನ್ನು ಉಳಿಸಿಕೊಂಡಿದ್ದ. ಆದರೆ ಮಾನವ ಲೋಕದ ಕಟ್ಟು ಪಾಡನ್ನು ಮುರಿಯಲು ಇಷ್ಟ ಪಡದೆ.. ಕಳೆದು ಹೋದ ವಸ್ತುವನ್ನು ಹುಡುಕಲು ಆರಕ್ಷಕ ಠಾಣೆಗೆ ಬಂದು.. ಅಲ್ಲಿದ್ದ ದಫ್ಫೆದಾರನ ಬಳಿ ಬಂದು.. ನನ್ನ ಮಡದಿ ಭೂಲೋಕಕ್ಕೆ ಬಂದಿರಬಹುದು... ಇದು ಆಕೆಯ ಭಾವಚಿತ್ರ.. ದಯಮಾಡಿ ಹುಡುಕಿಕೊಡಿ ಎಂದು ಅರ್ಜಿಯನ್ನು ಬರೆದುಕೊಟ್ಟರು.

ಆರಕ್ಷಕ ಸಿಬ್ಬಂಧಿ ಒಂದು ಕ್ಷಣವೂ ಕಣ್ಣನ್ನು ಮಿಟುಕಿಸದೆ.. ಆ ಚಿತ್ರವನ್ನು ಮೇಜಿನ ಮೇಲೆ ಇತ್ತು.. ಶಿರಸ ಪ್ರಣಾಮ ಮಾಡಿ.. ಈ ತಾಯಿಯನ್ನು ನೋಡದವರು ಯಾರಿದ್ದಾರೆ.. ಸ್ವಲ್ಪ ಹೊತ್ತು ಕುಳಿತುಕೊಳ್ಳಿ..ಎಂದು ಒಳಗೆ ಹೋಗುತ್ತಾರೆ.

ಗಣಕಯಂತ್ರದಲ್ಲಿ ಟಪ ಟಪ ಮಾಡಿ ನೋಡುತ್ತಾರೆ.. ಉಪಗ್ರಹದ ಮೂಲಕ ಒದಗಿ ಬಂದ ಚಿತ್ರದಲ್ಲಿ ದೊರೆತ ಮಾಹಿತಿ ಪ್ರಕಾರ, ಕಶ್ಯಪ ಬ್ರಹ್ಮನ ಪಿತನನ್ನು ಕರೆದುಕೊಂಡು ಬನಶಂಕರಿ ತರಕಾರಿ ಮಾರುಕಟ್ಟೆಯ ಬಳಿ ಒಂದು ಮನೆಯ ಮೇಲಿನ ಮಹಡಿಗೆ ಕರೆದೊಯ್ಯುತ್ತಾರೆ. ಬ್ರಹ್ಮನ ಒಂದು ಕ್ಷಣ ಅವಕ್ಕಾಗಿ ನೋಡುತ್ತಾರೆ.

ತಾಯಿ ಶಾರದೆ ಲೋಕ ಪೂಜಿತೆ ಒಳಗೆ ಕೂತಿರುವ ಪರಿಕರಗಳು!!!

ಅಲ್ಲಿ ನೋಡಿದರೆ ಸರಸ್ವತಿಯ ರೂಪವೇ ಬದಲಾಗಿ ಬಿಟ್ಟಿದೆ.. ಚಪ್ಪಾಳೆಯ ಸದ್ದಿಗೆ ಎಂಟು ಕಿವಿಗಳು ಗುಯ್ ಅನ್ನುತ್ತಿದ್ದವು ಪಿತಾಮಹನಿಗೆ.

ಕಾರಣ.. ತಬಲದಲ್ಲಿ ಜಾದು ಮಾಡುವ ಶ್ರೀ ವೇಣುಗೋಪಾಲ್, ಗಿಟಾರ್ ನಲ್ಲಿ ಹೃದಯ ಮಿಡಿಸುವ ಶ್ರೀ ಶ್ರೀನಿವಾಸ ಆಚಾರ್ ದಮ್ಮುರ್,  ಶಬ್ಬಾಶ್ ಎನ್ನಿಸುವ ಬೇಸ್ ಗಿಟಾರಿನ ಸ್ಪೆಷಲಿಸ್ಟ್ ಶ್ರೀ ಕ್ಯಾಲೇಬ್ , ಕೀ ಬೋರ್ಡ್ ನಲ್ಲಿ ಮನಸ್ಸಿನ ಎಲ್ಲಾ ಚಿಂತೆಗಳ ಬೀಗವನ್ನು ಕಿತ್ತೊಗೆಸುವಂತಹ ಸಂಗೀತ ತೆಗೆಯುವ ಶ್ರೀ ಉಮೇಶ್ ಕೀ ಬೋರ್ಡ್, ರಿದಂ ಪ್ಯಾಡ್ ನಲ್ಲಿ ಕೂತಲ್ಲೇ ಕುಣಿಸುವ ಶ್ರೀ ಪದ್ಮನಾಭ ಕಾಮತ್, ಇವರೆಲ್ಲ ಮಾಡುತ್ತಿದ್ದ ಜಾದೂವನ್ನು ಶುಭ ಆಶೀರ್ವಾದ ನೀಡುತ್ತಾ ನೋಡುತ್ತಾ ಕುಳಿತಿದ್ದಳು ಆ ತಾಯಿ ಶಾರದೆ,



ಒಂದೇ ಎರಡೇ.. ಅನೇಕಾನೇಕ ಹಾಡುಗಳು ಗಂಗಾವತರಣದ ಹಾಗೆ ಹರಿಯುತ್ತಲೇ ಸಾಗಿತು.

ಮನಕ್ಕೆ ಆನಂದ ನೀಡುವುದು.. ವಾದ್ಯ ಗೋಷ್ಠಿ ನುಡಿಸುತ್ತಾ.. ನುಡಿಸುತ್ತಾ .. ಒಂದು ಸುಂದರ ಹಾಡಿನ ಸಾಲು ಇಣುಕಿದಾಗ ಸಿಗುತ್ತಲ್ಲ ಆ ಸಂತೋಷ.. ಪಾಯಸ ಕುಡಿಯುವಾಗ ಮಧ್ಯೆ ಮಧ್ಯೆ ಸಿಗುವ ದ್ರಾಕ್ಷಿ, ಗೋಡಂಬಿಯ ಹಾಗೆ.. ಅಬ್ಬಾ ಅನ್ನಿಸುತ್ತಿತ್ತು. ಅರೆ ಈ ಹಾಡು ನನಗೆ ಗೊತ್ತು ಅನ್ನಿಸುವಷ್ಟರಲ್ಲಿ ಇನ್ನೊಂದು ಜಾದುಗಾರರ ಹಾಡು ಹರಿದು ಬರುತ್ತಿತ್ತು.

ಒಮ್ಮೆ ಗಿಟಾರಿನ ಕಡೆ ನೋಡಿದರೆ, ಇನ್ನೊಮ್ಮೆ ರಿದಂ ಪ್ಯಾಡ್.. ಏನ್ ಸರ್ ಅಲ್ಲೇ ನೋಡ್ತಾ ಇದ್ದೀರಾ.. ಇಲ್ಲಿ ನೋಡಿ ಅಂತ ಕೀ ಬೋರ್ಡ್ ಮ್ಯಾಜಿಕ್ ಶುರು ಆಗೋದು.. ತದಿಂ ತದಿಂ ಅಂತ ತಬಲಾ ಮನದೊಳಗೆ ಇಳಿದು ಬಿಡುತ್ತಿತ್ತು. ಸರ್ ನನ್ನ ಜಾದೂನು ನೋಡಿ ಅಂತ ಬೇಸ್ ಗಿಟಾರ್ ಇಡಿ ಕಾರ್ಯಕ್ರಮದಲ್ಲಿ ಗುಪ್ತಗಾಮಿನಿಯ ಹಾಗೆ ಹರಿಯುತ್ತಲೇ ಇತ್ತು.,

ಸಿಹಿ ಅಂಗಡಿ ಹೊಕ್ಕ ಮಗುವಿನಂತೆ.. ಒಂದು ರುಚಿಯಾದರೆ, ಇನ್ನೊಂದು ಲೊಟ್ಟೆ ಹೊದೆದಷ್ಟು ಸಂತೋಷ ಕೊಡುತ್ತಿತ್ತು, ಇನ್ನೊಂದು ಯಮ್ಮಿ ಅನ್ನುವ ಹಾಗೆ ಮಾಡಿಸಿದರೆ, ಮಗದೊಂದು ಅಬ್ಬಾ ಅಂತ ಕಣ್ಣಲ್ಲಿ ದೇವಗಂಗೆ ಹರಿಸುತ್ತಿತ್ತು. 

ಏ ರಾತೇ ಏ ಮೌಸಂ ನದಿ ಕಾ ಕಿನಾರ

ಬಾರೆ ಬಾರೆ ಚಂದದ ಚಲುವಿನ ತಾರೆ

ಫಲ್ ಫಲ್ ದಿಲ್ ಕೆ ಪಾಸ್ ತುಮ್

ಗಜಮುಖನೆ ಜಯತು ಗಜನಾಥನೆ (ಕುಮಾರಿ ಶ್ರಾವ್ಯ ಹಾಗೂ ಕುಮಾರಿ ಅಕ್ಷತ ಗಾಯನದ ಸುಧೆ)

ಓ ಓ ಸಜನ (ಕುಮಾರಿ ಹಿರಣ್ಮಯಿ ಶರ್ಮ)

ಚುರಾಲಿಯ (ನೆರೆದಿದ್ದವು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿದ್ದು ಈ ಹಾಡಿನ ವಿಶೇಷತೆ)

ಮುಚ್ಚು ಮರೆಯಿಲ್ಲದೆ (ಸ್ವರ್ಗದ ಸಭೆಯಲ್ಲಿ ಗಾಯಕರಾಗಿರುವ ಶ್ರೀ ರಾಜು ಅನಂತಸ್ವಾಮಿಯವರ ನೆನಪಿಗೆ - ಕುಮಾರೀ ಶ್ರಾವ್ಯ)

ಒಲವಿನ ಪ್ರಿಯಲತೆ (ಪಿ ಬಿ ಎಸ್ ಅವರ ಶ್ರೇಷ್ಠ ಗೀತೆ ಮತ್ತು ಅವರಿಗೆ ಅತಿ ಇಷ್ಟವಾದ ಗೀತೆ)

ಎಕ್ ಪ್ಯಾರ್ ಕ ನಗ್ಮಾ ಹೇ

ತಬಲದ ಒಂದು ನಾದ ಹಾಡಿನ ಯಶಸ್ಸಿಗೆ ಕಾರಣವಾದ ಚೈತ್ರದ ಪ್ರೇಮಾಂಜಲಿಯ ಒಂದು ತುಣುಕು

ದಿಲ್ ಚೀಸ್ ಕ್ಯಾ ಹೈ (ಕುಮಾರಿ ಹಿರಣ್ಮಯಿ ಶರ್ಮ ಗಾಯನ )

ಸುನ್ ರಾ ಹೇ (ಕುಮಾರಿ ಹಿರಣ್ಮಯಿ ಶರ್ಮ ಗಾಯನ)

ದೆಖಾನ ಹಾಯ್ (ಬಾಂಬೆ ಟು ಗೋವಾ ಚಿತ್ರದ ಕುಣಿಸುವ ಹಾಡು ಶ್ರೀ ಆದಿತ್ಯ ವಿಠಲ್ ಅವರ ಸುಮಧುರ ಸ್ಪೂರ್ತಿದಾಯಕ ಕಂಠ ಸಿರಿಯಲ್ಲಿ)

ಕುಣಿಸಿ ಕುಣಿಸಿ ತಣಿಸಿದ "ಕಮಲಿ ಕಮಲಿ"  (ಕುಮಾರಿ ಶ್ರಾವ್ಯ ಹಾಗೂ ಕುಮಾರಿ ಅಕ್ಷತ ಗಾಯನ)

ಗಿಟಾರಿನ ಜಾದೂ "ನಿಲೆ ನಿಲೇ ಅಂಬರ್ ಪರ್"

ದೋ ಫಲ್ ಮೇ

ತೂ ಮಿಲೇ ದಿಲ್ ಖಿಲೇ

ಚುಪ್ ಕೈಸೆ ರಾತ್ ಕೆ (ಕುಮಾರಿ ಹಿರಣ್ಮಯಿ)

ಎಂದೆಂದೂ ನಿನ್ನನು ಮರೆತು

ದಂ ಮಾರೋ ದಂ

ದುನಿಯಾ ಮೇ ಲೋಗೊಂಕೋ

ಲೈಲಾ ಹೊ ಲೈಲಾ

ಎಲ್ಲಿರುವೆ ಮಾನವ ಕಾಡುವ ರೂಪಸಿಯೇ

ಎದೆ ತುಂಬಿ ಹಾಡುವೆನು

ಹೀಗೆ ಒಂದು ಹಾಡಿನ ನಂತರ ಇನ್ನೊಂದು.. ಸಾಗುತ್ತಲೇ ಇತ್ತು.. ಚಪ್ಪಾಳೆ ಸದ್ದಿಗೆ ಅಂಬರವೆ ತೂತಾಗಿ ಬಿಟ್ಟಿತೇನೋ ಅನ್ನಿಸುವಷ್ಟು ಕಾಡುತ್ತಿತ್ತು ಸಂಗೀತ ಮೆರವಣಿಗೆ.

ಊಟ ಸಿದ್ಧವಾಗಿದೆ ಅಂತ ಹೇಳುತ್ತಲೇ ಇದ್ದರೂ.. ಮೊದಲು ಕಿವಿಗೆ ಮತ್ತು ಹೃದಯಕ್ಕೆ ನಂತರ ಹೊಟ್ಟೆಗೆ ಅನ್ನುವ ಅಭಿಮತ ಎಲ್ಲರದಾಗಿತ್ತು... ಎದ್ದು ಹೋಗಲು ಯಾರಿಗೂ ಮನಸ್ಸಿಲ್ಲ.. ಸಂಗೀತದ ವಾದ್ಯಗಳು ಕೂಡ ಇನ್ನಷ್ಟು ಬೇಕು ಎಂದು ಕೇಳುತ್ತಿದ್ದವು ಅನ್ನಿಸುತ್ತಿತು.

ಹಣೆಬರಹ ಬರೆಯುವ ಬ್ರಹ್ಮ ಅಂದು ತನ್ನ ನಾಲ್ಕು ಹಣೆಗಳನ್ನೇ ತಾಳ ಮಾಡಿಕೊಂಡು ತನ್ನ ಎಂಟು ಕೈಗಳಿಂದ ತಾಳ ಹಾಕುತ್ತಿದ್ದನು. ಆ ವಾದ್ಯಗಳಲ್ಲಿ, ಮತ್ತು ಆ ಕಲಾವಿದರ ಬೆರಳುಗಳಲ್ಲಿ, ಕೈಗಳಲ್ಲಿ ನೆಲೆಸಿದ್ದ ಸರಸ್ವತಿ ಕೂಡ ಆನಂದಭಾಷ್ಪ ತುಳುಕಿಸಿದ್ದು ಸುಳ್ಳಲ್ಲ.

ತೂಕದ ಹೆಜ್ಜೆ ಹಾಕುತ್ತಾ ತಾಯಿ ಶಾರದೆ ಎದ್ದು ನಿಂತಾಗ, ಬ್ರಹ್ಮನ ಕಣ್ಣಲ್ಲೂ ಜಿನುಗಿತು ಭಾಷ್ಪ.
ಆಯೋಜಕರ ಪರಿವಾರ 

ಸರಸ್ವತಿ ಪುತ್ರರು

ಸರಸ್ವತಿ ಲೋಕದಲ್ಲಿ ಒಂದು ಕ್ಷಣ 

ಮೊದಲ ಬಾರಿಗೆ ನನ್ನ ಕ್ಯಾಮೆರ ಕೆಲಸ ಮಾಡಲು ನಿರಾಕರಿಸಿತು.. ಶ್ರೀ ನಾ ಸಂಗೀತ ಸ್ವಾದ ಅನುಭವಿಸುತ್ತೇನೆ.. ದಯವಿಟ್ಟು ನನ್ನನು ಸುಮ್ಮನೆ ಇರಲು ಬಿಡು ಎಂದಿತು.. ಹಾಗಾಗಿ ಚಿತ್ರಗಳು ಕಡಿಮೆಯಾಯಿತು!!!

ಪ್ರಸಾದ್ ಎಂ ಎಸ್ .. ತಮ್ಮ ಹೆಸರನ್ನು ಪ್ರಸಾದ್ ಮ್ಯೂಸಿಕಲ್ ಸಂಜೆ ಎಂದು ಬದಲಾಯಿಕೊಳ್ಳಬೇಕಾಗುತ್ತದೆ ಅಷ್ಟು ಸುಂದರವಾಗಿತ್ತು ಹದಿನೇಳನೆ ತಾರೀಕು ಶನಿವಾರದ ಸಂಜೆ.

ಈ ಸಂಜೆಯನ್ನು ಸುಂದರವಾದ ಗುಂಗಿನಲ್ಲಿ ಕಳೆಯುವಂತೆ ಮಾಡಿದ ಪ್ರಸಾದ್ ಅವರಿಗೆ ಜನುಮದಿನಕ್ಕೆ ಶುಭ ಕೋರಲು ತಾಯಿ ಶಾರದೆ ಅಲ್ಲಿಯೇ ಮಹಡಿಯಲ್ಲಿ ನೆಲೆಸಿ ನನ್ನ ಕೀ ಬೋರ್ಡ್ ಗೆ ಬರಲು ನಿರಾಕರಿಸಿದ್ದರಿಂದ ತಡವಾಯಿತು.

ಪ್ರಸಾದ್ ನಿಮ್ಮ ಸುಂದರ ಅನುಭವವನ್ನು ನಮಗೂ ಸಹ ಹಂಚಿಕೊಂಡದ್ದು, ಸರಸ್ವತಿ ಪುತ್ರರನ್ನು ಪರಿಚಯಿಸಿದ್ದು, ಅವರೊಡನೆ ಆಡಿದ ಕೆಲವು ಮಾತುಗಳು, ಅವರು ಕೊಟ್ಟ ಹಸ್ತ ಲಾಘವ..ಇನ್ನು ಹಾಗೆ ಉಳಿದುಬಿಟ್ಟಿದೆ.

ನಿಮ್ಮ ಜನುಮದಿನಕ್ಕೆ ನಿಮ್ಮ ಬದಲು ನೀವು ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಬರೆಯುವಂತೆ ತಾಯಿ ಶಾರದೆ ಮಾಡಿದ್ದಾಳೆ ಅಂದರೆ ಯೋಚಿಸಿ ಇನ್ನೂ ಆ ಗುಂಗಿನಿಂದ ಹೊರ ಬಂದಿಲ್ಲ ಎಂದು..

ಹುಟ್ಟು ಹಬ್ಬದ ಶುಭಾಶಯಗಳು ಪ್ರಸಾದ.. ಹೀಗೆ ನಿಮ್ಮ ಸಂಗೀತದ ಪ್ರಸಾದ ಹರಿಯುತ್ತಲೇ ಇರಲಿ.. !!!!

Wednesday, June 18, 2014

ಜನುಮ ಜನುಮದ ಅನುಬಂಧ.....!

ಅಣ್ಣಾವ್ರ ಹಾಲು ಜೇನು ಚಿತ್ರದ ಹಾಡು ಜೋರಾಗಿ ನನ್ನ ಕಾರಿನಲ್ಲಿ ಬರುತ್ತಿತ್ತು... 

"ಶ್ರೀ ರಂಗನಾಥನಂತೆ ಮಲಗಿಹ ನಿನ್ನ ಕಂಡೆ.. ಆನೆಯ ಮೇಲೆ ಅಂಬಾರಿ ಕಂಡೆ...  ಅಂಬಾರಿ ಒಳಗೆ ನಿಮ್ಮನ್ನೇ ಕಂಡೆ.. ನನ್ನೇ ನಾ ಕಂಡೆ.. ನಿಮ್ಮೊಳಗೆ ನನ್ನೇ ನಾ ಕಂಡೆ.. "

ಕಾರ್ ಸ್ಟೀರಿಯೋ ಯಾಕೋ ನನ್ನ ಕಡೆಯೇ ನೋಡಿ.. ಅಣಕಿಸಿದಂತೆ ಭಾಸವಾಯಿತು.. "ಏನೋ ಶ್ರೀಕಾಂತ ಇದು... ಚಿ. ಉದಯಶಂಕರ್  ಬರೆದಿರುವ ಸಾಹಿತ್ಯವೆ ಬೇರೆ ನಿನ್ನ ಕಾರಿನಲ್ಲಿ ಬರುತ್ತಿರುವ ಸಾಹಿತ್ಯವೇ ಬೇರೆ.. ಏನಿದರ ಕಥೆ.. ನೋಡು ಶ್ರೀ ಸುಮ್ಮನೆ ನೇರವಾಗಿ ಕಥೆ ಹೇಳುವುದಾದರೆ ಹೇಳು.. ನೀನು ನಿನ್ನ ವಿಚಿತ್ರ ಶೈಲಿಯಲ್ಲಿ ಕಥೆ ಹೇಳುವುದಾದರೆ ನಾ ಕೇಳಲು ಸಿದ್ದನಿಲ್ಲ.. "

"ಇಲ್ಲಪ್ಪ.. ಸುಮ್ಮನೆ ಮೆಗಾ ಧಾರಾವಾಹಿ ತರಹ ರಬ್ಬರ್ ಮಾಡೋಲ್ಲ.. ಸಂಕ್ಷಿಪ್ತವಾಗಿಯೇ ಹೇಳಿ ಬಿಡುತ್ತೇನೆ..  "

"ಹಾ ಸರಿ.. ಶುರು ಮಾಡು"

"ಮೈಸೂರು ರಾಜ್ಯ ಎಂದೇ ಹೆಸರಾಗಿದ್ದ ಒಂದು ಕಾಲದ ಸಾಂಸ್ಕೃತಿಕ ನಗರಿ... ಇನ್ನೂ ರಾಜ ಪರಂಪರೆಯನ್ನು ಜೀವಂತವಾಗಿ ಉಳಿಸಿಕೊಂಡ ಹಲವು ಪ್ರದೇಶಗಳಲ್ಲಿ ಇದು ಕೂಡ ಒಂದು.. ಮಲ್ಲಿಗೆ ಹೂವು, ಸಿಹಿ ತಿನಿಸು, ರೇಷ್ಮೆ ಸೀರೆ ಇವೆಲ್ಲ ಪ್ರಖ್ಯಾತಗೊಂಡಿದ್ದವು.. ಆದರೆ ಅವಕ್ಕೆಲ್ಲ ಮೈಸೂರು ಎನ್ನುವ ಪದವನ್ನು ತಮ್ಮೊಳಗೆ ಸೇರಿಸಿಕೊಂಡು ಅದನ್ನು ಒಂದು ಬ್ರಾಂಡ್ ಮಾಡಿಬಿಟ್ಟವು.. "

"ಹಾ ಮುಂದೆ"

"ಹಾಗೆಯೇ ನಮ್ಮ ಬ್ಲಾಗ್ ಲೋಕದಲ್ಲಿ ಮೈಸೂರು ಎಂದರೆ ಧುತ್ ಅಂತ ಎದುರಿಗೆ ಬರುವುದು.. ನಿಮ್ಮೊಳಗೆ ನಾನು.. ನಿಮ್ಮೊಳಗೊಬ್ಬ ನಾನು.. ನಿಮ್ಮೊಳಗೊಬ್ಬ ಬಾಲೂ ಅಂತ ನಸು ನಗುತ್ತಾ.. ಅರ್ಜುನ ತನ್ನ ಬತ್ತಳಿಕೆಯಿಂದ ಹಸ್ತಿನಾಪುರದಲ್ಲಿ ವಿಧ್ಯಾಭ್ಯಾಸ ಮುಗಿಸಿಕೊಂಡು ಬಂದ  ಮೇಲೆ ಅನೇಕ ಚಮತ್ಕಾರಗಳನ್ನು ತೋರಿದ ಹಾಗೆ.. ಇವರು ಕೂಡ ಸದಾ ಕ್ಯಾಮೆರ ಧಾರಿ.. ಇವರ ದೃಷ್ಟಿಗೆ ಬೀಳದ ಸುಂದರ ಸನ್ನಿವೇಶಗಳು ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಕರಾರುವಾಕ್ ಇವರ ಛಾಯಗ್ರಾಹಕ ಶಕ್ತಿ.. "

"ಹಾ... "

"ರಾಮ, ಅರ್ಜುನ, ಏಕಲವ್ಯ ಇವರೆಲ್ಲ ಶಭ್ದವೇದಿ ವಿಧ್ಯೆಯಲ್ಲಿ ನಿಪುಣರು.. ಹಾಗೆಯೇ ಇವರು ಕೂಡ .. ಅದು ಎಲ್ಲಿರುತ್ತಾರೆ.. ಹೇಗೆ ಚಿತ್ರ ತೆಗೆಯುತ್ತಾರೆ.. ಆ ದೇವನಿಗೆ ಗೊತ್ತು.. ಆ ಚಿತ್ರಗಳನ್ನು ತೆಗೆದು.. ಅದನ್ನು ಪರಿಷ್ಕರಿಸಿ... ಅದಕ್ಕೆ ಒಪ್ಪುವ ಹಾಗೆ ಪದಗಳ ಪೋಷಾಕು ತೊಡಿಸಿ.. ಅವರ ಅಭಿಮಾನಿಗಳ ಮುಂದೆ ಇಟ್ಟಾಗ.. ಹಸಿದವರ ಮುಂದೆ ಇಡುವ ಊಟದಷ್ಟೇ ಸೊಗಸು.."

"ಓಹೊ.. ಸರಿ ಸರಿ ಈಗ ಅರ್ಥವಾಯಿತು.. ನಿನ್ನ ಕಾರು ಮೈಸೂರು ರಸ್ತೆಯಲ್ಲಿ ಸಾಗುತ್ತಿದೆ.. ಅದಕ್ಕೆ ಹಾಡಿನ ಸಾಲುಗಳು ಕೂಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿವೆ.. ಅಲ್ಲವೇ..ಶ್ರೀ "

"ಹೌದು ನೀ ಹೇಳಿದ್ದು ಸರಿ.. ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್ ಜೊತೆಯಲ್ಲಿ ಮೈಸೂರು ಬಾಲಣ್ಣ ಎಂದೇ ಹೆಸರಾಗಿರುವ ಬಾಲೂ ಸರ್.. ನಮ್ಮ ಆತ್ಮೀಯ ಬಳಗದ ಪ್ರಮುಖರು.. ಅದಕ್ಕೆ ಮೈಸೂರು ಮತ್ತೆ ಬಾಲೂ ಸರ್ ಎರಡಕ್ಕೂ ಬಿಡಿಸಲಾರದ ನಂಟು.. ಬಾಲೂ ಸರ್ ಎಂದರೆ... ಶ್ರೀ ರಂಗನಾಥ ಕೂಡ ಒಮ್ಮೆ ಎದ್ದು ಆಶೀರ್ವಾದ ನೀಡುತ್ತಾರೆ"

"ಶ್ರೀ.. ನಿನ್ನ ಶೈಲಿಯಲ್ಲಿ.. ಅವರು ನಿನಗೆಷ್ಟು ಆಪ್ತರು.. ದಯಮಾಡಿ ಹೇಳು.. ಇದು ನಿನ್ನ ಶೈಲಿಯಲ್ಲಿಯೇ ಇರಬೇಕು.. "

"ಖಂಡಿತ ಹೇಳುತ್ತೇನೆ ..  ಶ್ರೀ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಬಗ್ಗೆ ನನಗೆ ಅರಿವಾದ ವಿಚಾರಗಳನ್ನು ಬರೆಯಲು ಶುರು ಮಾಡಿ ತಿಂಗಳುಗಳೇ ಆಗಿದ್ದವು.. ಕೆಲಸದ ಒತ್ತಡದಿಂದ ಮುಂದುವರೆಸಲು ಆಗಿರಲಿಲ್ಲ... ಒಂದು ಮುಸುಕಿನ ಹೊತ್ತು.. 

"ಲೋ ಶ್ರೀ.. ಶ್ರೀಕಾಂತ.. ಏಳೋ.. ಯಾಕೋ ನನ್ನ ಚಿತ್ರಗಳ ಬಗ್ಗೆ ಬರೆಯುವುದು ನಿಲ್ಲಿಸಿಬಿಟ್ಟಿದ್ದೀಯ.... ನೀ ಬರೆವ ಬರಹಗಳಿಗೆ ಕಾಯುತ್ತಿರುವೆ.. " ಯಾರೋ ಕೂಗಿದಂತೆ ಭಾಸವಾಯಿತು.. ಕಣ್ಣು ಬಿಟ್ಟೆ.. ಗಾಬರಿ ಆಶ್ಚರ್ಯ.. ಎದುರಿಗೆ ಪುಟ್ಟಣ್ಣ ಕಣಗಾಲ್.. 

"ಗುರುಗಳೇ ನಮಸ್ಕಾರ.. ಏನಿದು.. ಮಾಯೆ.. "

"ನಿನ್ನ ಬ್ಲಾಗ್ ನೋಡುತ್ತಿದ್ದೆ.. ಬೆಳ್ಳಿ ಮೋಡ, ಮಲ್ಲಮ್ಮನ ಪವಾಡ ಆದ ಮೇಲೆ ಮುಂದಿನ ಚಿತ್ರದ ಬಗ್ಗೆ ಬರೆದೆ ಇಲ್ಲ ಅದಕ್ಕೆ ನೆನಪಿಸಲು ಬಂದೆ.. " 

ನಾ ಏನೋ ಹೇಳಲು ಬಾಯಿ ತೆರೆದೇ.. ತಕ್ಷಣ.. ಒಂದು ಆತ್ಮೀಯ ಹಸ್ತ ನನ್ನ ಹೆಗಲ ಮೇಲೆ ಬಂತು.. ನನ್ನ ಬೆನ್ನು ತಟ್ಟಿ "ಪುಟ್ಟಣ್ಣಾಜಿ.. ದಯಮಾಡಿ ಶ್ರೀಕಾಂತ್ ಜಿ ಯನ್ನು ಬಯ್ಯಬೇಡಿ.. ಅವರು ಬರೆಯುತ್ತಾರೆ.. ನಿಮ್ಮ ಎಲ್ಲಾ ಚಿತ್ರಗಳ ಬಗ್ಗೆ ಅವರು ಬರೆಯುತ್ತಾರೆ.. ನಾ ಅವರ ಬೆನ್ನ ಹಿಂದೆ ಇರುತ್ತೇನೆ.. ಕೆಲಸದ ಒತ್ತಡ ಅಪಾರವಾಗಿದೆ.. ಹಾಗಾಗಿ ಅವರಿಗೆ ಬರೆಯಲು ಸಾಧ್ಯವಾಗಿಲ್ಲ.. ನಿಮ್ಮ ಎಲ್ಲಾ ಚಿತ್ರಗಳ ಬಗ್ಗೆ ಅವರು ಬರೆದೆ ಬರೆಯುತ್ತಾರೆ ಅದರ ಜವಾಬ್ಧಾರಿ ನನ್ನದು.. " ಎಂದರು ಬಾಲೂ ಸರ್.. 

"ಓಕೆ ಬಾಲೂಜಿ.. ನಿಮ್ಮ ಅಭಿಮಾನದ ಅಭಯ ಹಸ್ತ ಶ್ರೀಕಾಂತನ ತಲೆಯ ಮೇಲೆ ಇದೆ.. ಹಾಗಾಗಿ ನಾ ಏನೂ ಹೇಳುವುದಿಲ್ಲ.. ಹಾಗೆಯೇ ನಾ ಹುಟ್ಟಿದ ಊರನ್ನು ನೋಡುವ ಅವನ ಕನಸನ್ನು ನನಸು ಮಾಡಿದ್ದು ನೀವು... ನನ್ನ ತಮ್ಮ ನರಸಿಂಹ ಶಾಸ್ತ್ರಿಯ ಹತ್ತಿರ ಬೆಳ್ಳಿಮೋಡದ ಚಿತ್ರೀಕರಣದ ಕಥೆಯನ್ನು ಲೋಕಕ್ಕೆ ತಿಳಿಯುವಂತೆ ಮಾಡಿದ್ದು ನೀವು.. ನಿಮ್ಮ ಬಗ್ಗೆ ನನಗೆ ಅಪಾರ ಗೌರವ.. ಸರಿ ನಾ ಹೋಗಿ ಬರುವೆ.. ಬೇಗ ಬೇಗ ಲೇಖನವನ್ನು ಬರೆಯಲು ಹಿತವಾದ ಒತ್ತಡವನ್ನು ಶ್ರೀ ಮೇಲೆ ಹಾಕಿ.. " ನಸು ನಗುತ್ತಾ ಪುಟ್ಟಣ್ಣ ಕಣಗಾಲ್ ಹೊರಟೆ ಬಿಟ್ಟರು.. 

ಶ್ರೀ ಪುಟ್ಟಣ್ಣ ಕಣಗಾಲ್ ಅವರ ಸಹೋದರ ಶ್ರೀ ನರಸಿಂಹ ಶಾಸ್ತ್ರಿ ಅವರ ಜೊತೆಯಲ್ಲಿ
(ಚಿತ್ರ ಕೃಪೆ - ಬಾಲೂ ಸರ್ )

ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಇತ್ತು... ಕನಸೋ ನನಸೋ ಒಂದು ಅರಿಯದು.. 

"ಹೀಗೆ.. ಒಬ್ಬರ ಕನಸ್ಸನ್ನು ನನಸು ಮಾಡಲು ಇವರು ಪಡುವ ಶ್ರಮ.. ಆ ಕನಸು ಅವರದೇ ಎಂದು ಅದನ್ನು ಹೆಗಲ ಮೇಲೆ ಹೊತ್ತು ನನಸು ಮಾಡುವ ತಾಕತ್ ನಮ್ಮ ಬಾಲೂ ಸರ್ ಅವರದು.. ಹಾಗಾಗಿ... ಪುಟ್ಟಣ್ಣ ಅವರು ಓಡಾಡಿದ ಜಾಗವನ್ನು ನೋಡಿ ಬರಲೇ ಬೇಕು ಎಂಬ ಹಠ ಹೊತ್ತ ಕನಸ್ಸನ್ನು ನನಸು ಮಾಡಿದ್ದು ಅಲ್ಲದೆ... ಕನಸಲ್ಲಿ ಪುಟ್ಟಣ್ಣ ಅವರು ನನ್ನನ್ನು ಹುಸಿ ಮುನಿಸಿನಿಂದ ಗದರಿಸಲು ಬಂದರೆ ಅಲ್ಲಿಯೂ ಕೂಡ ತಾವು ಬಂದು ನನ್ನನ್ನು ಬೆಂಬಲಿಸಿದರು.. ಇದಕ್ಕಿಂತ ಆತ್ಮೀಯತೆ ಇರಲು ಸಾಧ್ಯವೇ.. "

ಕಾರ್ ಸ್ಟೀರಿಯೋ ಒಂದು ಕ್ಷಣ ಮೌನ.. ಸಾಕ್ಷಾತ್ಕಾರ ಚಿತ್ರದ.. "ಜನುಮ ಜನುಮದ ಅನುಬಂಧ.. ಹೃದಯ ಹೃದಯಗಳ ಪ್ರೇಮಾನುಬಂಧ.. " ಹಾಡು ಶುರುವಾಯಿತು... 

ಇಂಥಹ ಸುಮಧುರ ಪ್ರೀತಿ ವಿಶ್ವಾಸ ಅಭಿಮಾನ ಎಲ್ಲವನ್ನು ಆ ಪುಟ್ಟ ನಗುವಿನಲ್ಲಿ ತುಂಬಿಕೊಂಡು ಸದಾ ಎಲ್ಲರನ್ನೂ ನಗಿಸುತ್ತಾ.. ಎಲ್ಲೋ ಒಂದು ಸಣ್ಣ ಝರಿಯಾಗಿ ಹುಟ್ಟುವ ಒಂದು ಒರತೆ.. ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ತನ್ನ ಒಡಲಲ್ಲಿ ಸೇರಿಸಿಕೊಂಡು ಸಮುದ್ರ ಆಗುವ ಹಾಗೆ.. ನಮ್ಮ ಬಾಲೂ ಸರ್ ತಮ್ಮ  ಮುಗ್ಧ ಪ್ರೀತಿಯಲ್ಲಿ ನಮ್ಮೆಲ್ಲರನ್ನೂ ಬರಸೆಳೆದುಕೊಂಡು ನಗು ನಗುತ್ತಾ ಸ್ನೇಹ ಪ್ರೀತಿ ಹಂಚುವ ಅವರ ಆತ್ಮೀಯ ಪ್ರೀತಿಯ ಪರಿಗೆ ನಮ್ಮ ಸಲಾಂ.. 

ಇಂದು ಅವರ ಜನುಮದ ದಿನ... ಅವರ ಬಗ್ಗೆ ಚುಟುಕು ಪ್ರೀತಿಯ ಪದಗಳನ್ನು ಬರೆಯುವುದು ಅಕ್ಷರಗಳಿಗೆ ಸಿಕ್ಕ ಗೌರವ ಅನ್ನಿಸುತ್ತದೆ.. ನಾ ಬರೆಯದೆ ಹೋದರೂ ಅಕ್ಷರಗಳೇ ಸಾಲಾಗಿ ನಿಂತು.. ಶ್ರೀ ನಾವೂ ಹೀಗೆ ಒಬ್ಬರಿಗೊಬ್ಬರು ಜೊತೆಯಲ್ಲಿ ನಿಲ್ಲುತ್ತೇವೆ.. ಅದೇ ಒಂದು ಲೇಖನವಾಗಿ ಬಿಡುತ್ತದೆ.. ಅನ್ನುತ್ತವೆ.. 

ಬಾಲೂ ಸರ್ ನಿಮ್ಮ ಜಗದಗಲದ ಪ್ರೀತಿ ವಿಶ್ವಾಸಕ್ಕೆ ನಾವೆಲ್ಲಾ ಚಿರಋಣಿಗಳು.. ನಿಮ್ಮ ಹುಟ್ಟು ಹಬ್ಬದ ಬ್ಲಾಗ್ ಜಗತ್ತಿನ ಒಂದು ಸಂಭ್ರಮಕ್ಕೆ ಸಂಭ್ರಮ...  ಬ್ಲಾಗ್ ಜಗತ್ತಿನ ಎಲ್ಲಾ ಹೃದಯಗಳಿಗೂ ನಿಮ್ಮ ಪ್ರೀತಿ ತಲುಪುತ್ತಿದೆ.. . ನಮ್ಮೆಲ್ಲರ ಆತ್ಮೀಯ ಶುಭ ಹಾರೈಕೆಗಳು ನಿಮ್ಮ ಸುಂದರ ದಿನವನ್ನು ಇನ್ನಷ್ಟು ಸುಂದರವಾಗಿ ಬೆಳಗಲಿ.. 

ಫೇಸ್ ಬುಕ್ ನ ಸಮಯದ ಗೆರೆಯನ್ನು ಬಂಧಿ ಮಾಡಿರಬಹುದು.. ಆದರೆ ನಮ್ಮೆಲ್ಲರ ಹೃದಯದಲ್ಲಿ ಅವರು ಮೂಡಿಸಿರುವ ಪ್ರೀತಿಯ ಗೆರೆಯನ್ನು ಬಂಧಿ ಮಾಡಲು ಸಾಧ್ಯವೇ ಇಲ್ಲ.. ನಮ್ಮ ಅಭಿಮಾನಪೂರಿತ ಮಾತುಗಳು ಅವರನ್ನು ತಲುಪಿಯೇ ತಲುಪುತ್ತದೆ.. 
ನಮ್ಮೊಡನೆ ಇರುವ ಸುಂದರ ಮನಸ್ಸಿನ ಬೇಟೆಗಾರ
(ಚಿತ್ರ ಕ್ರುಪ್ತೆ - ಬಾಲೂ ಸರ್)

ಹುಟ್ಟು ಹಬ್ಬದ ಶುಭಾಶಯಗಳು ಬಾಲೂ  ಸರ್.. !!!

Monday, May 19, 2014

ಕರಿಮಣಿ...ರಿಮಣಿ.. ಮಣಿಕಾಂತ.. ಸಾಧನೆಯ ಗಣಿ !!!.

ಚಿನ್ನ ಬೆಳ್ಳಿ ಎಂಬ ಲೋಹಗಳು ಬರಿ ಲೋಹಗಳಾಗಿದ್ದಾಗ.. ಮದುವೆಯಾದ ಹೆಣ್ಣು ಮಕ್ಕಳು ಕರಿಮಣಿ.. ರಸಗುಂಡು.. ಮಾಂಗಲ್ಯ ಇವನ್ನೆಲ್ಲ ಅರಿಶಿನದಲ್ಲಿ ಅದ್ದಿದ ದಾರದಲ್ಲಿ ಪೋಣಿಸಿ ಅದನ್ನು ಧರಿಸಿದಾಗ ಅವರ ಮೊಗದಲ್ಲಿ ಬೆಳಗುತಿದ್ದ ಆನಂದ..

ಆಹಾ ಆಹಾ ಅದನ್ನು ವರ್ಣಿಸಲು ವರ್ಣಮಾಲೆಯು ಸೋಲೊಪ್ಪಿಕೊಳ್ಳುತ್ತದೆ!!!

ಈ ಲೋಕದಲ್ಲಿ ಈ ಕಲಿಯುವ ಯುಗದಲ್ಲಿ ಸರ್ವಜ್ಣನೆ ಹೇಳಿದ ಹಾಗೆ ಬಲ್ಲವರಿಂದ ಕಲಿತು ವಿದ್ಯೆ ಎಂಬಾ ಮಹಾಪರ್ವತದಲ್ಲಿ ಕೂತೆ ಎನ್ನುವಂತೆ ಸುತ್ತ ಮುತ್ತಲು ಕಾಣುವ ಕತ್ತಲಲ್ಲಿ ಬೆಳಕನ್ನು ಹುಡುಕಿ ಆ ಬೆಳಕಿನ ದೀಪವನ್ನು ಹತ್ತಾರು ಮಾನಸ ಲೋಕಕ್ಕೆ ಒಯ್ಯುವ ತಾಕತ್ ಎಲ್ಲರಲ್ಲೂ ಇರುತ್ತ್ತದೆ.. ಅದನ್ನು ಅಳವಡಿಸಿ ಬೆಳೆಸಿಕೊಳ್ಳಬೇಕು..

ಬೆಳದಿಂಗಳ ಬಾಲೆ ಚಿತ್ರದಲ್ಲಿ ಅನಂತ್ ನಾಗ್ ಹೇಳುತ್ತಾರೆ ಮಾನವ ನಾಲ್ಕು ಹಂತದಲ್ಲಿ ಬೆಳೆಯುತ್ತಾನೆ..

ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿಲ್ಲ
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ
ನಾನು ಚೆನ್ನಾಗಿದ್ದೇನೆ ಪ್ರಪಂಚವೂ ಚೆನ್ನಾಗಿದೆ

ನಿಜವಾಗಿಯೂ ಈ ಮಾತುಗಳು ನನ್ನನ್ನೂ  ತುಂಬಾ ಕಾಡುತ್ತವೆ..

ಏನೋ ಶ್ರೀ ಇದು.. ಈ ಪಾಟಿ ಗರಗಸ ಅಂದುಕೊಂಡ್ರಾ.. ಇರಿ ಇರಿ ವಿಷಯ ಇದೆ..

****
ವಸುದೇವನಿಗೆ ಅಶರೀರವಾಣಿ ನುಡಿಯುತ್ತದೆ.. "ವತ್ಸ.. ಈಗ ಜನಿಸುವ ಮಗುವನ್ನು ಯಶೋದೆ ಬಳಿಗೆ ಬಿಡು.. ಅಲ್ಲಿಯೇ ಬೆಳೆಯಲಿ.. .. ಈ ಕೆಲಸ ಈ ಕ್ಷಣ ಆಗಬೇಕು"

ಸರಿ.. ವಸುದೇವನಿಗೆ ಅಶರೀರವಾಣಿ ಒಂದು ಘಂಟಾ ನಾದವಾಯಿತು.. ಸರಿ ಮಗುವನ್ನು ಹೊತ್ತು ನಡೆದೆ ಬಿಟ್ಟಾ..

ಜೋರಾದ ಮಳೆ.. ಘರ್ಜನೆ ಮಾಡುತ್ತಿದ್ದ ಮೋಡಗಳು, ಪೃಥ್ವಿಗೆ ಬರಿ ಸೂರ್ಯನಲ್ಲ ಬೆಳಕು ಕೊಡೋದು ನಾನು ಕೂಡ ಅನ್ನುವಂತೆ ಮಿಂಚು ಅವಾಗವಾಗ ತನ್ನ ಇರುವನ್ನು ತೋರಿಸುತ್ತಿತ್ತು...

ಗಕ್ಕನೆ ನಿಂತ ವಸುದೇವ.. ಕಾರಣ ಸೊಕ್ಕಿ ಉಕ್ಕಿ ಹರಿಯುತ್ತಿದ್ದ ಯಮುನೆ ತುಂಬಿ ಹರಿಯುತ್ತಿದ್ದಳು.. ವಸುದೇವ ಪ್ರಾರ್ಥಿಸಲಿಲ್ಲ ಆದರೆ ಲೋಕ ಕಲ್ಯಾಣಕ್ಕೆ ಅವತಾರ ಪುರುಷನ ಜನನವಾಗಿತ್ತು.. ಅಲ್ಲಿ ರೇ.. ಇಲ್ಲಾ ಎನ್ನುವ ಪದಗಳಿಗೆ ಅವಕಾಶವೇ ಇರಲಿಲ್ಲ..
ಯಮುನೆ ಹೆಣ್ಣು ಮಕ್ಕಳ ಬೈ ತಲೆಯಂತೆ ದಾರಿ ಮಾಡಿಕೊಟ್ಟಳು.. ಉಕ್ಕಿ ಹರಿಯುತ್ತಿದ್ದ ಯಮುನೆಯ ಮಧ್ಯೆ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗಿದ.. ತಲೆಯ ಮೇಲೆ ಸೂರಾಗಿ ಆದಿ ಶೇಷನೆ ಬರುತ್ತಿದ್ದ.. !!

ಗೋಕುಲಕ್ಕೆ ಬಂದು.. ನಂದನ ಮನೆಯಲ್ಲಿ ಯಶೋದೆಯನ್ನು ಹುಡುಕಲು ಶುರು ಮಾಡಿದ.. ಯಶೋದೆ ಇಲ್ಲಾ..

ವಸುದೇವನಿಗೆ ಗಾಬರಿ.. ಅಯ್ಯೋ ಈಗ ಏನು ಮಾಡುವುದು ಎಂದು

ಮತ್ತೆ ಅಶರೀರವಾಣಿ "ವತ್ಸ ಗಾಬರಿ ಬೇಡ.. ಲೋಕಕಲ್ಯಾಣಕ್ಕೆ ಅವತಾರ ಎತ್ತಿರುವ ಈ ಮಹಾಪುರುಷ ಹೊಣೆ ನನ್ನದು.. ಯಶೋದೆ ಮಮತಾಮಯಿ .. ಸುಖ ನಿದ್ರೆಯಲ್ಲಿ ಇದ್ದಾಳೆ .. ನೀನು ಆ ಮಗುವನ್ನು ಇಲ್ಲಿಯೇ ಬಿಡು. ಸ್ವಲ್ಪ ಹೊತ್ತು ವಿರಮಿಸಿಕೋ.. ನಂತರ ನೀನು ಮಥುರಕ್ಕೆ ಹೊರಡಬಹುದು... ಇದರ ಮಧ್ಯೆ ಈ ಪುಸ್ತಕವನ್ನು ಓದು.. ಆಯಾಸ ಕಡಿಮೆ ಆಗುತ್ತದೆ...

ಅಲ್ಲಿ ಇಲ್ಲಿ ನೋಡಿದ ಮೇಲೆ.. ಅಲ್ಲಿ ಕೆಲವು ಪುಟಗಳು ಕಾಣಿಸಿದವು .

ಮೊದಲ ನೌಕೆ.
ಬಂಧುಗಳು..  ಮಿತ್ರರು.. ಸಹೃದಯ ಓದುಗರು..ಸಿನೆಮಾಸಕ್ತರು.. ಸಾಹಿತ್ಯ ಅಭಿರುಚಿಯುಳ್ಳವರು.. ತಮ್ಮೊಳಗೆ ಒಂದು ಪ್ರಪಂಚವನ್ನು ತೆರೆದಿಡುವ ಬ್ಲಾಗ್  ಮಿತ್ರರು ಹೆಜ್ಜೆ ಇಡುತ್ತಾ ಬೆಂದಕಾಳೂರಿನ ಜೆ. ಸಿ ರಸ್ತೆಯಲ್ಲಿನ ರವಿಂದ್ರ ಕಲಾಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದ್ದರು.. ನಕ್ಕು ನಲಿಯುವ ಮಾತುಗಳು, ಬಹಳ ದಿನಗಳಾದ ಮೇಲೆ ಭೇಟಿ ಮಾಡುವ ಗೆಳೆಯರು.. ಇವರ ಕಲರವಕ್ಕೆ ಕಲಾಕ್ಷೇತ್ರ ಸಾಕ್ಷಿಯಾಗಿತ್ತು.. ಸುಂದರ ವಧುವಂತೆ ಸಜ್ಜಾಗಿತ್ತು ಕಲಾಕ್ಷೇತ್ರ.. !

ಎರಡನೇ ದೋಣಿ 
ವೇದಿಕೆ ಸಜ್ಜಾಗಿತ್ತು.. ಮುದ್ದು ಪುಟಾಣಿಗಳಿಬ್ಬರು ಕೆಲ ನಿಮಿಷಗಳ ಕಾಲ ಎಲ್ಲರನ್ನು ನಿಬ್ಬೆರಗು ಗೊಳಿಸಿ ಮಾಡಿದ ನೃತ್ಯ ಆಹಾ ವರ್ಣಿಸಲು ಎರಡು ಮಾತಿಲ್ಲ.. ಇಡಿ ಕಾರ್ಯಕ್ರಮದ ಕೇಂದ್ರ ಬಿಂಧುವಿನ ಕುಡಿ ಆ ಎರಡು ಪುಟಾಣಿಗಳಲ್ಲಿ ಒಂದಾಗಿತ್ತು.
ಅಂಗೀಕ ಅಭಿನಯ,, ಆ ಮುದ್ರೆಗಳು, ಹಾವ ಭಾವ, ತಾಳಕ್ಕೆ ತಕ್ಕಂತೆ ಇಡುತ್ತಿದ್ದ ನೃತ್ಯದ ಮತ್ತುಗಳು ಆಹಾ.. ಸೂಪರ್ ಸೂಪರ್ ಅನ್ನಿಸುವಂತೆ ಮಾಡಿದ್ದವು.

ಮೂರನೇ ಹಾಯಿ ದೋಣಿ
ನೆರೆದಿದ್ದ ಸಹೃದಯ ಮಿತ್ರರಿಗೆ ಬರಿ ಉಪಚಾರ ಮಾತ್ರವಲ್ಲ ಉಪಹಾರವೂ ಇತ್ತು.. ಉಪಹಾರ ನಾಲಿಗೆಯನ್ನು ತಣಿಸಿದರೆ ಸೊಗಸಾದ ಉಪಾಸನ ಮೋಹನ್ ತಂಡದಿಂದ ಕಿವಿಗಳಿಗೆ ರಸದೌತಣ ಒದಗಿಸಿತು. ಪುಂಕಾನುಪುಂಕವಾಗಿ ಅರಳಿದ ಗೀತೆಗಳು ಒಂದಕ್ಕಿಂತ ಒಂದು ಮಧುರ ಅಮರ. ಮನತುಂಬಿ ಹಾಡಿದಾಗ ಕರ್ಣವೂ ಕೂಡ ಕಿವಿ ತುಂಬಿ ಕೇಳುತ್ತದೆ ಎನ್ನುತ್ತಾರೆ.. ಆ ಮಾತು ನಿಜವೆಂಬ ಅರಿವಾಯಿತು.

ಹುಟ್ಟು ಹಾಕುತ್ತಾ ಸಾಗಿದ ಯಾನ
ಅಲ್ಲಿದ್ದವರಿಗೆಲ್ಲಾ ಎರಡು ಯೋಚನೆ.. ಒಂದು "ನಮೋ" ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ.. ಎರಡನೆಯದು ತೀರದ ಭಾವ ಯಾನ ಯಾವಾಗ ಅನಾವರಣಗೊಳ್ಳಲಿದೆ..

ಯೋಚನೆಯೇ ಬೇಡ.. ಮೊದಲನೆಯದು ನಡೆಯಲು ನಂಬಿಕೆ ವಿಶ್ವಾಸಗಳು ಬೇಕು.. ಎರಡನೆಯದನ್ನು ಅನುಭವಿಸಲು ಭಾವುಕ ಮನಸ್ಸು ಇರಬೇಕು.  ಅದು ಶತಃಸಿದ್ಧವಾಗಿತ್ತು. ಕಾರಣ ಅಲ್ಲಿದ್ದವರೆಲ್ಲ ಸುಂದರ ಮನದ ಸುಮಧುರ ಕುಸುಮಗಳು.
ಪ್ರಖ್ಯಾತ ತಾರೆ ಶ್ರೀ ಪ್ರಕಾಶ್ ರೈ ಜ್ಯೋತಿ ಬೆಳಗಿದರು.. ಅವರ ಜೊತೆಯಲ್ಲಿ ಹೆಸರಾದ ನಿರ್ದೇಶಕ ಶ್ರೀ ಯೋಗರಾಜ್ ಭಟ್, ತಮ್ಮ ಸುಂದರ ಉಡುಗೆ ತೊಡುಗೆಗೆ ಹೆಸರಾದ ಶ್ರೀ ವಿಶ್ವೇಶರ ಭಟ್.. ಇವರೆಲ್ಲ ಒಬ್ಬರಾದ ಮೇಲೆ ಒಬ್ಬರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಶುರು ಮಾಡಿದರು.

ಅಂತಃಕರಣದ ಅಲೆಗಳ ಮೇಲೆ ಯಾನ 
ತಾನು ಬೆಳಕಿಗೆ ಬಂದರೆ ಸಾಕು ಅನ್ನದೆ ಬೆಳಕಲ್ಲಿದ್ದು ಬೆಳಕಿಗೆ ಬರಲು ಯೋಚಿಸದ ಹಲವಾರು ಸಾಧಕರನ್ನು ತಮ್ಮ ಅಕ್ಷರಗಳ ಲೋಕದಿಂದ ಪರಿಚಯಿಸುತ್ತಾ ಅವರ ಸಾಧನೆಗಳ ಪಕ್ಷಿನೋಟ ಕೊಡುತ್ತಾ, ಅವರನ್ನು ವೇದಿಕೆಗೆ ಬರಮಾಡಿಕೊಂಡು ನಾಲ್ಕು ಜನರ ಮಧ್ಯೆದಲ್ಲಿ ನಿಲಿಸಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಕಿರುಕಾಣಿಕೆ ನೀಡಿದ್ದು ಸ್ವಾಗತಾರ್ಹ ಕಾರ್ಯಕ್ರಮ.

ಆ ಸಾಧಕರ ಪರಿಶ್ರಮ, ಅವರ ಧೃಡ ಮನಸ್ಸು, ನಾ ಇದ್ದರೇ ನಿಮ್ಮೆಲ್ಲರನ್ನು ಗುರಿ ತಲುಪಿಸುತ್ತೇನೆ ಎನ್ನುವಂಥಹ ಗಟ್ಟಿ ಧ್ಯೇಯ ಇವುಗಳ ಸಮಾಗಮವೇ ಶ್ರೀ ಮೆಡಿಸಿನ್ ಬಾಬ, ಐ ಕ್ಯಾನ್ ಜೀವಿ, ಹೀಗೆ ಹಲವಾರು ಸಾಧಕರನ್ನು ರಂಗದ ಮೇಲೆ ನಿಲ್ಲಿಸಿದ್ದು ಶ್ಲಾಘನೀಯ ಶ್ರಮ.

ನಾ ಗೆದ್ದರೆ ಗೆಲುವು ನನದು ಎನ್ನುವ ಈ ಲೋಕದಲ್ಲಿ ನಾ ಗೆದ್ದಿದ್ದರೆ ಆ ಗೆಲುವು ನನದಲ್ಲ ನಿಮದು ನನ್ನ ಕುಟುಂಬದ್ದು ನನ್ನ ಬಂಧು ಮಿತ್ರರದ್ದು ಎನ್ನುತ್ತಾ ತಮ್ಮ ಗೆಲುವಿನ ಲೋಕದಲ್ಲಿ ಜೊತೆಯಲ್ಲಿ ನೆರಳಾಗಿ ನಿಂತ ಎಲ್ಲರನ್ನೂ ಪರಿಚಯಿಸಿ ಅಭಿನಂದಿಸಿದ್ದು ಸೂಪರ್ ಸೂಪರ್ ಎನ್ನುವಂತೆ ಮಾಡಿತ್ತು.

ತಂದೆ ತಾಯಿ, ಗುರುಗಳು, ಸುಮಧುರ ಮನಸ್ಸಿನ ಕವಿಗಳು, ದಾರಿ ತೋರಿದವರು, ದಾರಿ ಹಾಕಿ ಕೊಟ್ಟವರು, ದಾರಿ ಮಾಡಿಕೊಟ್ಟವರು ಎಲ್ಲರನ್ನು ಸ್ಮರಿಸುತ್ತಾ ಅವರಿಗೆ ಕಿರುಕಾಣಿಕೆ ಸಲ್ಲಿಸಿದ್ದು ಇಡಿ ಕಾರ್ಯಕ್ರಮದ ವಿಶೇಷ.

ವಸುದೇವನ ಆ ಚಿಕ್ಕ ಚಿಕ್ಕ ಪತ್ರಗಳನ್ನು ಓದಿದ ಮೇಲೆ ಸುಸ್ತು ಆಯಾಸ ಎಲ್ಲವೂ ಹೂವಿನ ಹಾಗೆ ಹಗುರಾಗಿತ್ತು.. ಅರೆ ಇದೇನಿದು ಈ ರೀತಿಯ ಕಾರ್ಯಕ್ರಮವೂ ಇರುವುದೇ.. ಲೋಕ ಕಲ್ಯಾಣಕ್ಕೆ ಅವತಾರವೆತ್ತಿರುವ ಈ ಪುಣ್ಯ ಪುರುಷನ ಸನ್ನಿಧಾನದಲ್ಲಿ ಈ ರೀತಿಯ ಸುಂದರ ವಿವರ..
ಅವನ ಮನಸ್ಸು ಹಕ್ಕಿಯ ಹಾಗೆ ಹಾರಾಡತೊಡಗಿತು..

ಸರಿ ಅಲ್ಲಿಂದ ಹೊರಟ ವಾಸುದೇವ ಯಮುನೆ ಹತ್ತಿರ ಮತ್ತೆ ಬಂದಾಗ.. ಯಮುನೆ ಹೇಳಿದಳು ವಸುದೇವ ನಾ ನಿನಗೆ ದಾರಿ ಮಾಡಿಕೊಟ್ಟೆ ಎಂಬ ಅಹಂ ನನ್ನ ಕಾಡುತ್ತಿತ್ತು ಆದರೆ.. ಆ ಕಾರ್ಯಕ್ರಮದ ಬಗ್ಗೆ ನೀನು ಓದಿ.. ನಿನ್ನ ಮನದಲ್ಲಾಗುತ್ತಿರುವ ಅಲೆಗಳ ಯಾನ ನೋಡಿದಾಗ ಆಹಾ ಇಂತಹ ಸುಮಧುರ ಮನಗಳು ಸುರಿಸುವ ಆನಂದ ಭಾಷ್ಪದಿಂದ ನನ್ನ ಒಡಲು ತುಂಬಿ ಹರಿಯುತ್ತಿದೆ ಎನ್ನಿಸುತ್ತಿದೆ..

ಕಂದಾ ವಾಸುದೇವ.. ಇಂತಹ ಸುಂದರ ಹೂವಿನ ಮನಸ್ಸಿನ ಜೀವಿಯನ್ನು ನಾ ನಿನ್ನ ಮನದಲ್ಲಿ ಕಂಡಿದ್ದು ನನಗೆ ಬಲು ಸಂತಸವನ್ನು ಹೊತ್ತು ತಂದಿದೆ.. ಅವರ ಜನುಮದಿನಕ್ಕೆ ಈ ಲೇಖನ ಒಂದು ಸುಂದರ ಚೌಕಟ್ಟು ಎನ್ನುವುದು ಬಹಳ ಸುಂದರ ಅನುಭವ.

ಭಾವ ತೀರ ಯಾನದ ನಾವಿಕ ಮಣಿಕಾಂತ್ ಅವರ ಸುಂದರ ಪರಿಶ್ರಮ ಈ ಕಾರ್ಯಕ್ರಮದ ಪ್ರತಿ ಕ್ಷಣದಲ್ಲೂ ಮಾರ್ಧನಿಸುತ್ತಿತ್ತು ಅನ್ನಿಸುತ್ತಿದೆ.. ವತ್ಸ ಇವರ ಈ ಮನೋಜ್ಞ ಕಾರ್ಯ ಎಲ್ಲರನ್ನು ಎಲ್ಲವನ್ನೂ ತಲುಪಲಿ ಮತ್ತು ಅವರ ಈ ಸುಂದರ ಜನುಮದಿನ ಸದಾ ಆನಂದವನ್ನು ಹೊತ್ತು ಹೊತ್ತು ತರಲಿ ಎಂದು ಹಾರೈಸುತ್ತೇನೆ.

**********

ಇಡಿ ಕಾರ್ಯಕ್ರಮ ಒಂದು ಶಿಸ್ತಿನ ಕವಾಯತು ನಡೆದಂತೆ ನಡೆಯಿತು. ಮಾತಾಡಿದ ಪ್ರತಿ ಅತಿಥಿಗಳು, ತಮ್ಮ ಭಾವವನ್ನು ಹರವಿಕೊಂಡದ್ದು ಒಂದು ಉತ್ತಮ ಕಾರ್ಯಕ್ರಮ ಹೀಗೆ ಇರಬೇಕು ಎನ್ನಿಸುವಂತೆ ತೆರೆದಿಟ್ಟಿತು.

ಮಣಿಕಾಂತ್  ಸರ್ ನಿಮ್ಮ ನಿರ್ಮಲ ನೆಗೆ ಎಷ್ಟು ತೂಕಬದ್ಧವಾಗಿದೆಯೋ ಅಷ್ಟೇ ನಿಮ್ಮ ಹೂವಿನ ಮನಸ್ಸು ಕೂಡ.. ನಿಮ್ಮ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿ. ಅಲ್ಲಿ ನಡೆದ ಪ್ರತಿಕ್ಷಣವನ್ನು ದಾಖಲಿಸಬೇಕು ಎಂಬ ಹಂಬಲ ನನ್ನದು. ಆದ್ರೆ ಚಿತ್ರಗಳು ಹೇಳುವ ಕಥೆ ಕೆಲವೊಮ್ಮೆ ಅಕ್ಷರಗಳು ಹೇಳಲಾರವು ಅನ್ನಿಸಿತು . ಹಾಗಾಗಿ ಇಡಿ ಕಾರ್ಯಕ್ರಮದ ತುಣುಕುಗಳನ್ನು ಚಿತ್ರಗಳನ್ನಾಗಿ ಇಲ್ಲಿಯೇ ಹರಡಿ ಬಿಟ್ಟಿದ್ದೇನೆ. .














ನಿಮ್ಮ ಜನುಮದಿನಕ್ಕೆ ನಿಮ್ಮದೇ ಸಮಾರಂಭದಲ್ಲಿ ಅನಾವರಣಗೊಂಡ ಭಾವ ತೀರ ಯಾನ ಎನ್ನುವ ಸುಂದರ ಹೊತ್ತಿಗೆಯಂತೆ  ಪ್ರತಿ ಪುಟವೂ ನವ ನವೀನ.. ಹಾಗೆಯೇ ನಿಮ್ಮ ಅತಿ ಅತಿ ಮಧುರಾತಿ ಮಧುರ ಮನಸ್ಸು ಈ ಕಾರ್ಯವನ್ನು ಇನ್ನಷ್ಟು ಘಮ ಗುಟ್ಟುವಂತೆ ಮಾಡಿದ್ದು ನಿಮ್ಮ ಹಾಗೂ ನಿಮ್ಮ ತಂಡದ ತಾಕತ್ತು.

ನಿಮಗೆ ಜನುಮದಿನ ಶುಭಾಶಯಗಳನ್ನು ಕೋರುತ್ತಾ ನೀವು ಕಂಡ ಕನಸ್ಸೆಲ್ಲಾ ನನಸಾಗಲಿ ನನಸೆಲ್ಲ ಸೊಗಸಾಗಿರಲಿ ಎಂದು ಆಶಿಸುವ ನಿಮ್ಮೆಲ್ಲರ ಅಭಿಮಾನಿಗಳು!!!

ಜನುಮದಿನದ ಶುಭಾಶಯಗಳು ಮಣಿಕಾಂತ್ ಸರ್ !!!