Monday, September 2, 2019

ದೇವರು ನಕ್ಕೆ ನಗುತ್ತಾನೆ - ೫

ಕೃಪೆ : ಗೂಗಲೇಶ್ವರ 


ಮನೆಯ ದೇವರುಗಳ ವಿಗ್ರಹಗಳನ್ನು, ದೇವರ ಮನೆಯನ್ನು ಸ್ವಚ್ಛಮಾಡುತ್ತಿದ್ದೆ.. ನನ್ನ ಮಗಳು.. ಅಪ್ಪ ಕುಂಕುಮ ಕೊಡಬೇಕು.. ಅಂತ ಪ್ರಶ್ನಾರ್ಥಕ ಚಿನ್ಹೆ ಮೊಗದಲ್ಲಿ ಮೂಡಿಸಿದಳು.. ಪರ್ಸ್ನಲ್ಲಿದೆ ಅಂದೇ.. ನೋಡಿದಳು.. ಹಬ್ಬದ ಮಾರನೇ ದಿನದ ಕೆ ಆರ್ ಮಾರುಕಟ್ಟೆಯಂತಿತ್ತು.. ಬರಿ ಬಿಲ್ಲುಗಳು, ಚೀಟಿಗಳು.. ಆಗ ನೆನಪಾಯಿತು.. ಹಿಂದಿನ ದಿನ  ಎ ಟಿ ಎಂ ಇಂದ ಹಣ ತೆಗೆದುಕೊಳ್ಳಲು ಮರೆತಿದ್ದೆ..

ಕೃಪೆ : ಗೂಗಲೇಶ್ವರ 

ಸರಿ.. ಅದೇ ಧಿರಿಸಿನಲ್ಲಿ.. ಅಂದರೆ ಮಗುಟ, ಶಲ್ಯದಲ್ಲಿಯೇ ಬೈಕ್ ಹತ್ತಿದೆ.. ಹಣೆಯಲ್ಲಿ ಗೋಪಿಚಂದನ, ವಿಭೂತಿ ಪಟ್ಟೆ, ಕೊರಳಲ್ಲಿ ಜಪ ಮಣಿ, ಕೈಯಲ್ಲಿ ಬೆಳ್ಳಿಯ ಬಳೆ ಇತ್ತು.. ನನ್ನ ಪಾಡಿಗೆ ನಾ ಗಾಡಿಯಲ್ಲಿ ಹೋಗುತ್ತಿದ್ದೆ.. ಸ್ವಲ್ಪ ದೂರ ಹೋಗುವಷ್ಟರಲ್ಲಿ ಯಾರೋ ಇನ್ನೊಂದು ಬೈಕಿನಲ್ಲಿ ಹೋಗುತ್ತಿದ್ದವ ಕೈ ಬೀಸಿದಂತಾಯಿತು.. ಯಾರೋ ಇರಬಹುದು ಎಂದು.. ನನ್ನ ಪಾಡಿಗೆ ನಾ ಮುಂದೆ ಹೋದೆ.. ದಾರಿಗಟ್ಟ ಹಾಕಿ.. "ಸ್ವಾಮಿಗಳೇ.. ಎಲ್ಲಾ ಸೆಟ್ ಅಪ್ ಮಾಡಿದ್ದೀವಿ.. ನೀವು ಸುಮ್ಮನೆ ಬಂದು ಮಂತ್ರ ಹೇಳಿ ಪೂಜೆ ಮಾಡಿದರೆ ಆಯ್ತು.. ಬನ್ನಿ ದಕ್ಷಿಣೆಯನ್ನು ಕೊಡುತ್ತೀವಿ.. "

ಕೃಪೆ : ಗೂಗಲೇಶ್ವರ 

ಬೈಕ್ ಸದ್ದು ಮಾಡುತ್ತಲೇ ಇತ್ತು.. ಆದರೆ ಅದರ ನಗು ನನಗೆ ಕೇಳುತ್ತಿತ್ತು.. ಶ್ರೀ ಸರಿಯಾಗಿ ತಗಲು ಹಾಕಿದ್ದಾರೆ.. ನೋಡೋಣ ಅದೆಂಗೆ ಬಿಡಿಸಿಕೊಳ್ತೀಯಾ.. ಅಂತ ಅನ್ನುವ ಹಾಗೆ ಭಾಸವಾಯಿತು..

"ಸರ್.. ಕ್ಷಮಿಸಿ.. ನನಗೆ ಅಭ್ಯಾಸವಿಲ್ಲ.. "

"ಸ್ವಾಮಿಗಳೇ ಅಂಗನ್ನ ಬೇಡಿ.. ಮುಖದಲ್ಲಿ ಸ್ವಾಮಿಗಳ ಕಳೆ ಇದೆ.. ನೀವು ನೋಡೋಕೆ ಥೇಟ್ ಸ್ವಾಮಿಗಳ ತರಹವೇ ಇದ್ದೀರಾ.. ಬನ್ನಿ ಸ್ವಾಮಿ ಒಂದು ಹತ್ತು ನಿಮಿಷ ಅಷ್ಟೇ"

"ಇಲ್ಲ ಸರ್. ನಾನು ಸಂಧ್ಯಾವಂದನೆ ಮಾಡೋಕೆ ಕೂತಿದ್ದೆ. ತಕ್ಷಣ ಯಾವುದೋ ಕೆಲಸ ನೆನಪಾಯಿತು.. ಹಾಗೆ ಬಂದಿದ್ದೀನಿ.. ಮಂತ್ರಗಳು ಬರುತ್ತೆ.. ಆದರೆ ಪೂಜೆ ಮಾಡಿಸಿ ಅಭ್ಯಾಸವಿಲ್ಲ.. ದಯವಿಟ್ಟು ಕ್ಷಮಿಸಿ"

"ಇಲ್ಲ ಸ್ವಾಮಿಗಳೇ ನೀವು ಬಂದಿದ್ದ್ರೆ ಚನ್ನಾಗಿತ್ತು.. ನಿಮ್ಮಲ್ಲಿ ಒಳ್ಳೆಯ ಸ್ವಾಮಿಗಳ ಕಳೆ ಇದೆ.. ಇರಲಿ ಬಿಡಿ.. ಪರವಾಗಿಲ್ಲ

"ಥ್ಯಾಂಕ್ಸ್ ಸರ್"

ಎನ್ನುತ್ತಾ ಗಾಡಿ ಬಿಟ್ಟೆ..

ದಾರಿಯುದ್ದಕ್ಕೂ ನಗುತ್ತಲೇ ಬರುತ್ತಿದ್ದೆ.. ದಾರಿಹೋಕರೆಲ್ಲ.. ನನ್ನ ಪೋಷಾಕು ಅಚ್ಚರಿಯಿಂದ ಗಮನಿಸುತ್ತಿದ್ದರೆ.. ಇನ್ನೂ ಕೆಲವರು ನಾನೊಬ್ಬನೇ ನಗುತ್ತ ಬರುತ್ತಿದ್ದದ್ದು (ಕೈಲಿ ಮೊಬೈಲು ಇಲ್ಲ.. ಕಿವಿಗೆ ಇಯರ್ ಫೋನ್ ಇಲ್ಲ.. ಆದರೂ ನಗುತ್ತಿದೆ ಪ್ರಾಣಿ ) ಕಂಡು ಅಯ್ಯೋ ಇವಯ್ಯಂಗೆ ತಿಕ್ಲು ಅನ್ನ್ಸುತ್ತೆ ಅಂತ ಅಂದುಕೊಂಡಿದ್ದರು..

ಮನೆಗೆ ಬಂದು ಬೈಕ್ ನಿಲ್ಲಿಸಿ.. ಯಥಾ ಪ್ರಕಾರ ಅದರ ತಲೆ ಸವರಿದೆ... "ಶಭಾಷ್ ಶ್ರೀ.. ಸುಮ್ಮನೆ ದುಡ್ಡಿನ ಆಸೆಗೆ ಅಲ್ಲಿ ಹೋಗಿ ಒಂದಷ್ಟು ಮಂತ್ರ ಹೇಳಿ ದುಡ್ಡು ವಸೂಲಿ ಮಾಡದೆ.. ನಿಜ ಹೇಳಿ.. ನಿನಗೂ ಮತ್ತು ಅವರಿಗೂ ಆಗಬಹುದಾದ ಮುಜುಗರ ತಪ್ಪಿಸೋದು ಅಷ್ಟೇ ಅಲ್ಲ.. ದೇವರಿಗೆ ಮೋಸ ಮಾಡಲಿಲ್ಲ.. ಶಭಾಷ್" ಅಂದ ಹಾಗೆ ಭಾಸವಾಯಿತು..

ಮನೆಯೊಳಗೇ ಬಂದು.. ಗಣಪನ ಫೋಟೋ ನೋಡಿದೆ.. ದೇವರು ನಕ್ಕ ಹಾಗೆ ಭಾಸವಾಯಿತು..

ಕೃಪೆ : ಗೂಗಲೇಶ್ವರ 

ಮುಂದಿನ ಒಂದು ವರ್ಷದೊಳಗೆ ದೇವರ ಪೂಜೆ ಮಾಡಿಸುವಷ್ಟು ಮಂತ್ರಗಳನ್ನು ಕಲಿಯಲೇ ಬೇಕು ಎಂಬ ದೃಢ ನಿರ್ಧಾರ ಮನದೊಳಗೆ ಮೂಡಿತು.. !

ಸಮವಸ್ತ್ರ, ಪೋಷಾಕು, ಆ attitude ಕೆಲವೊಮ್ಮೆ ಅಚ್ಚರಿ ಹುಟ್ಟಿಸುತ್ತದೆ!!!