Friday, April 11, 2014

ಅಂಗಳದಲ್ಲಿ ಕನ್ನಡಿಯ ಬಿಂಬ.....!

"ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೇ.. ಮೌನ ಮರೆಯಲು ಮಧುರ ಗೀತೆಯ ಮತ್ತೆ ಹಾಡಿದು ಕೋಗಿಲೆ" ವಿಷ್ಣು ಅಭಿನಯದ ಚಿತ್ರಗಳಲ್ಲಿ ಹಾಡುಗಳು ಸುಮಧುರ ಎನ್ನಿಸುವಂಥಹ ಚಿತ್ರಗಳಲ್ಲಿ "ಮತ್ತೆ ಹಾಡಿದು ಕೋಗಿಲೆ" ಚಿತ್ರವೂ ಒಂದು.

"ವಸಂತ ಮಾಸ ಬಂದಾಗ ಮಾವು ಚಿಗುರಲೇ ಬೇಕು" ಅಣ್ಣಾವ್ರ ಸುಮಾರಾದ ಚಿತ್ರಗಳಲ್ಲೂ ಹಾಡುಗಳು ಭರ್ಜರಿಯಾಗಿರುತ್ತಿದ್ದವು. ಅಂತಹ ಒಂದು ಸುಮಾರಾದ ಚಿತ್ರ "ಗುರಿ". ಆದರೆ ಎಲ್ಲಾ ಹಾಡುಗಳು ಸೂಪರ್ ಹಿಟ್.

"ಅಣ್ಣಾ.. ಏನಾಗಿದೆ ನಿಮಗೆ.. ಅಮಾವಾಸ್ಯೆ ಈಚಿಗೆ ತಾನೇ ಕಳೆಯಿತು.. " ತಂಗಿಯಾಗಿ ಬಂದು ಮಗಳೇ ಆಗಿ ಹೋಗಿರುವ ಮುದ್ದು ಪುಟಾಣಿ ಕಿರುಚುತಿತ್ತು..

"ಇರೋ.... ನಿನ್ನ ಗೊಂದಲ ಅರ್ಥವಾಗುತ್ತಿದೆ.. ಅಲ್ಲಿಗೆ ಬರುತ್ತೇನೆ ಎಂದು ಹೊರಟೆ.

                                                                              ***

"ಶ್ರೀಕಾಂತ್. ಮಂಜುನಾಥ್ ಸರ್ .. . ಸೂಪರ್ ಸರ್... ಸುಂದರ ಮಾತುಗಳು... "

"ಶ್ರೀಕಾಂತ್ ಅಣ್ಣ.. ಸೂಪರ್ ಮಾತುಗಳು.. ಸೂಪರ್ ಕಾಮೆಂಟ್"

"ಶ್ರೀಕಾಂತಣ್ಣ.. ನಿಮ್ಮ ಮಾತುಗಳು ಕೇಳೋಕೆ ತುಂಬಾ ಇಷ್ಟವಾಗುತ್ತದೆ"

"ಅಣ್ಣಾ.. ನಿಮ್ಮ ಪ್ರತಿಕ್ರಿಯೆ ಸೂಪರ್ ಇರುತ್ತೆ ... ಹೇಗೆ ಬರೆಯುತ್ತೀರಿ"

ಅರೆ ಇದೇನು ರಾಮ ಕೋಟಿ ಅಂದು ಕೊಂಡಿರಾ.. ಇಲ್ಲ ಇಲ್ಲ

ನನ್ನ ಪುಟ್ಟಿ ನನ್ನ ಜೊತೆ ಮಾತಾಡಲು ಆರಂಭಿಸಿದ್ದು ಹೀಗೆ.. ಡಾರ್ವಿನ್ ಸಿದ್ಧಾಂತದ ಹಾಗೆ ಹಂತಹಂತವಾಗಿ ವಿಕಸಿತವಾಗಿ ಉದ್ದನೆಯ ಹೆಸರು ಅದಕ್ಕೆ ಇರುವ ಬಾಲಂಗೋಚಿ ಕ್ರಮೇಣ ಮರೆಯಾಗಿ.. ಈಗ ಬರಿಯ ಅಣ್ಣನಾಗಿ ಉಳಿದುಕೊಂಡಿರುವ ನನಗೆ ಸಿಕ್ಕ ಒಂದು ಅದ್ಭುತ ಕನ್ನಡಿ ನನ್ನ ಪ್ರೀತಿಯ ಪುಟ್ಟಿ..

ಅಣ್ಣ ನಿಮ್ಮೊಬ್ಬರನ್ನೇ ನಾ ಬರಿ ಅಣ್ಣಾ ಎನ್ನುವುದು.. ಅಂತ ಹೇಳುತ್ತಲೇ ಮನಸ್ಸನ್ನಾವರಿಸಿದ ಸುಮಧುರ ಮನಸ್ಸಿನ ಪ್ರತಿಬಿಂಬ ಈ ಪುಟ್ಟಿ  .. ಪ್ರೀತಿಯಿಂದ .......  ಎನ್ನುವ ನಾನು ಸುಮಾರು ಬಾರಿ ಯೋಚಿಸಿದೆ.. ಇವಳು ಏಕೆ ನನ್ನ ಪ್ರತಿಬಿಂಬವಾದಳು ..  ಹೀಗೆ ಆದಳು.. ಹೇಗೆ ಆದಳು  ಅಂಥಾ... ಅದಕ್ಕೆ ಅವಳೇ ಕೊಟ್ಟ ಉತ್ತರ..

"ಅಣ್ಣ ಇನ್ನು ಮೇಲೆ.. ನೀವು ಬ್ಲಾಗ್ ಓದಿ ಕಾಮೆಂಟ್ ಹಾಕಿದರೆ.. ನಾ ಹಾಕೋಲ್ಲ ... ಇಲ್ಲವೇ ನೀವು ಬರೆದ ಕಾಮೆಂಟ್ ಓದದೆ ನಾ ಕಾಮೆಂಟ್ ಹಾಕುವೆ.. " ಅಷ್ಟು ಒಂದಕ್ಕೊಂದು ತಾಳೆಯಾಗುತ್ತಿತ್ತು ನಮ್ಮ ಮಾತುಗಳು.. ಪ್ರತಿ ಬ್ಲಾಗಿನಲ್ಲೂ ನಾವಿಬ್ಬರು ಪೈಪೋಟಿ ಮಾಡುತ್ತಿದ್ದೆವು ಯಾರು ಮೊದಲು ಕಾಮೆಂಟ್ ಮಾಡುತ್ತಾರೆ ಎಂದು.. ಯಾಕೆ ಅಂದ್ರೆ ಇಬ್ಬರೂ ೫೦ ಕಿಮಿ ದೂರದಲ್ಲಿ ಕೂತಿದ್ದರೂ ಬರೆಯುತ್ತಿದ್ದ ಭಾವಗಳು.. ಪಸರುತ್ತಿದ್ದ ಪದಗಳು.. ಒಂದೇ "ಮುಖ"ದ ನಾಣ್ಯಗಳಾಗುತ್ತಿದ್ದವು..

ಇಂತಹ ಸುಮಧುರ ಸಹೋದರಿಯನ್ನು ಕೊಟ್ಟ ಆ ಮಾತಾ ಪಿತೃಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.. ಇಂತಹ ಒಂದು ಕಲಾ ಸಾಗರಕ್ಕೆ ನಾ ಅಣ್ಣ ಎನ್ನುವ ಭಾವವೇ ನನಗೆ ಕೊಂಬು ಮೂಡಿಸುತ್ತದೆ.. ಕಲೆ, ಚಿತ್ರಕಲೆ, ಕಾಫಿ ಕಲೆ, ಕಸೂತಿ, ರಂಗವಲ್ಲಿ, ಗೋಡೆಯ ಮೇಲೆ ಬಿಡಿಸುವ ಕಲೆ.. ದಾರ, ಬಳೆ, ಪ್ಲಾಸ್ಟಿಕ್., ಟಿಶ್ಯೂ ಕಾಗದ.. ಅಯ್ಯೋ ಇವಳ ಕೈಯಲ್ಲಿ ಏನು ಸಿಕ್ಕರೂ.. ಆ ಪದಾರ್ಥಗಳೇ ಶರಣಾಗಿ ತಮ್ಮ ರೂಪವನ್ನು ಬಿಟ್ಟುಕೊಟ್ಟು ಇನ್ನೊಂದು ಸುಂದರ ಪರಕಾಯ ಪ್ರವೇಶ ಮಾಡಲು ಅಣಿಯಾಗುತ್ತವೆ. 

ಆನೆ ನೆಡೆದು ಹೋದರೆ ಮಿಕ್ಕ ಪ್ರಾಣಿಗಳಿಗೆ ದಾರಿ ಅನಾಯಾಸ ಎಂದು ಹೇಳುತ್ತಾರೆ.. ಹಾಗೆ ಪ್ರತಿಭಾ ಗಜ ಪರ್ವತ ನನ್ನ ಮುದ್ದಿನ ಪುಟ್ಟಿ. ಇವಳ ಪ್ರತಿಭೆ ದಾಖಲಿಸುತ್ತಾ ಹೋದರೆ ಈ ಲೇಖನ ಮಹಾಭಾರತವಾಗುತ್ತದೆ..

ಇಂದು ಈ ಪುಟ್ಟಿಯ ಜನುಮದಿನ.. ತನ್ನ ಅಂಗಳದಲ್ಲಿ ನನಗೆ ಅಣ್ಣನ ಸ್ಥಾನ ಕೊಟ್ಟು.. ನಾವಿಬ್ಬರೂ ಅಣ್ಣ ತಂಗಿಯರಷ್ಟೇ ಅಲ್ಲದೆ ಬಿಂಬ ಪ್ರತಿಬಿಂಬ ಆಗಿರುವ ನಮಗೆ.. ಜನುಮದಿನದ ಶುಭಾಷಯಗಳನ್ನು ಹೇಳಿದರೆ.. ನನಗೆ ನಾನೇ ಹೇಳಿಕೊಂಡಂತೆ.

ದೇವರಿಗೆ ನಾ ಕೈಮುಗಿದರೆ ಅವಳು ಮುಗಿದಂತೆ.. ಅವಳು ಪ್ರಾರ್ಥಿಸಿದರೆ ನಾ ಪ್ರಾರ್ಥಿಸಿದಂತೆ..

ಭಗವಂತ ಇಂತಹ ಸುಮಧುರ ಪ್ರತಿಭಾ ಪರ್ವತ ನನಗೆ ಅಣ್ಣನ ಸ್ಥಾನ ನೀಡಿದ ಈ ಗುಣದ ಗಣಿಯ ಜೀವನದ ಅಂಗಳದಲ್ಲಿ ಅಚ್ಚಳಿಯದ ರಂಗವಲ್ಲಿ ಎಂಬ ಸುಖ,  ಸಂತೋಷ,  ಆರೋಗ್ಯ,  ಕೀರ್ತಿ ಹಾಗೆಯೇ ತನ್ನ ಕಲೆ ವಿಶ್ವದ ಮೂಲೆ ಮೂಲೆಯಲ್ಲೂ ಅರಳುವಂತೆ ಮಾಡುವ ಹೊಣೆ ನಿನ್ನದು ಎನ್ನುವ ಆಶಯ ನನ್ನದು...

ಈ ಪುಟ್ಟಿ ಬ್ಲಾಗ್ ಲೋಕದ ಕರಿಘಟ್ಟ ಪ್ರವಾಸದ ತಿರುವುಗಳಲ್ಲಿ ಸಿಕ್ಕ ಸುಮಧುರ ಅಂಗಳದ ಒಡತಿ..

ನೀನು ನಿನ್ನ ಜೀವನದ ತಿರುವುಗಳಲ್ಲಿ ಸದಾ ನಗುತ್ತಿರು..

ಹುಟ್ಟು ಹಬ್ಬದ ಶುಭಾಶಯಗಳು ಸಂಧ್ಯಾ ಪುಟ್ಟಿ..

ಛಾಯಾಗ್ರಾಹಕರು - ಶಿವೂ ಸರ್
(ಅಪ್ಪಣೆ ಇಲ್ಲದೆ ಸಂಧ್ಯಾ ಪುಟ್ಟಿ ಪ್ರೊಫೈಲ್ ನಿಂದ ತೆಗೆದು ಹಾಕಿರುವೆ.. 
ಕ್ಷಮೆ ಕೇಳಿದರೆ ನನಗೆ ನಾನೇ ಕ್ಷಮೆ ಕೇಳಿದ ಹಾಗೆ.. ಹ ಹ ಹ )
                                                                              
                                                                             **** 
ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೇ 
ವಸಂತ ಕಾಲದ ಬಂದಾಗ.. ಗುರಿಯ ಸೇರಲೇ ಬೇಕು
ಅಂಗಳದಲ್ಲಿ ರಂಗವಲ್ಲಿ ಮೂಡಲೇ ಬೇಕು 
ಸಂಧ್ಯೆಯ ರಂಗು ರಂಗವಲ್ಲಿಯಾಗಲೇ ಬೇಕು 
ಸಂಧ್ಯೆಯಂಗಳದಿ ನಲಿವ ಹೂವಾಗಲೇ ಬೇಕು.. 

ಅಣ್ಣಾ... !!!!!!!

ಮಾತಿಲ್ಲಾ ಕಥೆಯಿಲ್ಲ ಬರಿ ರೋಮಾಂಚನ.. 

****