Saturday, April 6, 2019

ಮನದ ತಂತಿ ಮೀಟುವ ತಂತಿಸೇವೆ!!!

"ಸರ್ ಒಬ್ಬರು ಬರ್ತಾಲೆ ಇದ್ದಾರೆ.. ಇಲ್ಲ ಆ ರೀತಿಯ ವ್ಯವಸ್ಥೆ ಈಗ ಇಲ್ಲ ಅಂದ್ರೂ ಕೇಳಿಲ್ಲ.. ಹೇಳಿ ಹೇಳಿ ಸಾಕಾಗಿದೆ.. ನೀವೊಮ್ಮೆ ಹೇಳಿ ಸರ್.. "

ಆ ಜಮಾನದವರಿಗೆ ಬಂದವರು ಯಾರು ಅಂತ ಗೊತ್ತಿತ್ತು.. ಆದರೆ ಬದಲಾದ ಜಮಾನಕ್ಕೆ ಆ ವ್ಯಕ್ತಿ ಯಾರೂ ಅನ್ನುವ ಗೊಂದಲವಿದ್ದರೂ.. ಕೆಲಸದ ಒತ್ತಡ.. ಅಂಗೈಯಲ್ಲಿಯೇ ಅರಮನೆ ಕಟ್ಟುವ ಉಸಾಬರಿ..  ಎದೆಗಾರಿಕೆ ಇದ್ದರೂ.. ಬಂದವರಾರೂ ಎನ್ನುವ ಅರಿವಿರಲಿಲ್ಲ.. ಹಾಗಾಗಿ ಎಲ್ಲರಿಗೂ ಹೇಳುವ ಹಾಗೆ ಅದೇ ಧಾಟಿಯಲ್ಲಿಯೇ ಉತ್ತರ ಕೊಟ್ಟಿದ್ದರು..

ಆದರೆ ಬಂದ ವ್ಯಕ್ತಿ ಸಮಚಿತ್ತದಿಂದ.. ಆತನ ಎಲ್ಲಾ ಮಾತುಗಳನ್ನು ಕೇಳುತ್ತಾ.. ಮತ್ತೆ ಮುಂದಿನ ಕೌಂಟರ್ ಹತ್ತಿರ ಇದ್ದ ಮ್ಯಾನೇಜರ್ ಹತ್ತಿರ ಮಾತಾಡೋಕೆ ಹೋದರು..

ಆತ ಗುರುತು ಹಿಡಿದ.. "ಬನ್ನಿ ಸರ್ ಕುಳಿತುಕೊಳ್ಳಿ.. ಏನು ಸಮಾಚಾರ.. ಏನಾಗಬೇಕಿತ್ತು.. ಹೇಳಿ.. ಅದು ಬಿಡಿ ಆತ ಸ್ವಲ್ಪ ಮುಂಗೋಪಿ.. ಅವರ ಪರವಾಗಿ ನಾ ಕ್ಷಮೆ ಕೋರುತ್ತೇನೆ.. ಬಿಡಿ.. ಅದರ ಬಗ್ಗೆ ಯೋಚನೆ ಬೇಡ.. ಹೇಳಿ ಏನು ಸಹಾಯಬೇಕು.. ನನ್ನಿಂದ ಏನಾಗಬೇಕು ಹೇಳಿ.."

"ಈ ಪತ್ರವನ್ನು ತಂತಿ ಮೂಲಕ ತಲುಪಿಸಬೇಕು.. ತಂತಿ ಸೇವೆ ನಿಂತು ಹೋಗಿದೆ ಅಂತ ನನಗೆ ಹೇಗೆ ತಿಳಿಯಬೇಕು.. ಆದರೆ ಬೇಜಾರಿಲ್ಲ.. ಆದರೆ ಇದೊಂದು ವಿಷಯಕ್ಕೆ ತಂತಿ ಸೇವೆಗೆ ಅನುಕೂಲಮಾಡಿ ಕೊಡಬಹುದೇ.. ಹೇಳಿ"

ಚಿತ್ರಕೃಪೆ : ಗೂಗಲೇಶ್ವರ 

"ಸರ್ ನೀವು ಇಷ್ಟು ಕೇಳಿಕೊಳ್ಳಬೇಕೇ.. ಹೌದು ತಂತಿ ಸೇವೆ ಲಭ್ಯವಿಲ್ಲ.. ಆದರೆ ಆ ಯಂತ್ರ ಚಾಲನೆಯಲ್ಲಿಯೇ ಇದೆ.. ಜೊತೆಯಲ್ಲಿ ತಂತಿ ಸೇವೆ ಮಂಡಲಿಗೆ ನಾನು ಅಧ್ಯಕ್ಷ ಆಗಿರೋದರಿಂದ.. ಒಂದು ವಿಶೇಷ ಸೌಲಭ್ಯವಿದೆ… ಅದನ್ನು ಉಪಯೋಗಿಸಬಹುದು… ಬನ್ನಿ ಮಾಡೋಣ.. ಕೊಡಿ ನಿಮ್ಮ ಪತ್ರ.. ಆದರೆ ಇದಕ್ಕೆ ನಿಮ್ಮ ಬಳಿ ದುಡ್ಡು ಪಡೆದುಕೊಳ್ಳೋಲ್ಲಾ… ಎರಡು ಕಾರಣಕ್ಕೆ.. ಒಂದು ತಂತಿ ಸೇವೆ ನಿಂತಿರುವುದರಿಂದ.. ಅದರಲ್ಲಿ ಬಂದ ಹಣವನ್ನು ಎಲ್ಲೂ ತೋರಿಸಲಿಕ್ಕೆ ಆಗೋಲ್ಲ.. ಎರಡನೆಯದು ನೀವು ನನ್ನ ಮೆಚ್ಚಿನ ವ್ಯಕ್ತಿ ಹಾಗಾಗಿ. ನಿಮ್ಮ ಬಳಿ ದುಡ್ಡು ಪಡೆಯೋಲ್ಲ.. "

"ಸರಿ ಕಣಪ್ಪ.. ನಿಮ್ಮಿಚ್ಛೆಯಂತೆಯೇ ಆಗಲಿ.. ಇದೆ ಆ ಪತ್ರ ತೆಗೆದುಕೊಳ್ಳಿ.. ಹಾಗೆ ಟಂಕಿಸಿ ಕಳಿಸಿ.."

ಚಿತ್ರಕೃಪೆ : ಗೂಗಲೇಶ್ವರ 

ಮ್ಯಾನೇಜರ್ ಆ ಪತ್ರವನ್ನು ಓದುತ್ತಾ ಓದುತ್ತ ಅವರ ಮನಸ್ಸು ಅರಳಿತು..

 ತಂತಿಯನ್ನು ಟಂಕಿಸಿ.. "ಒಮ್ಮೆ ನೋಡಿ ಸರಿಯಾಗಿದೆಯೇ" ಎಂದರು.. ಆ ವ್ಯಕ್ತಿ ಕನ್ನಡಕ ಸರಿ ಮಾಡಿಕೊಳ್ಳುತ್ತಾ ತುಸು ಜೋರಾಗಿಯೇ ಓದಿದರು...

                                                                  *******
ಪದಗಳ ವಿಸ್ತಾರ ಹಾಕುತ್ತಾ
ಅರ್ಥಗಳ ವಿಸ್ತಾರವನ್ನು ಹೆಚ್ಚಿಸುತ್ತ
ಹೆಚ್ಚಿದ ಭಾವವನ್ನು ಅನುಭವಿಸುತ್ತಾ
ಅನುಭವವನ್ನು ವಿವರಿಸುತ್ತಾ ಸಾಗಿದ ಮಂಕುತಿಮ್ಮ।।


ಜೀವನದಲ್ಲಿ ಸಿಕ್ಕಿದ ನೋವು ನಲಿವುಗಳಲ್ಲಿ
ನಲಿವನ್ನು ಪದಗಳಾಗಿ ಜೋಡಿಸುತ್ತ
ಜೋಡಿಸಿಕೊಂಡ ಜೀವನದಿ
ಜೀವ ನದಿಯನ್ನು ಹರಿಸುತ್ತಾ ಸಾಗಿಸುವ ಮಂಕುತಿಮ್ಮ।।

"ಪ್ರೀತಿಯ ರವಿ.. ನಿನ್ನ ಜನುಮದಿನಕ್ಕೆ ಈ ತಂತಿಸೇವೆಯಿಂದ ಸಂದೇಶ ಕಲಿಸೋಣ ಅಂತ ಪ್ರಯತ್ನ ಪಟ್ಟೆ.. ಆದರೆ ದಿನವೂ ಈ ಅಂಚೆ ತಂತಿ ಕಚೇರಿಗೆ ಬರೋದು.. ದಿನವೂ ಇವರ ಅದೇ ಉತ್ತರವನ್ನು ಕೇಳೋದು.. ವಾಪಾಸ್ ಹೋಗೋದು ಇದೆ ಆಯಿತು.. ಮಾರ್ಚ್ ಇಪ್ಪತ್ತೊಂದರಿಂದ ದಿನವೂ ಇದೆ ಕತೆಯಾಗಿತ್ತು.. ನಿನ್ನೆ ಏಪ್ರಿಲ್ ಐದರಂದು.. ಮತ್ತೊಮ್ಮೆ ಪ್ರಯತ್ನ ಮಾಡೋಣ ಅಂತ ಬಂದಾಗ ನನ್ನ ಹಳೆ ಶಿಷ್ಯ ಸಿಕ್ಕಿದ.. ಅವನ ಮೂಲಕ ನಿನಗೆ ಜನುಮದಿನದ ಶುಭಾಶಯಗಳನ್ನು ತಲುಪಿಸುತ್ತಿದ್ದೇನೆ.. ಹೌದು ಅವತ್ತೇ ಬರಬೇಕಿತ್ತು.. ಆದರೂ ನನ್ನನ್ನು ಗುರು ಎಂದು ಪೂಜಿಸುವ ನಿನಗೆ ನನ್ನ ಆಶೀರ್ವಾದ ಸದಾ ಇದ್ದೆ ಇರುತ್ತದೆ.. ತಡವಾದರೇನು.. ಅಡೆತಡೆಯಿಲ್ಲದೆ ಬರುವ ಸಿಗುವ ನನ್ನ ಆಶೀರ್ವಾದ ಸದಾ ನಿನಗೆ.. "

"ಜನುಮದಿನದಂದು ನಿನ್ನ ನೆಚ್ಚಿನ ಗೆಳೆಯರು, ಸಹೋದರ ಸಹೋದರಿಯರ ಶುಭಾಶಯಗಳ ಅಲೆಗಳಲ್ಲಿ ನೀ ಕೊಚ್ಚಿ ಹೋಗಿದ್ದು ನನ್ನ ಶಿಷ್ಯನಿಂದ ಗೊತ್ತಾಯಿತು.. ಮತ್ತೊಮ್ಮೆ ನನ್ನ ಕಡೆಯಿಂದ.. ಜನುಮದಿನದ ವರ್ಷ ಸುಂದರವಾಗಿರಲಿ.. ನಿನ್ನ ಆರೋಗ್ಯ, ಐಶ್ವರ್ಯ, ಪ್ರೀತಿ, ಮಮತೆ ಎಲ್ಲವೂ ವೃದ್ಧಿಯಾಗಲಿ.. ಶುಭವಾಗಲಿ.. "

ಇಂತಿ ನಿನ್ನ ಪ್ರೀತಿಯ ಗುರು 
ಡಿ ವಿ ಜಿ
                                                                     *****

ಮ್ಯಾನೇಜರ್ ಈ ತಂತಿ ಸೇವೆಯನ್ನು ಶ್ರೀ ರವಿ ತಿರುಮಲೈ ಅವರಿಗೆ ತಲುಪಿಸುವ ಕಾರ್ಯವನ್ನು ಸರಾಗವಾಗಿ ಮುಗಿಸಿದರು..

                                                                    ********
"ಗುರುಗಳೇ ಜನುಮದಿನಕ್ಕೆ ಶುಭಾಶಯಗಳನ್ನು ತಲುಪಿಸಲು ಬಹಳ ತಡವಾಯಿತು… ಕಾರಣಗಳು ನೂರಾರು.. ತಡವಾಗಿದೆ ಎನ್ನೋದು ನಿಜ.. ತಡವಾದ ಶುಭಾಶಯಗಳನ್ನು ಒಪ್ಪಿಸಿಕೊಳ್ಳಿ.. ಹರಸಿ.. ಆಶೀರ್ವದಿಸಿ.. ಶುಭವಾಗಲಿ !!!"

2 comments:

  1. Late ಇಲ್ಲ ಶ್ರೀಮಾನ್,
    ತಿರುಮಲೈ ಸಾರ್ ಅವರದು ತಿರುಮಲೇಶನ ಹಾಗೆಯೇ ನಿತ್ಯೋತ್ಸವ ಸಡಗರ. ಅವರ ಜನುಮದಿನ ಒಂದು ದಿನಾಂಕದಿಂದ ಬರುವ ವರ್ಷದ ಆ ದಿನಾಂಕದವರೆಗೆ ಪ್ರೀತಿಯಿಂದ ಆಚರಿಸಿಕೊಳ್ಳಬಹುದಾದ್ದು.

    ಕಗ್ಗವನ್ನು ಒಲುಮೆಯಿಂದ ಉಣಬಡಿಸುವ ಅವರ ಸರಳತೆಗೆ ನಾವು ಎಂದೂ ಶರಣು.

    ಒಳ್ಳೆಯ ಬರಹ.

    ReplyDelete
  2. ನಿಮ್ಮ ಪ್ರೀತಿಗೆ ಶರಣು. ಯಾವ ಜನ್ಮದ ಪುಣ್ಯವೋ ನಿಮ್ಮಂತಹವರ ಸ್ನೇಹ ದೊರಕಿದೆ. ಪರಮಾತ್ಮ ನಿಮಗೆ ಸನ್ಮಂಗಳವನ್ನುಂಟುಮಾಡಲಿ. ನಮಸ್ಕಾರ

    ReplyDelete