Sunday, November 27, 2016

೩ಕೆ..... ಭಾವ ಹಾಸ್ಯ ಕವಿಯಾನದಲ್ಲಿ....!

ಬಾಲ್ಯದಲ್ಲಿ ಕಲ್ಲು, ಮಣ್ಣು, ಕಡ್ಡಿ, ಕಸ ಎಲ್ಲವನ್ನೂ ಸೇರಿಸಿಕೊಂಡು ಮನೆ ಕಟ್ಟುವ ಆಟ, ಇಲ್ಲವೇ ಅಡಿಗೆ ಗುಡಿಗೆ ಆಟ.. ಇವೆಲ್ಲವೂ ನಮ್ಮ ಶಕ್ತ್ಯಾನುಸಾರ ಸಿಕ್ಕ ಪರಿಕರಗಳಲ್ಲಿ ನಮ್ಮ ಮನಸ್ಸಿಗೆ ಸಂತಸ ಕೊಡುವ ರೀತಿಯಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡು ಬಂದಿದ್ದ ನೆನಪು ಎಲ್ಲರಿಗೂ ಇದ್ದೆ ಇದೆ.

ಕನ್ನಡದ ವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ಒಂದು ಸವಿ ಮುತ್ತಿನಹಾರದಂತೆ ಪೋಣಿಸಿ ತಾಯಿ ಭುವನೇಶ್ವರಿಗೆ ಒಂದು ಮಾಲೀಕೆಯನ್ನು ಅರ್ಪಿಸುವುದು ಅಡಿಗೆ ಗುಡಿಗೆ ಆಡಿದಷ್ಟೇ ಸುಲಭ ಅನ್ನಿಸಿದರೂ, ಅದಕ್ಕೆ ಬೇಕಾಗುವ ಪರಿಶ್ರಮ, ಶಿಸ್ತು, ತಮ್ಮ ಕಾರ್ಯದಲ್ಲಿನ ಅಚಲವಾದ ನಂಬಿಕೆಗಳು ಬೆಟ್ಟದಷ್ಟೇ ಎತ್ತರಕ್ಕೆ ಇರಬೇಕು.

ನಾ ಕಂಡ ಹಾಗೆ ನಾಲ್ಕು ವರ್ಷಗಳಿಂದ ಈ ಸುಂದರ ಮನದ ತಂಡವನ್ನು ಗಮನಿಸಿಕೊಂಡು ಬರುತ್ತಿದ್ದೇನೆ.. ಇಲ್ಲಿ ನನಗೆ ಅನ್ನಿಸಿದ್ದು ಹೀಗೆ.....

ಇರುವೆ ಸಾಲುಗಳನ್ನು ನೋಡಿದಾಗ ನಮ್ಮ ಅನುಭವಕ್ಕೆ ಬರುತ್ತದೆ.. ಶಿಸ್ತು ಬದ್ಧ ಸರತಿ ಸಾಲಿನಲ್ಲಿ ಚಲಿಸುತ್ತವೆ, ಅವಕ್ಕೆ ಒಬ್ಬ ಮುಂದಾಳತ್ವ ಹೊರುವ ನಾಯಕ ಇರುತ್ತಾನೆ. ಅವನ ಮಾರ್ಗದರ್ಶನದಲ್ಲಿ ಸಾಗುತ್ತವೆ.. ಜೊತೆಯಲ್ಲಿಯೇ ತಾವು ಮಾಡಬೇಕಾದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತವೆ.. ಎಲ್ಲವೂ ಈ ಕಾರ್ಯದಲ್ಲಿ ಭಾಗಿಯಾಗಿರುತ್ತವೆ,   ಕೆಲಸ ಮಾಡುತ್ತಾ ನಿರ್ಧರಿಸುವುದಿಲ್ಲ, ನಿರ್ಧರಿಸಿ ಕೆಲಸಕ್ಕೆ ಕೈಹಾಕುತ್ತವೆ..  ಎಲ್ಲರಿಗೂ ಸಮಾನ ಜವಾಬ್ಧಾರಿಗಳು ಇರುತ್ತವೆ.. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ..ತಮ್ಮ ಕೆಲಸ ಮುಗಿದಾಗಷ್ಟೇ ಇವು ಕೊಂಚಕಾಲ ವಿರಮಿಸಿಕೊಳ್ಳುತ್ತವೆ..

ಹಾಗೆ ನಮ್ಮ ಸುಂದರ ಮನದ ೩ಕೆ ತಂಡ ಕೂಡ..

ಕನ್ನಡ ತಾಯಿಗೆ ಅಕ್ಷರಗಳ ಪುಷ್ಪಮಾಲಿಕೆಯನ್ನು ಅರ್ಪಿಸಲು ನಿರ್ಧರಿಸಿದ ದಿನಾಂಕ ೨೬. ೧೧. ೨೦೧೬ ಶನಿವಾರ. ಆದರೆ ಇದಕ್ಕೆ ಪೂರ್ವಸಿದ್ಧತೆ ಹಲವು ವಾರಗಳ ಮುಂಚೆಯೇ ನಿರ್ಧರಿತವಾಗಿತ್ತು. ಕವಿತೆಗಳನ್ನು ರಚಿಸಲು ಪ್ರೇರೇಪಿಸಿ, ಅದಕ್ಕೆ ಸೂಕ್ತ ಬಹುಮಾನವನ್ನು ರೂಪಿಸಿ, ಆಯ್ಕೆಯಲ್ಲಿ ಮೊದಲ ಸಾಲಿನಲ್ಲಿ ನಿಂತ ಕವಿತೆಗಳನ್ನು ವಾಚಿಸುವ ಅವಕಾಶ ಕೊಟ್ಟು, ತಾವು ಮಾತ್ರ ವೇದಿಕೆಯ ಒಂದು ಮೂಲೆಯಲ್ಲಿ ನಿಂತು ಸಂತಸ ಪಡುವ ಮಲ್ಲಿಗೆ ಹೂವಿನ ಮನಸ್ಸು ಈ ತಂಡದ್ದು.

ಆಹ್ವಾನಿಸಿದ ಕವಿತಾ ತರಂಗಳಲ್ಲಿ ಕೆಲವು ತರಂಗಳನ್ನು ಆರಿಸಿ, ಆ ಕವಿತೆಗಳ ಮೇಲೆ ತೇಲುವ ಮನಸ್ಸು ಮಾಡಿದ್ದು ಸುಂದರವಾದ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿತ್ತು. ಆರಂಭಿಕ ಪ್ರಾರ್ಥನೆ ಗೀತೆ, ದೀಪಬೆಳಗುವ ಶುಭ ಕಾರ್ಯ, ನಂತರ ಕವಿತಾ ವಾಚನ. ಹೀಗೆ ಶುರುವಿಟ್ಟು ಈ ಸುಂದರ ಕ್ಷಣಗಳನ್ನು ನಗೆಗಡಲಿಗೆ ಕೊಂಡಯ್ದದ್ದು ಕನ್ನಡ ಕೈ ಬಿರುದಾಂಕಿತ ಟಿಪಿಕಲ್ ಅಥವಾ ಟಿ ಪಿ ಕೈಲಾಸಂ ಅವರ ಹೊತ್ತಿಗೆಗಳಿಂದ ಮಸ್ತಕಕ್ಕೆ ನಶೆ ಏರಿಸುವ ಹಾಸ್ಯ ಪ್ರಸಂಗಗಳು. ಅಚ್ಚುಕಟ್ಟಾಗಿ ಮಾತಾಡಿದ ಹೆಮ್ಮೆಯ ಗುರುಗಳು ಶ್ರೀ ಮಂಜುನಾಥ್  ಕೊಳ್ಳೇಗಾಲ ಅವರು, ಆ ಕ್ಷಣಕ್ಕೆ ನಮ್ಮನ್ನು ಟಿಪಿಕಲ್ ಕಾಲಘಟ್ಟಕ್ಕೆ ಕರೆದೊಯ್ದಿದ್ದರು.

ನಮ್ಮ ಹೆಮ್ಮೆಯ ಗುರುಗಳ ಭಾಷೆ, ಅದರ ಪ್ರಯೋಗ, ಹಾಸ್ಯವನ್ನು ಹಾಸ್ಯವಾಗಿಯೇ ಹೇಳುವ ಅವರ ಶೈಲಿ, ಅದ್ಭುತ ಎನ್ನಿಸಿತು, ಕೈಲಾಸಂ ಅವರ ಅನೇಕ ಪ್ರಹಸನಗಳ ತುಣುಕನ್ನು ನಮ್ಮ ಕಣ್ಣ ಮುಂದೆ, ಕಿವಿಯ ತಮಟೆಯ ಮೇಲೆ ಹಾಗೆ ತಂದು ಕೂರಿಸಿದ್ದು, ನಮ್ಮ ಗುರುಗಳ ಭಾಷೆಯ ಮೇಲಿನ ಹಿಡಿತಕ್ಕೆ ಒಂದು ಸಾಕ್ಷಿ. ಇನ್ನೂ ಕೇಳುವ ಹಂಬಲ ಇತ್ತು, ಅದನ್ನು ಅರಿತೋ ಏನೋ, ಕೈಲಾಸಂ ಅವರ ಒಂದು ಪ್ರಹಸನವನ್ನು ೩ಕೆ ತಂಡದ ಪಟಾಲಂಗಳನ್ನು ಬಳಸಿಕೊಂಡು ರಂಗಕ್ಕೆ ತರುವ ಹಂಬಲ ಇದೆ ಎಂದಾಗ.. ಇಡೀ ೩ಕೆ ತಂಡವೇ ಓಕೆ ಎಂದು ಅಂಗೀಕರಿಸಿತು. ಆ ಮಹತ್ ಸಮಯಕ್ಕೆ ಕಣ್ಣು ಕಿವಿ ಬಿಟ್ಟುಕೊಂಡು ಕಾಯುತ್ತಿದ್ದೇನೆ!

ಅಮ್ಮ ಅಂದರೆ ಅಮ್ಮ, ಅಪ್ಪ ಅಂದರೆ ಅಪ್ಪ, ಯಾನ ಅಂದರೆ ಪ್ರಯಾಣ ಎಂಬ ಮಾತುಗಳಷ್ಟೇ ಗೊತ್ತಿದ್ದ ನಮಗೆ, ಅಮ್ಮ ಅಂದರೆ ತನ್ನ ಕಂದನಿಗೆ ಸಿಹಿ ಸುಳ್ಳುಗಳನ್ನು ಹೇಳಿ, ಭರವಸೆ ತುಂಬಿ ಮಕ್ಕಳಿಗೆ ಉದಾತ್ತ ಮನಸ್ಸನ್ನು ಬೆಳೆಸುವ ಒಂದು ಮಮತಾ ಮಯಿ ಎಂದು ತೋರಿಸುವ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಕತೃ.
ಅಪ್ಪ ಎಂದರೆ ಶಕ್ತಿ ಯುಕ್ತಿ ತುಂಬಿಸಿ ಹುರಿದುಂಬಿಸಿ ಆಕಾಶದಷ್ಟೇ ವಿಶಾಲ ತನ್ನ ಮನಸ್ಸು ಎಂದು ತೋರಿಸುವ "ಅಪ್ಪ ಅಂದರೆ ಆಕಾಶ".. ಬರಿ ಯಾನ ಮಾಡಬೇಡಿ, ಭಾವ ತೀರದಲ್ಲಿ ಪಯಣಿಸಿ ಎಂದು ಹೇಳುತ್ತಲೇ "ಭಾವ ತೀರಾ ಯಾನ" ಹೊತ್ತಿಗೆಯನ್ನು ತಂದು, ಹಾಡು ಹುಟ್ಟುವಾಗ ಸಂದರ್ಭ ಹೇಗಿರುತ್ತದೆ ಎಂದು "ಹಾಡು ಹುಟ್ಟಿದ ಸಮಯ"ವನ್ನು ತಮ್ಮ ಅಕ್ಷರಗಳ ಗಡಿಯಾರದಲ್ಲಿ ತೋರಿಸಿದ ಶ್ರೀ ಮಣಿಕಾಂತ್ ರವರಿಗೆ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದ್ದು ಪ್ರಶಸ್ತಿಗೆ ಒಂದು ಗೌರವ ಸಿಕ್ಕಿದಂತೆ ಆಗಿತ್ತು.

ಅಲ್ಲಿಗೆ ಬಂದಿದ್ದ ಕವಿಗಳ ಕೃತಿಗಳ ವಾಚನ, ಸಮಯ ಸಾಲದೇ ಬಾರದ ಕವಿಗಳ ಕೃತಿಗಳನ್ನು ನೂತನ್ ರವರು ವಾಚಿಸಿದ್ದು ಸುಲಲಿತವಾಗಿತ್ತು.

ಉತ್ಸಾಹ ಪುಟಿಯುವ ಯುವಕ ಶಶಿ ಗೋಪಿನಾಥ್ ಅವರ ಚುಟುಕು ಹಾಸ್ಯ, ನೃತ್ಯ, ಕನ್ನಡದ ಚಿತ್ರ ರಂಗದ ಕಲಾವಿದರ ಅಣುಕು ಕಾರ್ಯಕ್ರಮ ಚೆನ್ನಾಗಿತ್ತು. ಇದರ ಮಧ್ಯೆ ಊಟದಲ್ಲಿ ಉಪ್ಪಿನಕಾಯಿ ಎನ್ನುವ ಹಾಗೆ ಅರುಣ್ ಶೃಂಗೇರಿ ಅವರ ಚುಟುಕು ಅಣುಕು ಕಾರ್ಯಕ್ರಮ ಉಪ್ಪಿನಕಾಯಿಯಷ್ಟೇ ಸವಿಯಾಗಿತ್ತು.

ಸ್ಪಟಿಕದಲ್ಲಿ ಲೋಪವಿರೋದಿಲ್ಲ, ಕಲೆಇರೋದಿಲ್ಲ.. ಹಾಗೆ ೩ಕೆ ತಂಡದ ಕಾರ್ಯಕ್ರಮದಲ್ಲಿಯೂ ಪೂರ್ಣಚಂದ್ರನಂತೆ ಪ್ರಕಾಶಿಸುವ ಹೊಂಬೆಳಕು ಸದಾ ಇದ್ದೆ ಇರುತ್ತದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ಈ ಸಮಾರಂಭ.. ! 

ಈ ಕಾರ್ಯಕ್ರಮದ ಬಗ್ಗೆ ಮಾತಾಡಲು, ಬರೆಯಲು ಹೋಗುವುದಕ್ಕಿಂತ.. ಈ ಕಾರ್ಯಕ್ರಮದಲ್ಲಿ ನಾ ಕಂಡು ಕೊಂಡ ಸರಳ ತತ್ವಗಳು ಮನಸ್ಸಿಗೆ ಮುದ ಕೊಡುತ್ತದೆ.

ಪುಟ್ಟ ಪುಟ್ಟ ಹೆಜ್ಜೆ ದಿಟ್ಟ ಹೆಜ್ಜೆ ಆಗಿಯೇ ಆಗುತ್ತದೆ
ಅಲೆಗಳು ಅಕ್ಕ ಪಕ್ಕದಲ್ಲಿರುವ ವಸ್ತುಗಳನ್ನು ತನ್ನ ತೆಕ್ಕೆಯಲ್ಲಿ ಸೆಳೆದುಕೊಂಡು ಸಾಗುವಹಾಗೆ, ಈ ಸುಮಧುರ ಮನಸ್ಸಿನ ತಂಡ ತಾವು ಮಾಡುವ ಅವರ ಮಾತಿನಲ್ಲಿಯೇ ಹೇಳುವ "ಅಳಿಲು ಸೇವೆ" ಯಲ್ಲಿ ನಮ್ಮನ್ನೆಲ್ಲ ಸೆಳೆದುಕೊಂಡು ಸಾಗುತ್ತಿರುವುದು ಶ್ಲಾಘನೀಯ
ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆ ಕಲ್ಪಿಸುತ್ತಾ, ತಾವು ಮಾಡುವ ಕಾರ್ಯವನ್ನು ದೂರದಲ್ಲಿ ಕುಳಿತು ನೋಡುತ್ತಾ, ಮಿಕ್ಕವರಿಗೆ ಅವಕಾಶ ನೀಡುವ ಅತ್ಯುತ್ತಮ ಮನಸ್ಸ್ಸು ಈ ಜೇನುಮನದ ತಂಡದ್ದು.

ಒಂದು ಸುಂದರ ಸಂಜೆಯನ್ನು ಅಷ್ಟೇ ಸಾರ್ಥಕತೆಯಿಂದ ಕಳೆದ ಅನುಭವ ನನ್ನ ಮನದಿಂದ ಮೂಡಿದ ಭಾವಗಳು ಅಕ್ಷರಗಳಾಗಿ, ಪದಗಳಾಗಿ ಮೇಲಿನ ಲೇಖನದಲ್ಲಿ ಹರಡಿಕೊಂಡಿದೆ. 

5 comments:

  1. ನಿಜಕ್ಕೂ ಯಾಕೋ 3-K ಮತ್ತು ನನಗೆ ಎಣ್ಣೆ-ಸೀಗೇಕಾಯಿ ಆಗುತ್ತಿದೆ...ಯಾವ ಕಾರ್ಯಕ್ರಮವನ್ನೂ ಹತ್ತಿರದಿಂದ ನೋಡಲಾಗುತ್ತಿಲ್ಲ... ಆದರೆ ನಿಮ್ಮ ವಿವರಣೆಗಳು ನನಗೆ ನೇರ ನೋಡಿದ ಻ನುಭವ ತಂದಿದೆ. ಧನ್ಯವಾದ ಶ್ರೀಮನ್...

    ReplyDelete
  2. ಒಂದು ಸುಂದರ ಸಂಜೆಯನ್ನು ಆಪ್ತವಾದ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದೀರಿ, ಇಷ್ಟವಾಯಿತು. ಥ್ಯಾಂಕ್ಸ್ :)

    ReplyDelete
  3. Veena Hs ChandrashekharNovember 29, 2016 at 8:07 AM

    ಕಾರ್ಯಕ್ರಮವನ್ನು ವಿವರಿಸಿದ ರೀತಿ ಕಣ್ಣಿಗೆ ಕಟ್ಟಿದಂತಿತ್ತು

    ReplyDelete
  4. ಮದ್ದಾದ ಬರಹ! ನಿಮ್ಮ ಅಭಿಮಾನಕ್ಕೆ ನಮ್ಮ 3ಕೆ ತಂಡದಿಂದ ನಿಮಗೆ ಅನಂತ ಧನ್ಯವಾದಗಳು ಸರ್ ......

    ReplyDelete