Sunday, December 17, 2017

ಜೀವ ಮೀಟುವ ಸ್ವರ.. ಜೀವ ಸ್ವರದಿಂದ ---- ಒಂದು ಸಂಗೀತ ಸಂಜೆ

ಲೋ ಶ್ರೀ.. ಹಾಡಿನಲ್ಲಿಯೇ ಒಂದು ಕತೆ ಬರೆದುಕೊಡೋ... ಕಾಣದ ಕಡಲಿನ ಜೊತೆಯಲ್ಲಿ ತೇಲುತ್ತಾ ಪಯಣ ಮಾಡುವಾಗ ಮೂಡಿಬಂದ ಒಂದು ಕೋರಿಕೆ .. ನೋಡ್ತೀನಪ್ಪ.. ಒಳಗಿನ ಬಾಸ್ ಹೇಳಿದರೆ.. ಅವರು ಹೇಳಿದಂತೆ ಬರೆಯುತ್ತೇನೆ.. ನನ್ನದೇನಿದೆ. ಹೇಳುವವ ಒಳಗಿದ್ದಾರೆ.. ನಾ ಬರಿ ಉಕ್ತಲೇಖನ ತೆಗೆದುಕೊಳ್ಳುವವ ಅಷ್ಟೇ.. !!!

******

ವಿಜಯ್ ಮತ್ತು ವಿಜಯ ಅದ್ಭುತ ಸ್ನೇಹಿತರು.. ಪರಿಚಯ ಸ್ನೇಹಕ್ಕೆ ತಿರುಗಿ.. ಸ್ನೇಹ ಪ್ರೀತಿಯ ರಂಗನ್ನು ತುಂಬಿಕೊಳ್ಳುತ್ತಿತ್ತು..ಅದೇ ರಂಗು ಬಾನನ್ನು ತುಂಬಿ.. ದಿನಕರ ನನ್ನ ಕೆಲಸ ಆಯಿತು ಎಂದು ಮನೆಗೆ ಹೊರಡುವ ಸಮಯದಲ್ಲಿ ಕಡಲ ಕಿನಾರೆಯಲ್ಲಿ ಕುಳಿತು ವಿಜಯ್ ವಿಜಯನನ್ನು ಕೇಳಿದ.. 

"ಕಣೆ.. ಯಾವಾಗ ನಿನ್ನ ಮನೆಗೆ ಬರಲಿ.. ನಿನ್ನ ನೋಡಬೇಕು ಅನ್ನಿಸಿದರೆ ಯಾವಾಗ ಬರಬಹುದು ಪ್ಲೀಸ್ ಹೇಳು"

ಸಿನಿಮಾ ಹಾಡುಗಳ ಹುಚ್ಚು ಹಿಡಿದಿದ್ದ ವಿಜಯ ಅದೇ ದಾಟಿಯಲ್ಲಿ "ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ"
ತಲೆ ಕೆರೆದುಕೊಂಡ ವಿಜಯ್.. ಹಾಗೆ ವಿಜಯಳ ಮೊಗದ ಸೌಂದರ್ಯವನ್ನು ನೋಡುತ್ತಾ ಕೂತಿದ್ದ.. ಅವಳು ಹೇಳಿದ್ದ ಸಮ್ಮತಿಯ ಮಾತು ಅವನ ಹೃದಯದಲ್ಲಿ ಸರಿಗಮ ಹಾಡಿಸುತ್ತಿತ್ತು.. 

"ಕಣೆ.. ಲಗ್ ಜಾ ಗಲೇ ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ .. ನಿನ್ನ ಮಾತಿಗೆ ಒಂದು ಅಪ್ಪುಗೆ ನಿನಗೆ"
ವಿಜಯ.. ನಿನ್ನ ಮೊದಲ ಬಾರಿಗೆ ಕಂಡಾಗ ನನ್ನಲ್ಲಿ ಉಕ್ಕಿ ಬಂದ ಹಾಡು ಯಾವುದು ಗೊತ್ತೇ.. ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ .. ಅದ್ಯಾಕೋ ಗೊತ್ತಿಲ್ಲ ಪ್ರಥಮ ನೋಟದಲ್ಲಿಯೇ ಪ್ರೇಮ, ಪ್ರೀತಿ ಅಂತ ಬರಿ ಕಥೆ ಹೇಳ್ತಾರೆ ಅಂದುಕೊಂಡಿದ್ದೆ ಆದರೆ ಅದು ನಿಜ ಅಂತ ನಿನ್ನ ನೋಡಿದ ಮೇಲೆ ಅರಿವಾಯಿತು.. ಅದೇ ಖುಷಿಯಲ್ಲಿ ನಿನಗೆ ಬರೆದದ್ದು ಮೊದಲ ಪ್ರೇಮ ಪತ್ರ ಅದು ಯಾವ ಹಾಡು ಹೇಳುತ್ತಾ ಗೊತ್ತಾ.. ಲಿಕ್ ಹೇ ಜೋ ಕತ್ ತುಜೆ.. ಆ  ಹಾಡು ಮತ್ತು ನಿನಗೆ ಬರೆದ ಪತ್ರದ ಪ್ರತಿಯನ್ನು ಓದಿ ಓದಿ ಖುಷಿ ಪಟ್ಟಿದ್ದೆ .. 

ಆ ಪತ್ರದ ಬಗ್ಗೆ ಆಫೀಸಿನಲ್ಲಿ ಹೇಗೋ ಗೊತ್ತಾಗಿ.. ನನ್ನ ಕಿಚಾಯಿಸಿದಾಗ.. ನಾ ನಿನಗೆ ಹೇಳಿದ್ದು "ಆಜ್ ಕಲ್ ತೆರೆ ಮೇರೇ ಪ್ಯಾರ್ ಪೇ ಚರ್ಚೆ ಹರ್ ಝುಬಾನ್ ಫಾರ್ ಸಬ್ಕೋ  ಮಾಲೂಮ್ ಹೇ ಔರ್ ಸಬ್ಕೋ ಖಬರ್ ಹೋಗಯೀ... " ನೀನು ತೋ ಕ್ಯಾ" ಎಂದು ಹೇಳಿ ನೀ ನನಗೆ ಧೈರ್ಯ ತುಂಬಿದ್ದೇ.. 

"ಹೌದು ಕಣೋ ವಿಜಯ್.. ನೀ ಸಿಗುವ ತನಕ ನನ್ನ ಮನಸ್ಸು ಬರಿಕಾಗದವಾಗಿತ್ತು .. ನೀ ಬಂದ ಮೇಲೆ ಕೋರಾ ಕಾಗಜ್ ಥಾ ಏ ಮ್ಯಾನ್ ಮೇರಾ ಲಿಕ್ ಲಿಯಾ ನಾಮ್ ಉಸ್ಪೇ ತೇರಾ.. "

"ಕಣೆ ನೀ ಅಂದು  ಒಪ್ಪಿಗೆ ಕೊಟ್ಟ ದಿನ . ಆಫೀಸಿನಲ್ಲಿ ಖುಷಿಯಿಂದ ಓಡಾಡಿದ್ದೆ .. ಅಂದಿನ ಕೆಲಸವೆಲ್ಲಾ ಹೂವಿನ ಸರ ಎತ್ತಿದಂತೆ ಆಗಿತ್ತು.. ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಎಂದು ಹಾಡುತ್ತಾ ಖುಷಿಯಿಂದ ಕೆಲಸಾ ಸಾಗಿತ್ತು.. ನಾ ಕುಶಿಯಾಗಿದ್ದನ್ನ ನೋಡಿ..ನನ್ನ ಸಹೋದ್ಯೋಗಿ.. ಲೋ ಬಾಬೂಜಿ ಧೀರೆ ಚಲನಾ.. ಸಾಂನೆ ಝರಾ ಸಂಬಲ್ನ  ಎಂದಳು ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ ... ತಕ್ಷಣ ನಾ ಮಾಡಿದ ಕೆಲಸ.. ಕ್ಯಾಂಟೀನಿಗೆ ಹೋಗಿ .. ಒಂದು ಸ್ಟ್ರಾಂಗ್ ಕಾಫಿ ಕೂಡಿದೆ.. ನಿನಗೆ ಕರೆ ಮಾಡಿದೆ ನಿನ್ನ ಮೊಬೈಲ್ ಹಲೋ ಟ್ಯೂನ್  ಕಭಿ ಕಭಿ ಮೇರೇ ದಿಲ್ ಮೇ ಖಯಾಲ್ ಆತಾ ಹೇ ಕೆ ಜೈ ತುಜುಕೋ ಬನಾಯ ಗಯಾ ಹೇ ಮೇರೇಲಿಯೇ... ಅಲ್ವೇನೆ

ನಿನ್ನ ಮಾತಿಗೆ ಏನು ಹೇಳಲಿ ವಿಜಯ್ ನಗುವ ನಯನ ಮಧುರ ಮೌನ..ಮೌನಂ ಸಮ್ಮತಿ ಲಕ್ಷಣಂ ಅಲ್ಲವೇ ..  ರಾತ್ರಿ ಮಲಗಿದರೆ ಒಂದೇ ರಾಗ ಕೌನ್ ಹೇ ಜೋ ಸಪನೋ ಮೇ ಆಯಾ.. ನಿದ್ದೆಯಿಂದ ಎದ್ದು ಕಣ್ಣು ಬಿಟ್ಟರೆ ನಿನ್ನ ಹೆಸರೇ.. ಮತ್ತೆ ಕಣ್ಣು ಮುಚ್ಚಿ ನಿದ್ದೆ ಮಾಡಿದರೆ ಅದೇ ಹಾಡು.. ನಿಧಾನಕ್ಕೆ ನಿದ್ದೆಯಲ್ಲೂ ನೀನೆ.. ಕನಸಲ್ಲೂ ನೀನೆ.. ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ.. ಬೆಳದಿಂಗಳಿನ ರಾತ್ರಿ ಎದ್ದು ಮನೆಯ ಹೊರಗಿನ ಅಂಗಳದಲ್ಲಿ ನೆಡೆಯುತ್ತಿದ್ದರೆ ನಾವಿಬ್ಬರು ಕೈ ಕೈ ಹಿಡಿದುಕೊಂಡು  ಮರಳಿನ ದಂಡೆಯ ಮೇಲೆ ಬೆಳದಿಂಗಳಿನಲ್ಲಿ ಆಜಾ ಸನಮ್ ಮಧುರ್ ಚಾಂದಿನಿ ಹೈ ಹಮ್ ಹಾಡುತ್ತಾ ಹೋದಂತೆ ಭಾಸವಾಗುತ್ತದೆ .. 

ಹೀಗೆ ಮಾತಾಡುತ್ತಾ ಕೂತಿದ್ದರು.. ಬಾನಿನ ರಂಗು ದಟ್ಟವಾಗುತ್ತ ಹೋಗುತ್ತಿತ್ತು.. ಜನಸಂಖ್ಯೆ ಹೆಚ್ಚುತ್ತಲೇ ಇತ್ತು.. ಜೊತೆಯಲ್ಲಿ ಹಣ್ಣು, ತಿಂಡಿ, ತಿನಿಸುಗಳನ್ನು ಮಾರುವವರು ಕೂಡ.. ಇದರ ಜೊತೆಯಲ್ಲಿ ಕೆಲವರ ಕಲಾಗಾರಿಕೆಯೂ ಮೂಡಿ ಬರುತ್ತಿತ್ತು .. ಕೊಳಲು ಮಾರುವವ.. ಸುಶ್ರಾವ್ಯವಾಗಿ ಎಹೆಸಾನ್ ತೇರಾ ಹೋಗಾ ಮುಜುಪರ್.. ಹಾಡು ನುಡಿಸಿಕೊಂಡು ಹೋಗುತ್ತಿದ್ದ.. 
ಕೇಳಲು ಮಧುರವಾಗಿತ್ತು.. 

ವಿಜಯ ಎದ್ದು ನಿಂತು.. "ಕಣೋ ಬಾರೋ ಹಾಗೆ ಒಂದು ವಾಕಿಂಗ್ ಹೋಗಿ ಬರೋಣ.. " ವಿಜಯ್ ಕೈ ಕೊಡೆ ಅಂದ .. ಜೊತೆಯಲಿ ಜೊತೆಯಲಿರುವೆನು ಹೀಗೆ ಎಂದು..ಕಣ್ಣು ಮಿಟುಕಿಸಿದ.. 

ಕಣ್ಣು ಮಿಟುಕಿಸಬೇಡ ಕಣೋ.. ನನ್ನೆದೆ ಚುರಾಲಿಯ ಹೇ ತುಂನೇ ಜೋ ದಿಲ್ ಕೋ.. ನಜರ್ ನಹಿ ಚುರಾನಾ ಸನಮ್ ಹಾಡು ಹಾಡಲುಶುರುಮಾಡುತ್ತದೆ .. 

ಜೋ ವಾದಕಿಯಾ ಹೊ ನಿಭಾನ ಪಡೆಗಾ ಕೊಳಲಿನವ ಈ ಮಧುರ ಗೀತೆಯನ್ನು ನುಡಿಸುತ್ತಾ ಹೋದ ವಿಜಯ ವಿಜಯ್ ಇಬ್ಬರೂ ಗೊಳ್ ಎಂದು ನಗಲು ಶುರು ಮಾಡಿದರು.. ಅದೆಂಗೆ ಅವನಿಗೆ ಗೊತ್ತಾಯಿತು ನಾವಿಬ್ಬರು ಮಾತಾಡಬೇಕಿದ್ದುದು.. 
ಕಾಕತಾಳೀಯ ಕಣೋ.. ಆದರೆ ಎಷ್ಟು ಸರಿಯಾದ ಸಮಯಕ್ಕೆ ಆ ಹಾಡು ಬಂತಲ್ವಾ.. ಸೂಪರ್ ಸೂಪರ್.. 

ಇನ್ನೂ ಕೈ ಚಾಚಿಕೊಂಡು ಕೂತೆ ಇದ್ದ ವಿಜಯ್ ನಾ ನೋಡಿ.. ಪಿಯಾ ತೂ ಅಬ್ ತೋ ಆಜಾ ಎಂದಳು.. ವಿಜಯ್ ಇನ್ನೂ ಯಾವುದೇ ಗುಂಗಿನಲ್ಲಿಯೇ ಕಳೆದುಹೋಗಿದ್ದ.. ಹಿಂದಿನ ನೆನಪುಗಳು ಅವನಿಗೆ ಖುಷಿ ನೀಡುತ್ತಿತ್ತು ..  ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಪುಕಾರುತಾ ಚಲಾ ಹೂ ಮೇ ಎಂದು ನಿಧಾನವಾಗಿ ಮರಳಿನ ಮೇಲೆ ಹೆಜ್ಜೆ ಇಡುತ್ತಾ ಹೊರಟಳು ವಿಜಯ.. 

ಏ ಮೇರಾ ದಿಲ್ ಯಾರ್ ಕಾ ದೀವಾನಾ ಎಂದು ಕೂಗುತ್ತಾ ವಿಜಯಾಳ ಹಿಂದೆ ಓಡಿದ  ವಿಜಯ್.. ದಿನಕರ ಭುವಿಯಿಂದ ಕಡಲಿನೊಳಗೆ ಜಾರಿಹೋಗಿದ್ದ .. ಕತ್ತಲೆ ತುಂಬಿತ್ತು .. ತಣ್ಣಗೆ ಗಾಳಿ ಬೀಸುತ್ತಿತ್ತು .. ಕಡಲಿನ ಅಲೆಗಳ ಮೊರೆತ.. ವಿಜಯ್ ಮೊಬೈಲ್ ಏ ರಾತೇ ಏ ಮೌಸಮ್ ನದೀ ಕಾ ಕಿನಾರ ಏ ಚಂಚಲ್ ಹವಾ ಎಂದು ಕೂಗುತ್ತಿತ್ತು..ಮೊಬೈಲ್ ತೆಗೆದ ಅನಾಮಧೇಯ  ಕರೆ.. ಯಾರ ಹೆಸರೋ ಗೊತ್ತಿಲ್ಲ.. ನಾಮ್ ಗಮ್ ಜಾಯೆಗಾ ಎಂದು ಕೊಳ್ಳುತ್ತಾ ಹಲೋ ಎಂದ.. ಜೋಕೇ ನಾ ಬಳ್ಳಿಯ ಮಿಂಚು .. ಲೋ ವಿಜಯ್ ನಾನು ಕಣೋ.. ಗೊತ್ತಾಗಲಿಲ್ವ .. ಸುಮ್ಮನೆ ರೇಗಿಸೋಕೆ ಆ ರೀತಿಯ ಹಾಡು ಹೇಳಿದೆ.. ಇದು ನಮ್ಮ ಪಕ್ಕದ ಆಫೀಸಿನ ನಂಬರ್ .. ಅಂದ ಹಾಗೆ.. ಕಸ್ಟಮರ್ ಫೋನ್ ಮಾಡಿದ್ದರು.. ಒಂದು ಪ್ರಾಬ್ಲಮ್ ಇದೆ ಅಂತೇ.. ಇಮೇಲ್ ಕಳಿಸಿದ್ದಾರಂತೆ ಬಾಸ್  ನಿನಗೆ ಹೇಳೋಕೆ ಹೇಳಿದರು.. ಅದಕ್ಕೆ ಕರೆ ಮಾಡಿದೆ .. ಓಕೆ . ಮೇಡಂ ಜೊತೆ ಇದ್ದೀಯಲ್ವ... ಎಂಜಾಯ್.. have a nice evening ಕಣೋ"

ಧನ್ಯವಾದಗಳು ಅಂತ ಕೂಡ ಹೇಳಲಿಲ್ಲ.. ವಿಜಯ ಆಗಲೇ ಬಲು ಮುಂದಕ್ಕೆ ಸಾಗಿದ್ದಳು .. ದೀವಾನಾ ಹುವಾ ಬಾದಲ್ .. ಅಲ್ಲ ಅಲ್ಲ ದೀವಾನಾ ಹುವಾ ಪಾಗಲ್ .. ಕಣೆ ನಿಂತ್ಕೊಳೋ.. ಓಡುತ್ತಾ ಹೋಗೋ ಹೋಗಿ ಕೈ ಹಿಡಿದು ನಿಲ್ಲಿಸಿದ .. .. ನೋಡು ಕಣೆ.. ಕಾಣದ ಕಡಲಿಗೆ ಹಂಬಲಿಸಿದ ಮನ ನಮ್ಮಿಬ್ಬರದು ಅಲ್ಲಾ  ಸರಿಯಾಗಿ ಯೋಚಿಸಿ ಹೆಜ್ಜೆ ಇಡುತ್ತಿದ್ದೇವೆ .. ನಮ್ಮ ಬಾಳಿನಲ್ಲಿ ಹಾಡಿದರೆ .. ಅದು ಒಂದೇ ಹಾಡು.. ಸಂತೋಷಕ್ಕೆ ಹಾಡು ಸಂತೋಷಕ್ಕೆ.. ಅಷ್ಟೇ.. ನಾನು ಒಪ್ಪಿಯಾಯಿತು... ನೀನು ಒಪ್ಪಿಯಾಗಿದೆ .. ನಮ್ಮಿಬ್ಬರ ದುಡಿಮೆ ನಮ್ಮ ಸುಂದರ ಪರಿವಾರ ಕಟ್ಟಿಕೊಳ್ಳಲು ಬೇಕಾದಷ್ಟು.. ನನ್ನ ನಿನ್ನ ಮನೆಯವರು ಆಗಲೇ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ" ಅಂತ ಹೇಳಿದ್ದಾರೆ ಆದರೆ ನಮ್ಮಿಬ್ಬರ ಜಾತಿಗಳು ಒಂದೇ.. ಮತ ಒಂದೇ.. ಹಾಗಾಗಿ ಯೋಚನೆ ಎನ್ನುವ ತರ್ಕಕ್ಕೆ ಅವಕಾಶವೇ ಇಲ್ಲ.. 

ತಿರುಗಿದ ವಿಜಯ.. "ಕಣೋ.. ನಿನಗೆ ಇದುವರೆಗೂ ಹೇಳದೆ ಸತಾಯಿಸಿದ್ದ ಒಂದೇ ಮಾತು .. ಈಗ ಹೇಳುತ್ತೇನೆ.. ಐ ಲವ್ ಯು.. ನಾ ನಿನ್ನ ಪ್ರೀತಿಸುತ್ತೇನೆ.. "

ವಿಜಯ್ ಮರು ಮಾತಾಡದೆ ಗಟ್ಟಿಯಾಗಿ ತಬ್ಬಿಕೊಂಡ.. ಕೊಳಲು ಮಾರುವವನು .. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ"

ಇಬ್ಬರ ಅಪ್ಪುಗೆ ಗಟ್ಟಿಯಾಯಿತು .. ಇಬ್ಬರ  ಕಣ್ಣಲ್ಲೂ ಹನಿಗಳು.. ಆನಂದದ ಹನಿಗಳು.. !!!

****
 ಮಾಮೂಲಿ ದಿನವಾಗಿತ್ತು.. ಸರಿ ಏನೂ ಕೆಲಸವಿರಲಿಲ್ಲ.. ಆದಷ್ಟು ಹಾಡು ಕೇಳೋಣ ಅಂತ ಮನಸ್ಸು ಮಾಡಿದ್ದೆ.. ಬೆಳಿಗ್ಗೆ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ.. ತಿಂಡಿ ತಿಂದು ಕಾಲು ಚಾಚಿ ಕೂತಿದ್ದಾಗ.. ಗೆಳೆಯ ಗುರುಪ್ರಸಾದ್ ಕರೆ.. ಶ್ರೀಕಾಂತಣ್ಣ... ಸಂಜೆ ೫.೩೦ ರಿಂದ ೮.೩೦ ತನಕ ಕನ್ನಡ ಮತ್ತು ಹಿಂದಿ ಹಾಡುಗಳ ಕಾರ್ಯಕ್ರಮವಿದೆ.. ಮನೆಯ ಹತ್ತಿರವೇ.. ಬರ್ತೀರಾ.. ನೀವು ಬಂದರೆ ಚೆನ್ನಾಗಿರುತ್ತೆ ಅಂದರು.. 

ಹಾಡುಗಳು..ಅದರಲ್ಲೂ ಹಳೆಯ ಹಾಡುಗಳು ಎಂದರೆ ಮೈಯೆಲ್ಲಾ ಕಿವಿ ನನಗೆ.. ಎರಡನೇ ಮಾತಿಗೆ ಅವಕಾಶವೇ ಇಲ್ಲ.. ಬರ್ತೀನಿ ಅಂದೇ..ಮನೆಯನ್ನು ತಲುಪಲು ನಕ್ಷೆ ಕಳಿಸಿದ್ದರು.. ಅದರ ಜಾಡು ಹಿಡಿದು ಐದಕ್ಕೆ ಅವರ ಮನೆಯ ಮುಂದೆ.. 

ಅವರ ಮನೆಯ ಪರಿಚಯ.. ಉಭಯಕುಶಲೋಪರಿ ಸಾಂಪ್ರತ ... ಹತ್ತು ನಿಮಿಷದಲ್ಲಿ ಸಭಾಂಗಣದಲ್ಲಿ ಇದ್ದೆವು .. zeal fitness ನಾಗರಭಾವಿ ಇವರು ಆಯೋಜಿಸಿದ್ದ ಮಧುರ ಸಂಗೀತ ಕಾರ್ಯಕ್ರಮ ಎಂದು ಗೊತ್ತಾಯಿತು.. ಮೊದಲ ಸ್ವಲ್ಪ ಹೊತ್ತು ಆಯೋಜಕರ ಫಿಟ್ನೆಸ್ ಕೇಂದ್ರದ ಪರಿಚಯ.. ಮುಂದೆ ಹತ್ತನೇ ನಿಮಿಷ.. ಸಂಗೀತದ ಆಣೆಕಟ್ಟು ಒಡೆಯಲಾಯಿತು.. ಮುಂದೆ ಹರಿದಿದ್ದು ಬರೋಬ್ಬರಿ ೨೭ ಗೀತಾ ಮಾಧುರ್ಯ.. ಬಹುಪಾಲು ಹಿಂದಿ.. ಕೆಲವು ಕನ್ನಡ ಹಾಡುಗಳ ಮಾಲೆ ಕಟ್ಟಲಾಗಿತ್ತು.. ಕನ್ನಡದ ಹಾಡುಗಳು ಕೆಲವೇ ಕೆಲವಾದರೂ ಅದು ಕೊಟ್ಟ ಪ್ರತಿಕ್ರಿಯೆ ಅದ್ಭುತವಾಗಿತ್ತು.. ಸಂಗೀತಕ್ಕೆ ಭಾಷೆಯ ಒತ್ತಡ ಇಲ್ಲ.. ಅಲ್ಲವೇ.. 

ಮುಂದೆ ಹರಿದಿದ್ದು .. ಬೊಂಬಾಟ್ ಹಾಡುಗಳು.. ಗಾಯಕ ಶ್ರೀ ಮಹೇಶ್ ಪ್ರಿಯದರ್ಶನ್, ಗಾಯಕ ಸುಧೀರ್, ಗಾಯಕಿ ಶೃತಿ, ಗಾಯಕಿ ಅನುರಾಧ ಭಟ್.. ಮತ್ತು ಸ್ಪೆಷಲ್ ಗಾಯಕ ಶ್ರೀ ಚೈತನ್ಯ.. ಬರಿ ಹಾಡು ಕಷ್ಟ ಅಲ್ಲವೇ ಅದಕ್ಕೆ ಬೇಕಾಗಿದ್ದು ಸೊಗಸಾದ ವಾದ್ಯ ವೃಂದ.. ಪ್ರತಿಭಾ ಗಣಿಗಳೇ ವೇದಿಕೆಯಲ್ಲಿ ಇದ್ದರು.. ಕೀಬೋರ್ಡ್ ಶ್ರೀ ಕೃಷ್ಣ ಉಡುಪ, ಇನ್ನೊಂದು ಕೀ ಬೋರ್ಡ್ ಶ್ರೀ ಹರ್ಷ, ಕೊಳಲು ಶ್ರೀ ರಮೇಶ್, ಡ್ರಮ್ಸ್ ಶ್ರೀ ಕೃಷ್ಣ, ಡೋಲಕ್ ಶ್ರೀ ಶಿವಮೂರ್ತಿ, ಮತ್ತು ತಬಲಾ ಶ್ರೀ ಪ್ರದ್ಯುಮ್ನ..

ಒಂದಾದ ಮೇಲೆ ಒಂದರಂತೆ ಬರೋಬ್ಬರಿ ಇಪ್ಪತೇಳು ಹಾಡುಗಳು ಅನುಕ್ರಮವಾಗಿ ಮೂಡಿಬಂತು.. ಆ ಹಾಡುಗಳ ಪಟ್ಟಿ ಈ ಕೆಳಕಂಡಂತೆ.. 

೦೧) ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ (ಶೃತಿ ಮತ್ತು ಸುಧೀರ್)
೦೨) ಲಗ್ ಜಾ ಗಲೇ ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ (ಶೃತಿ)
೦೩) ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ (ಮಹೇಶ್)
೦೪) ಲಿಕ್ ಹೇ ಜೋ ಕತ್ ತುಜೆ (ಸುಧೀರ್)
೦೫) ಆಜ್ ಕಲ್ ತೆರೆ ಮೇರೇ ಪ್ಯಾರ್ (ಸುಧೀರ್ ಮತ್ತು ಅನುರಾಧ ಭಟ್)
೦೬) ಕೋರಾ ಕಾಗಜ್ ಥಾ ಏ ಮ್ಯಾನ್ ಮೇರಾ ಲಿಕ್ ಲಿಯಾ ನಾಮ್ ಉಸ್ಪೇ ತೇರಾ (ಮಹೇಶ್ ಮತ್ತು ಶೃತಿ)
೦೭) ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ (ಸುಧೀರ್ ಮತ್ತು ಅನುರಾಧ ಭಟ್)
೦೮) ಬಾಬೂಜಿ ಧೀರೆ ಚಲನಾ.. ಸಾಂನೆ ಝರಾ ಸಂಬಲ್ನ(ಶೃತಿ)
೦೯) ಕಭಿ ಕಭಿ ಮೇರೇ ದಿಲ್ ಮೇ  (ಸುಧೀರ್ ಮತ್ತು ಅನುರಾಧ ಭಟ್)
೧೦) ನಗುವ ನಯನ ಮಧುರ ಮೌನ (ಮಹೇಶ್ ಮತ್ತು ಶೃತಿ)
೧೧) ಕೌನ್ ಹೇ ಜೋ ಸಪನೋ ಮೇ ಆಯಾ (ಸುಧೀರ್)
೧೨) ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ (ಶೃತಿ)
೧೩) ಆಜಾ ಸನಮ್ ಮಧುರ್ ಚಾಂದಿನಿ ಹೈ ಹಮ್ (ಮಹೇಶ್ ಮತ್ತು ಶೃತಿ)
೧೪) ಎಹೆಸಾನ್ ತೇರಾ ಹೋಗಾ ಮುಜುಪರ್ (ಮಹೇಶ್)
೧೫) ಜೊತೆಯಲಿ ಜೊತೆಯಲಿರುವೆನು ಹೀಗೆ ಎಂದು (ಮಹೇಶ್ ಮತ್ತು ಶೃತಿ)
೧೬) ಚುರಾಲಿಯ ಹೇ ತುಂನೇ ಜೋ ದಿಲ್ ಕೋ (ಸುಧೀರ್ ಮತ್ತು ಶೃತಿ)
೧೭) ಜೋ ವಾದಕಿಯಾ ಹೊ ನಿಭಾನ ಪಡೆಗಾ (ಮಹೇಶ್ ಮತ್ತು ಅನುರಾಧ)
೧೮) ಪಿಯಾ ತೂ ಅಬ್ ತೋ ಆಜಾ (ಮಹೇಶ್, ಶೃತಿ ,ಮತ್ತು ಸುಧೀರ್)
೧೯) ಪುಕಾರುತಾ ಚಲಾ ಹೂ ಮೇ  (ಸುಧೀರ್) 
೨೦) ಏ ಮೇರಾ ದಿಲ್ ಯಾರ್ ಕಾ ದೀವಾನಾ (ಅನುರಾಧ)
೨೧) ಏ ರಾತೇ ಏ ಮೌಸಮ್ ನದೀ ಕಾ ಕಿನಾರ ಏ ಚಂಚಲ್ ಹವಾ (ಚೈತನ್ಯ ಮತ್ತು ಶೃತಿ)
೨೨) ನಾಮ್ ಗಮ್ ಜಾಯೆಗಾ  (ಮಹೇಶ್ ಮತ್ತು ಶೃತಿ)
೨೩) ಜೋಕೇ ನಾ ಬಳ್ಳಿಯ ಮಿಂಚು (ಶೃತಿ)
೨೪) ದೀವಾನಾ ಹುವಾ ಬಾದಲ್ (ಸುಧೀರ್ ಮತ್ತು ಅನುರಾಧ)
೨೫) ಕಾಣದ ಕಡಲಿಗೆ ಹಂಬಲಿಸಿದ ಮನ (ಮಹೇಶ್)
೨೬) ಸಂತೋಷಕ್ಕೆ ಹಾಡು ಸಂತೋಷಕ್ಕೆ (ಮಹೇಶ್)
೨೭) ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ (ಮಹೇಶ್, ಸುಧೀರ್ ಮತ್ತು ಸಂಗಡಿಗರು)

ಪ್ರತಿಯೊಂದು ಹಾಡಿಗೂ ಪ್ರೇಕ್ಷಕರ ಪ್ರತಿಕ್ರಿಯೆ.. ಇನ್ನೊಮ್ಮೆ ಇನ್ನೊಮ್ಮೆ ಇನ್ನೊಂದು ಸಲ ಎಂದು ಹೇಳಿಬರುತ್ತಿದ್ದ ಬೇಡಿಕೆ.. ಒಂದು ಅದ್ಭುತ ಸಂಗೀತ ಸಂಜೆಗೆ ಸಾಕ್ಷಿಯಾಗಿತ್ತು.. ಮೂರು ಘಂಟೆಗಳು ಮೂರು ನಿಮಿಷ ಕಳೆದ ಹಾಗೆ ಸಾಗಿತ್ತು.. 
ಪ್ರತಿಯೊಬ್ಬ ಕಲಾವಿದರ ಪರಿಶ್ರಮ ಎದ್ದು ಕಾಣುತ್ತಿತ್ತು... ಚುಟುಕು  ಚುಟುಕಾಗಿ ವೇದಿಕೆಗೆ ಬಂದು ಹಾಡುಗಳ ಹೆಸರು ಮತ್ತು ಗಾಯಕರ ಹೆಸರಿನ ಜೊತೆಯಲ್ಲಿ ಆ ಹಾಡಿನ ಜೊತೆ ತಳುಕು  ಹಾಕಿಕೊಂಡಿದ್ದ ಚಿಕ್ಕ ಚಿಕ್ಕ ಸಂಗತಿಗಳನ್ನು ಕನ್ನಡ, ಇಂಗ್ಲಿಷ್, ಮತ್ತು  ಹಿಂದಿ ಭಾಷೆಯಲ್ಲಿ ಬಿತ್ತರಿಸುತ್ತಿದ್ದ ನಿರೂಪಕಿಯ ಮಾತುಗಳು ಸೊಗಸಾಗಿದ್ದವು.. ಇಡೀ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಅಚ್ಚುಕಟ್ಟುತನ.. ಒಂದು ನಿಮಿಷ ಬಿಡುವಿಲ್ಲದೆ ೨೭ ಹಾಡುಗಳನ್ನ ಹಾಡಿದ ಗಾಯಕರು.. ಜೊತೆಯಲ್ಲಿ ಅಷ್ಟು ಹಾಡುಗಳಿಗೆ ದಣಿವರಿಯದೆ ಸಂಗೀತ ನೀಡಿದ ಸಂಗೀತಗಾರರಿಗೆ ಈ ಅಕ್ಷರಗಳ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ..

 ಮಂದ ಸ್ಥಾಯಿ ಉಚ್ಚ ಸ್ಥಾಯಿ.. ಯುಗಳ ಗೀತೆ, ಯಾವುದೇ  ಹಾಡು ಕೊಡಿ ಚಚ್ಚಿ ಬಿಸಾಕುತ್ತಿದ್ದ ಗಾಯಕಿ ಶೃತಿ.. ಅವರ ಧ್ವನಿಯ ಏರಿಳಿತ ಸೂಪರ್ ಇತ್ತು.. ಒಂದೆರಡು ಹಾಡು  ಕೇಳಿದ ತಕ್ಷಣ..  ಮುಂದಿನ ಹಾಡು ಇದು ಎಂದು  ತಕ್ಷಣ ನಮಗೆ ಗಾಯಕಿ ಶೃತಿ ಎನ್ನುವುದು ಮನಸ್ಸಿಗೆ ಬರುತ್ತಿತ್ತು.. ಮತ್ತು ಅದು ನಿಜವೂ ಆಗುತ್ತಿತ್ತು.. ಈ  ಗಾಯಕಿಯ ಪ್ರತಿಭೆಗೊಂದು ಸಲಾಂ..

ಭಾವಗೀತೆ, ಕುಣಿಯುವ ಹಾಡು, ಭಾವಪೂರ್ಣ ಹಾಡು, ರಮಣೀಯ ಪ್ರೇಮಗೀತೆ.. ಎಲ್ಲದ್ದಕ್ಕೂ ಸೈ ಎಂದು ಹಾಡುತ್ತಿದ್ದ ಮಹೇಶ್ ಪ್ರಿಯದರ್ಶನ್ ಅದ್ಭುತ.. ಅವರ ಎನರ್ಜಿ ಕಂಡು ನನಗೆ ಅವರ ಹಸ್ತ ಲಾಘವ ಮಾಡುವ ಆಸೆ ಆಗುತ್ತಿತ್ತು.. ಆದರೆ ಒಂದಾದ ಮೇಲೆ ಒಂದು ಹಾಡುಗಳು ಬರುತ್ತಲೇ ಇದ್ದವು.. ಜೊತೆಯಲ್ಲಿ ವೇದಿಕೆಯ ಮೇಲೆ ಹತ್ತಿ  ನಾಚಿಕೆ.. ಮತ್ತು ಸಭಾ ಮರ್ಯಾದೆ ನನ್ನನ್ನು ಹಿಂದಕ್ಕೆ ಉಳಿಸಿತು.. ಕಡೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಪಾದಕ್ಕೆ ಪಾದರಸ ಕಟ್ಟಿಕೊಂಡಂತೆ ಕುಣಿದದ್ದು ಸೂಪರ್ ಇತ್ತು.. ಮಹೇಶ್ ಸರ್ ನಿಮಗೆ ಒಂದು ಸಲ್ಯೂಟ್..

ಹಿಂದಿ ಹಾಡುಗಳ ಉಚ್ಚಾರಣೆ.. ಅದಕ್ಕೆ ಬೇಕಾದ ಭಾವ.. ಗಟ್ಟಿ ಧ್ವನಿ.. ಸರಾಗವಾಗಿ ಹಾಡುತ್ತಿದ್ದ ಶೈಲಿ  ಸುಧೀರ್ ಅವರದ್ದು.. ಅನೇಕ ಹಾಡುಗಳನ್ನು ಸರಾಗವಾಗಿ ಹಾಡಿದ ಸುಧೀರ್.. ಅವರ ಧ್ವನಿ ಇಷ್ಟವಾಯಿತು .. ಹಾಡುವಾಗ ತನ್ಮಯವಾಗಿ ಹಾಡುತ್ತಿದ್ದ ರೀತಿಗೆ ಅಭಿನಂದನೆಗಳು..

ಮರೆಯಲ್ಲಿ ನಿಂತು ಹಾಡುವ ರೀತಿಯಲ್ಲಿ ಹಾಡಿದ ಅನುರಾಧ.. ಎಲ್ಲಾ ಗಾಯಕ ಜೋಡಿಯ ಜೊತೆಗೆ ಸರಾಗವಾಗಿ ಹಾಡುತ್ತಿದ್ದುದು ಸಂಗೀತ ಸಂಜೆಗೆ  ಮೆರುಗು ನೀಡುತ್ತಿತ್ತು.. ಈಕೆಯ ಧ್ವನಿಯ ಇಂಚರ ಇಷ್ಟವಾಗುತ್ತಿತ್ತು .. ಇನ್ನಷ್ಟು ಹಾಡುಗಳು  ಚೆನ್ನಾಗಿರುತ್ತಿತ್ತು ಅನ್ನಿಸುತ್ತಿತ್ತು.... ಈ ಗಾಯಕಿಯ ಧ್ವನಿಗೆ ಒಂದು ಸಲಾಂ..

ಈ ಸಂಗೀತ ಸಂಜೆಗೆ ಇನ್ನೊಂದು ಆಶ್ಚರ್ಯ ಕಾಡಿತ್ತು..  ಚಿತ್ರಕೂಟ ಶಾಲೆಯ ಮುಖ್ಯಸ್ಥರಾದ ಶ್ರೀ ಚೈತನ್ಯ ಅವರು ಹಾಡಿದ್ದು.. ಸರಳ ಸಂಗೀತದ ಏ ರಾತೇ ಏ ಮೌಸಮ್ ಹಾಡಿಗೆ ಶೃತಿಯೊಡನೆ ಹಾಡಿದ್ದು ಎಲ್ಲರಲ್ಲಿಯೂ ಖುಷಿಯ ವಾತಾವರಣ ಮೂಡಿಸಿತು..

ಒಂದು ಸುಂದರ ಸಂಜೆಯನ್ನು ಕಳೆದ ಅನುಭವ ನನಗೆ.. ಇದಕ್ಕೆ ಕಾರಣ ಗೆಳೆಯ ಗುರುಪ್ರಸಾದ್.. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ Zeal fitness ಸಂಸ್ಥೆ, ಚಿತ್ರಕೂಟ ಶಾಲೆಯ ಆಡಳಿತ ವರ್ಗ.. ಜೊತೆಯಲ್ಲಿ ಅದ್ಭುತ ಸಾತ್ ಕೊಟ್ಟ ಜೀವ ಸ್ವರ ತಂಡದ ಸಂಗೀತ ಪರಿಶ್ರಮ.. 

ಇದೆ ಕಾರ್ಯಕ್ರಮದಲ್ಲಿ ಮೊದಲನೇ ವಾರ್ಷಿಕೋತ್ಸವ ಆಚರಿಸಿದ Zeal fitness ಸಂಸ್ಥೆಗೆ ಶುಭಾಶಯಗಳನ್ನು ಕೋರುತ್ತಾ ಇಂದಿನ ಕಾರ್ಯಕ್ರಮದ ಕೆಲವು ತುಣುಕುಗಳು ನಿಮಗಾಗಿ.. 


















ಸೊಗಸಾದ ಗಾಯನ.. ಸೊಗಸಾದ ಸಂಗೀತ.. ಒಂದು ಶನಿವಾರದ ಸಂಜೆಯನ್ನು ಸಾರ್ಥಕತೆಯಿಂದ ಕಳೆದ ಅನುಭವ.. ಇದಕ್ಕೆ  ಕಾರಣರಾದ ಗೆಳೆಯ ಗುರುಪ್ರಸಾದ್ ಅವರಿಗೆ ಅನಂತ ಧನ್ಯವಾದಗಳು ಮತ್ತು ಈ ಲೇಖನವನ್ನು ಗುರುಪ್ರಸಾದ್ ಅವರ ಜೊತೆಗಿನ ಗೆಳೆತನಕ್ಕೆ ಒಂದು ಉಡುಗೊರೆ 

Tuesday, December 12, 2017

ಹೀಗೊಂದು ಭಾವ ಲಹರಿ

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದ ನಿರ್ಧಾರ ಕೊನೆಹಂತಕ್ಕೆ ತಲುಪಿರುತ್ತದೆ.. ಯುದ್ಧ ಬಿಟ್ಟರೆ ಅನ್ಯ ಮಾರ್ಗವಿಲ್ಲ ಎಂದು ತೀರ್ಮಾನವಾದ ಸಮಯ ..  ಪಾಂಡವರು ಮತ್ತು ಕೌರವರು ತಮ್ಮ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ತಮ್ಮ ಸಮಯವನ್ನು ತೊಡಗಿಸಿಕೊಂಡಿರುತ್ತಾರೆ. ಕೌರವರು ಶಕ್ತಿಶಾಲಿ ರಾಜ ಮಹಾರಾಜರುಗಳ ಸಹಾಯ ಹಸ್ತವನ್ನು ಪ್ರೀತಿಯಿಂದಲೋ, ಹೆದರಿಸಿಯೋ ಅಥವಾ ತಂತ್ರಗಾರಿಕೆಯಿಂದಲೋ ತಮ್ಮ ಕಡೆಗೆ ಸೆಳೆದುಕೊಳ್ಳುವುದರಲ್ಲಿ ಸಫಲರಾಗಿರುತ್ತಾರೆ.. 

ಇದರಲ್ಲಿ ಒಂದು ಘಟನೆ.. ಮದ್ರ ದೇಶದ ಮಹಾರಾಜ ಶಲ್ಯ ತನ್ನ ತಂಗಿ ಮಾದ್ರಿಯ ಮಕ್ಕಳಾದ ನಕುಲ ಸಹದೇವರು ಇರುವ ಪಾಂಡವರ ಪಕ್ಷಕ್ಕೆ ಸಹಾಯ ನೀಡಲು ತನ್ನ ಸಮಸ್ತ ಸೈನ್ಯದೊಡನೆ ಕುರುಕ್ಷೇತ್ರದ ಕಡೆಗೆ ಸಾಗುತ್ತಿರುತ್ತಾನೆ.. ಇದನ್ನು ತಿಳಿದ ಶಕುನಿ ಮೆಲ್ಲಗೆ ದುರ್ಯೋಧನನಿಗೆ ಶಲ್ಯನ ಸೇನೆಗೆ ಮತ್ತು ಸೈನಿಕರಿಗೆ ವಿಶಿಷ್ಟ ಅತಿಥಿ ಉಪಚಾರ ಮಾಡು.. ಆದರೆ ಅದನ್ನು ನೀನು ಮಾಡುತ್ತಿದ್ದೀಯ ಎಂದು ತಿಳಿಯದ ಹಾಗೆ ನೋಡಿಕೋ ಎನ್ನುತ್ತಾನೆ.. 

ಶಕುನಿ ಹೇಳಿದ ಮಾತನ್ನು ಕೇಳುತ್ತಿದ್ದ ಮಂದ ಮತೀಯ ಆದರೆ ಛಲವಾದಿಯಾಗಿದ್ದ ದುರ್ಯೋಧನ.. ತನ್ನ ಸೇನೆ ಗೆಲ್ಲಲೇಬೇಕೆಂಬ ಛಲವಿದ್ದದರಿಂದ ಹಾಗೆಯೇ ಮಾಡುತ್ತಾನೆ.. ಇದನ್ನರಿಯದ ಶಲ್ಯ,  ಅತಿಥಿ ಸತ್ಕಾರವನ್ನು ಮಾಡುತ್ತಿರುವುದು ಪಾಂಡವರು ಎಂಬ ಭ್ರಮೆಯಲ್ಲಿ ಖುಷಿಯಾಗಿರುತ್ತಾನೆ.... ಆದರೆ ವಸ್ತುಸ್ಥಿತಿ ಅರಿಯುವಷ್ಟರಲ್ಲಿ ದುರ್ಯೋಧನನ ಉಪ್ಪಿನ ಋಣಕ್ಕೆ ಅಧೀನನಾಗಿ ತನಗೆ ಇಷ್ಟವಿಲ್ಲದೆ ಇದ್ದರೂ ಕೌರವರ ಪರವಾಗಿ ಪಾಂಡವರ ವಿರುದ್ಧ ಯುದ್ಧ ಮಾಡಲು ನಿಲ್ಲುತ್ತಾನೆ.. .. 

ಇಲ್ಲಿ ಶಲ್ಯ ಮಾಡಬಹುದಾಗಿದ್ದು ತನ್ನ ಸೇನೆಗೆ ಅತಿಥಿ ಸತ್ಕಾರ ಸಿಕ್ಕಾಗ ಇದರ ಕತೃ ಯಾರು, ಯಾವ ಕಾರಣಕ್ಕೆ ಸಹಾಯಕ್ಕೆ ಮಾಡುತ್ತಿದ್ದಾರೆ.. ಇದರ ಒಳಾರ್ಥವೇನು, ಇದರಲ್ಲಿ ಏನಾದರೂ ಸಂಚಿದೆಯೇ ಹೀಗೆ ನಾನಾ ರೀತಿಯಿಂದ ಯೋಚಿಸಿ ಅತಿಥಿ ಸತ್ಕಾರ ಸ್ವೀಕರಿಸಬೇಕಿತ್ತು .. ಆದರೆ ತಾನು ಅಂದುಕೊಂಡಿದ್ದು ಸರಿ .. ಇದು ಪಾಂಡವರದೇ ಆತಿಥ್ಯ ಎನ್ನುವ ಒಂದು ತಪ್ಪು ಭ್ರಮೆಯಲ್ಲಿ .. ಆ ಆತಿಥ್ಯವನ್ನು ಸ್ವೀಕರಿಸುತ್ತಾನೆ.. ಮುಂದೆ ನೆಡೆದದ್ದೆಲ್ಲಾ ಉಲ್ಟಾ.. 

ಮಾಧ್ಯಮಗಳು ಶಲ್ಯ ಅಥವಾ ದುರ್ಯೋಧನನ ರೀತಿಯಲ್ಲಿ ವರ್ತಿಸಬಾರದು.. ವಸ್ತುನಿಷ್ಠವಾಗಿ ಇರುವ ವಿಷಯವನ್ನು ಸರಿಯಾದ ದಿಕ್ಕಿನಲ್ಲಿ ಇದೆಯೇ.. ಇದನ್ನು ಬಿತ್ತರಿಸಿದರೆ ಸಮಾಜಕ್ಕೆ ಎಳ್ಳಷ್ಟಾದರೂ ಉಪಯೋಗವಿದೆಯೇ.. ಇದನ್ನು ಯಾಕೆ ಬಿತ್ತರಿಸಬೇಕು ಎನ್ನುವ  ಸ್ಪಷ್ಟತೆ ಇದ್ದರೇ ಅಥವಾ ಇದ್ದಾಗ ಅನುಕೂಲ.. ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎನ್ನುವಂತೆ.. ಅಂದಿನ ದಿನಕ್ಕೆ ಜನಪ್ರಿಯತೆಯ ಮೈಲಿಗಲ್ಲು ದಾಟುವ ಹಾದಿ ಹಿಡಿಯಬಾರದು.. 

ಜನಸಾಮಾನ್ಯರಿಗೆ ಯಾವ ಸುದ್ದಿ ಬೇಕು, ಇಂತಹ ಸುದ್ದಿ ಬೇಕು ಎಂದು ವಿಚಾರ ಮಾಡುವುದಕ್ಕಿಂತ.. ಸಮಾಜದಲ್ಲಿ ನೆಡೆಯುತ್ತಿರುವ ಸಾಮಾಜಿಕ ಕಳಕಳಿಯುಳ್ಳ ವಸ್ತು ವಿಷಯವನ್ನು ಜನಮಾನಸದಲ್ಲಿ ಬಿತ್ತಬೇಕು.. 

ನಾನು ೮೦ರ ದಶಕದ ಆರಂಭದಲ್ಲಿ ಮಯೂರದಲ್ಲಿ ಓದಿದ್ದೆ.... ಅಂದು ಹೆಣ್ಣಿನ ಓರೇ ನೋಟ.. ಗೆಜ್ಜೆ ಸದ್ದಿಗೆ ಮಾನವ ವಿಚಲಿತನಾಗುತ್ತಿದ್ದ.. ಆದರೆ ಇಂದು ಗೆಜ್ಜೆ ಸದ್ದು, ಓರೇ ನೋಟ ಸಾಕಾಗುವುದಿಲ್ಲ.... ಇದು ಸುಮಾರು ೩೭ ವರ್ಷಗಳ ಹಿಂದೆ ಓದಿದ್ದು.. ಆದರೆ ಇಂದಿಗೂ ಅನ್ವಯಿಸುತ್ತದೆ..

ಇಂದು ಯಾವುದೇ ಮಾಧ್ಯಮ ನೋಡಿದರು ಅದು ಮುದ್ರಣವಾಗಿರಬಹುದು ಇಲ್ಲವೇ ದೃಶ್ಯ ಮಾಧ್ಯಮವಾಗಿರಬಹುದು.. ಹಠಾತ್ ನಶೆಯೇರುವಂಥಹ ಕಾರ್ಯಕ್ರಮದ ವಿವರಣೆಯೇ ಪ್ರಾಧಾನ್ಯತೆ ಪಡೆದುಕೊಂಡಿರುತ್ತದೆ.. 

ಸುಮ್ಮನೆ ಹಾಗೆ ಪ್ರಶ್ನೆ ಕೇಳಿದರೆ ಜನರು ಬದಲಾಗಿದ್ದಾರೆ ಅವರಿಗೆ ಇಂತಹ ದೃಶ್ಯಗಳೇ ಇಂತಹ ವಿಷಯಗಳೇ ಬೇಕು ಎಂಬ ಹಾರಿಕೆ ಉತ್ತರ ನೀಡುತ್ತಾರೆ.. 

ನಾ ಹೇಳುವ ಮಾತು ಎಂದರೆ.. ಮಂದಿಯ ಯೋಚನೆ ಬದಲಾಗಿಲ್ಲ.. ಅದನ್ನು ಬಿತ್ತರಿಸುವ ಮಾಧ್ಯಮದ ಅಭಿರುಚಿ ಬದಲಾಗಿದೆ..ಅದರಿಂದ ಜನರ ಅಭಿರುಚಿಯೂ ಹದಗೆಟ್ಟಿದೆ..  ಪ್ರತಿ ದೇಶದ ಭವಿಷ್ಯ ನಿನ್ನೆಯ ವೃತ್ತ ಪತ್ರಿಕೆಯಲ್ಲಿದೆ ಎಂದು ಓದಿದ್ದೆ ಶಾಲೆಯಲ್ಲಿದ್ದಾಗ.. ಹೌದು ಎಷ್ಟು ನಿಜ.. ವೃತ್ತ ಪತ್ರಿಕೆಗಳು ದೇಶದ ಇತಿಹಾಸ, ವಾಣಿಜ್ಯ, ಕ್ರೀಡಾರಂಗ, ರಾಜಕೀಯ, ಕಲೆ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಚಿತ್ರಣ ನೀಡುತ್ತಾ.. ಸಮಾಜ ಹೀಗಿದೆ .. ಆದರೆ ಅದನ್ನು ಹೀಗೆ ಸರಿ ಮಾಡಬಹುದು ಎನ್ನುವ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾದಾಗ.. ಜನ ಸಾಮಾನ್ಯರಿಗೆ ಹೌದಲ್ಲ ನಮ್ಮ ದೇಶದಲ್ಲಿ ಹೀಗೆಲ್ಲ ಆಗುತ್ತಿದೆ.. ದೇಶದಲ್ಲಿ ಇಂತಹ ಅದ್ಭುತ ಸಂಪತ್ತು ತುಂಬಿದೆ.. ಇದನ್ನು ಸಮರ್ಪಕವಾಗಿ ಉಪಯೋಗಿಸಿದಾಗ ದೇಶದ ಪ್ರಗತಿ ಕಾಣುತ್ತದೆ ಎನ್ನುವ ಸತ್ಯವನ್ನು ಅರಿತುಕೊಳ್ಳುತ್ತಾರೆ.. 

ಇಲ್ಲಿ ಯಾವುದೇ ಪ್ರಜೆಯಾದರೂ ಮಾಧ್ಯಮಗಳ ಜೊತೆ ನಿಲ್ಲುವುದು ದಿನದಲ್ಲಿ ಕಡಿಮೆ ಪ್ರಮಾಣದಲ್ಲಿ.. ಕಾರಣ ಅವನದೇ ಆದ ಸಾಂಸಾರಿಕ ಗೊಂದಲಗಳು, ಭವಿಷ್ಯದ ಬಗ್ಗೆ ಇರುವ ಹೆದರಿಕೆ, ಜವಾಬ್ಧಾರಿಗಳು ಹೀಗೆ ನೂರಾರು, ಸಾವಿರಾರು ಸಮಸ್ಯೆಗಳ ಜೊತೆಯಲ್ಲಿ ಈಜಾಡುತ್ತಿದ್ದಾಗ.. ತನ್ನ ಉತ್ತಮ ಜವಾಬ್ಧಾರಿಯನ್ನು ಮರೆತು ಕೇವಲ ಯಶಸ್ಸಿನ ಏಣಿಯನ್ನೇ ಮಾನದಂಡವಾಗಿಟ್ಟುಕೊಂಡು ಬೇಡದ ವಿಷಯವನ್ನು ರಂಜನೀಯವಾಗಿ ಬಿತ್ತರಿಸಿ / ಮುದ್ರಿಸಿ ಪ್ರಜೆಗಳನ್ನು ಹಾದಿ ತಪ್ಪಿಸುವ ಇಲ್ಲವೇ ಇರುವ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಕ್ಕೆ ಕೈ ಹಾಕುವುದು ತಪ್ಪಾಗುತ್ತದೆ.. 

ಅದೆಲ್ಲ ಸರಿ ಇದಕ್ಕೆ ಏನೂ ಮಾಡಬೇಕಪ್ಪ.. ಬರಿ ಹರಿಕಥೆ ಮಾಡಿದರೆ ಸಮಸ್ಯೆಗಳಿಗೆ ಉತ್ತರ ಸಿಗಬಹುದೇ ಎಂದರೆ ಖಂಡಿತ ಉತ್ತರ ಸಿಗೋಲ್ಲ, ಬದಲಿಗೆ ಸಮಾಜಕ್ಕೆ ಹಂಚುವ ವಿಷಯವನ್ನು ಸರಿಯಾದ ಮಾನದಂಡದಲ್ಲಿ ಬಿತ್ತರಿಸುವ ಶಕ್ತಿ ತಮಗೆ ಇದೆ ಎನ್ನುವದನ್ನು ಜನತೆಗೆ ತೋರಿಸಬೇಕು.. ಅಯ್ಯೋ ಬಿಡು ಎಷ್ಟು ಮಾಡಿದರೂ ಅಷ್ಟೇ ಎನ್ನುವ ಧೋರಣೆ ಮಾಧ್ಯಮಗಳಲ್ಲಿ ಬರಬಾರದು.. 

ಬೆಳಿಗ್ಗೆ ಎದ್ದು  ಸುದ್ದಿವಾಹಿನಿಗಳಲ್ಲಿ.. ಬರಿ ಸುದ್ದಿವಾಹಿನಿಯೇ ದೂರದರ್ಶನ ಎಂದು ಹೇಳಿದರೆ ಒಳ್ಳೆಯದೇನೋ ಅಥವಾ ವೃತ್ತ ಪತ್ರಿಕೆಯಲ್ಲಿ ಸುದ್ದಿಯನ್ನು ನೋಡುವ ಅಥವಾ ಓದುವ ಜನಸಾಮಾನ್ಯನ ಹೃದಯಕ್ಕೆ ಭಯಬೀತರಾಗುವಂಥಹ ಕೊಲೆ, ಸುಲಿಗೆ, ಭ್ರಷ್ಟಾಚಾರ, ಮೋಸ, ದಗಾ ಎನ್ನುವ ನೂರಾರು ಋಣಾತ್ಮಕ ವಿಷಯಗಳನ್ನು ಬಲವಂತವಾಗಿ ತುರುಕಿ.. ಅರೆ ನಮ್ಮ ಸಮಾಜ ಇರುವುದೇ ಹೀಗೆ..ಉಪಯೋಗವಿಲ್ಲ.. ನಾ ಒಬ್ಬ ಯಾಕೆ ಹಾಗಿರಬೇಕು.. ಹೀಗಿರಬೇಕು ಎನ್ನುವ ಕಾಡುವಂತಹ ಪ್ರಶ್ನೆಗಳಿಗೆ ಉತ್ತರ ನಿಲುಕದೆ.. ಆ ಕೆಟ್ಟ ವ್ಯವಸ್ಥೆಯಲ್ಲಿ ತಾನು ಒಂದಾಗುವುದೇ ಬಾಳಿನ ಕರ್ತವ್ಯ ಎನ್ನುವಂತಹ ನಿರ್ಧಾರಕ್ಕೆ ಬರುತ್ತಾನೆ.. ಇದಲ್ಲವೇ ಅಪಾಯದ ಮಟ್ಟ.. 

ಮತ್ತೊಮ್ಮೆ ಮಹಾಭಾರತದ ಎಳೆಯನ್ನು ಇಲ್ಲಿ ತರಲು ಇಚ್ಛಿಸುತ್ತೇನೆ.. ಕುರುಕ್ಷೇತ್ರ ಯುದ್ಧ ಮುಗಿಯುತ್ತದೆ.. ಅರ್ಜುನ ಮತ್ತು ಭೀಮ ಅಸಾಮಾನ್ಯ ಕಲಿಗಳಂತೆ ಹೋರಾಡಿ ಪಾಂಡವರ ವಿಜಯದಲ್ಲಿ ಮುಖ್ಯ ಪಾತ್ರವಹಿಸಿರುತ್ತಾರೆ.. ಇದನ್ನು ಮಾನವ ಸಹಜ ಅಹಂ ಬರುತ್ತದೆ.. ನನ್ನಿಂದ ನನ್ನಿಂದ ಎಂದು ವಾಗ್ವಾದ ಶುರುವಾಗುತ್ತದೆ.. ಆಗ ಜಗನ್ನಾಟಕ ಸೂತ್ರಧಾರಿ ಶ್ರೀ ಕೃಷ್ಣ.. ಬರ್ಬರೀಕಾನನ್ನ ಕೇಳು ಎನ್ನುತ್ತಾನೆ.. ಆಗ ಬರ್ಬರೀಕಾ  " ಕುರುಕ್ಷೇತ್ರದಲ್ಲಿ ಅಧರ್ಮಿಗಳನ್ನು ಕೊಲ್ಲುತ್ತಿದ್ದುದು ನನಗೆ ಕಂಡ ಹಾಗೆ ಬರಿ ಸುದರ್ಶನ ಚಕ್ರ ಒಂದೇ.... ಅದು ಶ್ರೀಕೃಷ್ಣನದು.. ಹಾಗಾಗಿ ಕುರುಕ್ಷೇತ್ರ ಗೆದ್ದದ್ದು ಶ್ರೀಕೃಷ್ಣನಿಂದಲೇ ಹೊರತು ನಿಮ್ಮಿಂದ ಅಲ್ಲ ಎಂದು ಭೀಮಾರ್ಜುನರಿಗೆ ಹೇಳುತ್ತಾನೆ.. ಮುಂದೆ ಏನಾಗುತ್ತದೆ..  ಅದು ಇಲ್ಲಿನ ವಿಷಯಕ್ಕೆ ಹೊಂದುವುದಿಲ್ಲ.. ಆದರೆ ಈ ಮಾಧ್ಯಮಗಳು ಯಾರದೋ ಕಾಣದ ಕೈಯಿನ ಮರ್ಜಿಗೆ ಒಳಪಟ್ಟು ಕೆಲಸ ಮಾಡುತ್ತಿರುತ್ತದೆ ಎನ್ನುವುದಕ್ಕೆ ಈ ಉದಾಹರಣೆ ನೀಡಿದೆ.. 

ಕಾಣದ ಕೈಗಳು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಸೃಷ್ಟಿ ಮಾಡುವ ಈ ಮಾಧ್ಯಮಗಳಿಗೆ ದೇಶದ ಪ್ರಗತಿ, ಒಳಿತು ಬೇಕಿಲ್ಲ, ಬದಲಿಗೆ ರಂಗುರಂಗಿನ ವಿಷಯವನ್ನು ತುಂಬಿ ಜನಪ್ರಿಯತೆ ಹೆಚ್ಚಿಸಿಕೊಂಡು ಜಾಹೀರಾತಿನಿಂದ ಬೆಳೆಯುವ ಆಸೆ.. ಹೀಗಿರುವಾಗ ಸಮಾಜಕ್ಕೆ ಒಳ್ಳೆಯದಾಗಬೇಕೆಂದರೆ.. ಕಣ್ಣು ಮುಚ್ಚಿಕೊಂಡು "ಯದಾ ಯದಾ ಹಿ ಧರ್ಮಸ್ಯ..... " ಹೇಳುತ್ತಾ ಕೂರಬೇಕು.. 

ಡಾ. ರಾಜಕುಮಾರ್ ಅವರ ಜ್ವಾಲಾಮುಖಿ ಚಿತ್ರದ "ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ" ಹಾಡಿನಂತೆ ಜನಸಾಮಾನ್ಯನ ಮನಸ್ಸನ್ನು ಗೊಂದಲಮಯವಾಗಿ ಮೂಡಿಸುತ್ತಾರೆ. 

ಒಂದು ತಿಂಗಳು ದೃಶ್ಯ ಮಾಧ್ಯಮಗಳನ್ನೂ , ಮುದ್ರಣ ಮಾಧ್ಯಮಗಳನ್ನು ಋಣಾತ್ಮಕ ಸುದ್ದಿಗಳನ್ನೂ ಬಿತ್ತರಿಸುವುದನ್ನು ನಿಲ್ಲಿಸಿಬಿಟ್ಟರೆ  ಜೊತೆಯಲ್ಲಿ ಪ್ರಜೆಗಳಿಗೆ ಸುದ್ದಿಯೇ ಒಂದು ಅತಿಥಿಯಾದರೆ ಆಗ ಪ್ರಜಾಪ್ರಭುತ್ವದಲ್ಲಿ ಎಂಥಹ ಬದಲಾವಣೆ ಬರಬಹುದು ನೋಡಿ.. ಅಪರಾಧ, ಕೊಲೆ, ಸುಲಿಗೆ, ದರೋಡೆ, ಲಂಚ, ರಾಜಕೀಯ, ಮೋಸ ಇದ್ಯಾವೂ ಋಣಾತ್ಮಕ ಅಂಶಗಳು ಅವನನ್ನು ಕಾಡುವುದಿಲ್ಲ.. ನನ್ನ ಸಮಾಜ ಚೆನ್ನಾಗಿದೆ ಎನ್ನುವ ಹಂತಕ್ಕೆ ಬರುತ್ತಾನೆ.. 

ಅದೇ ರೀತಿ ಇನ್ನೊಂದು ತಿಂಗಳು ಬರಿ ಧನಾತ್ಮಕತೆಯಿಂದ ಕೂಡಿರುವ ವಿಷಯಗಳನ್ನು ಮಾತ್ರ ಬಿತ್ತರಿಸಲು ಅನುವು ಮಾಡಿಕೊಟ್ಟರೆ.. ಜನಸಾಮಾನ್ಯನ ಮನಸ್ಸು ಹತ್ತಿಯಂತೆ ಹಗುರಾಗಿರುತ್ತದೆ.. ಹೌದು ತನ್ನ ಸಂಸಾರದ ಸುಖ ದುಃಖಗಳನ್ನೂ ನುಂಗಿಕೊಂಡು.. ಅರೆರೇ ಜೀವನವನ್ನು ಹೀಗೂ ಸಾಗಿಸಬಹುದು.. ಹಾಗೆಯೇ ನಾ ಅಂದುಕೊಂಡಷ್ಟು ರೀತಿಯಲ್ಲಿ ಪ್ರಪಂಚವಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾನೆ.. 

ಬದಲಾವಣೆ ಅವನಲ್ಲಿ ಕಾಣಸಿಗುತ್ತದೆ.. "ನಾ" ಹೋದರೆ ಹೋದೆನು ಎನ್ನುವ ಕನಕದಾಸರ ನುಡಿಯಂತೆ.. ನಾ ಒಳ್ಳೆಯವನಾದರೆ ಜಗತ್ತು ಒಳ್ಳೆಯದಾಗಿಯೇ ಕಾಣಿಸುತ್ತದೆ ಎನ್ನುವ ಮನೋಭಾವನೆಗೆ ಆವನು ಬರುತ್ತಾನೆ.. ಸಹಜ ಸುಂದರ ನಟ ಅನಂತ್ ನಾಗ್ ಅವರ ಬೆಳದಿಂಗಳ ಬಾಲೆ ಚಿತ್ರದಲ್ಲಿ ಹೇಳುತ್ತಾರೆ.. 
"ಮನುಜ ನಾಲ್ಕು ಹಂತಗಳಲ್ಲಿ ಬೆಳೆಯುತ್ತಾನೆ 
ನಾ ಚೆನ್ನಾಗಿಲ್ಲ ಪ್ರಪಂಚವೂ ಚೆನ್ನಾಗಿಲ್ಲ 
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ 
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ 

ಆದರೆ ನಾಲ್ಕನೇ ಹಂತದಲ್ಲಿ 
ನಾನೂ ಚೆನ್ನಾಗಿದ್ದೇನೆ.. ಪ್ರಪಂಚವೂ ಚೆನ್ನಾಗಿದೆ 

ನಾವುಗಳು ಈ ನಾಲ್ಕನೇ ಹಂತಕ್ಕೆ ಬರಬೇಕು ಎನ್ನುತ್ತಾರೆ.. ಎಷ್ಟು ನಿಜ ಅಲ್ಲವೇ ನೋಡುವ ನೋಟ ಚೆನ್ನಾಗಿದ್ದರೆ ಎಲ್ಲವೂ ಸುಂದರವಾಗಿರುತ್ತದೆ ಎನ್ನುವ ಮಾತುಗಳು ಬಂದಿರುವುದು ಹೀಗೆ.. 

ಮಾಧ್ಯಮಗಳು ಸಮಾಜಕ್ಕೆ ಕಣ್ಣಿದ್ದ ಹಾಗೆ.. ಆ ಕಣ್ಣುಗಳು ಜನ ಸಾಮಾನ್ಯರಿಗೆ ಬೇಡದ ವಿಷಯಗಳನ್ನು ಬಿತ್ತರಮಾಡಿ ಅವನ ಮಾನಸ ಸರೋವರವನ್ನು ರಾಡಿಗೊಳಿಸುವ ಬದಲು....  ಬಾರಪ್ಪ ನಾ ನಿನಗೆ ಒಂದು ಸುಂದರ ಸಮಾಜದ ಪರಿಕಲ್ಪನೆಯನ್ನು ಬಿತ್ತುವ ಕೆಲಸ ಮಾಡುತ್ತೇನೆ.. ಅದಕ್ಕೆ ನಿನ್ನ ಸಹಯೋಗವೂ ಇರಲಿ ಎಂದಾಗ 

"ಜಗವೇ ಒಂದು ರಣರಂಗ"
ಎಂದು ಹಾಡುವ ಬದಲು 
ಜಗವೇ ಒಂದು ಸತ್ಯ ಸಂಘ 

ಎನ್ನುವ ಪರಿಭಾಷೆಗೆ ಮನುಜನ ಮನಸ್ಸು ಹೊಂದಿಕೊಳ್ಳುತ್ತಾ ಸಾಗುತ್ತದೆ ..  ಸುದ್ದಿ ಎಂದರೆ ಬರಿ ಋಣಾತ್ಮಕವಾಗಿಯೇ ಇರಬೇಕು.. ಹಾಗಿದ್ದರೆ ಮಾತ್ರ ಯಶಸ್ಸು ಅಂಗೈಯಲ್ಲಿ ಎನ್ನುವ ಭ್ರಮೆಯನ್ನು ಕಳಚಿ ಹೊರಬಂದಾಗ ಮಾತ್ರ ಉಳಿವು... ಇಲ್ಲವೇ ಅಳಿವು.. 

ಮೇಯರ್ ಮುತ್ತಣ್ಣ ಚಿತ್ರದಲ್ಲಿ ದೇಶದ ಬಡತನವನ್ನು ಎತ್ತಿ ಹಿಡಿದು ಅದಕ್ಕೆ ರಂಗು ತುಂಬಿ ಬಹುಮಾನ ಪ್ರಶಂಸೆ  ಗಿಟ್ಟಿಸಿಕೊಳ್ಳುವ ಹಾದಿಯಲ್ಲಿದ್ದ ನಾಯಕಿಗೆ ಅಣ್ಣಾವ್ರು ಹೇಳುವ ಮಾತು "ನಾವು ಮಾಡುವ ಕೆಲಸ ನಾಲ್ಕು ಜನಕ್ಕೆ ಉಪಯೋಗವಾಗಬೇಕು.. " ಎನ್ನುವ ಮಾತು ಈ ಹೊತ್ತಿಗೆ ಎಷ್ಟು ನಿಜ ಅಲ್ಲವೇ.. !!!

ಬೆಳೆಯುವ ಮಕ್ಕಳಿಗೆ ಈ ಮಾಧ್ಯಮಗಳು ಕೊಡುವ ಜ್ಞಾನವಾದರೂ ಏನೂ.. ಅದು ಎಲ್ಲರಿಗೂ ಗೊತ್ತಿದೆ.. ಮಕ್ಕಳನ್ನು ದೇಶದ ಆಸ್ತಿ ಮಾಡಬೇಕಾದರೆ ಮಕ್ಕಳಿಗೆ ಸುಂದರ ಪರಿಸರ ಕಟ್ಟಿಕೊಡುವ ಹೊಣೆ ಮಾಧ್ಯಮಗಳದ್ದು ಆಗಿರುತ್ತದೆ.. ಒಳ್ಳೆಯ ವಿಷಯ, ಒಳ್ಳೆಯ ಬರವಣಿಗೆ, ಒಳ್ಳೆಯ ನೀತಿ ವಿಷಯ.. ವಸ್ತುನಿಷ್ಠ ವರದಿಗಳು, ಜೊತೆಯಲ್ಲಿ ಹಿಂಸೆ, ಕ್ರೌರ್ಯವನ್ನು ವೈಭವೀಕರಿಸದೆ..ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಈ ಮಾಧ್ಯಮಗಳು ದುಡಿದರೆ ಆಗ ಚಂದವಳ್ಳಿ ತೋಟದ ಚಿತ್ರದ ಅಂತಿಮ ದೃಶ್ಯದಲ್ಲಿ ಹೇಳುವ ಮಾತು ನೆನಪಿಗೆ ಬರುತ್ತದೆ "ಅಣ್ಣ ತಮ್ಮ ಒಂದಾಗಿದ್ದಾರೆ ಮನೆ ಒಂದಾಗಿರುತ್ತದೆ.. ಮನೆ ಮನೆ ಒಂದಾಗಿದ್ದಾರೆ ಊರು ಒಂದಾಗಿರುತ್ತದೆ.. ಊರು ಊರು ಒಂದಾಗಿದ್ದಾರೆ ರಾಜ್ಯ ಒಂದಾಗಿರುತ್ತದೆ.. ರಾಜ್ಯ ರಾಜ್ಯ ಒಂದಾಗಿದ್ದಾರೆ ದೇಶ ಸುಭಿಕ್ಷವಾಗಿರುತ್ತದೆ... ಭಯಂಕರ ಆಶಾವಾದ ಮಾತು ನನದಾಗಿರಬಹುದು.. ಆದರೆ ನಾಳೆ ಎನ್ನುವುದು ನಮಗೆ ಅರಿವಿಲ್ಲ ಮತ್ತು  ಅದರ ಬಗ್ಗೆ ಯೋಜನೆ ಇಲ್ಲ ಅಂದರೆ ಮನೆಯಾಗಲಿ, ಊರಾಗಲಿ, ಹಳ್ಳಿಯಾಗಲಿ, ಊರಾಗಲಿ, ರಾಜ್ಯವಾಗಲಿ, ದೇಶವಾಗಲಿ ಮುಂದುವರೆಯಲು ಕಷ್ಟವಾಗುತ್ತದೆ.. ಅಂತಹ ತಿಳಿಯಾದ  ಸಮಾಜವನ್ನು ಸೃಷ್ಟಿಸುವ ಹೊಣೆಗಾರಿಕೆ ಮಾಧ್ಯಮಗಳದ್ದು ಅಲ್ಲವೇ.. 

ಸಮಾಜಕ್ಕೆ ಕನ್ನಡಿಯಾಗಬೇಕಾದ ಸುದ್ದಿ ಮಾಧ್ಯಮಗಳು, ದೃಶ್ಯಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಒಡೆದ ಬಿಂಬವನ್ನು ತೋರಿಸುವ ಬದಲು.. ಮನಸ್ಸಿನ ಭಾವನೆಯನ್ನು ಕೆರಳಿಸುವಂಥಹ ವಿಷಯಗಳನ್ನು ಪ್ರಕಟ ಮಾಡುವ ಬದಲು.. ಮನಸ್ಸು ಒಂದು ಹೂವಿನಂತೆ ಅದಕೆ ಬೇಕಾಗುವ ತಿಳಿಯಾದ ನೀರಿನಂತಹ ವಿಷಯಗಳನ್ನು ಧಾರೆಯೆರೆದು ಮಲ್ಲಿಗೆ ಹೂವನ್ನು ಬೆಳೆಸುವುದರಲ್ಲಿ ಅವುಗಳ ಶಕ್ತಿ ಅಡಗಿದೆ ಎನ್ನುವುದು ನನ್ನ ಮಾತು :-)