Wednesday, January 28, 2026

Raja & Burman... The Ultimate Jam!!!

ಕನ್ನಡವೋ ಇಂಗ್ಲೀಸೋ ಅಂತ ಗೊಂದಲವಿದ್ದಾಗ.. ತಾಯಿ ಮೊದಲು ಆಮೇಲೆ ಮಿಕ್ಕಿದ್ದು ಅಂತ ಮನಸ್ಸು ಹೇಳಿತು.. ಅಂಗಾಗಿ ಕನ್ನಡಲ್ಲಿ ಬರೆಯುವ ಅಂತ ನಿರ್ಧಾರವಾಯ್ತು.. 

ಮಹೇಶ್ ಮತ್ತು ಶ್ರುತಿ ಡಿಸೆಂಬರ್ ಹದಿನಾರು ೨೦೧೭ರಲ್ಲಿ ಒಂದು ಸಂಗೀತ ಸಂಜೆ ಜೀವ ಸ್ವರ ತಂಡದಿಂದ ಕಾರ್ಯಕ್ರಮದಲ್ಲಿ ಪರಿಚಯವಾದ ಸ್ನೇಹ.. ಅದು ಅದ್ಭುತ ಗೆಳೆತನಕ್ಕೆ ತಿರುಗಿ ಅಲೆಮಾರಿಯಾಗಿದ್ದ ನನಗೆ ಅನೇಕ ಚಾರಣಗಳಲ್ಲಿ ಜೊತೆಯಾದವರು. 

ಇವರದು ಸುಂದರ ಕುಟುಂಬ..ಸಂಗೀತ ಕುಟುಂಬ ಅಂದರೂ ತಪ್ಪಿಲ್ಲ.. ಅವರ ಪುಟ್ಟ ತುಂಟ ಮಗ ಮೊಬೈಲಿನಲ್ಲಿ ಆಟವಾಡೋದು ಇದ್ದರೂ.. ಯು ಟ್ಯೂಬ್ ನಲ್ಲಿ ಶಾಸ್ತ್ರೀಯ ಸಂಗೀತ ಹಾಕಿಕೊಂಡು ಅದರ ಜೊತೆ ಹಾಡುವುದು.. ಇವರ ಪರಂಪರೆಯನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.. ಅದಕ್ಕೆ ಅಲ್ಲವೇ ಹೇಳೋದು ಬೆಳೆಯುವ ಪೈರು ಮೊಳಕೆಯಲ್ಲಿ ಅಂತ.. 

ಶ್ರೀಕಿ ನೀನು ಬರಬೇಕು.. (ಸರ್ ಸರ್ ಅಂತ ಇದ್ದ ಪರಿಚಯ.. ಹೋಗೋ ಬಾರೋ ಹಂತಕ್ಕೆ ಬಂದಿದೆ ಎಂದರೆ ನೋಡಿ ಗೆಳೆತನ ಒಂದು ಝರಿಯ ತರಹ ಸಣ್ಣ ಒರತೆಯಲ್ಲಿ ಶುರುವಾಗಿ ಜಲಪಾತವಾಗಿ ಸಾಗರ ಸೇರುತ್ತದೆ.. "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ" ನನ್ನ ಆರಾಧ್ಯ ದೈವ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಶುಭಮಂಗಲದ ಹಾಡು ನೆನಪಿಗೆ ಬಂತು)

ಬರ್ತೀನಿ.. ಬರೋಕೆ ಎಲ್ಲಾ ಪ್ರಯತ್ನ ಮಾಡುವೆ ಅಂತ ಆಶ್ವಾಸನೆ ಕೊಟ್ಟೆ.. ಬದುಕಿನ ಜಂಜಾಟದಲ್ಲಿ ಸ್ವಲ್ಪ ಮನಃಶಾಂತಿ ಬೇಕಿತ್ತು.. ಬದಲಾವಣೆ ಬೇಕಿತ್ತು.. ಇಂತಹ ಕಾರ್ಯಕ್ರಮವನ್ನು ಹೃದಯದಿಂದ ಸಂಭ್ರಮಿಸುವ ನನ್ನ ಮನದನ್ನೆ ಊರಿಗೆ ಹೋಗಿದ್ದಳು.. ಆ ಬೇಜಾರಿತ್ತು.. ಅವಳಿದ್ದಿದ್ದರೆ ಆ ಸಂಗೀತ ಸಂಭ್ರಮದಲ್ಲಿ ಅವಳನ್ನು ಹಿಡಿಯುವುದು ನನಗೆ ಕಷ್ಟವಾಗುತಿತ್ತು.. ಇರಲಿ ಇರಲಿ.. ಹೊರಟೆ ನನ್ನ ಸದ್ದಿಲ್ಲದೇ ಸಂಭ್ರಮಿಸುವ ನನ್ನ ಗೆಳತೀ ಅರ್ಥಾತ್ ಮಗಳ ಜೊತೆ ಹೊರಟೆ. 

ಎಲ್ಲರೂ ಅಪರಿಚಿತರು ಸಭಾಂಗಣದಲ್ಲಿ ನೆರೆದಿದ್ದರು.. ಎಲ್ಲರೂ ಅಪರಿಚಿತರೇ ಆದರೆ ಎಲ್ಲರನ್ನೂ ಬಂಧಿಸಿದ್ದು ಸಂಗೀತದ ಸೆಳೆತ ಅದರಲ್ಲೂ ಇಬ್ಬರು ದಿಗ್ಗಜರು.. 

ಒಬ್ಬರು ಮಾಮೂಲಿ ಎನಿಸುವ ಸಂಗೀತಕ್ಕೆ ಅನೇಕಾನೇಕ ವಿಭಿನ್ನವಾದ ಸದ್ದು ಮಾಡಬಲ್ಲ ಉಪಕರಣಗಳಿಂದ ನಾದದ ಜಾದೂ ಮಾಡುವ ಶ್ರೀ ರಾಹುಲ್ ದೇವ್ ಬರ್ಮನ್.. (ಮೇರೇ ಸಾಂನೆ ವಾಲೀ ಕಿಡಕಿ ಹಾಡಿನಲ್ಲಿ ಬಾಚಣಿಗೆ, ಡಬ್ಬ.. ಚುರಾಲಿಯ ಚಿತ್ರದಲ್ಲಿ ಗಾಜಿನ ಲೋಟ, ಮೆಹಬೂಬ ಮೆಹಬೂಬ ಹಾಡಿನಲ್ಲಿ ಖಾಲಿ ಗಾಜಿನ ಸೀಸೆಯನ್ನು ಊದಿ ಬರುವ ನಾದ)

ಇನ್ನೊಬ್ಬರು ಸವಾಲು ಹಾಕಿದರೆ ಅದಕ್ಕೆ ತಕ್ಕಂತೆ ಸವಾಲು ಗೆದ್ದು ಅವರು ಕೇಳಿದ್ದಕ್ಕಿಂತ ಅದ್ಭುತ ಸಂಗೀತ ಕೊಡುವ ಮಾಂತ್ರಿಕ ಶ್ರೀ ಇಳಯರಾಜ (ನನಗೆ ನೆನಪಿದ್ದಂತೆ ಸಂಧ್ಯಾರಾಗಂ ಸಿನೆಮಾದ ಹಿನ್ನೆಲೆ ಸಂಗೀತಕ್ಕೆ ಬರಿ ಕೊಳಲು ಮಾತ್ರ ಉಪಯೋಗಿಸಿದ್ದರು ಅಂತ.. ತಪ್ಪಿದ್ದರೆ ತಿದ್ದಿ .. ಅಗ್ನಿ ನಕ್ಷತ್ರಂ ಚಿತ್ರದ ರಾಜ ರಾಜಾಧಿರಾಜ ಹಾಡಿನಲ್ಲಿ ಬರಿ ಡ್ರಮ್ ಮತ್ತು ಅದರ ಜೊತೆವಾದ್ಯಗಳನ್ನು ಮಾತ್ರ ಉಪಯೋಗಿಸಿದ್ದು. ಕನ್ನಡದ ಗೀತಾ ಚಿತ್ರದ ಕೇಳದೆ ನಿಮಗೀಗ ಹಾಡಿನಲ್ಲಿ ವಯೊಲಿನ್ ವಾದ್ಯಗಾರರಿಗೆ ವಯೊಲಿನ್ ಕೆಳಗೆ ಇಟ್ಟು ಬರಿ ಬಾಯಲ್ಲಿ "ಜುಂಜುಂ ತನನ ನಾ" ಸದ್ದು ಮಾಡಿಸಿ ಹಾಡನ್ನು ಗೆಲ್ಲಿಸಿದ್ದು.. ಅಣ್ಣಾವ್ರ ಚಿತ್ರಗಳ ಹಾಡಿನಲ್ಲಿಯೇ ತೀರಾ ವಿಶಿಷ್ಟ್ರವಾದ ಸಂಗೀತ ಕೊಟ್ಟಿದ್ದು ನೀ ನನ್ನ ಗೆಲ್ಲಲಾರೆ ಚಿತ್ರದ ಹಾಡುಗಳ ಸಂಗೀತ.. ಹೀಗೆ ಒಂದೇ ಎರಡೇ)  

ಈ ಕಾರ್ಯಕ್ರಮದ ಹೆಸರು ರಾಜ & ಬರ್ಮನ್ ಅಲ್ಟಿಮೇಟ್ ಜಾಮ್ ಅಂತ ಅಡ್ಡ ಪಂಕ್ತಿ ಇದ್ದ ಈ ಕಾರ್ಯಕ್ರಮ ಅದ್ಭುತ ಪ್ರತಿಭೆಗಳ ಸಮಾಗಮ.. ಒಬ್ಬೊಬ್ಬರು ಅವರವರ ಕಾರ್ಯಕ್ಷೇತ್ರದಲ್ಲಿ ಘಟಾನುಘಟಿಗಳು.. ಅವರೆಲ್ಲ ಒಂದು ಛಾವಣಿಯ ಅಡಿ ಸೇರಿದ ಮೇಲೆ ಸಂಗೀತ ಬರ್ಸಾತ್ ಅಂದರೆ ಸಂಗೀತ ಮಳೆಯೇ ಬರಬೇಕಲ್ಲವೇ.. ಅದೇ ಬಂದಿದ್ದು.. 

ಸಿಗರೇಟು ಹಚ್ಚಿಕೊಂಡ ಸಿ ಐ ಡಿ ವಿಜಯ್ ಕ್ರೈಂ ಅಂದರೆ ಅಪರಾಧ ನೆಡೆದ ಜಾಗದಲ್ಲಿ ಸುಮಾರು ಹೊತ್ತು ನಿಂತಿದ್ದ.. ಅಪರಾಧ ನೆಡೆದ ಬಗ್ಗೆ ಸುಳಿವು ಹುಡುಕಿದಷ್ಟು ಸಿಗುವುದು ಕಠಿಣವಾಗುತ್ತಲೇ ಇತ್ತು.. ಅದಕ್ಕೆ ಸ್ವಲ್ಪ ವಿರಾಮಕ್ಕೆ ಅಂತ ಹೊರಗೆ ಬಂದು ಸಿಗರೇಟು ಹಚ್ಚಿದ್ದ.. 

ಪಕ್ಕದ ಕಟ್ಟಡದಲ್ಲಿ ಜೋರಾದ ಸಂಗೀತ ತರಂಗಗಳು ಕೇಳುತ್ತಿದ್ದವು.. ಸರಿ ಒಂದು ನಿಮಿಷ ನೋಡಿ ಬರೋಣ ಅಂತ ಆ ಚುಮುಚುಮು ಚಳಿಯಲ್ಲಿದ್ದರೂ ಅರ್ಧ ಸೇದಿದ್ದ ಸಿಗರೇಟು ಬಿಸಾಕಿ ಸಂಗೀತ ಕಾರ್ಯಕ್ರಮಕ್ಕೆ ಬಂದ.. 

ಆಗಲೇ ವೇದಿಕೆಯಲ್ಲಿ ಉದ್ಘಾಟನೆ ಮಾಡಿದ್ದೆ ಅನ್ನುವ ಕುರುಹು ಸೂಚಿಸಿದ್ದ ದೀಪದ ಕಂಬ ಇತ್ತು.. ಸಂಗೀತಮಯ ಯಾತ್ರೆ ಶುರುವಾಗಿತ್ತು.. 

ವಿರಾಮಕ್ಕೆಂದು ಬಂದಿದ್ದರೂ.. ಅವನ ತಲೆಯೊಳಗೆ ಅಪರಾಧಿ ಯಾರು. ಹೇಗೆ ಕಂಡು ಹಿಡಿಯೋದು ಇದೆ ತಲೆಯೊಳಗೆ ಓಡುತ್ತಿತ್ತು. ಎಷ್ಟೇ ಆದರೂ ವೃತ್ತಿ ಅಲ್ಲವೇ.. 

ಸುಮ್ಮನೆ ಕಂಬಕ್ಕೆ ಒರಗಿಕೊಂಡು ನಿಂತು ಕಾರ್ಯಕ್ರಮ ನೋಡುತ್ತಿದ್ದವ .. ವಂದೇ ಮಾತರಂ ಹಾಡು ಶುರುವಾದ ತಕ್ಷಣ.. ಏಕ್ ದಂ ಖಡಕ್ ಆಗಿ ನಿಂತ.. ಹಾಡು ಪೂರ್ಣವಾದಂತೆ ತುಟಿಯಂಚಿನಲ್ಲಿ ನಗೂ ಎಂದಿದೆ ಮಂಜಿನ ಬಿಂದು  ಎಂಬ ಮಾತಿನಂತೆ ನಗು ಸುಳಿಯಿತು.. ಏನೋ ಹೊಳೆಯಿತು.. ಅಪರಾಧ ನೆಡೆದ ಮಾಹಿತಿಯನ್ನು ಪೂರ್ತಿ ಮತ್ತೆ ಮೊದಲಿಂದ ಯೋಚಿಸ ತೊಡಗಿದ.. ಹೊರಗೆ ಸಣ್ಣ ಮಳೆ ಅದಕ್ಕೆ ತಕ್ಕಂತೆ ಈ ಹಾಡು ವೇದಿಕೆಯಿಂದ .. ರಿಂ ಜಿಮ್ ಗಿರೆ ಸಾವನ್ ಬರುತ್ತಿತ್ತು.. 

ಆಪಾದಿತರು ಯಾರು ಅಂತ ಗೊತ್ತಿಲ್ಲ.. ಆದರೆ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಹೇಳಿದ ವಿಚಾರಗಳು ತಲೆಯೊಳಗೆ ರುಬ್ಬುತ್ತಿತ್ತು.. ಮಾತೆ ಮಂತ್ರಮು ಮನಸೇ  ಬಂಧಮು.. ತಲೆಯೊಳಗೆ ಏನೋ ದಿಗ್ಗನೆ ಬಲ್ಬ್ ಹತ್ತಿದ ಹಾಗೆ ಆಯ್ತು. 

ಇದು ಸುಮ್ಮನೆ ನೆಡೆದಿರೋ ಘಟನೆಯಲ್ಲ. ಇದರ ಹಿಂದೆ ಏನೋ ಉದ್ದೇಶ ಇದೆ.. ಸೆಕ್ಯೂರಿಟಿ ಗಾರ್ಡ್ ಹೇಳುತ್ತಲೇ ಇದ್ದ ಸರ್ ಕಳ್ಳತನ ಏನೂ ನೆಡೆದ ಸೂಚನೆಯಿಲ್ಲ ಆದರೆ ಅಲ್ಲಿರುವ ಸಾಕ್ಷಿಗಳು ಹೇಳುತ್ತಿವೆ ಚುರಾಲಿಯ ಅಂತ .. ಯಾಕೋ ಮತ್ತೆ ತಲೆ ಮೊಸರಿನ ಗಡಿಗೆಯಾಯಿತು.. ಮತ್ತೆ ಹೊರಕ್ಕೆ ಬಂದ.. ಸಭಾಂಗಣದಲ್ಲಿ ದಂ ಮಾರೋ ದಂ ಹಾಡು  .. ಇವನ ಕೈಯಲ್ಲಿ ದಂ... ಹಹಹಹ 

ಸರಿ ಒಂದಷ್ಟು ಹೊಗೆ ಹೊರಗೆ ಹೋದ ಮೇಲೆ .. ಅವನಿಗೆ ಗೊತ್ತಾಯಿತು.. ಇದು ನಾ ಒಬ್ಬನೇ ಆಗೋಲ್ಲ ಬದಲಿಗೆ ಸುಳಿವುಗಳ  ಜೊತೆಯಲಿ ಜೊತೆಯಲಿ ಸಾಗಿದರೆ ಮಾತ್ರ ಈ ಕೇಸಿಗೊಂದು ತಾರ್ಕಿಕ ಅಂತ್ಯ ಕೊಡಬಹುದು ಅಂತ  .. .. ಇಳಯನಿಲ ಪೊಝೀಗಿರತೇ ಅರ್ಥಾತ್ ಬೆಳೆಯುತ್ತಿರುವ ಚಂದಿರ  ಹೊಳೆಯುತ್ತಿದ್ದಾನೆ ಅಂದರೆ ತನ್ನ ಕೇಸಿಗೆ ಸುಳಿವು ಸಿಗುತ್ತಿದೆ.. ಎಂದು ಒಂದಷ್ಟು ಖುಷಿಯಾಯಿತು..

ಅಷ್ಟರಲ್ಲಿ ಅವನ ಮೊಬೈಲ್ ಕೂಗತೊಡಗಿತು.. ತನ್ನ ಪ್ರೇಯಸಿ.. ಅವನ ಹೃದಯ ಬಡಿತ ಏರಿತು.. ಅದಕ್ಕೆ ತಕ್ಕ ಹಾಗೆ ಓ ಮೇರೇ ದಿಲ್ ಕೆ ಚೈನ್ .. ಅದರಲ್ಲಿನ ಒಂದು ಸಾಲು "ತುಂ ಜೋ ಪಕಡಲೋ ಹಾಥ್ ಮೇರಾ ದುನಿಯಾ ಬದಲ್ ಸಕ್ಕತಾ ಹೂ ಮೇ" ವಾಹ್.. ಥ್ಯಾಂಕ್ ಯು ಕಣೆ.. ಒಂದು ಕೇಸಿನ ಮೇಲೆ ಇದ್ದೀನಿ ಆಮೇಲೆ ಮಾಡ್ತೀನಿ ಅಂತ ಫೋನ್ ಕಟ್ ಮಾಡಿದ.. 

ಅವನಿಗೆ ಸಿಕ್ಕಿದ ಸುಳಿವು... ಹೊಳೆದ ಸೂಚನೆಗಳು .. ಅದಕ್ಕೆ ಸಿಗಬಹುದಾದ ಮಾರ್ಗ .. ಎಲ್ಲವೂ ಒಂದು ಹಂತಕ್ಕೆ ಅವನಿಗೆ ಖುಷಿ ಕೊಡುತ್ತಿತ್ತು.. ಅವನಿಗಿಷ್ಠವಾದ ದೈವ ಶಿವನಿಗೆ ಮನದಲ್ಲಿಯೇ ವಂದಿಸಿದ.. ಪ್ರಾರ್ಥಿಸಿದ.. ಓಂ ಶಿವೋಹಂ .. ಬಾಲ್ಯದಲ್ಲಿ ಚಿನ್ನ ತಾಯ್ವಳ ಅಂದರೆ ಚಿನ್ನದಂತಹ ತನ್ನ ತಾಯಿ ಕಳಿಸಿದ ಶ್ಲೋಕವದು.. ತನಗೆ ಸಂಕಷ್ಟವಾದಾಗೆಲ್ಲ ಶಿವನನ್ನು ನೆನೆಸಿಕೊಂಡು ಪ್ರಾರ್ಥಿಸುತಿದ್ದ .. ಆಗ ಶಿವನೇ ತನ್ನ ಮುಂದೆ ಬಂದು ನಿಂತು ಬಾಹೋ ಮೇ ಚಲಿ ಆವ್ ಅಂತ ಎರಡೂ ಕೈಯಿಂದ ತನ್ನನ್ನು ಅಪ್ಪಿಕೊಂಡು ಸಂತೈಸುತ್ತಿದ್ದ ಅನ್ನುವ ಅನುಭವ ಸದಾ ಆಗುತಿತ್ತು ಈ ಶ್ಲೋಕವನ್ನು ಹೇಳಿಕೊಂಡಾಗ..  ಏನೇ ಸವಾಲು ಇದ್ದರೂ.. ಏನೇ ಸಂಕಷ್ಟಗಳು ಇದ್ದರೂ "ಏ ಜಿಂದಗಿ ಗಲೇ ಲಗಾಲೆ"  ಅಂತ ಖುಷಿಯಿಂದ ಹಾಡುತ್ತಿದ್ದದ್ದು ನೆನಪಿಗೆ ಬಂದು ತನ್ನ ಪ್ರೇಯಸಿ ಯಾವಾಗಲೂ ನನ್ನನು ಕಂಡು "ಯಾವ ಶಿಲ್ಪಿ ಕಂಡ ಕನಸು ನೀನೋ.. ನನ್ನ ಜೀವ ನೀನು.. ನಿನ್ನ ಪ್ರಾಣ ನಾನು ದೇವರಾಣೆ ನಂಬು ನನ್ನನೂ" ಅಂತ ಹಾಡಿದಾಗೆಲ್ಲ  ನಾನು ಕಡಿಮೆ ಏನೂ ಇರದೇ "ಪಿಯ ತೂ ಅಬ್ ತೋ ಆಜಾ" ಅವಳಿಗಿಷ್ಟವಾದ ಹಾಡನ್ನು ನಾ ಹಾಡುತಿದ್ದೆ..  ಆಗ ಅವಳ ಮೊಗದಲ್ಲಿ ಕಾಣುತ್ತಿದ್ದದ್ದು "ನಗುವ ನಯನ ಮಧುರ ಮೌನ"  .. ಮನಸಿನ ಅಣುಅಣುವಲ್ಲಿಯೂ  ಪಂಚಮವೇದವಾಗಿದ್ದ ಪ್ರೇಮದ ನಾದ ವೇದಂ ಅಣುಅಣುವುಲು ಅಂತ ಮುದ್ದಾದ ಅನುಭವ ಕೊಡುತ್ತಿತ್ತು.. .. 

ಅರೆ ಇದೇನು ಕೇಸಿನ ವಿಷಯ ಬಿಟ್ಟು ಬೇರೇನೋ ಯೋಚನೆ ಮಾಡುತ್ತಿದ್ದೇನೆ.. ಅಂತ ಮತ್ತೆ ಸಿಗರೇಟ್ ಹಚ್ಚಿದ.. ಹಾಡಿನ ಸಂಜೆ ಮುಂದುವರೆದಿತ್ತು.. ಹಾಡಬೇಕು ಅಂದು ಕೊಂಡು ಆದರೆ ಸಮಯದ ಅಭಾವದಿಂದ ಹಾಡಲು ಆಗದ ಮಧುರ ಹಾಡುಗಳ ತುಣುಕು ತುಣುಕುಗಳನ್ನು ಸೇರಿಸಿ ಗುಂಪು ಗುಂಪು ಹಾಡು ಅಂದರೆ medley of songs ಹಾಡುತ್ತಿದ್ದರು.. ಒಂದಕ್ಕಿಂತ ಒಂದು ಅದ್ಭುತವಾದ ಹಾಡುಗಳು.. ಮನಸ್ಸಿಗೆ ಮುದ ಕೊಡುತ್ತಿತ್ತು.. ಯಾಕೋ ಅಲ್ಲಿಂದ ಹೊರಡೋಕೆ ಮನಸ್ಸು ಆಗುತ್ತಿರಲಿಲ್ಲ.. ಬಲವಂತವಾಗಿ ಹೆಜ್ಜೆ ಹೊರಗಿಡಲು ಹೋದರೆ ಸಂಗೀತ ವಾದ್ಯಗಳ ಮಹಾಸಂಗಮ instrumental medley ಶುರು ಮಾಡಿದರು.. ತಬಲಾ, ಟ್ಯಾಂಗೋ, ಗಿಟಾರ್, ರಿದಮ್ ಪ್ಯಾಡ್, ಕೀ ಬೋರ್ಡ್.. ಇವುಗಳ ಜೊತೆಯಲ್ಲಿ ಡ್ರಮ್ಸ್.. ಆಹಾ ಅದ್ಭುತ ಸಂಗೀತ ಸುರಿಮಳೆ ನೆಡೆದಿತ್ತು.. 

ಮನಸ್ಸಿಗೆ ಸ್ವಲ್ಪ ಮೌನ ಬೇಕು ಅನಿಸಿತು.. ಮೌನ ಮೇಲುನೋಯಿ ಹಾಡು ಮನಸ್ಸಿಗೆ ಒಂದು ಮಟ್ಟಿಗೆ ಸಮಾಧಾನ ತಂದು ಕೊಟ್ಟಿತು..   ಸಮುದ್ರದಲ್ಲಿ ದಡದಲ್ಲಿ ನಿಂತು ಅಲೆಗಳ ಅಬ್ಬರಗಳ ಮುಂದೆ ಮನಸ್ಸನ್ನು ಹತೋಟಿಗೆ ತರುತ್ತಾ ತನ್ನ ಪ್ರೇಯಸಿಯನ್ನು ಒಮ್ಮೆ ನೆನೆದು "ಸಾಗರ ಕಿನಾರೆ ದಿಲ್ ಏ ಪುಕಾರೆ"  ಅಂತ ಮನಸ್ಸಲ್ಲಿ ಹಾಡಿಕೊಂಡ.

ಸತತವಾಗಿ ಸುಮಾರು ಏಳೆಂಟು ದಿನಗಳಿಂದ ಅದು ಇದು ಕೇಸು.. ತನಿಖೆ, ಅದರ ಸುಳಿವುಗಳ ಮಧ್ಯೆ ಪರಿಹಾರ, ಅದಕ್ಕೆ ಒಂದು ತಿರುವು ಹೀಗೆ ನೊರೆಂಟು ತಾಕಲಾಟಗಳಲ್ಲಿ ಅವನಿಗೆ ನಿದ್ದೆ ಒಂದು ಮರೀಚಿಕೆಯಾಗಿತ್ತು.. ಅದನ್ನು ಅರಿತಿದ್ದ ಅವಳು ಅವನಿಗೆ ದಿನವೂ ಮಲಗುವ ಮುಂಚೆ.. "ನೋಡು ವಿಜಯ್ ನೀನು ನನ್ನ ಮಡಿಲಲ್ಲಿ ಮಲಗಿದ್ದೀಯ ಅಂತ ಭಾವಿಸಿಕೊ.. ನಾನು ಈ ಲಾಲಿಹಾಡನ್ನು ಹೇಳುತ್ತೇನೆ ನೀನು ನಿದ್ದೆ ಮಾಡುವಿಯಂತೆ.. ಸರಿ ನಾ" ಮಕ್ಕಳಾಟ ಅನ್ನಿಸಬಹುದು. ಭಾವಗಳ ಹುಚ್ಚು ಎನ್ನ ಬಹುದು ಆದರೆ ಪ್ರತಿ ನಿತ್ಯ ಅವು ಮಲಗುವ ಮುಂಚೆ ಸುರ್ ಮೈ ಅಕ್ಕಿಯೋ ಮೇ ಹಾಡು ಕೇಳಿಯೇ ಮಲಗುತ್ತಿದ್ದದ್ದು . 

ಕೆಲವೊಮ್ಮೆ ಮಧ್ಯ ರಾತ್ರಿ ಎಚ್ಚರವಾಗಿಬಿಡುತ್ತಿತ್ತು..  ಅಪರಾಧಿಗಳನ್ನು ಹುಡುಕುತ್ತಾ "ಜಾನೇ ಜಾ ಡುಂಡೂತ ಫಿರ್ ರಹ.. ಯು ತುಮ್ ರಾತ್ ದಿನ್ ಮೇ ಯಹಾ ಸೆ ವಹಾ" ಅಂದು ಹಾಡಿಕೊಂಡು ಬೈಕ್ ಹತ್ತಿ ರಾತ್ರಿಯೆಲ್ಲಾ ಹುಡುಕುತಿದ್ದದ್ದು ಉಂಟು.. ಅಪರಾಧಿಗಳಿಗೆ ಗೊತ್ತಿತ್ತು ವಿಜಯ್ ಒಬ್ಬ ಖಡಕ್ ಅಧಿಕಾರಿ ನಮ್ಮನ್ನು ಹುಡುಕುತ್ತ ಹಾಡುತ್ತಾ ಬಚ್ಚನಾ ಏ ಹಸೀನೋ ಅಂತ ಬಂದೆ ಬರುತ್ತಾನೆ. ಅಂತ.. 

ಇಷ್ಟೆಲ್ಲಾ ಕಷ್ಟ ಪಟ್ಟು.. ಹಗಲು ರಾತ್ರಿ ಪರಿಶ್ರಮ ಪಟ್ಟು ಕೇಸನ್ನು ತಾರ್ಕಿಕವಾಗಿ ಮುಗಿಸಿದಾಗ ಅವನಿಗರಿವಿಲ್ಲದೆ ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ ಅಂತ ಜೋರಾಗಿ ಹಾಡಿಕೊಂಡು ಖುಷಿ ಪಡುತ್ತಿದ್ದ... 

ಇಂದು ಹಾಗೆ ಆಯಿತು.. ಐದಾರು ಸಿಗರೇಟುಗಳು.. ಸೆಕ್ಯೂರಿಟಿ ಗಾರ್ಡ್ ಹೇಳಿದ ಮಾತುಗಳು.. ತನ್ನ ತಲೆಯೊಳಗೆ ಮೂಡಿದ ವಿಚಾರ ಸರಣಿಗಳು.. ಹಾಡಿನ ಸಂಭ್ರಮ.. ಹಾಡಿನ ಮಧ್ಯೆ ತನ್ನ ಬಾಲ್ಯ, ತನ್ನ ಪ್ರೇಯಸಿ.. ತನ್ನ ವೃತ್ತಿ.. ಅವುಗಳ ಕೇಸುಗಳು .. ಅಪರಾಧಿಗಳ ಹೃದಯದಲ್ಲಿ ಮೂಡಿಸಿದ್ದ ಭಯ.. ಎಲ್ಲವೂ ಅವನಿಗೆ ಹೊಸ ಚೈತನ್ಯ ತಂದುಕೊಟ್ಟಿತು.. ಸಂಗೀತ ಸಂಜೆಯೂ ಮುಗಿದಿತ್ತು.. ತನ್ನ ಕೇಸಿಗೂ ಒಂದು ಅಂತ್ಯ ಸಿಕ್ಕಿತ್ತು.. ಅಪರಾಧಿಯನ್ನು ಹಿಡಿದು ಸಲಾಕೆಗಳ ಹಿಂದೆ ನಿಲ್ಲಿಸಲು ಸಂತೋಷಕ್ಕೆ ಈ ಕೇಸು ಸಂತೋಷಕ್ಕೆ ಅಂತ ಹಾಡಿಕೊಂಡು ಜೀಪು ಹತ್ತಿದ.. 

                                                                   **************
ನನ್ನ ಬೈಕೋತಾ ಇದ್ದೀರಾ ಆಲ್ವಾ... ಸಿ ಐ ಡಿ ಕೇಸಿನ ವಿಚಾರ ಏನಾಯ್ತು ಅಂತ.. ಅರೆ ಬಿಡ್ರಿ ವಿಜಯ್ ಗಟ್ಟಿ ಆಫೀಸರ್ ಹೇಗೋ ಆ ಕೇಸನ್ನು ಮುಗಿಸುತ್ತಾನೆ.. ಅವನಿಗೆ ಇನ್ನೊಂದು ಮೆಡಲ್.. ಇನ್ನೊಂದು ಪ್ರಮೋಷನ್, ಇನ್ನಷ್ಟು ಹೆಸರು.. ಇದು ಅವನ ವೃತ್ತಿ ಬದುಕಿನಲ್ಲಿ ಮಾಮೂಲಿ.. ಜೊತೆಗೆ ಪ್ರೇಯಸಿಯ ಜೊತೆ ಪ್ರೀತಿಯ ಮಾತುಗಳು.. ಅಮ್ಮನ ಆರೈಕೆ.. ಮೂವತ್ತರ ಆಸುಪಾಸಿನಲ್ಲಿದ್ದಾನೆ.. ಮುಂದಿನ ವರ್ಷ ಮದುವೆ ಫಿಕ್ಸ್ ಆಗಿದೆ.. ಹೊಸ ಬದುಕು ಶುರುವಾಗುತ್ತದೆ.. 

ಆದರೆ ಇಲ್ಲಿ ಹೇಳ್ರಿ.. ಇಡೀ ಸಭಾಂಗಣವನ್ನೇ ಕುಣಿಸಿದ ಮಹೇಶ್ ಶ್ರುತಿ ಅವರ ತಂಡ.. ನೆರೆದಿದ್ದ ನೂರಾರು ಸಂಗೀತ ಪ್ರಿಯರು ಸಾರ್ಥಕ ಭಾವದಿಂದ ಗಾಯಕರ ತಂಡವನ್ನು ಅಭಿನಂದಿಸಿ, ಅವರ ಜೊತೆಗೆ ಸೆಲ್ಫಿ ತೆಗೆದುಕೊಂಡು ... ಫೋಟೋಗಳಿಗೆ ನೂಕು ನುಗ್ಗುಲು ಇದ್ದರೂ ಬೇಸರಿಸದೆ .. ಎಲ್ಲರಿಗೂ ಮುಗುಳುನಗೆ ಬೀರುತ್ತಾ.. ಸಂಗೀತ ರಸಿಕರಿಗೆ ಅಭಿನಂದನೆ ಸಲ್ಲಿಸೋದು.. ಮತ್ತೆ ಸಂಗೀತ ವಾದ್ಯಗಾರರನ್ನು ಪರಿಚಯ ಮಾಡಿಕೊಂಡು ಅವರ ಪ್ರತಿಭೆಯನ್ನು ಹೇಳುವುದು.. ಇವೆಲ್ಲವೂ ನಮ್ಮ ಸಂಭ್ರಮಕ್ಕೆ ಹೆಚ್ಚಿನ ಮೈಲೇಜ್ ನೀಡುತ್ತದೆ ಅಲ್ಲವೇ.. 

ನಿಜ.. ಹಾಡಿದ ಅಷ್ಟು ಹಾಡುಗಳೂ ಅದ್ಭುತವಾಗಿದ್ದವು.. ರಾಜ ಬರ್ಮನ್ ಜುಗಲ್ಬಂದಿ ಒಂದು ಅದ್ಭುತ ಕ್ಷಣಗಳು.. ಹೇಳುತ್ತಾರೆ ಎರಡು ಮಾದಗಜಗಳು ಸೆಣೆಸಾಡಿದರೆ ಹುಲ್ಲುಗಳಿಗೆ ಸಂಭ್ರಮವಂತೆ ಕಾರಣ ಅವುಗಳ ಕಾಲುತುಳಿತದಲ್ಲಿ ಮತ್ತೆ ಹೊಸ ಚೈತನ್ಯ ತುಂಬಿಕೊಂಡು ನಿಲ್ಲಬಹುದು ಅಂತ. .. ನಿಜವಲ್ಲವೇ ಬಳಲಿ ಬೆಂಡಾದ.. ಒತ್ತಡಗಳ ಹಿಮಾಲಯಗಳನ್ನೇ ಹೆಗಲಿಗೆ ಏರಿಸಿಕೊಂಡು, ವೃತ್ತಿ ಬದುಕಿನ ಸಮಸ್ಯೆಗಳು ಎಲ್ಲವನ್ನೂ ಒಂದು ಕಡೆ ಕಟ್ಟಿಟ್ಟು ನಲಿಯುವ ಈ ಕ್ಷಣಗಳು ಬದುಕಿಗೆ ಸಂಭ್ರಮ ನೀಡುತ್ತದೆ.. ಮತ್ತು ಸಂಭ್ರಮದ ಪ್ರಮಾಣವನ್ನು ಹೆಚ್ಚಿಸುತ್ತದೆ. 

ಮಹೇಶ್ ಅದ್ಭುತ ಹಾಡುಗಾರ. ಜೇನು ದನಿಯ ಗಾಯಕ ಅಂತ ನಾ ಸದಾ ಹೇಳುತ್ತಿರುತ್ತೇನೆ.. ಅವರ ಧ್ವನಿಯಲ್ಲಿ ಕಾಣದ ಕಡಲಿಗೆಹಾಡನ್ನು ಸುಮಾರು ಎರಡೂ ಮೂರು ಸಾವಿರ ಎತ್ತರದ ಬೆಟ್ಟದ ಮೇಲೆ ಕೂತು ಕೇಳಿದ್ದು ಅದ್ಭುತ ಅನುಭವ.. 

ಶೃತಿ  .. ಇವರ ಸಂಗೀತ ಶೃತಿ .. ಶ್ರುತಿಗೆ ಸಂಗೀತ ಎರಡಕ್ಕೂ ಇವರು ಸಲ್ಲುವವರು.. ಇವರನ್ನು ನೋಡಿದರೆ ಅರೆ ಈಕೆ ಎತ್ತರದ ಸ್ಥಾಯಿಯಲ್ಲಿ ಹಾಡಬಲ್ಲರೇ ಎಂದು ಕೊಂಚ ಅನುಮಾನಿಸಿದರೆ ಮುಗೀತು ಪಿಯ ತೂ ಅಬ್ ತೊ ಆಜಾ ಹಾಡನ್ನು ಕೇಳಿ.. ಹಾಗೂ ಅನೇಕ ಕಾರ್ಯಕ್ರಮಗಳಲ್ಲಿ ಇವರ ಎತ್ತರದ ಸ್ಥಾಯಿಯಲ್ಲಿ ಉಲಿಯುವ ಹಾಡುಗಳನ್ನು ಕೇಳಿದ್ದೇನೆ.. 
 
ಸುನೀತಾ ಮುರಳಿ ಅಲಿಯಾಸ್ ಜೋಗಿ ಸುನೀತಾ.. ಅಬ್ಬಬ್ಬಾ ನವಿರಾದ ಗೀತೆಗಳನ್ನು ಕೇಳುವಾಗ ಇಂತಹ ಧ್ವನಿ ಅನಿಸುತ್ತದೆ.. ಹಾಗೆಯೇ ದಂ ಮಾರೋ ದಂ ಹಾಡುಗಳನ್ನು ಕೇಳುವಾಗ ಇವರ ರೇಂಜ್ ಗೊತ್ತಾಗುತ್ತದೆ.. ಅದ್ಭುತ ಗಾಯಕಿ 

ಚಿನ್ಮಯ್ ... ಆಗಿನ ರಿಯಲ್ ಸಂಗೀತ ಪ್ರತಿಭೆಗಳನ್ನು ಹೊರತರುತ್ತಿದ್ದ ಸಂಗೀತದ ರಿಯಾಲಿಟಿ ಷೋಗಳಲ್ಲಿ ಗೆದ್ದು ಎಲ್ಲರ ಮನಸ್ಸಿನಲ್ಲಿ ಕೂತಿದ್ದ ಚಿನ್ಮಯ್ ಇಲ್ಲಿ ಎಲ್ಲಾ ತರಹದ ಹಾಡುಗಳಿಗೂ ಸಾತ್ ಕೊಡುತ್ತಿದ್ದದ್ದು ಮತ್ತು ಸಂಗೀತ ರಸಿಕರನ್ನು ಸಂಗೀತ ಅಲೆಯಲ್ಲಿ ತೇಲಾಡಿಸಿದ್ದು ಅದ್ಭುತವಾಗಿತ್ತು.. ಬಚ್ನ ಏ ಹಸಿನೋ .. ಇಡೀ ಸಭಾಂಗಣವೇ ಕುಣಿಯುತಿತ್ತು.. ಸುರ್ ಮೈ ಅಕ್ಕಿಯೋ ಮೇ ಹಾಡಿನಲ್ಲಿ ಎಲ್ಲರೂ ಲಾಲಿ ಹಾಡಿಗೆ ತೂಗಾಡುತ್ತಿದ್ದರು.. 

ಸಂಗೀತ ಮಾಂತ್ರಿಕರು ವಾದ್ಯಗಳ ಜೊತೆಯಲ್ಲಿದ್ದರು.. ಎಲ್ಲರ ಹೆಸರುಗಳು ಪರಿಚಯವಿರಲಿಲ್ಲ.. ಆದರೆ ಅದ್ಭುತ ಮಾಂತ್ರಿಕರಿಗೆ ಒಂದು ನಮನ ನನ್ನ ಮತ್ತು ಎಲ್ಲಾ ಸಂಗೀತ ಪ್ರಿಯರ ಪ್ರಪಂಚದಿಂದ.. 

ಒಂದು ಸುಂದರ ಸಂಜೆ ಅದ್ಭುತವಾಗಿ ಕಳೆದದ್ದು ಸಂತಸ ತಂದಿತು.. ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ.. ಬದುಕಿಗೆ ಇನ್ನಷ್ಟು ಉತ್ಸಾಹ ತುಂಬಿಕೊಳ್ಳಲು ಕಾರಣವಾಯಿತು.. 

ಅದಕ್ಕಾಗಿ ಈ ಸುಂದರ ಸಂಜೆಯನ್ನು ಆಯೋಜಿಸಿದ್ದ, ಪ್ರಾಯೋಜಿಸಿದ್ದ ಎಲ್ಲಾ ಸಂಗೀತ ಮನಗಳಿಗೆ ಅಭಿನಂದನೆಗಳು.. ಇನ್ನೂ ಹೆಚ್ಚಿನ ಯಶಸ್ಸು, ಕೀರ್ತಿ, ಐಶ್ವರ್ಯ ಎಲ್ಲವನ್ನೂ ಆ ಭಗವಂತ ನೀಡಲಿ ಎಂದು ಹಾರೈಸುತ್ತೇನೆ.. 

Friday, October 31, 2025

ಸಿಂಗಾಸನ್ ಬತ್ತೀಸ್

 ಅದೊಂದು  ಪುಟ್ಟ ಹಳ್ಳಿ ಅಲ್ಲಿನ ಗ್ರಾಮಸ್ಥರು ಮುಗ್ಧರು.. ಆ ಊರಿನ ವ್ಯಾಜ್ಯ ಏನೇ ಇದ್ದರೂ ಅವರೇ ಪರಿಹರಿಸಿ ಕೊಳ್ಳುತ್ತಿದ್ದರು.. ಆ ಪ್ರದೇಶದ ರಾಜ ನ್ಯಾಯ ತೀರ್ಮಾನಕ್ಕೆ ಹೆಸರಾಗಿದ್ದ ವಿಕ್ರಮಾದಿತ್ಯ.. ಅವನ ಸಿಂಹಾಸನದಲ್ಲಿ ೩೨ ಬೊಂಬೆಗಳಿದ್ದವು.. ರಾಜನಿಗೆ ನ್ಯಾಯ ನಿರ್ಣಯಿಸಲು ಆ ಗೊಂಬೆಗಳು ಸಹಾಯ

 ಸುತ್ತಮುತ್ತಲ ಹಳ್ಳಿಗಳ ಮಂದಿ ನ್ಯಾಯ ತೀರ್ಮಾನಕ್ಕೆ ಆ ರಾಜನ ಬಳಿ ಬರುತ್ತಿದ್ದದ್ದು ವಾಡಿಕೆ.. ಈ ಹಳ್ಳಿಯ ಮಂದಿ ಮಾತ್ರ ಒಮ್ಮೆಯೂ ಆ ರಾಜನ ಬಳಿ ತಮ್ಮ ಅಹವಾಲು ತೆಗೆದುಕೊಂಡು ಹೋದ ಉದಾಹರಣೆಗಳೇ ಇರಲಿಲ್ಲ ಅಂತ ಆ ಊರಿನ ಪ್ರಮುಖರೆಲ್ಲ ಮಾತಾಡಿಕೊಳ್ಳುತ್ತಿದ್ದರು.. 

ಇದು ಹೇಗೋ ಆ ಕಿವಿ ಈ ಕಿವಿ ಕಿವಿಗೆ ಅಂತ ಸಾಗಿ ಕಡೆಗೆ ಮಂತ್ರಿಯ ಕಿವಿಗೆ ಬಿತ್ತು.. ಇದೊಂದು ರೀತಿಯ ಅಹಂಗೆ ಪೆಟ್ಟು ಬಿದ್ದ ಹಾಗಿತ್ತು.. ಕಾರಣ ನ್ಯಾಯ ಅಂದರೆ ವಿಕ್ರಮಾದಿತ್ಯ ಅನ್ನೋವಷ್ಟು ಖ್ಯಾತಿಯಿದ್ದ ಆ ರಾಜ್ಯದಲ್ಲಿ ಈ ರೀತಿ ಆಗಲು ಸಾಧ್ಯವೇ ಎನ್ನುವ ಕುತೂಹಲ ಕೂಡ ಸೇರಿದ್ದು ವಿಶೇಷ.. 

ಇದನ್ನು ಸೂಕ್ಷ್ಮವಾಗಿ ರಾಜನ ಕಿವಿಗೆ ಸಾಗಿಸಿಸಿದರು ಮಂತ್ರಿಗಳು.. 

ರಾಜನಿಗೆ  ಕೋಪದ ಬದಲು ಕುತೂಹಲ ಹೆಚ್ಚಾಯಿತು.. ಸರಿ ತನ್ನ ಮಂತ್ರಿಗಳ ಜೊತೆಯಲ್ಲಿ ಮಾರುವೇಷ ಧರಿಸಿ ಆ  ಹಳ್ಳಿಯ ಕಡೆಗೆ ಹೊರಟರು.. 

ಮಾರ್ಗ ಮಧ್ಯೆ ಹಲವಾರು ಜನ ಮಾತಾಡುತ್ತ "ವಿಕ್ರಮಾದಿತ್ಯರಂಥಹ ಅರಸರ ಕಾಲದಲ್ಲಿ ನಾವಿರೋದು ಪುಣ್ಯ.. ಅವರ ನ್ಯಾಯ ತೀರ್ಮಾನದ ಬಗ್ಗೆ ಎರಡನೇ ಮಾತುಗಳೇ ಇಲ್ಲ.. ಸರಿಯಾದ ತೀರ್ಪು ಕೊಡೊದರಲ್ಲಿಎತ್ತಿದ ಕೈ.. ಆ ಗೊಂಬೆಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ.. ಹಾಗೆಯೇ ಈ ಹಳ್ಳಿಯಲ್ಲಿಯೂ ಎಷ್ಟು ಚೆನ್ನಾದ ಹಾಗೂ ಸರಿಯಾದ ತೀರ್ಮಾನ ಕೊಡುತ್ತಾರೆ.. 

ವ್ಯಾಜ್ಯ ೧ : ಅಣ್ಣ ತಮ್ಮಂದಿರ ಮಧ್ಯೆ ಭೂಮಿ ಪಾಲು ಮಾಡುವ ವಿಷಯದಲ್ಲಿ ತಕರಾರು ಬಂದಿತ್ತು.. ಆದರೆ ಅವರಿಬ್ಬರೂ ಜಗಳವಾಡದೆ ಆ ಹಳ್ಳಿಯ ಪ್ರಮುಖರ ಬಳಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.. ಸಮಸ್ಯೆ ಇದ್ದದ್ದು ಅವರ ಹೊಲ ಗದ್ದೆಗಳ ಆಕಾರದಲ್ಲಿ ಸರಿಯಾಗಿ ಭಾಗ ಮಾಡಲು ಸಾಧ್ಯವಿರಲಿಲ್ಲ.. ಆಗ ಅಲ್ಲಿನ ಪ್ರಮುಖರು ಮುಖ್ಯ ಭೂಮಿಯನ್ನು ಭಾಗ ಮಾಡಿ ಉಳಿದ ಭಾಗಮಾಡಲು ಆಗದ ಭೂಮಿಯನ್ನು ಒಂದು ವರ್ಷ ಒಬ್ಬನಿಗೆ ಇನ್ನೊಂದು ವರ್ಷ ಇನ್ನೊಬ್ಬನಿಗೆ ಉಳುಮೆ ಮಾಡಲು ಹೇಳಿದರು.. ಒಪ್ಪುವಂತಹ ನಿರ್ಣಯವೇ ಹೌದು.. ಕಾರಣ ಭೂಮಿಯೂ ಫಲವತ್ತಾಗಿರುತ್ತದೆ.. ಬೆಲೆಯೂ ಚೆನ್ನಾಗಿ ಬರುತ್ತದೆ.. ವಾಹ್ ವಾಹ್.. 

ವ್ಯಾಜ್ಯ ೨ - ಅದ್ಭುತ ಗೆಳೆತನದ ಇಬ್ಬರೂ ಕಾರಣಾಂತರಗಳಿಂದ ಕೆಲಸದ ಒತ್ತಡ.. ಉದ್ಯೋಗದಲ್ಲಿ ಬೆಳೆಯಲೇ ಬೇಕಾದ ಅನಿವಾರ್ಯತೆ, ಬೆಳೆಯುತ್ತಿರುವ ಬದುಕು ಇವುಗಳಿಂದ ಮೊದಲಿನ ಹಾಗೆ ಮಾತಾಡಲು ಪುರುಸೊತ್ತು ಸಿಗುತ್ತಿರಲಿಲ್ಲ ಆದರೂ ಪ್ರತಿದಿನದ ಶುಭಾಶಯಗಳೊಂದಿಗೆ ದಿನ ಆರಂಭವಾಗುತ್ತಿತ್ತು..ಆದರೆ ಜನುಮದಿನದ ಶುಭಾಶಯಗಳನ್ನು ಹೇಳೋದಕ್ಕೆ ತಡವಾಗಿತ್ತು.. ಆದರೆ ಒಬ್ಬರಲ್ಲಿ ಬೇಸರವಿಲ್ಲ.. ಇನ್ನೊಬ್ಬರಲ್ಲಿ ಕೋಪವಿಲ್ಲ.. ಆದರೂ ಯಾಕೆ ಏನಾಯಿತು ಅನ್ನುವ ತವಕ.. ಈ ಸಮಸ್ಯೆಗೆ ಎಷ್ಟು ಸುಲಭವಾಗಿ ಉತ್ತರ ಕೊಟ್ಟರು.. ನೋಡಿ ಸುಮ್ಮನೆ ಶುಭಾಶಯಗಳು ಅಂತ ಹೇಳಿದರೆ ಒಪ್ಪಿಕೊಳ್ಳುವ ಮನಸ್ಸಲ್ಲ ಅದು.. ಸ್ವಲ್ಪ ವಿಭಿನ್ನವಾಗಿ ಬರೆಯಬೇಕು ಅಂದರೆ ಸಮಯದ ಅಭಾವ.. ಮತ್ತೆ ಬೇಕಾಬಿಟ್ಟಿ ಬರೆಯುವ ಮನಸ್ಸು ಅಲ್ಲವಲ್ಲ.. ಹಾಗೆ ಬರೆದರೂ ಇಲ್ಲೇನೂ ಸಮಸ್ಯೆ ಇದೆ ಎನ್ನುವ ಆಲೋಚನೆಗಳು ಬರುತ್ತಿದ್ದವು.. ಆದರೆ ಅದಕ್ಕೆ ಉತ್ತರ ಸಿಗುತ್ತಿರಲಿಲ್ಲ.. ಹಾಗಾಗಿ ತಿಂಗಳ ಅಂತ್ಯದ ತನಕ ಕಾಯೋದು.. ಆಗಲೂ ಬರಲಿಲ್ಲ ಅಂದರೆ ಕರೆ ಮಾಡಬಹುದು ಅಂತ ತೀರ್ಪು ಕೊಟ್ಟರು.. ತೀರ್ಪು ಎಂದರೆ ಇದು..ಬಾರದ ಕೋಪವೂ ಮಾಯಾ .ಇಲ್ಲದ ಬೇಸರವೂ ಮಾಯಾ.. 

ವಿಕ್ರಮಾದಿತ್ಯ ಎರಡೂ ತೀರ್ಪುಗಳ ಕತೆಯನ್ನು ಕೇಳಿ ಇನ್ನಷ್ಟು ಖುಷಿಯಾಯಿತು.. ಎರಡೂ ತೀರ್ಪುಗಳಲ್ಲಿ ಭಾಗಿಯಾಗಿದ್ದ  ಮಂದಿಯನ್ನು ನೋಡಬೇಕು ಅಂತ ಬಯಸಿದಾಗ ಅಲ್ಲಿನ ಊರ ಜನರು 

ಮೊದಲನೇ ತೀರ್ಪಿನಲ್ಲಿದ್ಧ ಅಣ್ಣ ತಮ್ಮಂದಿರು ಹೆಗಲ ಮೇಲೆ ಹೆಗಲು ಕೈ ಹಾಕಿ ಕೊಂಡು ತಮ್ಮ ಹೊಲ ಗದ್ದೆಗಳ ಕಡೆ ಹೊರಟಿದ್ದರು.. 

ಎರಡನೇ ತೀರ್ಪಿನಲ್ಲಿದ್ದವರನ್ನು ಹುಡುಕಿದರು.. ಆದರೆ ಸಿಗಲಿಲ್ಲ.. ಕಾಣಲಿಲ್ಲ.. ಆಗ ಅವರೆಲ್ಲಿ ಎಂದಾಗ.. ನೋಡ್ರಪ್ಪಾ ಒಬ್ಬರು ಈ ಲೇಖನವನ್ನು ಬರೆಯುತ್ತಿದ್ದಾರೆ.. ಇನ್ನೊಬ್ಬರು ಈ ಲೇಖನವನ್ನು ಓದುತ್ತಿದ್ದಾರೆ.. 

ಓದುತ್ತಿದ್ದಾರಲ್ಲ ಅವರದೇ ಜನುಮದಿನ.. ಅವರಿಗೆ ಶುಭಾಶಯಗಳನ್ನು ಕೋರುತ್ತಾ ನಮ್ಮ ದಿನ ನಿತ್ಯದ ಕೆಲ್ಸದ ಕಡೆಗೆ ಗಮನ ಕೊಡೋಣ.. 

ವಿಕ್ರಮಾದಿತ್ಯರಿಗೆ ಪೂರ್ಣ ಖುಷಿಯಾಯಿತು. ಇಷ್ಟು ಸರಳವಾಗಿ ಆದರೆ ಗಂಭೀರವಾಗಿ ತೀರ್ಪು ಕೊಡಬೇಕಾದರೆ ಈ ಹಳ್ಳಿಯ ಮಂದಿ ಸಾಮಾನ್ಯರಲ್ಲ.. ಏನೋ ದಿವ್ಯಶಕ್ತಿ ಇದೆ .. ಏನದು ಅಂತ ಕೇಳಿದಾಗ.. 

ನೋಡಿ ಈ ಹಳ್ಳಿಯ ಮಂದಿಗೆ ಪ್ರತಿ ತಿಂಗಳಿಗೆ ಒಮ್ಮೆನಿವೇದಿತಾ ಚಿರಂತನ್  ವಿಚಾರ ವಿನಿಮಯ ಕಾರ್ಯಕ್ರಮ ಮಾಡುತ್ತಾರೆ.. ನಾವೆಲ್ಲರೂ ಒಂದೇ ಮನಸ್ಸಿನಿಂದ ಪೂರ್ಣ ಇಚ್ಚೆಯಿಂದ ಭಾಗವಹಿಸುತ್ತೇವೆ.. ಅವರು ಹೇಳಿ ಕೊಡುವ ಅವರು ತೋರಿಸುವ ಹಾದಿಯಲ್ಲಿ ನೆಡೆಯುತ್ತಿರುವುದರಿಂದ ನಮಗೆ ಈ ರೀತಿಯ ದಿವ್ಯ ಜ್ಞಾನ ಪ್ರಾಪ್ತಿಯಾಗಿದೆ.. ಇದರ ಸಮಸ್ತ ಯಶಸ್ಸು ಅವರಿಗೆ.. 




ವಿಕ್ರಮಾದಿತ್ಯರ ಸಂತಸಕ್ಕೆ ಪಾರವೇ ಇರಲಿಲ್ಲ.. 

ನಿವೇದಿತಾ ಚಿರಂತನ್ ಅವರಿಗೆ ಶುಭಾಶಯಗಳು ಹಾಗೆ ಇದೆ ಹಳ್ಳಿಯಂತೆ ನನ್ನ ದೇಶದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಈ ರೀತಿಯ ದಿವ್ಯ ಜ್ಞಾನ ನೀಡಿ ಎಂಬ ಕಳಕಳಿಯ ಮನವಿಯೊಂದಿಗೆ ಈ ದೇಶದ ಅರಸನಾಗಿ ನಿಮಗೆ ಶುಭ ಕೋರುತ್ತಿದ್ದೇನೆ ಎಂದು ಹೇಳಿ ತಮ್ಮ ಅರಮನೆಗೆ ತಮ್ಮ ಪರಿವಾರದ ಗಣಗಳ ಜೊತೆ ಹೊರಟರು.. 

*************************** 

ಸಿಬಿ ತಡವಾಯಿತು.. ಕ್ಷಮೆ ಇರಲಿ.. ಭಗವಂತ ನೀಡಿದ ಅದ್ಭುತ ಗೆಳತಿಗೆ ಜನುಮದಿನದ ತಡವಾದ ಶುಭಾಶಯಗಳು  (ಫೋಟೋಗಳನ್ನು ಕದಿಯಲಾಗಿದೆ -----  ಕ್ಷಮೆ ಇರಲಿ)

Wednesday, May 7, 2025

Divine ... Divine...Divine DFR DFR!

 ದೃಶ್ಯ ೧

ಕೇಳು ನಿನಗೇನು ಕೇಳು.. 

ನನಗೆ DFR ತರಹ ತಾಳ್ಮೆ ಬೇಕು.. 

ಬೇರೆ ಏನೂ ಬೇಡವೇ.. ದುಡ್ಡು, ಅಂತಸ್ತು, ರಾಜ್ಯ, ಕೋಶ.. 

ಇಲ್ಲ ನನಗೆ ೩ಕೆ ತಂಡದವರು ಇದೆ ಬೇಕು ಅಂತ ಕೇಳಿದ್ದಾರೆ ನನಗೆ ಅದೇ ಬೇಕು 


ದೃಶ್ಯ ೨

ಚಾವಟಿಯಲ್ಲಿ ಬಾಸುಂಡೆ ಬರುವ ತರಹ ಹೊಡೆಯುತ್ತಿರುತ್ತಾರೆ.. 

"ಇನ್ನೂ ಬಲವಂತವಾಗಿ ಹೊಡಿ.. ಇನ್ನೂ ಜೋರಾಗಿ ಹೊಡಿ"

"ಹೊಡೆಯುವೆ" ಆದರೆ ಏತಕ್ಕೆ ಹೀಗೆ ಚಾವಟಿಯಲ್ಲಿ ಏಕೆ ಒದೆ ತಿನ್ನುತ್ತಿದ್ದೀರಾ"

"ನೋಡಿ ಅಲ್ಲಿ ಎಲ್ಲರೂ DFR DFR ತರಹ ಕೆಲಸ ಮಾಡದೆ.. ಸೋಮಾರಿತನದಿಂದ ಇದ್ದಾರೆ.. ಅದಕ್ಕೆ ಅವರ ತರಹ ಪಾದರಸದಂತೆ ಇರಬೇಕು .. ಇಲ್ಲದೇ ಹೋದರೆ ಹೀಗೆ ಎಲ್ಲರಿಗೂ ಏಟು ಅದು ಎಲ್ಲರಿಗೂ ಪಾಠವಾಗಲಿ ಅಂತ ಬಾರಿಸು ಅಂತ ಹೇಳುತ್ತಿದ್ದೇನೆ"


ದೃಶ್ಯ ೩ 

"ಎಲ್ಲಿ ಮರೆಯಾದೆ ವಿಠಲ ... ಏಕೆ ದೂರದೇ.. ವಿಠಲ ರಂಗ ವಿಠಲ ರಂಗಾಅಅಅಅಅಅಅಅಅಅ"

"ಅರೆ ಗೋರಾ.. ವಿಠಲ ಪಂಡರಾಪುರದಲ್ಲಿ ಸಿಗುತ್ತಾನೆ.. ಆದರೆ ನೀನು ಅಲ್ಲಿಗೆ ಹೋಗಿ ದರ್ಶನ ಪಡೆದು ಬಂದಿದ್ದೀಯಾ.. ಆದರೂ ಯಾಕೆ ಇನ್ನೂ ಹಣೆಯಲ್ಲಿ ಗೆರೆಗಳು ಇದ್ದಾವೆ"

"ಹೌದು ನಾಮದೇವರೇ.. ವಿಠಲನ ದರ್ಶನವೇನೋ ಆಯಿತು.. ಆದರೆ DFR DFR ಅವರ ಅಭಿಮಾನಿಗಳಿಗೆ ಸಿಗುತ್ತಿಲ್ಲ ಏನು ಮಾಡೋದು"

ಟಂ ಅಂತ ಪಾಂಡುರಂಗನೂ ಮಾಯಾ.. ನಾಮದೇವರು ಮಾಯಾ.. ಈ ಪ್ರಶ್ನೆಗೆ ಉತ್ತರ ಬರಿ DFR DFR ಅವರಿಗೆ ಮಾತ್ರ ಗೊತ್ತಿರೋದು


ದೃಶ್ಯ ೪

"ಎಲ್ಲಿರುವನೋ ನಿನ್ನ ಹರಿ.. ಈ ಕಂಬದಲ್ಲಿರುವನೇ.. ಈ ಕಂಬದಲ್ಲಿರುವನೇ?"

ಟಿ"ತಂದೆಯೇ ನಿನಗೆ ನಾ ಹರಿಯನು ಹೇಗೋ ತೋರಿಸುತ್ತೇನೆ.. ಪುರುಸೊತ್ತು ಇಲ್ಲದೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಟೂರು, ಸಿನಿಮಾ, ನಾಟಕ, ಕಾರ್ಯಕ್ರಮ ನಿರೂಪಣೆ, ಹಿಮಾಲಯದ ತಪ್ಪಲು, ಫೆಂಚ್ ಅರಣ್ಯ, ರಂಗ ಶಂಕರ, ಜನದನಿ, ೩ಕೆ ರಾಜ್ಯೋತ್ಸವ, NGO, ಚಂಪಕಧಾಮ ದೇವಸ್ಥಾನ ಅಂತ ಸುತ್ತುತ್ತಲೇ ಇರುವ ಅವರನ್ನು ನೀನು ತೋರಿಸು.. ನಾ ಹರಿಯನ್ನು ತೋರಿಸುತ್ತೇನೆ"

ಹಿರಣ್ಯಕಶಿಪು ಹರಿಯನ್ನು ಹುಡುಕೋದು ಬಿಟ್ಟು.. ನಾ ಸೋತೆ ಅವರನ್ನು ಹುಡುಕೋದು ಕಷ್ಟ.. ಅದಕ್ಕೆ ಬದಲು ಹರಿನಾಮ ಸ್ಮರಣೆ ಮಾಡೋದೇ ಉತ್ತಮ "ನಾರಾಯಣ ನಾರಾಯಣ" 

ದೃಶ್ಯ ೫

"ಹೊಂಚು ಮಾಡಿ ಸಂಚು ಮಾಡಿ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ.. ಕದಂಬರ  ವೃಕ್ಷ ತಲೆಯೆತ್ತಿ ನಿಂತಿದೆ .. "

ಶಿವಸ್ಕಂದ ವರ್ಮಾ ಮಯೂರನಿಗೆ "ಮಯೂರ ನಿನಗೆ ರಾಜ್ಯ ಬೇಕು ತಾನೇ ನಾ ಖುಷಿಯಿಂದ ಕೊಡುತ್ತೇನೆ.. ಆದರೆ DFR DFR ಎಲ್ಲರ ಮನವನ್ನು ಗೆಲ್ಲುತ್ತಾರೆ ಅಲ್ಲವೇ.. ಆ ರೀತಿಯ ಗುಣವನ್ನು ನನಗೂ ಹೇಳಿಕೊಡಿ ಅಂತ ನೀವು DFR DFR ಗೆ ಹೇಳಿ ಪ್ಲೀಸ್"


ದೃಶ್ಯ ೬

ಇದು DFR DFR ತಾಕತ್ತು.. ಎಲ್ಲೇ ಹೋದರೂ ಮತ್ತೆ ಬಂದು ನಿಲ್ಲೋದು DFR DFR ಅವರ ನೀರಿನಂತಹ ಗುಣ.. ಯಾವುದೇ ಪರಿಸ್ಥಿತಿಗೆ, ಯಾವುದೇ ವಾತಾವರಣಕ್ಕೆ, ಯಾವುದೇ ಸ್ಥಿತಿಯಲ್ಲಿಯೂ ಕೂಡ ಸದಾ ಇನ್ನೊಬ್ಬರ ಬಗ್ಗೆ ಯೋಚಿಸುವ, ಸಹಾಯ ಚಾಚುವ ಅವರ ಗುಣ ಎಲ್ಲರಿಗೂ ಮಾದರಿ.. ಅಷ್ಟಿಲ್ಲದೆ ನಾ ಎಲ್ಲರಿಗೂ ಗುಣವಾಚಕವಾಗಿ ಹೆಸರಿಡುವ ನಾನು ಅವರನ್ನು DFR DFR ಅಂತ ಕರೆಯುತ್ತೇನೆಯೇ!

ಜನುಮದಿನದ ಶುಭಾಶಯಗಳು DFR DFR!

Monday, April 28, 2025

ದೇವರು ನಕ್ಕೆ ನಗುತ್ತಾನೆ - ೭

ಮೊಬೈಲಿನಲ್ಲಿ ನಗುನಗುತಾ ನಲಿ ನಲಿ ಏನೇ ಆಗಲಿ.. ಅಣ್ಣಾವ್ರ ಹಾಡು ಬರುತ್ತಿತ್ತು.. ಮೊಬೈಲಿನಲ್ಲಿದ್ದ ಕೃಷ್ಣ ಅರ್ಜುನ ನಗಲು ಶುರು ಮಾಡಿದರು. 

ಲೋ ಹೈದ ನಗು ನಗು ಅಂತ ಹೇಳುತ್ತಾ ನಗೋದನ್ನೇ ಮರೆತಿದ್ದೀಯಾ ಅಥವ ಅದರ ಬಗ್ಗೆ ಬರೆಯೋದನ್ನು ಮರೆತಿದ್ದೀಯಾ.. ಏನ್ಲಾ ನಿನ್ನ ಕಥೆ.. ಐದು ವರ್ಷ ಇದರ ಬಗ್ಗೆ ಒಂದು ಚೂರು ಬರೆದಿಲ್ವಲ್ಲೋ..

ಹೌದು ಕೆಲವೊಮ್ಮೆ.. ನಾಳೆ ನಾಡಿದ್ದು ಆಚೆ ನಾಡಿದ್ದು ಅಂತ ಹೇಳುತ್ತಾ ವಾರಗಳು, ತಿಂಗಳು, ವರ್ಷಗಳೇ ಕಳೆದು ಹೋಗುತ್ತವೆ.. 

ಹಾಗೆ ಲೇಖನದ ದಿನಾಂಕ ನೋಡಿದೆ  ಅರೆ ನಾಲ್ಕು ವರ್ಷ ಆಗೋಗಿದೆ.. ದೇವರ ನಗುವಿನ ಸರಣಿ ಬರೆದು.. 

ಸರಿ ಬರೆದು ಬಿಡೋಣ ಅಂತ ಶುರು ಮಾಡಿದೆ.. ಈ ಐದು ವರ್ಷಗಳಲ್ಲಿ ಕಾವೇರಿ ನದಿಯಲ್ಲಿ ಎಷ್ಟೋ  ಸಹಸ್ರ ಸಹಸ್ರ ಗ್ಯಾಲನ್ ನೀರು ಸಮುದ್ರದ ಪಾಲಾಗಿದೆ.. ಎಷ್ಟೋ ಘಟನೆಗಳು ಎಷ್ಟೋ ನಗುವಿನ ದೃಶ್ಯಗಳು ಸ್ಮೃತಿ ಪಟಲದಿಂದ ಮರೆಯಾಗಿ ಹೋಗಿದೆ.. ಆದರೂ ಕೆಲವು ನೆನಪುಗಳು ಅಚ್ಚಳಿಯದೆ ನಿಂತಿರುವುದನ್ನು.. ಕೆಲವು ಘಟನೆಗಳು ಇತ್ತೀಚಿಗೆ ನೆಡೆದಿರುವುದು ಇಲ್ಲಿ ದಾಖಲಿಸಿ ಕಡೆ ಪಕ್ಷ ಪಶ್ಚಿಮ ವಾಹಿನಿ ಹಾದಿಯಲ್ಲಿರುವ ಈ ಸರಣಿಯನ್ನು ಮತ್ತೆ ಮುಖ್ಯ ಹಾದಿಗೆ ತರುವ ಪ್ರಯತ್ನ ಮಾಡುವ ಒಂದು ಪುಟ್ಟ ಶ್ರಮ.. 

                                                                       ******* 

ದೃಶ್ಯ ೧ 

ಜೀವನದ ಓಟದ ಹಾದಿಯಲ್ಲಿಅಡೆತಡೆಯಿಲ್ಲದೆ .. ಬಂದರೂ ಲೆಕ್ಕಿಸದೆ ಪಯಣ ಸಾಗಿತ್ತು.. ಉದ್ಯೋಗ ಕ್ಷೇತ್ರದಲ್ಲಿ ಒಂದು ಪುಟ್ಟ ತಿರುವು ಸಿಕ್ಕಾಗ ಮತ್ತೆ ನಿಂತ ಬದುಕು ಓಡಲು ಶುರುವಾಗಿತ್ತು.. 

ಮೊದಲ ದಿನ.. ಸಹಸ್ರಾರು ಬಾರಿ ಸಾಗಿದ್ದ ಮೈಸೂರು ರಸ್ತೆಯ ಮೇಲ್ ಸೇತುವೆ.. ಕೆ ಆರ್ ಮಾರುಕಟ್ಟೆಯ ಬಳಿಯ ನನ್ನ ನೆಚ್ಚಿನ ಗಣಪನ ದೇವಾಲಯ.. ಅಲ್ಲಿಗೆ ಹೋಗಬೇಕು ಅನ್ನುವ ಅವಕಾಶ ಇನ್ನೂ ಒದಗಿಲ್ಲ ಅನ್ನೋದಕ್ಕಿಂತ ಆ ರಸ್ತೆಯಲ್ಲಿ ಸಾಗುವಾಗ ಸೇತುವೆ ಮೇಲೆ ಇರುವುದರಿಂದ ಗಣಪನ ದೇವಾಲಯದ ಗೋಪುರ ಮಾತ್ರ ಕಾಣುತ್ತದೆ.. ಸೇತುವೆ ಕೆಳಗೆ ಸಾಗೋಣ ಎಂದರೆ ಅಸಾಧ್ಯ ವಾಹನ ದಟ್ಟಣೆ.. ಬೆಳಿಗ್ಗೆ ಹೋಗುವಾಗ ಆತುರ.. ಬರುವಾಗ ಮನೆಯನ್ನು ಸೇರುವ ಕಾತುರ.. ಹಾಗಾಗಿ ಆ ದೇವಾಲಯಕ್ಕೆ ಭೇಟಿಯ ಪುಣ್ಯ ಇನ್ನೂ ಸಿಕ್ಕಿಲ್ಲ.. ಸೋಮಾರಿತನವೂ ಕಾರಣ.. ಶನಿವಾರ ಭಾನುವಾರ ಹೋಗಿ ಬರಬಹುದು ಅದೇನು ದೊಡ್ಡ ಕೆಲಸವಲ್ಲ ಆದರೆ ಮನುಷ್ಯನನ್ನು ಸೋಮಾರಿ ಮಾಡುವ ಆಲಸ್ಯ.. ನನಗೂ ತುಸು ಹೆಚ್ಚೇ ಇರುವುದರಿಂದ.. ಹೋಗಲಾಗಿಲ್ಲ.. ಆದರೆ ಹೋಗಿ ಬರುವ ಖಂಡಿತ.. 

ಸರಿ ವಿಷಯಕ್ಕೆ ಬರುತ್ತೇನೆ.. ಆ ಸೇತುವೆ ಮೇಲೆ ಹೋಗುವಾಗ ಬರುವಾಗ ಆ ಗೋಪುರ ನೋಡಿ ಕೈ ಮುಗಿದು ಮುಂದುವರೆಯುವುದು ನನ್ನ ಅಭ್ಯಾಸ.. ಎಷ್ಟೇ ದಟ್ಟಣೆ ಇರಲಿ. ಹಿಂದಿನವ ಬಡ್ಕೊಂಡ್ರು ಸರಿ ಒಂದು ಕ್ಷಣ ಕೈಮುಗಿದು ಹೋಗುವುದು ಅಭ್ಯಾಸ.. 



ಕೆಲಸದ ಮೊದಲ ದಿನ.. ಅದೇ ದಾರಿಯಲ್ಲಿ ಪಯಣ ಸಾಗಿತ್ತು..ಅದೇ ದೇವಾಲಯ.. ಅದೇ ಸೇತುವೆ.. ಸಾಗುವಾಗ ... ಆಗಲೇ ತಡವಾಗಿತ್ತು.. ಆದ್ದರಿಂದ ತುಸು ವೇಗವಾಗಿ ಜೊತೆಗೆ ಅಷ್ಟೇ ಗಾಬರಿ ಸಹಿತ.. ದೇವಾಯ ಹಾದು ಹೋದೆ ಆದರೆ.. ಕೈ ಮುಗಿಯೋದು ಆ ಕ್ಷಣಕ್ಕೆ ಮರೆಯಾಗಿತ್ತು... 

ಟರ್ ಟರ್ ಶಬ್ದ ಕೂಡ ಕಿವಿಗೆ ಕೇಳಿಸದಷ್ಟು ಬೇಗ ಸಾಗುವ ಇರಾದೆಯಿಂದ ಸಾಗುತ್ತಿದ್ದೆ.. ನನ್ನ ಪಕ್ಕದ ಬೈಕಿನವ .. ಸರ್ ಚಕ್ರ ನೋಡಿ ಚಕ್ರ ನೋಡಿ ಅಂತ ಕೂಗುತ್ತಾ ಹೋದ.. ನಾನು ಅಯ್ಯೋ ಪಂಚರ್ ಆಗಿದೆಯಾ .. ಏನಪ್ಪಾ ಮಾಡೋದು ಹೊತ್ತಾಗುತ್ತೆ ಅಂತ ಬೈಕ್ ನಿಲ್ಲಿಸಿದೆ.. ನೋಡಿದರೆ.. ಒಂದು ಪ್ಲಾಸ್ಟಿಕ್ ಕ್ಯಾನ್ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು ಸದ್ದು ಮಾಡುತ್ತಿದೆ.. ಅಯ್ಯೋ ಅಂತ ಆ ಕ್ಯಾನ್ ತೆಗೆದು ರಸ್ತೆ ಬದಿಯಲ್ಲಿಟ್ಟು ಎದ್ದು ನಿಂತು.. ನೋಡಿದೆ... ತಣ್ಣನೆ ಗಾಳಿ ಮುಖದ ಮೇಲೆ ಬಿದ್ದ ಅನುಭವ.. ಕತ್ತೆತ್ತಿ ಸುತ್ತಾ ನೋಡಿದೆ.... ಯಾರೋ ಫ್ಯಾನ್ ಹಾಕಿದ್ದಾರೆ ಅನಿಸುವ ಅನುಭವ.. ಪೈಪಿನಿಂದ ಗಾಳಿ ಬೀಸಿದ ಅನುಭವ.. ಮೆಲ್ಲನೆ ತಿರುಗಿ ನೋಡಿದೆ.. ಪ್ರತಿ ದಿನ ಕೈಮುಗಿಯುತಿದ್ದ ಗಣಪನ ದೇವಾಲಯ.. ಅರೆ ಇವತ್ತು ಮರೆತೇ ಬಿಟ್ಟೆನಲ್ಲ ಅಂತ ಬೇಸರ ಪಟ್ಟುಕೊಂಡು ತಿರುಗಿ ಕೈಮುಗಿದೆ.. ಬೈಕ್ ಸ್ಟಾರ್ಟ್ ಮಾಡಿದೆ.. ಶ್ರೀ ಆಲ್ ದಿ ಬೆಸ್ಟ್ ಅಂತ ಗಣಪ ಆಶೀರ್ವಾದ ಮಾಡಿದಂತೆ ಅನುಭವ.. 

ತಲೆಯೆತ್ತಿ ನೋಡಿದೆ.. ಶ್ರೀ ನಿನ್ನ ಗಡಿಬಿಡಿಯಲ್ಲಿ ನೀ ನನ್ನ ಮರೆಯಬಹುದು ಆದರೆ ನಾ ನಿನ್ನ ಮರೆಯೋಲ್ಲ ಕಣೋ.. ಶುಭವಾಗಲಿ.. ಹೊಸ ತಿರುವು ಹೊಸ ಯಶಸ್ಸನ್ನು ತಂದು ಕೊಡಲಿ.. ಶುಭವಾಗಲಿ ಎಂದು ಹರಸಿದ ಗಣಪ.. ಅದನ್ನು ಕಂಡು ನಾ ನಕ್ಕೆ.. ದೇವರು ಕೂಡ ಖಂಡಿತ ಒಂದು ಸುಮಧುರ ನಗು ಕೊಟ್ಟ.. 

                                                             *****

ದೃಶ್ಯ ೨

ಮನೆಯ ಹತ್ತಿರದ ಒಂದು ಸ್ವಸಹಾಯ ಪದ್ದತಿಯ ಹೋಟೆಲ್.. ನಮಗೆ ಬೇಕಾಗಿದ್ದು ಹೇಳಿ ಚೀಟಿ ಪಡೆದು ಕಾಯುತ್ತಿದ್ದೆವು.. ಸ್ವಲ್ಪ ಹೊತ್ತು.. ಕೇಳಿದ ತಿಂಡಿ ಬಂತು.. ತಿನ್ನುತ್ತಿದ್ದೆವು.. ಒಬ್ಬ ಹಣ್ಣು ಹಣ್ಣು ಮುದುಕ.. ವಯಸ್ಸಾಗಿತ್ತು ಅನ್ನೋದು ಗೊತ್ತಾಗುತಿತ್ತು.. ಆದರೆ ಅದಕ್ಕಿಂತ ಆ ವಯೋವೃದ್ಧರಿಗೆ ನೆಡೆಯಲು ಕಷ್ಟವಾಗುತಿತ್ತು.. ಒಂದು ಕೋಲಿನ ಆಸರೆ ಇತ್ತು.. 

ಒಂದು ಕುರ್ಚಿಯಲ್ಲಿ ಸುಮ್ಮನೆ ಕೂತಿದ್ದರು.. ಅವರಿಗೆ ಇದು ಸ್ವಸಹಾಯ ಅಂತ ಗೊತ್ತಿರಲಿಲ್ಲ.. ಸುಮಾರು ಹೊತ್ತು ಕೂತೆ ಇದ್ದರು.. ಯಾರೋ ಒಬ್ಬರು ಅಲ್ಲಿ ಹೋಗಿ ಚೀಟಿ ಕೊಂಡು ಊಟ ಮಾಡಿ ಅಂತ ಹೇಳಿದರು.. ಆತ ಬಹಳ ಕಷ್ಟ ಪಟ್ಟು ನಿಧಾನಕ್ಕೆ ಹೋಗಿ ಚೀಟಿ ಪಡೆದರು.. ಮತ್ತೆ ಆ ಕಡೆ ಹೋಗಿ ತಿಂಡಿ ಕೊಡುವವನ ಹತ್ತಿರ ಆ ಚೀಟಿ ಕೊಟ್ಟರು.. 

ಆತ ಆ ಚೀಟಿಯನ್ನು ನೋಡಿ ಓಹ್ ನಾರ್ತ್ ಇಂಡಿಯನ್ ಊಟ ಅಂತ ಹುಬ್ಬು ಮೇಲೆತ್ತಿ "ತಾತಾ ನೀವು ಅಲ್ಲಿ ಕೂತುಕೊಳ್ಳಿ ನಾನೇ ತಂದು ಕೊಡುತ್ತೇನೆ ಅಂದರು.. ಆ ತಾತನಿಗೆ ಕೇಳಿಸಿತೋ ಅರ್ಥವಾಯಿತೋ ಗೊತ್ತಿಲ್ಲ.. ಅಲ್ಲೇ ನಿಂತಿದ್ದರು.. 

ಆತ ಮತ್ತೆ ಹೋಗಿ ತಾತಾ ಕುಳಿತುಕೊಳ್ಳಿ ತಂದು ಕೊಡುತ್ತೇನೆ ಅಂತ ತುಸು ಜೋರಾಗಿ ಹೇಳಿ ಕೈ ತೋರಿಸಿದಾಗ ತಾತನಿಗೆ ಗೊತ್ತಾಯಿತು ಅಂತ ಅನಿಸುತ್ತೆ.. ಒಂದು ಕುರ್ಚಿಯಲ್ಲಿ ತಮ್ಮ ಕೈ ಚೀಲವನ್ನು ಇಟ್ಟು ಇನ್ನೊಂದು ಕುರ್ಚಿಯಲ್ಲಿ ಕೂತರು.. ಆತ ನಾ ಕುಳಿತ ಟೇಬಲಿನ ಮುಂದೆ ಕೂತಿದ್ದರಿಂದ ನನಗೂ ಕುತೂಹಲವಿತ್ತು ಮುಂದೆ ಏನು ನೆಡೆಯುತ್ತೆ ಅಂತ.. 

ಅಷ್ಟರಲ್ಲಿ ತಾತನ ಊಟ ತಯಾರಾಗಿದೆ ಅಂತ ಆತ ಕೂಗಿದ.. ತಾತ ನಿಧಾನವಾಗಿ ಏಳೋಕೆ ನಿಲ್ಲುವ ಪ್ರಯತ್ನ ಮಾಡಿದರು.. ಹೋಟೆಲಿನವ ತಾತ ಇರಿ ನಾನು ತರುತ್ತೇನೆ ಎಂದರು.. ಆದರೆ ಆತ ಒಂದು ಸುತ್ತು ಬಳಸಿಬರಬೇಕಿತ್ತು.. 

ಏಕೋ ನನಗೆ ಏನೋ ಅನಿಸಿತು.. ತಿನ್ನುತ್ತಿದ್ದವ ನಾನು ಎದ್ದು ಹೋಗಿ ಆ ತಟ್ಟೆಯನ್ನು ತೆಗೆದುಕೊಂಡು ತಾತ ತೆಗೆದುಕೊಳ್ಳಿ ಆರಾಮಾಗಿ ಊಟ ಮಾಡಿ ಎಂದೇ.. 

ತಾತ ಕಣ್ಣಲ್ಲೇ ಕೃತಜ್ಞತೆ ಹೇಳುತ್ತಾ ಕೈಯಲ್ಲಿ ಕುಡಿಯಲು ನೀರು ಬೇಕು ಎಂದು ದಯನೀಯವಾದ ದೃಷ್ಟಿ ಬೀರಿದರು.. ನನ್ನ ಹೊಟ್ಟೆ ಚುರುಕ್ ಎಂದಿತು.. ನೀರು ತರಲು ಹೋದೆ.. ಹೋಟೆಲಿನವ ಸರ್ ನೀವು ಊಟ ಮಾಡಿ ನಾ ನೀರು ಕೊಡುತ್ತೇನೆ.. ಧನ್ಯವಾದಗಳು ಅಂತ ಹೇಳಿ.. ನೀರು ಕೊಡಲು ಅಲ್ಲೇ ಇದ್ದ ಹುಡುಗನಿಗೆ ಹೇಳಿದ.. ನೀರು ಬಂತು.. ತಾತ ನೀರು ಕುಡಿದು ನಿಧಾನವಾಗಿ ನಾರ್ತ್ ಇಂಡಿಯನ್ ಊಟ ಸವಿಯಲು ಶುರು ಮಾಡಿದರು.. 

ಇಲ್ಲಿ ನನಗೆ ಅನಿಸಿದ್ದು.. ತಾತನಿಗೆ ನಾರ್ತ್ ಇಂಡಿಯನ್ ಸೌತ್ ಇಂಡಿಯನ್ ಊಟದ ವ್ಯತ್ಯಾಸ ಗೊತ್ತಾಯಿತೋ.. ಅಥವ ಊಟ ಎಂದಾಗ ಸಾಮಾನ್ಯ ಬೆಂಗಳೂರಿನಲ್ಲಿ ಸಂಜೆ ಹೊತ್ತು ಅನ್ನ ಸಾರಿನ ಊಟ ಸಿಗೋಲ್ಲ.. ಊಟ ಬೇಕು ಅಂತ ತಾತ ಹೇಳಿದಾಗ.. ಹೋಟೆಲಿನವರು ಸುಮ್ಮನೆ ಒಂದು ಚೀಟಿ ಹರಿದುಕೊಟ್ಟರೋ ಏನೋ ಅಂತ.. 

ಒಟ್ಟಿನಲ್ಲಿತಾತ ಏನೂ ಕಿರಿ ಕಿರಿ ಮಾಡಿಕೊಳ್ಳದೆ ತಣ್ಣನೆ ಊಟ ಮಾಡುತ್ತಿರುವ ದೃಶ್ಯ ನೋಡಿ ನನಗೆ ಕರುಳು ಚುರುಕ್ ಎಂದಿತು.. ತಮ್ಮ ಭವ್ಯವಾದ ಹಿಂದಿನ ತಾರುಣ್ಯದಲ್ಲಿ ಎಷ್ಟು ಭರ್ಜರಿ ಜೀವನ ಮಾಡಿರಬಹುದು.. ಅಥವ ಹೊಡೆದಾಟದಲ್ಲಿಯೇ ಜೀವನದ ಅಂಚಿಗೆ ಬಂದು ನಿಂತಿದ್ದರೋ ಅರಿಯದು.. ಆದರೆ ತಾತ ನೀರು ಬೇಕು ಅಂತ ಕೇಳಿದ ದೃಶ್ಯ ಮನದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿದೆ.. 

ಹೋಟೆಲಿನಿಂದ ಹೊರಗೆ ಬರುವಾಗ ಗಲ್ಲಾಪೆಟ್ಟಿಗೆಯ ಮೇಲೆ ಸ್ಥಿತಪ್ರಜ್ಞನಾಗಿದ್ದ ಗಣಪತಿ ಗುಡ್ ಜಾಬ್ ಶ್ರೀ ಅಂತ ಹೇಳಿ ನಕ್ಕಿದ್ದು ಕೇಳಿಸಿತು.. !


Thursday, October 24, 2024

madness in random...!

ಸಿಬಿ : ಹಾಯ್ ಅರ್ಪಿತಾ

ಅರ್ಪಿತಾ : ಹಾಯ್ ಸಿಬಿ 

ಸಿಬಿ : ಏನಿದು New journey?

ಅರ್ಪಿತಾ : ನಥಿಂಗ್ Dog eat Dog world ಅನ್ನುವ ಪುಸ್ತಕ ಓದುತ್ತಿದ್ದೆ.. ಅದರಲ್ಲಿನ Small details ಬಹಳ ಇಷ್ಟವಾಯಿತು.. ಆದರೆ ಅಷ್ಟರಲ್ಲಿ Thu ut ke gayi ........ ನಿಮಗಾಗಿ Intezaar ಮಾಡಿದೆ.. ಆದರೆ The perfect day ಬರಲು ತುಂಬಾ ದಿನಗಳಾಯ್ತು.. ನನಗೂ ಒಂದು ರೀತಿಯ ಪ್ರಶ್ನೆ Nostalgic.. am I ???? ಅಂತ ಅನಿಸಿತು.. ಸರಿ What happened now  ಅಂತ ಪ್ರಶ್ನೆ.. ಮನದಲ್ಲಿ ಒಂದು ರೀತಿಯ Grief .. ಆದರೂ ಮೊಗದಲ್ಲಿ Smile ... ಮನಸ್ಸಿನಲ್ಲಿ ಅನಿಸಿತ್ತು Happiness is waiting, Soak no more ಅಂತ.. ಖಂಡಿತ Battery recharged ಆಗುತ್ತೆ ಕಾಯೋಣ ಅನಿಸಿತು.. ಅದೇ ಯೋಚನೆಯಲ್ಲಿದ್ದಾಗ ಬಸ್ ನಿಲ್ದಾಣದಲ್ಲಿ The woman with red toe nails ಪುಸ್ತಕ ಓದುತ್ತಿದ್ದೆ ಕಣೆ ಸಿಬಿ.. ಯಾಕೋ ಈ ಕಥೆಯಲ್ಲಿ Untold ಘಟನೆಗಳಿದ್ದಾವೆ ಅನಿಸಿತು.. ಇದಕ್ಕೆ ಒಂದಷ್ಟು ಹಾಡನ್ನು ಗುನುಗುಣಿಸೋಣ ಅಂತ ಮೊಬೈಲಿನಲ್ಲಿ My 10 most favourite songs ಹಾಕಿಕೊಂಡು ಕೂತೆ ... ಹಾಡುಗಳು ಮಧುರವಾಗಿದ್ದವು.. ಜೊತೆಗೆ Second Chance ಕೊಡೋಣ.. ಕಾಯೋಣ ಅನಿಸಿತು.. 

ಇವರಿಬ್ಬರ ಮಾತುಕತೆ ಮುಂದುವರೆಯುತ್ತಿತ್ತು .. 

ಆ ಕಡೆಯಿಂದ ಇವರಿಬ್ಬರ ನೆಚ್ಚಿನ ರೋಹಿಣಿ ನೆಡೆದು ಬರುತ್ತಿದ್ದಳು ಬಂದವಳೇ 

ರೋಹಿಣಿ : "Did I ever tell you????? ಅರ್ಪಿತ"  ಅಂದಳು.. 

ಅರ್ಪಿತಾ : ಇಲ್ಲ ರೋಹಿಣಿ ಅಂದೇ.. 

ಅವಳು ತನ್ನ ಬ್ಯಾಗಿಂದ ಮೈಸೂರು ಪಾಕು Pieces ಕೊಟ್ಟಳು.. 

ಸಿಬಿ :  If Only............ ಬಾಕ್ಸ್ ಫುಲ್ ಇದ್ದರೆ ಚೆನ್ನಾಗಿತ್ತು ರೋಹಿಣಿ 

ರೋಹಿಣಿ :   ಹೌದು ಕಣೆ .. .. ಇರಲಿ ಇರಲಿ Housewife wala life ಹಾಗಾಗಿ ಮನೆಯಲ್ಲಿ ಕೆಲಸ ಮಾಡುತ್ತಾ ಹಾಗೆ ತಿಂದು ಹಾಕಿದೆ.. ಉಳಿದದ್ದು ನಿನಗೆ ತಂದೆ ... 

ಅರ್ಪಿತಾ : ಅದು ಹೋಗಲಿ ಬಿಡು ಮೈಸೂರು ಪಾಕು ಚೆನ್ನಾಗಿದೆ.. 

ರೋಹಿಣಿ:  ಅದಿರಲಿ ನಿನ್ನ ಡ್ರೆಸ್ ಯಾಕೆ So Ordinary .... ಎನಿಥಿಂಗ್ ಆಯ್ತಾ ... 

ಅರ್ಪಿತಾ :  Doomsday ಕಣೆ 

ಸಿಬಿ: .. Give me one reason...ಯಾಕೆ ಅಂತ .. 

ಅರ್ಪಿತಾ : ಇಲ್ಲ ಕಣೆ ಇದು Last chance ಆಮೇಲೆ ನೋಡೋಣ.. ಇಲ್ಲವೇ ಪೂರ್ತಿ Silence ಅಷ್ಟೇ 

ಸಿಬಿ : ಏನಾಯಿತು 

ಅರ್ಪಿತಾ : ಇದು ಎರಡು ಭಾಗದಲ್ಲಿ ಬರುವ ಕಥೆ ಕಣೆ  Over a cup of tea...... (Part 1) (Part 2) ..

ಸಿಬಿ : ಅದು ಸರಿ ಅರ್ಪಿತಾ Do you think they know???.... ........ Nah..

ಅರ್ಪಿತಾ : ಹೌದು ಕಣೆ ಸಿಬಿ At that moment... Am fine ಅನಿಸಿತು ಯಾರಿಗೆ ಹೇಳೋದು Friends ??  Forever :) ಅಂತ ಅನಿಸಿಕೊಂಡ ಕೆಲವರ ಹತ್ತಿರ ಹೇಳೋಣ ಅಂದುಕೊಂಡೆ ajeeb dastan he ye..... ಅಂತ ರೇಗಿಸ್ತಾರೆ.. ಅದಕ್ಕೆ ನಿಮ್ಮಿಬ್ಬರ ಹತ್ತಿರ ಹೇಳೋಣ ಅಂತ ಬಂದೆ  ಜೀವನದಲ್ಲಿ Twice in a lifetime (Part I) (Part II) ಆಯಿತು..  Good bye ಹೇಳೋಣ ಅನಿಸಿತು.. ಆದರೆ ಅವನು ಹೇಳ್ತಾನೆ My brother ..ಗೆ ಹೇಳಿದೆ  After this day............. Almost..... in love ... ಇದು Journey of Mr.X, Lucky Charms ಅದು ಇದು ಅಂತ ನೂರೆಂಟು ಹೇಳಿದಾಗ The world as I understood.....ಅಂತ ಅರ್ಥ ಆಯಿತು.. ಸರಿಯೋ ತಪ್ಪೋ ಗೊತ್ತಿಲ್ಲ ಆದ್ರೆ What defines you??... ಅಂತ ಯೋಚನೆ ಮಾಡುತ್ತಲೇ Valentine's day ಬಂದೆ ಬಿಡ್ತು New beginning ಅಂತ ಅನಿಸಿತು.. ಕಾಲವೂ ಬದಲಾಗಬೇಕಲ್ಲವೇ Spring ಕೂಡ ಬಂದೆ ಬಿಡ್ತು.. ಸರಿ ಧೈರ್ಯ ಮಾಡಿ ಮಾತಾಡೋಣ ಅನಿಸಿತು Coffeeಗೆ ಕರೆದು confusion ಆಗಿರೋದನ್ನು ಸರಿ ಮಾಡಿಕೊಳ್ಳೋಣ ಅನಿಸಿ .. ತನ್ನ ಮನದಲ್ಲಿದ್ದನ್ನು ಬೊಗಸೆ ತುಂಬಾ ಹೇಳಲು ಶುರು ಮಾಡಿದಾಗ ಆ ಮಾತುಗಳು  confessions of a confused soul – 1, 2,3,4,5,6,7,,8,9,10,11,12,13, ಅಂತ ವೆಬ್ ಸೀರೀಸ್ ಬಂದ ಹಾಗೆ ಬಂದಿತು ಸಿಬಿ  ... ಏನು ಮಾಡಲಿ ಕಡೆಗೆ ಇದೆಲ್ಲಾ ಅರ್ಥವಾಗಿ.. ಸ್ವಲ್ಪ ಮಟ್ಟಿಗೆ ತಿಳಿಯಾಗಿ One summer afternoon... ಮೊಬೈಲಿನಲ್ಲಿ Hold my hand ಅಂತ ಮೆಸೇಜ್ ಬಂತು... Conscience calls ಪ್ರಕಾರ "Best Friend" ಅನ್ನಿಸ್ತು ಒಪ್ಪಿಕೊಂಡೆ.. ಈ ಕುಶಿಗೆ ಏನಾದರೂ ಕೊಡೋಣ ಅನಿಸಿತು..  ಅವನು ಬುಲೇಟ್ ಬೈಕ್ ನನಗೆ ಬಲು ಇಷ್ಟ.. ಒಂದು ರೀತಿಯಲ್ಲಿ ನಾನೇ ಅವನಿಗೆ ಬಲವಂತ ಮಾಡಿ ಕೊಡಿಸಿದ್ದೆ.. ಶೋ ರೂಮಿನ ಹತ್ತಿರ A humble plea to bullet riders - From a drooling onlooker ಅಂತ ಒಂದು ಪುಸ್ತಕ ಕೊಟ್ಟು.. ದಯಮಾಡಿ ಇದನ್ನು ಅನುಸರಿಸಿ ಅಂತ ಹೇಳಿದ್ದಷ್ಟೇ ಅಲ್ಲದೆ IMHO - Blue mug epiphany ಅನ್ನುವ ಒಂದು ಪುಸ್ತಕ ಕೊತ್ತಿದ್ದರು .ಅದು ನನ್ನ ಬಳಿಯೇ ಇತ್ತು . Crossroads ನಲ್ಲಿದ್ದ ಬದುಕು ಮತ್ತೆ ಹಾದಿಗೆ ಬಂತು ಕಣೆ .. ಅವನಿಗೆ ಈ ಪುಸ್ತಕಗಳನ್ನು ಕೊಟ್ಟಾಗ ನನ್ನ Butterfly girl ಅಂತ ಹೇಳಿ...  ಬಾಕಿ ಪ್ರೇಮಿಗಳು ಕೂಡ ಹೊಟ್ಟೆ ಕಿಚ್ಚು ಪಡುವಷ್ಟು Confessions- jealousy ಆಯಿತು ಕಣೆ ಎಂದು ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.. . ಈಗ ನಾವಿಬ್ಬರು Walking Partners ಮತ್ತೆ ಮೆಲ್ಲನೆ Walking Partners & Couples.ಆದೆವು .. ಒಂದು ವರ್ಷ ನಮ್ಮ ಜೊತೆ Walking Partners - Ramesh Uncle ಅಂದರೆ ನನ್ನ ಮಾವ ಕೂಡ ಸೇರಿಕೊಂಡರು .. ನಮ್ಮ ಬದುಕು Random madness ಇಂದ madness in random ಆಗಿದೆ.. ಬದುಕು ಸುಂದರ ಅನಿಸಿದೆ ಸಿಬಿ.. 

ಸಿಬಿ : ವಾಹ್ ವಾಹ್ ಸುಂದರ ಬದುಕು ಕಣೆ ಅರ್ಪಿತಾ ನಿಂದು.. ಒಂದು ಹಗ್ ನಿನಗೆ 

ರೋಹಿಣಿ : ಓಯೆ ನಾನೂ ಇಲ್ಲಿದ್ದೀನಿ.. ಮೈಸೂರು ಪಾಕು ಗುಳುಂ ಮಾಡಿದಂಗೆ ಅಲ್ಲ.. ನಾನೂ ಇಲ್ಲಿದ್ದೀನಿ.. ನನಗೂ ಒಂದು ಕೊಡ್ರೋ.. 

ಅರ್ಪಿತಾ : ರೋಹಿಣಿ ನೀ ಇದ್ದಾರೆ ಸಾಕು ಕಣೆ.. ಸಿಬಿ ಜಗತ್ತನ್ನೇ ಗೆಲ್ಲುತ್ತಾಳೆ.. 

ಸಿಬಿ : ಹ ಹ .. you know what am a gigling ,mug!!!

ಅದ್ಭುತ ಗೆಳೆತನ ಎಂದರೆ ಇದೆ ಅಲ್ಲವೇ.. ಲೇಖನದಲ್ಲಿ ಮೂಡಿ ಬಂದ ಒಂದು ಪಾತ್ರ.. ಸಿಬಿ  ಅವರನ್ನು ಇಷ್ಟೊಂದು ಹಚ್ಚಿಕೊಂಡಿದ್ದು.. ಸಿಬಿ  ಕೂಡ ಆ ಪಾತ್ರವನ್ನು ಬಲು ಮುತುವರ್ಜಿಯಿಂದ ಸಿದ್ಧಪಡಿಸಿದ್ದು ...ಅದ್ಭುತ.. ಜೊತೆಗೆ ಗೆಳೆತನಕ್ಕೆ ಕಲಶ ಪ್ರಾಯದಂತೆ ರೋಹಿಣಿಯ ಹಾಜರಿ.. ಎಲ್ಲವೂ ಸಸತ್ಯಂ ಶಿವಂ ಸುಂದರಂ.. !

************************

ಗೆಳೆತನ ಅನ್ನೋದು ಎಲ್ಲರಿಗೂ ಸುಲಭವಾಗಿ ಸಿಗುವ ವಸ್ತುವಲ್ಲ ಗೆಳೆಯರಾಗಿರಬಹುದು.. ಆದರೆ ಪ್ರತಿಯೊಂದು ಕ್ಷಣದಲ್ಲೂ ನಿಲ್ಲುವ ಗೆಳೆಯರು ನಿಜವಾಗಿಯೂ ಈ ಆಧುನಿಕ ತಂತ್ರಜ್ಞಾನ ಕೂಡಿರುವ ಜಗತ್ತೇ ಒಂದು ಹಳ್ಳಿಯಾಗಿರುವ ಈ ಕಾಲದಲ್ಲಿ ತಾನುಂಟು ಮೂರು ಲೋಕವುಂಟು ಎನ್ನುವ ಗೆಳೆತನವೆ ಹೆಚ್ಚು.. ಅಂಥದ್ದರಲ್ಲಿ ಅಚಾನಕ್ ಒಂದು ಬ್ಲಾಗ್ ಓದಿ ಪ್ರತಿಕ್ರಿಯೆ ಕೊಟ್ಟ ಕ್ಷಣ ಸಿಕ್ಕಿದು ದೇವರು ಕೊಟ್ಟ ಗೆಳತನ ಅದೇ ನಿವೇದಿತಾ ಚಿರಂತನ್.. ಅಕ್ಷರಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಭಾವನೆಗಳನ್ನು ಕಂಡು ಹಿಡಿಯುವಷ್ಟು ಚಾಣಾಕ್ಷೆ ಇವರು.. ೨೦೧೨ ರಲ್ಲಿ ಶುರುವಾದ ಗೆಳೆತನಕ್ಕೆ ಭರ್ತಿ ೧೨ ವರ್ಷಗಳು.. ಜನುಮದಿನಕ್ಕೆ ಮರೆಯದೆ ಶುಭಾಶಯಗಳನ್ನು ತಲುಪಿಸುವ ನನಗೆ.. ಒಂದು ವರ್ಷ ಯಾವುದೋ ಕಾರಣಕ್ಕೆ ಹೇಳಲಾಗಲಿಲ್ಲ.. ಆದರೆ ಸಂದರ್ಭಗಳನ್ನು ಹೇಳಿ.. ಒಪ್ಪಿಸಿದ ಮೇಲೆ ಆ ಮುಗುಳ್ನಗೆ ತುಂಬಿದ ಗೆಳೆತನಕ್ಕೆ ಮತ್ತೆ ಹಸಿರಾಯಿತು.. 

ಹನ್ನೆರಡು ವರ್ಷಗಳ ಗೆಳೆತನಕ್ಕೆ ಏನು ಉಡುಗೊರೆ ಕೊಡೋದು.. ಅಕ್ಕ ಅಲ್ಲ ತಂಗಿ ಅಲ್ಲ ಗೆಳತೀ ಅಲ್ಲ ಬಂಧುವಲ್ಲ.. 

ಆದರೆ ಮಾರ್ಗದರ್ಶಿ, ಗುರು ಈ ಪದಗಳು ಒಪ್ಪುವಂತಹ ಗೆಳತೀ ಇವರು... ಒಂದು ಸಮಸ್ಯೆಯನ್ನು ಇವರ ಮುಂದಿಟ್ಟರೆ ಸಾಕು.. ಅದನ್ನು ಒಪ್ಪವಾಗಿ ಬಿಡಿಸಿ ಹೀಗಲ್ಲ ಶ್ರೀ ಹೀಗೆ ಎಂದು ಹೇಳಿ ತಿಳಿ ಹೇಳುವ ಅದ್ಭುತ ಇವರು.. ಹೀಗೆ ಮಾತಾಡುತ್ತಿದ್ದಾಗ ನೀವು ಏನು ಓದಿರುವುದು ಅಂದಾಗ ಪುಸ್ತಕ ಅಂದರು.. ನಾ ನಕ್ಕು ಅದು ಸರಿ ಆ ಪುಸ್ತಕದ ಮೇಲೆ ಕರ್ನಾಟಕ ಸರ್ಕಾರ ಅದು ಇದು ಅಂತ ಬರೆದಿರುತ್ತಲ್ಲ ಅದರ ಕೆಳಗೆ ಆ ಪುಸ್ತಕದ ವಿಷಯ ಅಂತ ಪ್ರಿಂಟ್ ಮಾಡಿರುತ್ತೆ..ಅದು ಏನು ಅಂದಾಗ .. ಕಾನೂನು ಅಂದರು.. ಅಬ್ಬಬ್ಬಾ ಆಗ ಗೊತ್ತಾಯಿತು.. ಈ ರೀತಿಯ ತರ್ಕಬದ್ಧ ಮಾತುಗಳು ಕಾನೂನು ಪದವೀಧರರರಿಗೆ ಬಿಟ್ಟು ಬೇರೆ ಎಲ್ಲಿ ಹೋಗಲು ಸಾಧ್ಯ ಅಂತ.. 

ಇಂತಹ ಅದ್ಭುತ ಗೆಳೆತನಕ್ಕೆ ಒಂದು ಶುಭಾಶಯ ಹೇಳೋಣ ಅಂತ ಅಂದುಕೊಂಡಾಗ ಮೂಡಿ ಬಂದದ್ದು ಈ ಬರಹ.. 

Saturday, September 7, 2024

ನಿರ್ದೇಶಕರು ಕಟ್ ಕಟ್..

ಮಹೇಂದ್ರಾ.. 

ಮಹೇಂದ್ರ ಬರುತ್ತಾನೆ.. ನಿನ್ನ ವಜ್ರಾಯುಧದಿಂದ ಒಮ್ಮೆ ಅಪ್ಪಳಿಸಿಬಿಡು.

ಆಗದು ಹಿರಣ್ಯ.. 

ಅಗ್ನಿ .. 

ಅಗ್ನಿ ಒಮ್ಮೆ ಈ ಬಾಲಕನನ್ನು ಅಪ್ಪಿಕೊಂಡು ಬಿಡು.. 

ಅಪ್ಪಿಕೊಂಡರೂ ಬಾಲಕನನ್ನು ಸುಡಲಿಲ್ಲ 

ಆನೆಯಿಂದ ತುಳಿಸಿದರು 

ಹಾವು ಬಿಟ್ಟರು 

ಪ್ರಪಾತಕ್ಕೆ ತಳ್ಳಿದರು 

ಊಹೂಂ 

ಏನೂ ಬದಲಾಗಲಿಲ್ಲ.. 

ಕಡೆಗೆ ಸ್ವಗತ "ನಾನಾರು.. ಕಶ್ಯಪಬ್ರಹ್ಮನ ಮಗ.. ದಿತಿ ಗರ್ಭ ಸಂಜಾತ..... "

ಮುಂದಿನ ದೃಶ್ಯ.. 

ಕಯಾದು ನನ್ನ ಮೇಲೆ ಅತಿಶಯ ಪ್ರೀತಿಯಿದೆ ಅಲ್ಲವೇ 

ಹೌದು ಸ್ವಾಮಿ 

ಹಾಗಾದರೆ ತಗೋ.. ವಿಷ 

ನಾ ಕುಡಿಯಲೇ 

ಇಲ್ಲ ನೀನೆ ನಿನ್ನ ಕೈಯಾರೆ ಪ್ರಹ್ಲಾದಕುಮಾರನಿಗೆ ವಿಷ ಪ್ರಾಶನ ಮಾಡಿಸಬೇಕು.. 

ಒಂದಷ್ಟು ಸಂಭಾಷಣೆ.. ಕಡೆಗೆ ಪ್ರಹ್ಲಾದ ವಿಷವನ್ನು ಗಟಗಟ ಕುಡಿದುಬಿಡುತ್ತಾನೆ.. 

ಸ್ವಲ್ಪ ಕ್ಷಣ ಮತ್ತೆ ಮರಳಿ ಅಮ್ಮ ಎಂದು ಕರೆಯುತ್ತಾನೆ.. 

ತಾಯಿ ಕಯಾದುಗೆ ಅಚ್ಚರಿ,ಸ್ ಸಂತಸ ಎಲ್ಲವೂ ಒಮ್ಮೆಲೇ.. 

ವಿಷ ನಿನಗೆ ಏನೂ ಮಾಡಲಿಲ್ಲವೇ ಕಂದ.. 

ಏನೂ ಮಾಡಲಿಲ್ಲ..  ಹತ್ತಾರು ಶುಭಾಶಯ ಪತ್ರಗಳನ್ನು ಬಿಡುವಿಲ್ಲದಿದ್ದರೂ ಬಿಡದೆ ಬರೆದು ಕಳಿಸಿದೆ 

ಲ್ಯಾಮಿನೇಟ್ ಮಾಡಿಸಿದೆ.. ಫ್ರೇಮ್ ಮಾಡಿಸಿದೆ 

ನಾಚಿಕೆಯಿಂದ ಅದನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟರು.. 

ಗೃಹಪ್ರವೇಶಕ್ಕೆ ಲ್ಯಾಮಿನೇಟ್ ಮಾಡಿದ ಪ್ರತಿ ಕೊಟ್ಟೆ.. ಊಹೂಂ ಉಪಯೋಗವಾಗಲಿಲ್ಲ 

ಒಮ್ಮೆ ಅವರ ಮನೆಗೆ ಹೋದರು.. ಗೋಡೆ ಗೋಡೆ ಹುಡುಕಿದರೂ ಕಾಣಲಿಲ್ಲ 

ಕಡೆ ಪಕ್ಷ ಮಂದಿಗಳ ಸಹಮತಕ್ಕಾದರೂ, ಆ ಪ್ರೀತಿಗಾದರೂ ಒಪ್ಪುತ್ತಾರೆ ಅಂದುಕೊಂಡೆ.. ಊಹೂಂ ಅವರು ಒಪ್ಪುತ್ತಾರೆ ಅಂತ ನಾ ಅಂದುಕೊಂಡೆ.. ಆದರೆ ನನಗಿಂತ ತಿಳಿಗೇಡಿ ಇನ್ನೊಬ್ಬರಿಲ್ಲ.. 

ಕಯಾದು ಸ್ವಾಮೀ ಏನು ಮಾಡುತ್ತಿದ್ದೀರಾ.. ಚಿ ಉದಯಶಂಕರ್ ಬರೆದ ಸಂಭಾಷಣೆ ಇದಲ್ಲ.. ಏನಾಯಿತು.. ಯಾವುದೋ ಬೇರೆ ಮಾತಾಡುತ್ತಿದ್ದೀರಲ್ಲ.. ಏನೂ ಸಮಾಚಾರ.. ಏನಾಯಿತು.. 

ಹಿರಣ್ಯಕಶಿಪು ಒಮ್ಮೆಲೇ ಗಾಬರಿಯಾಗಿ.. ಅಯ್ಯೋ ತಪ್ಪಾಯಿತಲ್ಲ.. ನನ್ನ ಮೆಚ್ಚಿನ ಅಭಿಮಾನಿ ಶ್ರೀಯ ಅನುಭವ ನನ್ನ ತಲೆಯೊಳಗೆ ಓಡುತ್ತಿತ್ತು.. ಅದೇ ಸಂಭಾಷಣೆ ಹಾಗೆ ಬಾಯಿಗೆ ಬಂತು.. 

ನಿರ್ದೇಶಕರೇ ಕಟ್ ಮಾಡಿ.. ಮತ್ತೊಮ್ಮೆ ಟೇಕ್ ಮಾಡುತ್ತೀನಿ.. 

ಮುಂದಿನ ದೃಶ್ಯ .. ಅಗ್ನಿ ಸುಡದವನನ್ನು, ಸರ್ಪ ಕಚ್ಚದವನನ್ನು, ಆನೆ ತುಳಿದಯವನನ್ನು.. ಕಯಾದು ಕಡೇಪಕ್ಷ ಜನದಣಿಯ ಪೀತಿಗಾಗಿಯಾದರೂ ತಲೆಬಾಗುತ್ತಾರೆ ಅಂದು ಕೊಂಡಿದ್ದೆ.. 

ನಿರ್ದೇಶಕರು ಕಟ್ ಕಟ್.. 

ಅಣ್ಣಾವ್ರೇ ಯಾಕೋ ನಿಮ್ಮ ಗಮನ ಈ ಕಡೆ ಇಲ್ಲ..  ಕೆಲವೊಂದು ವಿಷಯಗಳು ಎಷ್ಟು ಪ್ರಯತ್ನ ಪಟ್ಟರೂ ಆಗೋಲ್ಲ.. ಆ ಪ್ರೀತಿ ವಿಶ್ವಾಸ ಸದಾ ಇರುತ್ತದೆ.. ಆದರೆ ಮುಜುಗರ ಪಟ್ಟುಕೊಂಡು ಸ್ವೀಕರಿಸುವ ಪ್ರಶಸ್ತಿ ಹಿಂಸೆ ಮಾಡುತ್ತೆ.. ಆಗಲಿ ಬಿಡಿ.. ಇವತ್ತು ವಿಶ್ರಾಂತಿ ಮಾಡಿ ನಾಳೆ ಈ ದೃಶ್ಯ ಚಿತ್ರೀಕರಿಸೋಣ.. 

ಆಗಲಿ ನಿರ್ದೇಶಕರೇ.. ಸಾರಿ ಸಾರಿ .. ಮತ್ತೊಮ್ಮೆ ಹೀಗಾಗೋದಿಲ.. ಕ್ಷಮಿಸಿ ಬಿಡಿ. 

ಅಯ್ಯೋ ಅಣ್ಣಾವ್ರೇ ಈ ರೀತಿಯ ಅನೇಕಾನೇಕ ಪಾತ್ರಗಳನ್ನು ಲೀಲಾಜಾಲವಾಗಿ ಮಾಡಿರುವ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತೆ.. ತೊಂದರೆ ಇಲ್ಲ.. ನಾಳೆ ಮಾಡೋಣ.. 

ಇಂದು ಗಣೇಶನ ಹಬ್ಬ.. ಆ ವಿಘ್ನವಿನಾಶಕ ಸಕಲ ಸಮೃದ್ಧಿಯನ್ನು ನೀಡಲಿ DFR!.... ಶುಭವಾಗಲಿ.. ಜೀವನ್ಮುಖಿಯಾಗಿರುವ ನಿಮಗೆ ಸದಾ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ನಿಮಗೆ ಶುಭವಾಗಲಿ ಎಂದಷ್ಟೇ ನಾನು ಹಾರೈಸುವುದು DFR.. ಒಳ್ಳೆಯದಾಗಲಿ.. ನಿಮ್ಮ ಪ್ರಯತ್ನಗಳಿಗೆ, ನಿಮ್ಮ ಪರಿಶ್ರಮಗಳಿಗೆ.. ನಿಮ್ಮ ಸಮಾಜಮುಖಿ ಮನಸ್ಸಿಗೆ, ನಿಮ್ಮ ದಣಿವರಿಯದ ಶಕ್ತಿಗೆ ಈ ರಾಜಕುಮಾರ .. ಈ ನಿಮ್ಮ ನೆಚ್ಚಿನ ಅಣ್ಣಾವ್ರು.. ನನ್ನೆಲ್ಲ ಅಭಿಮಾನಿ ದೇವರುಗಳ ಪರವಾಗಿ ನಿಮಗೆ ಸದಾ ಶುಭ ಹಾರೈಸುತ್ತೇನೆ.. ಇದು ಶುಭಾಶೀರ್ವಾದಗಳು DFR!

DFR ಒಮ್ಮೆಲೇ ಗಾಬರಿ ಬಿದ್ದು ಬೆಳಿಗ್ಗೆ ಎದ್ದರು.. ನೋಡಿದರೆ.. ಶ್ರೀ ಮೆಸೇಜ್ ಮೊಬೈಲಿನಲ್ಲಿ ನಗುತಿತ್ತು.. !

Tuesday, May 7, 2024

ಜನುಮದಿನದ ಶುಭಾಶಯಗಳು DFR DFR!

 ​ಹಿರಣ್ಯಕಶಿಪು ಘನಘೋರ ತಪಸ್ಸು ಮಾಡುತ್ತಿದ್ದ.. ಇಡೀ ಭೂಮಂಡಲ, ಉಳಿದ ಲೋಕಗಳು ಆ ತಪದ ತಾಪ ತಡೆಯಲಾಗದೆ ಕಂಪಿಸುತ್ತಿತ್ತು.. ಆ ಕಾವು ಎಲ್ಲರನ್ನೂ ಸುಡುತಿತ್ತು.. ಈ ವರ್ಷದ ಬೆಂಗಳೂರಿನ ಹಾಗೂ ಭಾರತದ ಉಳಿದ ಕಡೆಯಂತೆ ಬಿಸಿಲಿನ ಝಳದಂತೆ ಸುಡುತಿತ್ತು.. 

ಬ್ರಹ್ಮನಿಗೆ ಬೇರೆ ದಾರಿ ಕಾಣಲಿಲ್ಲ.. ಲೋಕಗಳನ್ನು ಈ ಬಾಧೆಯಿಂದ ರಕ್ಷಿಸಲು ಸಂಕಲ್ಪ ಮಾಡಿದ.. ಜೊತೆಗೆ ಸ್ವಲ್ಪ ಹೊತ್ತು ಧ್ಯಾನದಲ್ಲಿ ಕೂತು.. ಹಿರಣ್ಯಕಶಿಪು ಏನೇನು ವರಗಳನ್ನು ಬೇಡಬಹುದು .. ಜೊತೆಗೆ ಆ ವರಗಳು ಸಿಕ್ಕಮೇಲೆ ಹಿರಣ್ಯಕಶಿಪು ಎಲ್ಲಾ ಲೋಕಗಳನ್ನು ಗೋಳಾಡಿಸುವುದು ಮತ್ತು ದೇವತೆಗಳನ್ನು ಪೀಡಿಸುವುದು ಇದನ್ನು ರಕ್ಷಿಸುವುದರ ಬಗ್ಗೆ ಅದೇ ಹೇಳ್ತೀವಲ್ಲ ವೈರಸ್ ಮತ್ತೆ ಅದಕ್ಕೆ ಪ್ರತಿ Anti ವೈರಸ್ ತರಬೇಕಲ್ಲ ಅದಕ್ಕಾಗಿ ಮಹಾಮಹಿಮ ತನ್ನ ಪಿತ ವಿಷ್ಣುವಿನ ಹತ್ತಿರ ಅದಕ್ಕೆ ಉಪಾಯಗಳನ್ನು ತಿಳಿದು ಭೂಲೋಕದ ಕಡೆಗೆ ಹೊರಟಾಗ.. ಸರಸ್ವತಿ ಓಡೋಡಿ ಬಂದು.. ಇದೇನು ಮತ್ತೆ ಹೊರಟಿರಿ.. ಇರಿ ಅಂತ ಹೇಳಿ ಆಕೆ ಒಂದು ಚೀಟಿಯನ್ನು ಕೊಡುತ್ತಾಳೆ.. ಅದನ್ನು ಪಡೆದು ವಿಷಲ್ ಹೊಡೆಯುತ್ತಾ ಭುವಿಗೆ ಬರುವ ಬ್ರಹ್ಮ.. 

"ಮಗು ಹಿರಣ್ಯಕಶಿಪು.. ನಿನಗೇನು ವರ ಬೇಕು ಕೇಳಿಕೊ" ಎಂದಾಗ 

ಹೇ ಸರಸಿಜೋದ್ಭವ ಸರಸಿಜಾಸನ 
ಸರಸತಿಯ ಪ್ರಿಯಕರನೇ ಬ್ರಹ್ಮನೇ 
ಸ್ಮರಣೆ ಮಾತ್ರದಿ ಬಂದು 
ಸಲಹುವ ಹಂಸ ವಾಹನನೇ... 

ಪರಮ ಕರುಣಾಮೂರ್ತಿ 
ಪರಮ ಕರುಣಾಮೂರ್ತಿ 
ನಿನ್ನೀ ಚರಣಕಮಲದಿ ಶಿರವನಿಡುತಲಿ 
ನಿನ್ನೀ ಚರಣಕಮಲದಿ ಶಿರವನಿಡುತಲಿ 
ವರವನೊಂದನು ಬೇಡುವೆನು
ವರವನೊಂದನು ಬೇಡುವೆನು
ಕೃಪೆ ಮಾಡಿ ಹರಸೆನ್ನಾ 
ಕೃಪೆ ಮಾಡಿ ಹರಸೆನ್ನಾ 
ಓ... ಬ್ರಹ್ಮದೇವಾ.. ಓ... ಬ್ರಹ್ಮದೇವಾ.. 

(ಅಣ್ಣಾವ್ರ ಶೈಲಿಯಲ್ಲಿ ಹಾಡಿಕೊಳ್ಳಿ)


ಬ್ರಹ್ಮ ನಸುನಗುತ್ತಾ "ಮಗು ಹಿರಣ್ಯಕಶಿಪು ನಿನಗೇನು ವರಬೇಕು ಕೇಳಿಕೋ" ಅಂತ ಮತ್ತೊಮ್ಮೆ ಹೇಳುತ್ತಾನೆ

ಹಿರಣ್ಯಕಶಿಪು ಅಣ್ಣಾವ್ರ ಶೈಲಿಯಲ್ಲಿ "ಬ್ರಹ್ಮದೇವ ನನ್ನ ಕೋರಿಕೆ ಹಾ.. " ಅನ್ನುವಾಗ ಬ್ರಹ್ಮ ನಾಲ್ಕನೇ ಕೈಯಿಂದ ಸರಸ್ವತಿ ಕೊಟ್ಟ ಚೀಟಿಯನ್ನು ಬೀಳಿಸುತ್ತಾನೆ.. ಅದರಿಂದ ಬೆಳಕೊಂದು ಹೊರಗೆ ಬಂದು ಹಿರಣ್ಯನ ಕಣ್ಣನ್ನು ಕೋರೈಸುತ್ತದೆ.. ಆ ಬೆಳಕನ್ನೇ ನೋಡುತ್ತಾ .. ತಪಸ್ಸು ಮಾಡುವಾಗ ಅರಮನೆಯಿಂದ ತಂದಿದ್ದ ಟ್ರಾಲಿ ಬ್ಯಾಗ್ ನೋಡುತ್ತಾ 

"ಬ್ರಹ್ಮದೇವ.. 
ವಾರದ ಆರಂಭವೇ ಆಗಲಿ 
ವಾರದ ಅಂತ್ಯವೇ ಆಗಲಿ 
ವಾರದ ಮಧ್ಯವೇ ಆಗಲಿ 
ವಾರದ ಒಳಗೆ ಆಗಲಿ 
ನೀನು ಸೃಷ್ಟಿಸಿರುವ ಅಣು ರೇಣು ತೃಣಕಾಷ್ಠಗಳ ಜೊತೆಯಲ್ಲಿ 
ಕಾರಿನಲ್ಲಿನಾಗಲಿ, ಬೈಕಿನಲ್ಲಾಗಲಿ
ರೈಲಿನಲ್ಲಿಯಾಗಲಿ, ವಿಮಾನದಲ್ಲಿಯಾಗಲಿ 
ಕ್ಯಾಬಿನಲ್ಲಾಗಲಿ, ಸೈಕಲ್ಲಿನಾಗಲಿ 
ಅನವರತ ನನ್ನ ಟ್ರಾಲಿ ಬ್ಯಾಗ್ ಸದಾ ಸುತ್ತುತ್ತಿರುವಂತೆ 
ಅನುಗ್ರಹಿಸು ದೇವಾ"

ಈ ಮಾತುಗಳನ್ನು ಕೇಳಿ ಸರಸ್ವತಿ ಹೆಬ್ಬೆರಳು ಮೇಲೆತ್ತಿ ಬ್ರಹ್ಮನ ಮೊಗವನ್ನು ನೋಡಿದಳು.. 

ಹಿರಣ್ಯಕಶಿಪುವಿನ ಮುಖಕ್ಕೆ ವಿರುದ್ಧವಾಗಿದ್ದ ಬ್ರಹ್ಮನ ನಾಲ್ಕನೇ ಮುಖ ಸರಸತಿಯನ್ನು ಕಂಡು ನಕ್ಕಿತು"

ಇತ್ತ ಸ್ವರ್ಗ ಮತ್ತು ಉಳಿದ ಲೋಕಗಳಲ್ಲಿ ಇದ್ದ ದೇವಾನುದೇವತೆಗಳು ಸಂತಸದಿಂದ ಉಫ್ ಒಂದು ಗಂಡಾಂತರದಿಂದ ಪಾರಾದೆವು ಎಂದು ಖುಷಿಪಟ್ಟರು.. 

ಮೇಕ್ ಮೈ ಟ್ರಿಪ್, ಯುಲೂ, ಉಬರ್, ಓಲಾ, ಕೆ ಎಸ್ ಆರ್ ಟಿ ಸಿ, ಇಂಡಿಯನ್ ರೈಲ್ವೆ, ಜೆಟ್ ಏರ್ವೇಸ್, ಇಂಡಿಯನ್ ಏರ್ಲೈನ್, ಹೀಗೆ ಹತ್ತಾರು ವಿಮಾನಯಾನದ ಕಂಪನಿಗಳು ತನ್ನ ಸಿಬ್ಬಂಧಿಗಳಿಗೆ ಮೂರು ತಿಂಗಳ ಬೋನಸ್ ಘೋಷಿಸಿತು.. 

ಕಾರಣ ಟ್ರಾಲಿ ಬ್ಯಾಗನ್ನೇ ಅಸ್ತ್ರವಾಗಿಟ್ಟುಕೊಂಡಿರುವ DFR DFR ನಾರದರಂತೆ ಲೋಕವೆಲ್ಲಾ ಸಂಚಾರ ಮಾಡಲು ಸಿದ್ಧವಾಗಿದ್ದರು.. 

DFR DFR ಅದ್ಭುತ ಪಯಣಿಗರು ನೀವು.. 
ನಿಮ್ಮ ಜನುಮದಿನಕ್ಕೆ ಇದಕ್ಕಿಂತ ಇನ್ನೇನು ಬರೆಯಲಿ.. ಪದಗಳು ಸಿಗುತ್ತಿಲ್ಲ.. 
ಅಣ್ಣಾವ್ರ ಕೋರಿಕೆಯಂತೆ ಭೂಮಂಡಲವನ್ನೆಲ್ಲಾ ಸುತ್ತುತ್ತಾ ಆಗಲೇ ಎಲ್ಲರ ಮನಗೆದ್ದಿರುವ ನೀವು ಇನ್ನಷ್ಟು ಪ್ರಸಿದ್ಧಿಯಾಗಿ.. ! ಸದಾ ಯಶೋವಂತೆ, ಕೀರ್ತಿವಂತೆಯಾಗಿ!!!


ಜನುಮದಿನದ ಶುಭಾಶಯಗಳು DFR DFR!