Monday, June 17, 2013

ಸಾಮೀ ಎದ್ದು ಕೂತವ್ನಂತೆ!!!

ಜನರೆಲ್ಲಾ ಎದ್ದು ಬಿದ್ದು ಓಡುತ್ತಿದ್ದರು.. !

ಇತರರಿಗೆ ಆಶ್ಚರ್ಯವಾಯಿತು... ವೇಗವಾಗಿ ಓಡುತ್ತಿದ್ದ ಒಬ್ಬನನ್ನು ಬಲವಂತವಾಗಿ ಹಿಡಿದು "ಏನಪ್ಪಾ?...  ಏನಾಯ್ತು? ಯಾಕೆ ಹೀಗೆ ದೆವ್ವ ಕಂಡವರ ಹಾಗೆ ಓಡ್ತಾ ಇದ್ದೀರಾ?"  ಅಂತ ಕೇಳಿದ ಒಬ್ಬ. 

ಏದುಸಿರು ಬಿಡುತ್ತಾ "ಸಾಮೀ ಎದ್ದು ಕೂತವ್ನಂತೆ?... ಬಿಡಿ ಸಾಮೀ ನಾನು ಹೋಗ್ಬೇಕು" ಅಂತ ಬಲವಂತವಾಗಿ ಬಿಡಿಸಿಕೊಂಡು ಓಡಲು ಶುರು ಮಾಡಿದ... ಮತ್ತೆ ಅವನ ಹಿಂದೆ ಓಡಿ ಹೋಗಿ ಹಿಡಿದುಕೊಂಡು, 

"ಏನಪ್ಪಾ... ಸರಿಯಾಗಿ ಅರ್ಥವಾಗುವಂತೆ ಕನ್ನಡದಲ್ಲಿ ಹೇಳಬಾರದೇ.. ದಯಮಾಡಿ ಹೇಳಪ್ಪ" ಅಂತ ಅಂಗಲಾಚಿದ,

"ಸಾಮೇ ಬುಡಿ ಸಾಮೇ ನನ್ನ" ಅಂತ ಕೊಸರಾಡಿದ... ಹಿಡಿದವನು ಪಟ್ಟು ಬಿಡಲಿಲ್ಲ.. 

"ಸಾಮಿ.. ನೀವೂ ಬನ್ನಿ ನಾ ಅಲ್ಲಿಗೆ ಹೋಯ್ತಾ ಇವ್ನೀ.. " ಅಂತ ಆತನನ್ನು ಕರೆದೊಯ್ದಾ!

ಎಲ್ಲರೂ ದೇವಸ್ಥಾನದೊಳಗೆ  ಬಂದರು.. ಅಲ್ಲಿನ ಅರ್ಚಕರು ಗಡ ಗಡ ನಡುಗುತ್ತಿದ್ದರು... ಒಮ್ಮೆ ಗರ್ಭ ಗುಡಿಯ ಕಡೆ ನೋಡುತ್ತಾರೆ ಇನ್ನೊಮ್ಮೆ ಜನಗಳ ಕಡೆ ನೋಡುತ್ತಾರೆ.... 

ಅಲ್ಲಿ ನೆರೆದಿದ್ದ ಜನರಿಗೆ ಆಶ್ಚರ್ಯ... ಭಯ... ಎಲ್ಲವೂ ಒಮ್ಮೆಲೇ...! ಏನಾಯ್ತಪ್ಪ? ಅಂತ ಹುಬ್ಬನ್ನು ಮೇಲೆ ಮಾಡಿ ಅರ್ಚಕರಿಗೆ ಕಣ್ಣು ಸನ್ನೆಯಲ್ಲೇ ಕೇಳಿದರು

ಅರ್ಚಕರು ನಡುಗುವ ತನುವಿಂದ.. ಕಣ್ಣನ್ನು ಗರ್ಭಗುಡಿಯ ಕಡೆ ತೋರಿಸಿದರು... 

ಅಲ್ಲಿನ ದೃಶ್ಯ ನೋಡಿ ಜನಗಳ ಕೈಗಳು, ತುಟಿಗಳು, ಕಾಲುಗಳು ನಡುಕ ಹತ್ತಿದವು.. ಇದ್ದದರಲ್ಲಿ ಧೈರ್ಯವಂತರಂತಿದ್ದ  ಒಬ್ಬರು ಗರ್ಭ ಗುಡಿಯ ಒಳಗೆ ಹೋಗಿಯೇ ಬಿಟ್ಟರು.. ಅಲ್ಲಿನ ದೃಶ್ಯ ನೋಡಿ ಅವರ ಕಣ್ಣುಗಳು ತುಂಬಿಬಂದವು... 

ಕಣ್ಣನ್ನು ಒರೆಸಿಕೊಂಡು  ನಡುಗುವ ಕೈಗಳಿಂದ ರಂಗನಾಥನಿಗೆ ಸಾಷ್ಟ್ರಾಂಗ ನಮಸ್ಕಾರ ಮಾಡಿ "ದೇವನೇ ಏನಪ್ಪಾ ಇದು ನಿನ್ನ ಲೀಲೆ... ಸನಕ ಸನಂದಾದಿಗಳಿಗೆ ಸಿಕ್ಕದ ಭಾಗ್ಯ ನನಗೆ ಸಿಕ್ಕುವಂತೆ ಮಾಡಿದೆ.. ದೇವನೇ ನಿನ್ನ ಕರುಣೆ ಸದಾ ನಮ್ಮೆಲ್ಲರ ಮೇಲೂ ಇರಲಿ ತಂದೆ" ಎನ್ನುತ್ತಾ ಹೊರಗೆ ಬಂದು.. 

ಅಲ್ಲಿನ ಅರ್ಚಕರನ್ನು ಕರೆದು "ಬನ್ನಿ ಸ್ವಾಮೀ ಒಳಗೆ ಹೋಗಿ ಬನ್ನಿ" ಎಂದರು..  

"ಸರ್ ನೀವು ಬಂದರೆ ಮಾತ್ರ ನಾವು ಒಳಗೆ ಬರುತ್ತೇವೆ... !"ಎಂದರು ಅರ್ಚಕರು.. 

"ಸರಿ ನಡೆಯಿರಿ ಬರುತ್ತೇನೆ" ಎಂದು ಮತ್ತೆ ಗರ್ಭಗುಡಿಯೊಳಗೆ ಬಂದರು

ಅರ್ಚಕರಿಗೆ ಕಣ್ಣ ಮುಂದೆ ನೆಡೆಯುತ್ತಿರುವುದು ನಿಜವೋ...... ಸುಳ್ಳೋ.... ಪವಾಡವೋ...  ತಿಳಿಯುತ್ತಿಲ್ಲ.. ಕಣ್ಣಿನ ಎವೆ ಕೂಡ ಮಿಟುಕಿಸದೆ  ನೋಡುತ್ತಲೇ ಇದ್ದರು.. !

ಧೈರ್ಯವಂತರಾಗಿದ್ದ ಅವರು ಧೈರ್ಯ ಮಾಡಿ ಕೇಳಿಯೇ ಬಿಟ್ಟರು 

"ಏನು ಸ್ವಾಮೀ..ನಿನ್ನ ಲೀಲೆ ...  ಧರೆಗಿಳಿದು ಬಂದ ಕಾರಣ ತಿಳಿಯುತ್ತಿಲ್ಲ...." 

ಪ್ರಸನ್ನ ಚಿತ್ತನಾದ ಶ್ರೀ ರಂಗನಾಥ ಸ್ವಾಮೀ .. ಅಲ್ಲಿಯೇ ಕುಳಿತಿದ್ದ ಶ್ರೀ ಲಕ್ಷ್ಮಿಯ ಕಡೆ ನೋಡಿ ಮುಗುಳು ನಗೆ ಬೀರಿದರು.. 

ಆಗ ಶ್ರೀಲಕ್ಷ್ಮೀ "ಭಕ್ತ.. ಸ್ವಾಮಿಗೆ ಮುಂಜಾನೆ ಏನು ಅನ್ನಿಸಿತೋ ಏನೋ.. ಅಚಾನಕ್ಕಾಗಿ ಶ್ರೀಲಕ್ಷ್ಮಿ ಕಾಲು ಒತ್ತಿದ್ದು ಸಾಕು ಅಲ್ಲಿಯೇ ಇರುವ ಲ್ಯಾಪ್-ಟಾಪ್ ಕೊಡು" ಎಂದರು.. 

ನಾನು ಆಶ್ಚರ್ಯಚಕಿತಳಾಗಿ  "ಯಾಕೆ ಸ್ವಾಮೀ.. ಏನಾಯಿತು ನಾಥ" ಎಂದು ಕೇಳಿದೆ 

ಅದಕ್ಕೆ ಸ್ವಾಮಿಯು "ಲಕ್ಷ್ಮಿ.. ಯಾಕೋ ಮಲಗಿ ಮಲಗಿ ಸಾಕಾಗಿದೆ ಶ್ರೀರಂಗಪಟ್ಟಣದ ಚರಿತ್ರೆಯನ್ನು ಒಮ್ಮೆ ಓದುವ ಆಸೆ ಮೂಡುತ್ತಿದೆ.. ಅದಕ್ಕಾಗಿ  ಲ್ಯಾಪ್-ಟಾಪ್ ಬೇಕು" ಅಂತ ಹೇಳಿದರು 

"ಹೇಗೆ ನೋಡುತ್ತೀರಿ ಸ್ವಾಮಿ" ಎಂದೇ ನಾನು

"ಮೈಸೂರಿನಲ್ಲಿರುವ ನಿಮ್ಮೊಳಗೊಬ್ಬ ಬಾಲೂ ಎನ್ನುವವರು ಶ್ರೀರಂಗಪಟ್ಟಣದ ಕಲ್ಲು ಕಲ್ಲಿನ ಇತಿಹಾಸವನ್ನು ಬಿಡಿಸಿ ಇಟ್ಟಿದ್ದಾರೆ ಅವರ ಕಾವೇರಿ ರಂಗ !!!! ಎನ್ನುವ ಬ್ಲಾಗಿನಲ್ಲಿ... ಶ್ರೀರಂಗಪಟ್ಟಣದ ಅಧಿನಾಯಕನಾದ ನನ್ನ ಚರಿತೆ.. ನನ್ನ ನೆಲವನ್ನು ಸುತ್ತುವರೆದಿರುವ ಕಾವೇರಿ ಮಾತೆಯ ಇತಿಹಾಸ.. ಈ ಕ್ಷೇತ್ರದ ಸ್ಥಳ ಪುರಾಣ.. ಇಲ್ಲಿ ಆಳಿದ ರಾಜ ಮಹಾರಾಜರ ಚರಿತ್ರೆ.. ನನ್ನ ಮಡದಿ ಭೂದೇವಿಯಲ್ಲಿ ಅಡಗಿರುವ  ವಿಸ್ಮಯಗಳು ಎಲ್ಲವೂ ಈ ಬ್ಲಾಗಿನಲ್ಲಿ ಅನಾವರಣಗೊಂಡಿದೆ.. ವಿದೇಶದಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಈ ಪ್ರದೇಶದ ಇತಿಹಾಸವನ್ನು ಮಕ್ಕಳಿಗೆ ಹೇಳುವಂತೆ ವರ್ಣಿಸಿರುವ ಅವರ ಬರಹದ ಮಹತ್ವ..  ಓದಿಯೇ ತಿಳಿಯಬೇಕು.. ನನ್ನ ಆಶೀರ್ವಾದದ ಬಲದಿಂದ ಈ ಕಾವೇರಿ-ರಂಗನ ಇತಿಹಾಸ ಮುದ್ರಣ ರೂಪದಲ್ಲಿ ಬಂದು ಸಮಸ್ತ ಕುಲಕೋಟಿಗೂ ತಲುಪುವಂತೆ ಆಗುತ್ತದೆ.."

ಬಾಲೂ ಸರ್ ಅವರ ಕಾವೇರಿ-ರಂಗ ಬ್ಲಾಗಿನ ಕೊಂಡಿ http://shwethadri.blogspot.in/
"ಒಹ್.. ಹೌದಾ ಸ್ವಾಮೀ ನಿಮ್ಮ ಮಾತುಗಳನ್ನ ಕೇಳಿ ಕ್ಷೀರಸಾಗರದ ಕ್ಷೀರವನ್ನು ಕುಡಿದಷ್ಟೇ ಸಂತಸವಾಗುತ್ತಿದೆ.. ಅಂದ ಹಾಗೆ ಬೆಳಿಗ್ಗೆ ದಿನಸೂಚಿ ನೋಡಿದೆ.. ಇಂದು ಆ ಮಹನೀಯರ ಹುಟ್ಟು ಹಬ್ಬ ಅಲ್ಲವೇ ಸ್ವಾಮೀ?"

"ಹೌದು ಲಕ್ಷ್ಮಿ.. ಅದಕ್ಕಾಗಿಯೆ ಆ ಭಕ್ತನ ನೋಡಲು ನಾನು ಇಂದು ಎದ್ದು ಕೂತಿದ್ದು.. ನೋಡು ಗರ್ಭಗುಡಿಯ ಒಳಗೆ ಧೈರ್ಯ ಮಾಡಿ ಬಂದ ಇವರೇ ಅವರು ... ಮೈಸೂರು ಪ್ರಾಂತ್ಯದ  ತನ್ನ ಗೆಳೆಯರ ಬಳಗದಲ್ಲಿ ಬಾಲೂ ಸರ್.. ಬಾಲಣ್ಣ ಎಂದು ಖ್ಯಾತಿಯಾಗಿರುವ  ಬಾಲಸುಬ್ರಮಣ್ಯ... ಎಲ್ಲರೊಳಗೊಬ್ಬ ಸುಂದರ ಜೀವಿ ಈ ಬಾಲೂ!"

ನಮ್ಮ ಹೆಮ್ಮೆಯ ನಲ್ಮೆಯ ಬಾಲೂ ಸರ್  (ಚಿತ್ರ ಕೃಪೆ - ಪ್ರಕಾಶ ಹೆಗಡೆ)
"ಭಕ್ತ ಇಂದಿನ ನಿಮ್ಮ ಹುಟ್ಟು ಹಬ್ಬಕ್ಕೆ ನಾವಿಬ್ಬರು ನಿಮ್ಮ ಕಾವೇರಿ-ರಂಗ ಬ್ಲಾಗನ್ನು ಓದಿ ಸಂತೋಷಿಸಿದ್ದೇವೆ.. ಆದಷ್ಟು ಬೇಗ ಇದು ಮುದ್ರಣ ರೂಪದಲ್ಲಿ ಮೂಡಿಬರಲೆಂದು ಆಶೀರ್ವದಿಸುತ್ತಾ... ಹಾಗೆಯೇ ಆಯಸ್ಸು, ಆರೋಗ್ಯ,  ಗೆಳೆಯರ ಪ್ರೀತಿ, ವಿಶ್ವಾಸ ,ಐಶ್ವರ್ಯ,  ಕುಟುಂಬದ ಸೌಖ್ಯ ಎಲ್ಲವೂ ಇರುವುದಕ್ಕಿಂತ ಹೆಚ್ಚಿಗೆ ಸಿಗಲಿ ಎಂದು ಹಾರೈಸುವೆ"  ಎಂದಾನಾ ದೇವಾದಿದೇವ!

ದಾರಿಯ  ಮಾಡಿ ಗರ್ಭ ಗುಡಿಯೊಳಗೆ ಬಂದಿದ್ದ ಬಾಲೂ ಸರ್ ಕಂಗಳನ್ನು ತುಂಬಿಕೊಂಡು.. ದೇವ ಕೃತಾರ್ಥನಾದೆ.. ನಿಮ್ಮ ಈ ಆಶೀರ್ವಾದ ನನಗೆ ಸಹಸ್ರ ಆನೆಬಲ ತಂದಿದೆ.. ಖಂಡಿತ ನಿಮ್ಮ ಹಾರೈಕೆಯಂತೆ ಕಾವೇರಿ ರಂಗನ ಮೊದಲ ಪ್ರತಿಯನ್ನು ನಿಮಗೆ ಅರ್ಪಿಸುತ್ತೇನೆ " ಎಂದು ಸಾಷ್ಟ್ರಂಗ ಪ್ರಣಾಮ ಮಾಡಿದರು.

ಬಾಲೂ ಸರ್ ಇಂತಹ ಶ್ರೀರಂಗಪಟ್ಟಣದ ಉತ್ಕೃಷ್ಠ ಇತಿಹಾಸದ ಪುಟಗಳನ್ನೂ ನಮಗೆ ಪರಿಚಯಿಸಿರುವ.... ಹಾಗೆಯೇ ಅನೇಕ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪರಿಚಯ ಮಾಡಿಕೊಟ್ಟಿರುವ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.. ನಿಮ್ಮನ್ನು ಗೆಳೆಯರನ್ನಾಗಿ ಪಡೆದ ನಾವೇ ಭಾಗ್ಯವಂತರು ....!

ಹುಟ್ಟು ಹಬ್ಬದ ಶುಭಕಾಮನೆಗಳೊಂದಿಗೆ ಬ್ಲಾಗ್ ಹಾಗು ಫೇಸ್ ಬುಕ್ ಬಳಗ ನಿಮಗೆ ಶುಭಾಶಯಗಳನ್ನು ಕೋರಿ ಅಭಿನಂದಿಸುತ್ತದೆ!!!