ಲೋ ಹೈದ ನಗು ನಗು ಅಂತ ಹೇಳುತ್ತಾ ನಗೋದನ್ನೇ ಮರೆತಿದ್ದೀಯಾ ಅಥವ ಅದರ ಬಗ್ಗೆ ಬರೆಯೋದನ್ನು ಮರೆತಿದ್ದೀಯಾ.. ಏನ್ಲಾ ನಿನ್ನ ಕಥೆ.. ಐದು ವರ್ಷ ಇದರ ಬಗ್ಗೆ ಒಂದು ಚೂರು ಬರೆದಿಲ್ವಲ್ಲೋ..
ಹೌದು ಕೆಲವೊಮ್ಮೆ.. ನಾಳೆ ನಾಡಿದ್ದು ಆಚೆ ನಾಡಿದ್ದು ಅಂತ ಹೇಳುತ್ತಾ ವಾರಗಳು, ತಿಂಗಳು, ವರ್ಷಗಳೇ ಕಳೆದು ಹೋಗುತ್ತವೆ..
ಹಾಗೆ ಲೇಖನದ ದಿನಾಂಕ ನೋಡಿದೆ ಅರೆ ನಾಲ್ಕು ವರ್ಷ ಆಗೋಗಿದೆ.. ದೇವರ ನಗುವಿನ ಸರಣಿ ಬರೆದು..
ಸರಿ ಬರೆದು ಬಿಡೋಣ ಅಂತ ಶುರು ಮಾಡಿದೆ.. ಈ ಐದು ವರ್ಷಗಳಲ್ಲಿ ಕಾವೇರಿ ನದಿಯಲ್ಲಿ ಎಷ್ಟೋ ಸಹಸ್ರ ಸಹಸ್ರ ಗ್ಯಾಲನ್ ನೀರು ಸಮುದ್ರದ ಪಾಲಾಗಿದೆ.. ಎಷ್ಟೋ ಘಟನೆಗಳು ಎಷ್ಟೋ ನಗುವಿನ ದೃಶ್ಯಗಳು ಸ್ಮೃತಿ ಪಟಲದಿಂದ ಮರೆಯಾಗಿ ಹೋಗಿದೆ.. ಆದರೂ ಕೆಲವು ನೆನಪುಗಳು ಅಚ್ಚಳಿಯದೆ ನಿಂತಿರುವುದನ್ನು.. ಕೆಲವು ಘಟನೆಗಳು ಇತ್ತೀಚಿಗೆ ನೆಡೆದಿರುವುದು ಇಲ್ಲಿ ದಾಖಲಿಸಿ ಕಡೆ ಪಕ್ಷ ಪಶ್ಚಿಮ ವಾಹಿನಿ ಹಾದಿಯಲ್ಲಿರುವ ಈ ಸರಣಿಯನ್ನು ಮತ್ತೆ ಮುಖ್ಯ ಹಾದಿಗೆ ತರುವ ಪ್ರಯತ್ನ ಮಾಡುವ ಒಂದು ಪುಟ್ಟ ಶ್ರಮ..
*******
ದೃಶ್ಯ ೧
ಜೀವನದ ಓಟದ ಹಾದಿಯಲ್ಲಿಅಡೆತಡೆಯಿಲ್ಲದೆ .. ಬಂದರೂ ಲೆಕ್ಕಿಸದೆ ಪಯಣ ಸಾಗಿತ್ತು.. ಉದ್ಯೋಗ ಕ್ಷೇತ್ರದಲ್ಲಿ ಒಂದು ಪುಟ್ಟ ತಿರುವು ಸಿಕ್ಕಾಗ ಮತ್ತೆ ನಿಂತ ಬದುಕು ಓಡಲು ಶುರುವಾಗಿತ್ತು..
ಮೊದಲ ದಿನ.. ಸಹಸ್ರಾರು ಬಾರಿ ಸಾಗಿದ್ದ ಮೈಸೂರು ರಸ್ತೆಯ ಮೇಲ್ ಸೇತುವೆ.. ಕೆ ಆರ್ ಮಾರುಕಟ್ಟೆಯ ಬಳಿಯ ನನ್ನ ನೆಚ್ಚಿನ ಗಣಪನ ದೇವಾಲಯ.. ಅಲ್ಲಿಗೆ ಹೋಗಬೇಕು ಅನ್ನುವ ಅವಕಾಶ ಇನ್ನೂ ಒದಗಿಲ್ಲ ಅನ್ನೋದಕ್ಕಿಂತ ಆ ರಸ್ತೆಯಲ್ಲಿ ಸಾಗುವಾಗ ಸೇತುವೆ ಮೇಲೆ ಇರುವುದರಿಂದ ಗಣಪನ ದೇವಾಲಯದ ಗೋಪುರ ಮಾತ್ರ ಕಾಣುತ್ತದೆ.. ಸೇತುವೆ ಕೆಳಗೆ ಸಾಗೋಣ ಎಂದರೆ ಅಸಾಧ್ಯ ವಾಹನ ದಟ್ಟಣೆ.. ಬೆಳಿಗ್ಗೆ ಹೋಗುವಾಗ ಆತುರ.. ಬರುವಾಗ ಮನೆಯನ್ನು ಸೇರುವ ಕಾತುರ.. ಹಾಗಾಗಿ ಆ ದೇವಾಲಯಕ್ಕೆ ಭೇಟಿಯ ಪುಣ್ಯ ಇನ್ನೂ ಸಿಕ್ಕಿಲ್ಲ.. ಸೋಮಾರಿತನವೂ ಕಾರಣ.. ಶನಿವಾರ ಭಾನುವಾರ ಹೋಗಿ ಬರಬಹುದು ಅದೇನು ದೊಡ್ಡ ಕೆಲಸವಲ್ಲ ಆದರೆ ಮನುಷ್ಯನನ್ನು ಸೋಮಾರಿ ಮಾಡುವ ಆಲಸ್ಯ.. ನನಗೂ ತುಸು ಹೆಚ್ಚೇ ಇರುವುದರಿಂದ.. ಹೋಗಲಾಗಿಲ್ಲ.. ಆದರೆ ಹೋಗಿ ಬರುವ ಖಂಡಿತ..
ಸರಿ ವಿಷಯಕ್ಕೆ ಬರುತ್ತೇನೆ.. ಆ ಸೇತುವೆ ಮೇಲೆ ಹೋಗುವಾಗ ಬರುವಾಗ ಆ ಗೋಪುರ ನೋಡಿ ಕೈ ಮುಗಿದು ಮುಂದುವರೆಯುವುದು ನನ್ನ ಅಭ್ಯಾಸ.. ಎಷ್ಟೇ ದಟ್ಟಣೆ ಇರಲಿ. ಹಿಂದಿನವ ಬಡ್ಕೊಂಡ್ರು ಸರಿ ಒಂದು ಕ್ಷಣ ಕೈಮುಗಿದು ಹೋಗುವುದು ಅಭ್ಯಾಸ..
ಕೆಲಸದ ಮೊದಲ ದಿನ.. ಅದೇ ದಾರಿಯಲ್ಲಿ ಪಯಣ ಸಾಗಿತ್ತು..ಅದೇ ದೇವಾಲಯ.. ಅದೇ ಸೇತುವೆ.. ಸಾಗುವಾಗ ... ಆಗಲೇ ತಡವಾಗಿತ್ತು.. ಆದ್ದರಿಂದ ತುಸು ವೇಗವಾಗಿ ಜೊತೆಗೆ ಅಷ್ಟೇ ಗಾಬರಿ ಸಹಿತ.. ದೇವಾಯ ಹಾದು ಹೋದೆ ಆದರೆ.. ಕೈ ಮುಗಿಯೋದು ಆ ಕ್ಷಣಕ್ಕೆ ಮರೆಯಾಗಿತ್ತು...
ಟರ್ ಟರ್ ಶಬ್ದ ಕೂಡ ಕಿವಿಗೆ ಕೇಳಿಸದಷ್ಟು ಬೇಗ ಸಾಗುವ ಇರಾದೆಯಿಂದ ಸಾಗುತ್ತಿದ್ದೆ.. ನನ್ನ ಪಕ್ಕದ ಬೈಕಿನವ .. ಸರ್ ಚಕ್ರ ನೋಡಿ ಚಕ್ರ ನೋಡಿ ಅಂತ ಕೂಗುತ್ತಾ ಹೋದ.. ನಾನು ಅಯ್ಯೋ ಪಂಚರ್ ಆಗಿದೆಯಾ .. ಏನಪ್ಪಾ ಮಾಡೋದು ಹೊತ್ತಾಗುತ್ತೆ ಅಂತ ಬೈಕ್ ನಿಲ್ಲಿಸಿದೆ.. ನೋಡಿದರೆ.. ಒಂದು ಪ್ಲಾಸ್ಟಿಕ್ ಕ್ಯಾನ್ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು ಸದ್ದು ಮಾಡುತ್ತಿದೆ.. ಅಯ್ಯೋ ಅಂತ ಆ ಕ್ಯಾನ್ ತೆಗೆದು ರಸ್ತೆ ಬದಿಯಲ್ಲಿಟ್ಟು ಎದ್ದು ನಿಂತು.. ನೋಡಿದೆ... ತಣ್ಣನೆ ಗಾಳಿ ಮುಖದ ಮೇಲೆ ಬಿದ್ದ ಅನುಭವ.. ಕತ್ತೆತ್ತಿ ಸುತ್ತಾ ನೋಡಿದೆ.... ಯಾರೋ ಫ್ಯಾನ್ ಹಾಕಿದ್ದಾರೆ ಅನಿಸುವ ಅನುಭವ.. ಪೈಪಿನಿಂದ ಗಾಳಿ ಬೀಸಿದ ಅನುಭವ.. ಮೆಲ್ಲನೆ ತಿರುಗಿ ನೋಡಿದೆ.. ಪ್ರತಿ ದಿನ ಕೈಮುಗಿಯುತಿದ್ದ ಗಣಪನ ದೇವಾಲಯ.. ಅರೆ ಇವತ್ತು ಮರೆತೇ ಬಿಟ್ಟೆನಲ್ಲ ಅಂತ ಬೇಸರ ಪಟ್ಟುಕೊಂಡು ತಿರುಗಿ ಕೈಮುಗಿದೆ.. ಬೈಕ್ ಸ್ಟಾರ್ಟ್ ಮಾಡಿದೆ.. ಶ್ರೀ ಆಲ್ ದಿ ಬೆಸ್ಟ್ ಅಂತ ಗಣಪ ಆಶೀರ್ವಾದ ಮಾಡಿದಂತೆ ಅನುಭವ..
ತಲೆಯೆತ್ತಿ ನೋಡಿದೆ.. ಶ್ರೀ ನಿನ್ನ ಗಡಿಬಿಡಿಯಲ್ಲಿ ನೀ ನನ್ನ ಮರೆಯಬಹುದು ಆದರೆ ನಾ ನಿನ್ನ ಮರೆಯೋಲ್ಲ ಕಣೋ.. ಶುಭವಾಗಲಿ.. ಹೊಸ ತಿರುವು ಹೊಸ ಯಶಸ್ಸನ್ನು ತಂದು ಕೊಡಲಿ.. ಶುಭವಾಗಲಿ ಎಂದು ಹರಸಿದ ಗಣಪ.. ಅದನ್ನು ಕಂಡು ನಾ ನಕ್ಕೆ.. ದೇವರು ಕೂಡ ಖಂಡಿತ ಒಂದು ಸುಮಧುರ ನಗು ಕೊಟ್ಟ..
*****
ದೃಶ್ಯ ೨
ಮನೆಯ ಹತ್ತಿರದ ಒಂದು ಸ್ವಸಹಾಯ ಪದ್ದತಿಯ ಹೋಟೆಲ್.. ನಮಗೆ ಬೇಕಾಗಿದ್ದು ಹೇಳಿ ಚೀಟಿ ಪಡೆದು ಕಾಯುತ್ತಿದ್ದೆವು.. ಸ್ವಲ್ಪ ಹೊತ್ತು.. ಕೇಳಿದ ತಿಂಡಿ ಬಂತು.. ತಿನ್ನುತ್ತಿದ್ದೆವು.. ಒಬ್ಬ ಹಣ್ಣು ಹಣ್ಣು ಮುದುಕ.. ವಯಸ್ಸಾಗಿತ್ತು ಅನ್ನೋದು ಗೊತ್ತಾಗುತಿತ್ತು.. ಆದರೆ ಅದಕ್ಕಿಂತ ಆ ವಯೋವೃದ್ಧರಿಗೆ ನೆಡೆಯಲು ಕಷ್ಟವಾಗುತಿತ್ತು.. ಒಂದು ಕೋಲಿನ ಆಸರೆ ಇತ್ತು..
ಒಂದು ಕುರ್ಚಿಯಲ್ಲಿ ಸುಮ್ಮನೆ ಕೂತಿದ್ದರು.. ಅವರಿಗೆ ಇದು ಸ್ವಸಹಾಯ ಅಂತ ಗೊತ್ತಿರಲಿಲ್ಲ.. ಸುಮಾರು ಹೊತ್ತು ಕೂತೆ ಇದ್ದರು.. ಯಾರೋ ಒಬ್ಬರು ಅಲ್ಲಿ ಹೋಗಿ ಚೀಟಿ ಕೊಂಡು ಊಟ ಮಾಡಿ ಅಂತ ಹೇಳಿದರು.. ಆತ ಬಹಳ ಕಷ್ಟ ಪಟ್ಟು ನಿಧಾನಕ್ಕೆ ಹೋಗಿ ಚೀಟಿ ಪಡೆದರು.. ಮತ್ತೆ ಆ ಕಡೆ ಹೋಗಿ ತಿಂಡಿ ಕೊಡುವವನ ಹತ್ತಿರ ಆ ಚೀಟಿ ಕೊಟ್ಟರು..
ಆತ ಆ ಚೀಟಿಯನ್ನು ನೋಡಿ ಓಹ್ ನಾರ್ತ್ ಇಂಡಿಯನ್ ಊಟ ಅಂತ ಹುಬ್ಬು ಮೇಲೆತ್ತಿ "ತಾತಾ ನೀವು ಅಲ್ಲಿ ಕೂತುಕೊಳ್ಳಿ ನಾನೇ ತಂದು ಕೊಡುತ್ತೇನೆ ಅಂದರು.. ಆ ತಾತನಿಗೆ ಕೇಳಿಸಿತೋ ಅರ್ಥವಾಯಿತೋ ಗೊತ್ತಿಲ್ಲ.. ಅಲ್ಲೇ ನಿಂತಿದ್ದರು..
ಆತ ಮತ್ತೆ ಹೋಗಿ ತಾತಾ ಕುಳಿತುಕೊಳ್ಳಿ ತಂದು ಕೊಡುತ್ತೇನೆ ಅಂತ ತುಸು ಜೋರಾಗಿ ಹೇಳಿ ಕೈ ತೋರಿಸಿದಾಗ ತಾತನಿಗೆ ಗೊತ್ತಾಯಿತು ಅಂತ ಅನಿಸುತ್ತೆ.. ಒಂದು ಕುರ್ಚಿಯಲ್ಲಿ ತಮ್ಮ ಕೈ ಚೀಲವನ್ನು ಇಟ್ಟು ಇನ್ನೊಂದು ಕುರ್ಚಿಯಲ್ಲಿ ಕೂತರು.. ಆತ ನಾ ಕುಳಿತ ಟೇಬಲಿನ ಮುಂದೆ ಕೂತಿದ್ದರಿಂದ ನನಗೂ ಕುತೂಹಲವಿತ್ತು ಮುಂದೆ ಏನು ನೆಡೆಯುತ್ತೆ ಅಂತ..
ಅಷ್ಟರಲ್ಲಿ ತಾತನ ಊಟ ತಯಾರಾಗಿದೆ ಅಂತ ಆತ ಕೂಗಿದ.. ತಾತ ನಿಧಾನವಾಗಿ ಏಳೋಕೆ ನಿಲ್ಲುವ ಪ್ರಯತ್ನ ಮಾಡಿದರು.. ಹೋಟೆಲಿನವ ತಾತ ಇರಿ ನಾನು ತರುತ್ತೇನೆ ಎಂದರು.. ಆದರೆ ಆತ ಒಂದು ಸುತ್ತು ಬಳಸಿಬರಬೇಕಿತ್ತು..
ಏಕೋ ನನಗೆ ಏನೋ ಅನಿಸಿತು.. ತಿನ್ನುತ್ತಿದ್ದವ ನಾನು ಎದ್ದು ಹೋಗಿ ಆ ತಟ್ಟೆಯನ್ನು ತೆಗೆದುಕೊಂಡು ತಾತ ತೆಗೆದುಕೊಳ್ಳಿ ಆರಾಮಾಗಿ ಊಟ ಮಾಡಿ ಎಂದೇ..
ತಾತ ಕಣ್ಣಲ್ಲೇ ಕೃತಜ್ಞತೆ ಹೇಳುತ್ತಾ ಕೈಯಲ್ಲಿ ಕುಡಿಯಲು ನೀರು ಬೇಕು ಎಂದು ದಯನೀಯವಾದ ದೃಷ್ಟಿ ಬೀರಿದರು.. ನನ್ನ ಹೊಟ್ಟೆ ಚುರುಕ್ ಎಂದಿತು.. ನೀರು ತರಲು ಹೋದೆ.. ಹೋಟೆಲಿನವ ಸರ್ ನೀವು ಊಟ ಮಾಡಿ ನಾ ನೀರು ಕೊಡುತ್ತೇನೆ.. ಧನ್ಯವಾದಗಳು ಅಂತ ಹೇಳಿ.. ನೀರು ಕೊಡಲು ಅಲ್ಲೇ ಇದ್ದ ಹುಡುಗನಿಗೆ ಹೇಳಿದ.. ನೀರು ಬಂತು.. ತಾತ ನೀರು ಕುಡಿದು ನಿಧಾನವಾಗಿ ನಾರ್ತ್ ಇಂಡಿಯನ್ ಊಟ ಸವಿಯಲು ಶುರು ಮಾಡಿದರು..
ಇಲ್ಲಿ ನನಗೆ ಅನಿಸಿದ್ದು.. ತಾತನಿಗೆ ನಾರ್ತ್ ಇಂಡಿಯನ್ ಸೌತ್ ಇಂಡಿಯನ್ ಊಟದ ವ್ಯತ್ಯಾಸ ಗೊತ್ತಾಯಿತೋ.. ಅಥವ ಊಟ ಎಂದಾಗ ಸಾಮಾನ್ಯ ಬೆಂಗಳೂರಿನಲ್ಲಿ ಸಂಜೆ ಹೊತ್ತು ಅನ್ನ ಸಾರಿನ ಊಟ ಸಿಗೋಲ್ಲ.. ಊಟ ಬೇಕು ಅಂತ ತಾತ ಹೇಳಿದಾಗ.. ಹೋಟೆಲಿನವರು ಸುಮ್ಮನೆ ಒಂದು ಚೀಟಿ ಹರಿದುಕೊಟ್ಟರೋ ಏನೋ ಅಂತ..
ಒಟ್ಟಿನಲ್ಲಿತಾತ ಏನೂ ಕಿರಿ ಕಿರಿ ಮಾಡಿಕೊಳ್ಳದೆ ತಣ್ಣನೆ ಊಟ ಮಾಡುತ್ತಿರುವ ದೃಶ್ಯ ನೋಡಿ ನನಗೆ ಕರುಳು ಚುರುಕ್ ಎಂದಿತು.. ತಮ್ಮ ಭವ್ಯವಾದ ಹಿಂದಿನ ತಾರುಣ್ಯದಲ್ಲಿ ಎಷ್ಟು ಭರ್ಜರಿ ಜೀವನ ಮಾಡಿರಬಹುದು.. ಅಥವ ಹೊಡೆದಾಟದಲ್ಲಿಯೇ ಜೀವನದ ಅಂಚಿಗೆ ಬಂದು ನಿಂತಿದ್ದರೋ ಅರಿಯದು.. ಆದರೆ ತಾತ ನೀರು ಬೇಕು ಅಂತ ಕೇಳಿದ ದೃಶ್ಯ ಮನದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿದೆ..
ಹೋಟೆಲಿನಿಂದ ಹೊರಗೆ ಬರುವಾಗ ಗಲ್ಲಾಪೆಟ್ಟಿಗೆಯ ಮೇಲೆ ಸ್ಥಿತಪ್ರಜ್ಞನಾಗಿದ್ದ ಗಣಪತಿ ಗುಡ್ ಜಾಬ್ ಶ್ರೀ ಅಂತ ಹೇಳಿ ನಕ್ಕಿದ್ದು ಕೇಳಿಸಿತು.. !