Sunday, December 9, 2012

" ಅವಳು ಮತ್ತೊಬ್ಬಳು " ರಶ್ಮಿ (ತೆಂಡೂಲ್ಕರ್) ಕಾಸರಗೋಡು - 09.12.12

ಚಿಕ್ಕವನಾಗಿದ್ದಾಗಿನಿಂದಲೂ ನಮ್ಮ ದೇಶದ ಅ(ನ)ಧಿಕೃತ ರಾಷ್ಟ್ರೀಯ ಆಟವೇ ಆಗಿ ಹೋಗಿರುವ ಕ್ರಿಕೆಟ್ ಬಗ್ಗೆ ತುಸು ಕಾಳಜಿ ಇತ್ತು...೧೯೮೩ ರಲ್ಲಿ ಕಪಿಲ್ ಡೆವಿಲ್ಸ್ ವಿಶ್ವ ಕಪ್ ಗೆದ್ದಾಗ ಅದು ಇನ್ನಷ್ಟು ಹೆಚ್ಚಿತು.  ಆಗ ಪಿಂಚ್ ಹಿಟ್ಟರ್ ಆಟವನ್ನು ಶುರು ಮಾಡಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ತುಂಬಾ ಪ್ರಸಿದ್ಧಿಯಾಗಿದ್ದರು. ನನ್ನ ಶಾಲಾ ದಿನಗಳಲ್ಲಿ ನನ್ನ ಸಹಪಾಟಿಗಳು ನನ್ನ ಕೆ.ಎಂ. ಶ್ರೀಕಾಂತ್ ಅನ್ನುವ ಬದಲು  ಕೃಷ್ಣಮಾಚಾರಿ ಶ್ರೀಕಾಂತ್ ಎಂದು ಕರೆಯುತಿದ್ದಿದ್ದು ಬಾಣಲೆಯಲ್ಲಿ ಪೂರಿ ಉಬ್ಬಿದಷ್ಟೇ ಸುಲಭವಾಗಿ ಮನಸ್ಸು ಹಾರಾಡುತಿತ್ತು....

ಅರೆ ಏನೋ ಬರೆಯುತಿದ್ದಾನೆ ಈ ಕ(ವಿ)ಪಿರಾಯ ಎಂದು ಮುನಿಸಿಕೊಳ್ಳಬೇಡಿ...ತನ್ನ ಹೆಸರಿನ ಜೊತೆಗೆ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನ ಹೆಸರನ್ನು ಸೇರಿಸಿಕೊಂಡು ಕಿಚ್ಚೆಬ್ಬೆಸಿಕೊಳ್ಳುವಷ್ಟು ಕ್ರೀಡಾಭಿಮಾನ ಮೆರೆಯುತ್ತಿರುವ                                      ರಶ್ಮಿ (ತೆಂಡೂಲ್ಕರ್) ಕಾಸರಗೋಡು ಅವರ ಎರಡನೇ ಕೃತಿಯಾದ " ಅವಳು ಮತ್ತೊಬ್ಬಳು " ಲೋಕಾರ್ಪಣೆ ಸಮಾರಂಭಕ್ಕೆ ಹೋದಾಗ ಮನದಲ್ಲಿ ಹಾರಾಡಿದ ಮಾತುಗಳು ಈ ಲೇಖನಕ್ಕೆ ಮುನ್ನುಡಿಯಾಯಿತು.

ಕ್ರಿಕೆಟ್ ಅಂಗಣದಂತೆ ನಿಧಾನವಾಗಿ ಪುಸ್ತಕ ಪ್ರೇಮಿಗಳು, ಬ್ಲಾಗ್ ಲೋಕದ ತಾರೆಗಳು, ಜಗಮಗಿಸುವ ಸಿನಿಮಾ, ರಂಗಭೂಮಿಯ ನಕ್ಷತ್ರಗಳು ಪತ್ರಿಕಾ ಲೋಕದ ಧ್ರುವತಾರೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಂತ್ರಿಕ ಸ್ಪರ್ಶ ಉಳ್ಳವರು ಎಲ್ಲರೂ ನಿಧಾನವಾಗಿ ಆಸೀನರಾಗುತಿದ್ದರು.

ಮುದ್ದು ಪುಟಾಣಿಯ ಸುಮಧುರ ಗೀತೆಯೊಂದಿಗೆ ಶುರುವಾದ ಕಾರ್ಯಕ್ರಮ ನಿಧಾನವಾಗಿ ಕಾವೇರತೊಡಗಿತು...ಶ್ರೀಮತಿ. ಸುಮತಿಯವರ ಸುಲಲಿತ ನಿರೂಪಣೆ ಸುಶ್ರಾವ್ಯ ಸಂಗೀತ ನಾದದಂತೆ ನಾವು ತಲೆದೂಗುವಂತೆ ಉಲಿಯುತ್ತಿತ್ತು...ನಂತರ ವೇದಿಕೆಯ ಮೇಲಿನ ಪ್ರತಿಯೊಬ್ಬ ಗಣ್ಯರ ಪರಿಚಯ, ಅವರ ಸಾಧನೆಗಳು, ಪರಿಶ್ರಮಗಳು, ಅದರ ಮಜಲುಗಳನ್ನ ಸುಲಲಿತವಾಗಿ ಪರಿಚಯ ಮಾಡಿಕೊಟ್ಟ ಅವರ ಪ್ರತಿಭೆ ಅಭಿನಂದನೀಯ.

ಮೊದಲಿಗೆ ಮಾತು ಆರಂಭಿಸಿದ ಕಿರುತೆರೆ ಹಾಗೂ ರಂಗಭೂಮಿ ಖ್ಯಾತಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಪುಸ್ತಕದ ಭಾವ ಪರಿಚಯವನ್ನು ಮಾಡಿಕೊಟ್ಟರು. ಮಹಿಳೆ ಎನ್ನುವ ಒಂದು ಪದವೇ ಸಾಕು ಶಕ್ತಿ ತುಂಬಲು, ಅಂತಹ ಅನೇಕ ಮಹಿಳಾ ಮಣಿಗಳ ಪುಸ್ತಕದ ಬಗ್ಗೆ ಹೇಳಿದ ಮಾತುಗಳು ಒಂದೊಂದು ನುಡಿಮುತ್ತುಗಳು.

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ. ಪುಂಡಲೀಕ ಹಾಲಂಬಿಯವರು ಕನ್ನಡ ನಾಡು, ಬರವಣಿಗೆ ಭಾಷೆ, ಲೇಖಕಿಯ ಪರಿಶ್ರಮ ಎಲ್ಲದರ ಬಗ್ಗೆ ಹೊರಬಂದ ಮಾತುಗಳು ಯಾವುದೇ ಸಾಧನೆಯ ಹಾದಿಯಲ್ಲಿರುವ ವ್ಯಕ್ತಿಗೆ ಜೀವ ಚೈತನ್ಯ ತುಂಬುವ ಹುಮ್ಮಸ್ಸಿನ ಶಕ್ತಿಯುತ ಔಷಧಿ.

ಬಣ್ಣದ ಜಗತ್ತು ವರ್ಣಮಯ ಅಲ್ಲಿ ಎಲ್ಲವು ಕನಸುಗಳ ಲೋಕವೇ ಎನ್ನುವ ಮಾತನ್ನು ಆಡುತ್ತಲೇ ತಮ್ಮೊಳಗಿನ ಓದುಗಾರ್ತಿಯನ್ನ ಪರಿಚಯ ಮಾಡಿಕೊಟ್ಟ ಕನ್ನಡದ ಪ್ರತಿಭೆ ನೀತು ಅವರ ನಿರರ್ಗಳ ಮಾತು ಸಿನಿಮಾ ಜಗತ್ತಿನ ಹಾಯಿ ದೋಣಿಯಲ್ಲಿ ಪಯಣಿಸಿದ ಅನುಭವ ಮೂಡಿಸಿ ಕೊಟ್ಟಿತು.

ಕನ್ನಡ ಪ್ರಭದ ಶ್ರೀ. ರಾಧಾಕೃಷ್ಣ ಭಡ್ತಿ ಅವರಿಗೆ ನೀರಿನಿಂದ ನೀರೆಯರ ಬಗ್ಗೆ ಮಾತಾಡುವ ಬಡ್ತಿ ಕೊಡಿಸಿದ ಈ ಸಮಾರಂಭದಲ್ಲಿ  ಅವರ ಮಾತುಗಳು ಬ್ಲಾಗ್ ಲೋಕ, ಸಾಹಿತ್ಯ ಲೋಕ, ಪತ್ರಿಕಾ ರಂಗ, ಭಾಷೆಯ ಅಭಿಮಾನ ವಿಷಯಗಳು ನಿರಾಳವಾಗಿ ನಮ್ಮ ಮನದಲ್ಲಿ ಹರಿದಾಡಲು ಶುರುಮಾಡಿದವು..

ಅಧ್ಯಕ್ಷ ಸ್ಥಾನದಲ್ಲಿದ್ದ ಹಿರಿಯ ಪತ್ರಕರ್ತರಾದ ಶ್ರೀ. ಜೋಗಿಯವರ ವಾಸ್ತವ ಮಾತುಗಳು, ಮಹಾಭಾರತದ ಸಣ್ಣ ಕತೆಯನ್ನು ವಾಸ್ತವಕ್ಕೆ ಹೋಲಿಸಿ ಮಾತಾಡಿದ ರೀತಿ ಗಮನಸೆಳೆಯಿತು.

ಇನ್ನೇನು ವಿಶೇಷ ಕಾರ್ಯಕ್ರಮವಿದೆ ಎನ್ನುವಾಗ ಮಹಿಳ ಮಣಿ ಕ್ರಿಕೆಟ್ ಬ್ಯಾಟನ್ನು ಬಿಟ್ಟು ಮೈಕ್ ಮುಂದೆ ನಿಂತರು.  ಈಗಿನ ಟ್ವೆಂಟಿ -೨೦ ಹೊಡಿ ಬಡಿ ಆಟಕ್ಕಿಂತ ರಭಸವಾಗಿದ್ದ ಮಾತುಗಳು ಶುರುವಾದವು ಲೇಖಕಿ ರಶ್ಮಿ ಕಾಸರಗೋಡು ಅವರಿಂದ.  ನಾವು ಬರಿ ಸಚಿನ್ ಸ್ಟ್ರೈಟ್ ಡ್ರೈವ್ ಬೌಂಡರಿ, ಸಿಕ್ಸರ್ ನೋಡಿದ್ದ ನಮಗೆ ಈ ಚುರುಕು ಮಾತುಗಳು, ಹೃದಯದಿಂದ ಮೂಡಿಬಂದ ಅನುಭಾವ ಅನಿಸಿಕೆಗಳು ವಾಹ್ ಎನ್ನುವಂತೆ ಮಾಡಿತು. ಈಕೆ ಬರಿ ಲೇಖಕಿ ಮಾತ್ರವಲ್ಲ ಅದ್ಭುತ ಮಾತುಗಾರ್ತಿ ಎನ್ನುವುದು ಅವರೇ ಹೇಳಿದ ಆಶುಭಾಷಣ ಸ್ಪರ್ಧೆಗಳ ಮಾತುಗಳಿಂದ ಧೃಡಪಟ್ಟಿತ್ತು...ಸ್ಲಾಗ್ ಓವರಿನ ಬ್ಯಾಟಿಂಗಿನಂತೆ ರನ್ನಗಳನ್ನ ರಶ್ಮಿಬಾರಿಸಿಬಿಟ್ಟರು....

ಸುಂದರ, ಸರಳ, ಕಾರ್ಯಕ್ರಮವನ್ನು ಅಭಿಮಾನ, ಗೆಳೆತನ, ವಿಶ್ವಾಸ ಇವುಗಳನ್ನೆಲ್ಲ ತುಂಬಿಕೊಂಡು ಬಂದಿದ್ದವರಿಗೆ ಒಂದು ಭಾನುವಾರ ಬೆಳಗನ್ನು ಅಚ್ಚುಕಟ್ಟಾಗಿ ಸಾರ್ಥಕತೆಯಿಂದ ಕಳೆದ ಬಗ್ಗೆ ಹೆಮ್ಮೆಯಿತ್ತು. ನೆಮ್ಮದಿಯಿಂದ ತುಂಬಿಬಂದ ಭಾರವಾದ ಹೃದಯಗಳನ್ನು ಹೊತ್ತು ತಮ್ಮ ತಮ್ಮ ಮನೆಗೆ ತೆರೆಳುತಿದ್ದಾಗ ಅಲ್ಲೇ ನಿಂತು ನೋಡುತಿದ್ದ ರಶ್ಮಿ...ಸಚಿನ್ ಶತಕ ಬಾರಿಸಿದಾಗ ಆಗಸಕ್ಕೆ ಮುಖ ಮಾಡಿ ಧನ್ಯತೆಯನ್ನು ಅನುಭವಿಸುತ್ತಿದ್ದ ರೀತಿ ನೆನಪಿಗೆ ಬಂತು.

ಈ ಸುಂದರ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚಿಸಿದ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಶ್ರೀ ಪ್ರಕಾಶ ಹೆಗಡೆಯವರಿಗೆ ವಂದನೆಗಳು.

ರಶ್ಮಿ ನಿಮ್ಮ ಎಲ್ಲ ಪ್ರಯತ್ನಗಳಲ್ಲಿ ಸಾಧನೆಗಳ ಹಾದಿಯಲ್ಲಿ ಯಶ ನಿಮ್ಮದಾಗಲಿ ಸೂರ್ಯನ ಯಶಸ್ಸಿನ ರಶ್ಮಿ ನಿಮ್ಮ ಬಾಲ ಪಥದಲ್ಲಿ ಸದಾ ಪಸರಿಸುತ್ತಿರಲಿ ಎನ್ನುವ ಹಾರೈಕೆಯೊಂದಿಗೆ ನಿಮ್ಮ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕರ್ಪನೆಯ ಸಂಧರ್ಭದಲ್ಲಿ  ಬ್ಲಾಗ್ ಲೋಕದ ಸ್ನೇಹಮಯ ಹೃದಯಗಳ ಪರವಾಗಿ ಶುಭಕೊರುತಿದ್ದೇನೆ..